ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸಿ, ಶಾಹಿನ್ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡು ಹಾರಾಟ ನಡೆಸಿದ್ದ ಕಪಿಲ್ ಗುಜ್ಜರ್ನನ್ನು ಬುಧವಾರ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿತ್ತು. ಇದೀಗ ಸೇರಿಸಿದ ಕೆಲವೇ ಗಂಟೆಗಳಲ್ಲಿ ಆತನನ್ನು ಪಕ್ಷದಿಂದ ಉಚ್ಚಾಟಿಸಿದೆ.
ಶಾಹಿನ್ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಕಪಿಲ್ ಗುಜ್ಜರ್ 3 ಸುತ್ತಿನ ಗುಂಡಿನ ದಾಳಿ ನಡೆಸಿದ್ದನು. ಇದಾದ ನಂತರ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಶಾಹೀನ್ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ
ದೆಹಲಿ ಗಡಿಯ ಸಮೀಪದ ಉತ್ತರಪ್ರದೇಶದ ಗಾಝಿಯಾಬಾದ್ನ ಬಿಜೆಪಿ ಘಟಕವು ಈ ಕುರಿತು ಪ್ರತಿಕ್ರಿಯೆ ನೀಡಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. “ಬುಧವಾರ ಬೆಳಿಗ್ಗೆ ಕಪಿಲ್ನನ್ನು ಪಕ್ಷಕ್ಕೆ ಸೇರಿಸಿಕೊಂಡಾಗ ಆತನ ಹಿನ್ನೆಲೆ ನಮಗೆ ಗೊತ್ತಿರಲಿಲ್ಲ” ಎಂದು ಬಿಜೆಪಿ ಹೇಳಿದೆ ಎಂದು ವರದಿ ಹೇಳಿದೆ.
ಕಪಿಲ್ ಗುಜ್ಜರ್ನನ್ನು ಪಕ್ಷಕ್ಕೆ ಸೇರಿಸಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಆತನ ಬಂಧನದ ಮತ್ತು ಸೇರ್ಪಡೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಬಿಜೆಪಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಶಾಹೀನ್ ಬಾಗ್ ಹೋರಾಟ ಹಾಳು ಮಾಡಲು ಬಿಜೆಪಿಯೇ ಆ ಸಂಚು ಮಾಡಿತ್ತು ಎಂಬುದಕ್ಕೆ ಇದು ಸಾಕ್ಷಿ ಎಂದು ನೂರಾರು ಜನ ಅಭಿಪ್ರಾಯ ಪಟ್ಟಿದ್ದರು. ಇದೀಗ ಆತನ ಪೂರ್ವಾಪರ ಗೊತ್ತಿರದೇ ಸೇರ್ಪಡೆ ಮಾಡಿಕೊಂಡಿದ್ದೆವು ಎಂದು ಬಿಜೆಪಿ ನೀಡಿರುವ ಸಮಜಾಯಿಷಿ ಕೂಡ ಲೇವಡಿಗೆ ಒಳಗಾಗಿದೆ.
ಇದನ್ನೂ ಓದಿ: RJD ಗೆ ಸೇರುವ JDU ಶಾಸಕರ ಸಂಖ್ಯೆ ಶೀಘ್ರವೇ 28 ಕ್ಕೇರಲಿದೆ: ನಿತೀಶ್ಗೆ ಮತ್ತೊಂದು ಶಾಕ್