ರಾಜ್ಯದಲ್ಲಿ ಕೊರೊನಾ ಸೋಂಕಿನ ಸಕ್ರೀಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೊಸ ಮಾರ್ಗಸೂಚಿ ಜಾರಿಗೆ ತಂದಿದ್ದ ರಾಜ್ಯ ಸರ್ಕಾರ, ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆಯನ್ನು ಮಾಡಿದೆ. ಜಿಮ್ ಮುಚ್ಚುವಂತೆ ಮೊದಲ ಮಾರ್ಗಸೂಚಿಯಲ್ಲಿ ಹೇಳಲಾಗಿತ್ತು. ಈಗ ಶೇಕಡ 50ರಷ್ಟು ಜನರಿಗೆ ಅವಕಾಶ ಕಲ್ಪಿಸಲು ಅನುಮತಿ ನೀಡಲಾಗಿದೆ.
ಕೊರೊನಾ ಸೋಂಕು ಹರಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಏಪ್ರಿಲ್ 2 ರಂದು ರಾಜ್ಯ ಸರ್ಕಾರ ಹೊಸ ಕೊರೊನಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕೊರೊನಾ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಜಿಮ್, ಪಾರ್ಟಿ ಹಾಲ್ಗಳು, ಈಜು ಕೊಳಗಳಿಗೆ ನಿರ್ಬಂಧಿಸಿತ್ತು. ಮುಷ್ಕರ, ಧರಣಿ, ರ್ಯಾಲಿಗಳನ್ನು ನಿಷೇಧಿಸಿತ್ತು. ಜೊತೆಗೆ ಸಿನಿಮಾ ಹಾಲ್ನಲ್ಲಿ ಶೇಕಡಾ 50 ರಷ್ಟು ಆಸನ ವ್ಯವಸ್ಥೆಗೆ ತಿಳಿಸಿತ್ತು.
ಕನ್ನಡ ಚಿತ್ರರಂಗ ಒಟ್ಟಾಗಿ ಚಿತ್ರಮಂದಿರದ ಸಮಸ್ಯೆಯನ್ನು ಬಗೆಹರಿಸಿಕೊಂಡಿತ್ತು. ನಂತರ ಜಿಮ್ ಮಾಲೀಕರು ಕೂಡ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಹೊಟ್ಟೆ ಮೇಲೆ ಹೊಡೆಯಬೇಡಿ, ಈಗ ತಾನೇ ಚೇತರಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದರು.
ಈಗ ಜಿಮ್ಗಳು ತೆರೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅನೇಕ ಮನವಿಗಳು ಬಂದಿರುವ ಹಿನ್ನೆಲೆ ಶೇಕಡಾ 50 ರಷ್ಟು ಅವಕಾಶ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕೊರೊನಾ ಹೆಚ್ಚುತ್ತಿರುವುದರಿಂದ ಮಾರ್ಗಸೂಚಿ ಬಿಡುಗಡೆ: ಆರೋಗ್ಯ ಸಚಿವ ಸುಧಾಕರ್
ಜಿಮ್ಗಳು ಓಪನ್ ಮಾಡಲು ಅನುಮತಿ ನೀಡಲಾಗಿದ್ದು, ಜಿಮ್ ಸಾಮರ್ಥ್ಯದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಜನರು ಒಂದೇ ಸಮಯದಲ್ಲಿ ಸೇರುವಂತಿಲ್ಲ. ಕೊರೊನಾ ನಿಯಮಗಳಾದ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಪೂರೈಕೆ ನೋಡಿಕೊಳ್ಳಬೇಕು. ಜೊತೆಗೆ ಜಿಮ್ ಸಲಕರಣೆಗಳ ಪ್ರತಿ ಬಳಕೆಯ ನಂತರ ಸಲಕರಣೆಗಳನ್ನು ಶುಚಿಗೊಳಿಸುವಂತೆ ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಭಾನುವಾರ ಸಂಜೆ ಟ್ವೀಟ್ ಮಾಡಿದ್ದ ಕನ್ನಡ ನಟ ಯಶ್, ಹೊಟ್ಟೆ ಹೊರೆಯಲು ಮಾಡುವ ವೃತ್ತಿಗಳಿಗೆ ಹೊಡೆತ ರಾಜ್ಯ ಸರ್ಕಾರ ನೀಡುತ್ತಿದೆ ಎಂದು ಆರೋಪಿಸಿದ್ದರು.
“ಅನ್ನ ಹುಟ್ಟಿಸದ ಸಭೆ, ಸಮಾರಂಭ, ಮೆರವಣಿಗೆಗಳು ಮುಕ್ತವಾಗಿವೆ. ಹೊಟ್ಟೆ ಹೊರೆಯಲು ಮಾಡುವ ವೃತ್ತಿಗಳಿಗೆ ಹೊಡೆತ ಸರ್ಕಾರ ನೀಡುತ್ತಿದೆ. ಅಪಘಾತ ಆಗುವುದೆಂದು ವಾಹನ ಸಂಚಾರ ನಿಲ್ಲಿಸೋದು ಸರಿಯಾಗುತ್ತದೆಯೇ…? ಕಟ್ಟುನಿಟ್ಟಿನ ಸಂಚಾರ ಕ್ರಮ ಸಾಕಲ್ಲವೇ..? ಹಾಗೆ ಸಾಲ ಸೋಲ ಮಾಡಿ, ಜಿಮ್ ನಡೆಸುವವರು ಕಷ್ಟಪಡುತ್ತಿದ್ದಾರೆ. ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಜಿಮ್ ಬಳಸಲು ಅನುಮತಿ ನೀಡಿದರೆ, ಗ್ರಾಹಕರ ಆರೋಗ್ಯಕ್ಕೂ ಒಳ್ಳೆಯದು. ಜಿಮ ಮಾಲೀಕರು ಬದುಕಿಕೊಳ್ಳುತ್ತಾರಲ್ಲವೇ…? ರೋಗಕ್ಕೆ ಪರಿಹಾರ ಏನೆಂದು ನಮಗ್ಯಾರಿಗೂ ಗೊತ್ತಿಲ್ಲ. ಆದರೆ ಹಸಿವಿಗೆ ಪರಿಹಾರ ಗೊತ್ತಿದೆಯಲ್ಲ!” ಎಂದು ನಟ ಯಶ್ ಟ್ವೀಟ್ ಮಾಡಿದ್ದರು.
ನಟ ಟ್ವೀಟ್ ಮಾಡಿದ ಕೆಲವೇ ಗಂಟೆಗಳ ಅಂತರದಲ್ಲಿ ರಾಜ್ಯ ಸರ್ಕಾರದಿಂದ ಈ ಕ್ರಮ ಬಂದಿದೆ. ಜೊತೆಗೆ ಹಲವು ಮಂದಿ ಸರ್ಕಾರಕ್ಕೆ ಮನವಿ ಪತ್ರಗಳನ್ನು ಸಲ್ಲಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಹೊಟ್ಟೆ ಹೊರೆಯುವ ವೃತ್ತಿಗಳಿಗೆ ಹೊಡೆತ: ಜಿಮ್ ಮಾಲೀಕರ ಪರ ನಟ ಯಶ್ ಬ್ಯಾಟಿಂಗ್