ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ಗೆ ಒಂದು ಕಡೆ ರೈತರ ಪ್ರತಿಭಟನೆಯ ಆಕ್ರೋಶದ ಬಿಸಿ ತಟ್ಟತೊಡಗಿದ್ದರೆ, ಇನ್ನೊಂದು ಕಡೆ ಆಡಳಿತದ ಮಿತ್ರ ಪಕ್ಷ ಜನತಾ ಜನನಾಯಕ್ ಪಾರ್ಟಿ (ಜೆಜೆಪಿ) ರೈತರಿಗೆ ಬೆಂಬಲವಾಗಿ ಯಾವ ಕ್ಷಣದಲ್ಲಾದರೂ ಹೋಳಾಗಬಹದು ಅಥವಾ ಅದರ ಎಲ್ಲ 10 ಶಾಸಕರೂ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳಬಹುದು ಎಂಬ ಭಯ ಕಾಡತೊಡಗಿದೆ.
ಪ್ರತಿವರ್ಷ ಎಲ್ಲ ಮುಖ್ಯಮಂತ್ರಿಗಳು ನಿರ್ದಿಷ್ಟ ಸ್ಥಳದಲ್ಲಿ ಗಣರಾಜ್ಯೋತ್ಸವ ಧ್ವಜ ಹಾರಿಸುತ್ತಾರೆ. ಆದರೆ, ಈ ಸಲ ಖಟ್ಟರ್ ಗಣರಾಜ್ಯೋತ್ಸವ ಕಾರ್ಯಕ್ರಮದ ಸ್ಥಳವನ್ನೇ ಶಿಫ್ಟ್ ಮಾಡಿಸಿದ್ದರು. ಪಾಣಿಪತ್ನಲ್ಲಿ ಧ್ವಜ ಹಾರಿಸಲು ಹಿಂದೇಟು ಹಾಕಿದ ಖಟ್ಟರ್, ಸ್ವಲ್ಪ ಸುರಕ್ಷಿತ ಸ್ಥಳವೆಂದು ಪಂಚಕುಲಾದಲ್ಲಿ ಕಾರ್ಯಕ್ರಮ ನಡೆಸಿ ತ್ರಿವರ್ಣ ಧ್ವಜ ಹಾರಿಸಿದರು!
ಅರೆ, ಯಾರ ಭಯ? ಉಗ್ರರ ಭಯವಾ? ಊಹೂಂ, ರೈತರು ಕಪ್ಪು ಬಟ್ಟೆ ಪ್ರದರ್ಶನ ಮಾಡಬಹುದು ಅಥವಾ ಘೇರಾವ್ ಹಾಕಬಹುದು ಎಂಬ ಆತಂಕ. ತನ್ನ ರಾಜ್ಯದಲ್ಲೇ ಇಷ್ಟು ಆತಂಕಿತನಾಗಿ ಆಡಳಿತ ಮಾಡಿದ ಸಿಎಂ ಇನ್ನೊಬ್ಬರಿರಲಿಕ್ಕಿಲ್ಲ.
ಪಾಣಿಪತ್ ಮನೋಹರಲಾಲ್ ಖಟ್ಟರ್ ಸ್ವಗ್ರಾಮ ಕರ್ನಾಲ್ನಿಂದ 16 ಕಿಮೀ ದೂರದಲ್ಲಿದೆ. 15 ದಿನಗಳ ಹಿಂದೆ ಖಟ್ಟರ್ ಕರ್ನಾಲ್ಗೆ ಹೋಗಲೂ ಆಗಲಿಲ್ಲ. ಏಕೆಂದರೆ, ರೈತರು ಅಲ್ಲಿನ ಹೆಲಿಪ್ಯಾಡ್ ಧ್ವಂಸಗೊಳಿಸಿದ್ದರು. ಕಾರ್ಯಕ್ರಮ ನಡೆಯಬೇಕಿದ್ದ ವೇದಿಕೆಗೆ ನುಗ್ಗು ಚೆಲ್ಲಾಪಿಲ್ಲಿ ಮಾಡಿದ್ದರು. ತಿಂಗಳ ಹಿಂದೆ ಅದೇ ಕರ್ನಾಲ್ನಲ್ಲಿ ನಡೆಯಬೇಕಿದ್ದ ಸಾರ್ವಜನಿಕ ಕಾರ್ಯಕ್ರಮವನ್ನೇ ಖಟ್ಟರ್ ರದ್ದು ಮಾಡಬೇಕಾಯಿತು. ಕಾರಣ ರೈತರನ್ನು ಎದುರಿಸುವ ರಾಜಕೀಯ ದೃಢತೆಯೇ ಇಲ್ಲ.
ಅಂಬಾಲಾದಲ್ಲಿ 13 ರೈತರ ಮೇಲೆ ಕೊಲೆ ಯತ್ನ, ದಂಗೆ ಪ್ರಕರಣ ದಾಖಲಿಸಲಾಗಿದೆ. ರೈತರು ಖಟ್ಟರ್ಗೆ ಕಪ್ಪು ದ್ವಜ ಪ್ರದರ್ಶನ ಮಾಡಿದ್ದರು. ಹಾಗೆಯೇ ರೈತರು ಖಟ್ಟರ್ ಬೆಂಗಾವಲು ವಾಹನವನ್ನು ತಡೆದು ವಾಪಸ್ ಕಳಿಸಿದ್ದರು.
ರಾಜ್ಯದಲ್ಲಿ ಅರಾಜಕತೆ ಉಂಟಾಗಬಹುದು ಎಂಬ ನೆಪ ನೀಡಿ, 22 ಜಿಲ್ಲೆಗಳ ಪೈಕಿ 17ರಲ್ಲಿ ಇಂಟರ್ನೆಟ್ ಸೇವೆಯನ್ನು ಖಟ್ಟರ್ ಸ್ಥಗಿತಗೊಳಿಸಿದ್ದಾರೆ. ರೈತ ಹೋರಾಟ ಎಲ್ಲೆಡೆ ಹರಡದಂತೆ ತಡೆಯುವ ಕುತಂತ್ರ ಇದಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದುವರಿದು ರೈತರು ದೇವಸ್ಥಾನದ ಮೈಕ್ಗಳನ್ನು ಉಪಯೋಗಿಸಿ ರೈತ ಹೋರಾಟದ ಪರಿಸ್ಥಿತಿಯನ್ನು ವಿವರಿಸಿ, ಹೋರಾಟ ಸೇರಿಕೊಳ್ಳಲು ಕರೆ ನೀಡುತ್ತಿದ್ದಾರೆ.
ಸರ್ಕಾರ ಪತನದ ಭೀತಿ
ಇನ್ನೊಂದು ಕಡೆ ಖಟ್ಟರ್ಗೆ ಸರ್ಕಾರ ಬೀಳಬಹುದೆಂಬ ಆತಂಕ ಶುರುವಾಗಿದೆ. ಜನವರಿ 26ರ ಕೆಂಪುಕೋಟೆಯ ಅಹಿತಕರ ಘಟನೆ ನಂತರ ಸ್ವಲ್ಪ ನಿರಾಳರಾಗಿದ್ದ ಅವರಿಗೆ, ಟಿಕಾಯತ್ ಮನವಿ ನಂತರ ತೀವ್ರಗೊಳ್ಳುತ್ತಿರುವ ರೈತರ ಪ್ರತಿಭಟನೆ ಚಿಂತೆಗೀಡುಮಾಡಿದೆ.
90 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 40. 10 ಜೆಜೆಪಿ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆಯಾಗಿದೆ. ಇಬ್ಬರು ಪಕ್ಷೇತರರು ರೈತರ ಬೆಂಬಲಾರ್ಥವಾಗಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದಾರೆ.
ಜೆಜೆಪಿ ನಾಯಕ, ಉಪ ಮುಖ್ಯಮಂತ್ರಿ ದುಷ್ಯಂತ್ ಸಿಂಗ್ ಚೌತಾಲರ ಮೇಲೆ ಅವರ ಪಕ್ಷದ ಶಾಸಕರೆ ಒತ್ತಡ ಹೇರುತ್ತಿದ್ದು, ರೈತರ ಪರ ನಿಲ್ಲೋಣ, ಸರ್ಕಾರಕ್ಕೆ ಬೆಂಬಲ ಹಿಂಪಡೆಯೋಣ ಎನ್ನುತ್ತಿದ್ದಾರೆ. ಕೆಲವರು ಜೆಜೆಪಿ ಬಿಡಲೂ ತಯಾರಾಗಿದ್ದಾರೆ. ಐಎನ್ಎಲ್ಡಿ ಶಾಸಕ ಅಭಯ ಸಿಂಗ್ ಚೌತಾಲ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ, ದುಷ್ಯಂತ್ ರಾಜಿನಾಮೆಗೆ ಒತ್ತಡ ಹೆಚ್ಚುತ್ತಿದೆ.
ಕೃಷಿ ಕಾಯ್ದೆ ಪರ ಮೋದಿಯವರನ್ನು ಬೆಂಬಲಿಸಿ, ಪ್ರಧಾನಿಗೆ ಶಕ್ತಿ ತುಂಬಬೇಕಿದ್ದ ಖಟ್ಟರ್, ಕಳೆದ ವಾರ ಡಿಸಿಎಂ ದುಷ್ಯಂತರನ್ನು ದೆಹಲಿಗೆ ಕರೆದುಕೊಂಡು ಹೋಗಿ, ಮೋದಿ-ಶಾ ಎದುರು ನಿಲ್ಲಿಸಿ, ನೀವೇ ನನ್ನ ಸರ್ಕಾರ ಉಳಿಸಿ ಎಂದು ಮನವಿ ಮಾಡಿದ್ದರು.
ರಾಜ್ಯವೊಂದರ ಪ್ರಬಲ ಸಮುದಾಯಕ್ಕೆ ಮುಖ್ಯಮಂತ್ರಿ ಪದವಿ ನೀಡದೇ, ಸಣ್ಣ ಸಮುದಾಯಕ್ಕೆ ನೀಡುವ ಮುಲಕ ಮುಖ್ಯಮಂತ್ರಿಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಮೋದಿ-ಶಾ ತಂತ್ರದ ಭಾಗವಾಗಿ ಖಟ್ಟರ್ರನ್ನು ಹರಿಯಾಣ ಸಿಎಂ ಮಾಡಲಾಗಿದೆ. ಪ್ರಬಲ ಜಾಟ್ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ನಿರಾಕರಿಸಿ, ಪಂಜಾಬಿ ಖತ್ರಿ ಸಮುದಾಯಕ್ಕೆ ಸೇರಿದ ಖಟ್ಟರ್ಗೆ ಕಿರೀಟ ತೊಡಿಸಲಾಗಿತ್ತು. ಐದು ವರ್ಷಗಳ ಅಡಳಿತದಲ್ಲಿ ಅಂಥದ್ದೇನೂ ಮಾಡದ ಪರಿಣಾಮ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ 40 ಸೀಟು ಸಿಕ್ಕವು. ಕಾಂಗ್ರೆಸ್ನ ಭೂಪಿಂದರ್ ಹೂಡಾ ಮತ್ತು ಐಎನ್ಎಲ್ಡಿಯ ಓಂಪ್ರಕಾಶ್ ಚೌತಾಲರ (ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜೈಲು ಪಾಲಾಗಿದ್ದಾರೆ) ಭ್ರಷ್ಟಾಚಾರ ಪ್ರಕರಣಗಳ ಲಾಭ ಪಡೆದೂ ಬಿಜೆಪಿಗೆ ಸಿಕ್ಕಿದ್ದು 40 ಸೀಟು ಮಾತ್ರ.
ಈಗ ಜೆಜೆಪಿ ಕೈ ಕೊಟ್ಟರೆ ಖಟ್ಟರ್ ಸರ್ಕಾರ ಬೀಳುವುದು ಖಚಿತ. ಅದಕ್ಕೆ ನೇರ ಕಾರಣ ಎಂಬುದರಲ್ಲಿ ಸಂಶಯವಿಲ್ಲ.
- ಪಿ.ಕೆ ಮಲ್ಲನಗೌಡರ್, (ಪತ್ರಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವು)
ಇದನ್ನೂ ಓದಿ: ರಾಕೇಶ್ ಟಿಕಾಯತ್ (2013-21)ರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ‘ಹರ್ ಹರ್ ಮಹಾದೇವ್, ಅಲ್ಲಾಹು ಅಕ್ಬರ್’…


