ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವು ಏಪ್ರಿಲ್ 30 ರವರೆಗೆ ಮುಂದುವರಿಯುತ್ತದೆ. ಕೊರೊನಾ ಸೋಂಕುಗಳು ಹೆಚ್ಚುತ್ತಿರುವ ಕಾರಣ ಅದನ್ನು ಬೇಗನೆ ನಿಲ್ಲಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವಾರಗಳ ಮುಂಚೆಯೇ ಕುಂಭಮೇಳವನ್ನು ನಿಲ್ಲಿಸಲು ನಿರ್ಧರಿಸಲಾಗಿದೆ ಎಂಬ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಬುಧವಾರ ಸಂಜೆ ವೇಳೆಗೆ ಉತ್ತರಾಖಂಡ ಸರ್ಕಾರ ಮತ್ತು ಧಾರ್ಮಿಕ ಮುಖಂಡರ ನಡುವೆ ಈ ಕಾರ್ಯಕ್ರಮವನ್ನು ರದ್ದುಗೊಳಿಸುವ ಬಗ್ಗೆ ಚರ್ಚೆ ನಡೆದು ವರದಿಗಳು ಬಂದಿದ್ದವು. ಆದರೆ ಇದನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.
’ಇಂದು ಸಂಜೆ ಯಾವುದೇ ಚರ್ಚೆಗಳು ನಡೆದಿಲ್ಲ. ಕುಂಭಮೇಳ ನಿಗದಿಯಂತೆ ನಿರಂತರವಾಗಿ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಟೀಕೆಗಳಿಂದ ಎಚ್ಚೆತ್ತ ಸರ್ಕಾರ: ಎರಡು ವಾರಗಳು ಮುಂಚೆಯೇ ಕುಂಭಮೇಳಕ್ಕೆ ತೆರೆ ಸಾಧ್ಯತೆ
ಬುಧವಾರ ಮುಂಜಾನೆ ಕುಂಭಮೇಳದ ಮೂರನೇ ಮತ್ತು ಅತಿದೊಡ್ಡ ‘ಶಾಹಿ ಸ್ನಾನ’ದ ಸಂದರ್ಭದಲ್ಲಿ ಸಾವಿರಾರು ಭಕ್ತರು ಹರಿದ್ವಾರದ ಗಂಗಾದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಪ್ರಮುಖ ಘಟನೆಗಳ ವೇಳಾಪಟ್ಟಿ ಪ್ರಕಾರ, ನಾಲ್ಕು ‘ಶಾಹಿ ಸ್ನಾನ’ ಮತ್ತು ಒಂಬತ್ತು ‘ಗಂಗಾ ಸ್ನಾನ’ಗಳು ಈ ವರ್ಷ ಹರಿದ್ವಾರದಲ್ಲಿ ನಡೆಯಲಿವೆ.
ಕುಂಭದ ಅತ್ಯಂತ ಶುಭ ದಿನಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಶಾಹಿ ಸ್ನಾನದ ಸಂದರ್ಭದಲ್ಲಿ ಮಧ್ಯಾಹ್ನ 2 ಗಂಟೆಯವರೆ 9,43,452 ಭಕ್ತರು ಪಾಲ್ಗೊಂಡಿದ್ದರು ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಮಧ್ಯಾಹ್ನದ ಹೊತ್ತಿಗೆ ಸುಮಾರು 10 ಲಕ್ಷ ಜನರು ನದಿಯಲ್ಲಿ ಸ್ನಾನ ಮಾಡಿದ್ದಾರೆ ಎಂದು ಹರಿದ್ವಾರದಲ್ಲಿ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದ ಉತ್ತರಾಖಂಡ ಪೊಲೀಸ್ ಮುಖ್ಯಸ್ಥ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಮುಂದಿನ ಮಹತ್ವದ ಕುಂಭವೇಳದ ದಿನವನ್ನು ಏಪ್ರಿಲ್ 27 ಕ್ಕೆ ನಿಗದಿಪಡಿಸಲಾಗಿದೆ.
ಈ ವರ್ಷ ಕೊರೊನಾ ಸಾಂಕ್ರಾಮಿಕದ ಮಧ್ಯೆ ಧಾರ್ಮಿಕ ಕಾರ್ಯಕ್ರಮವನ್ನು ನಿಲ್ಲಿಸದಿರುವ ನಿರ್ಧಾರದ ಬಗ್ಗೆ ರಾಷ್ಟ್ರವ್ಯಾಪಿ ಟೀಕೆಗಳು ಬಂದಿವೆ. ಕುಂಭಮೇಳದಲ್ಲಿ ಸಾಮಾನ್ಯವಾಗಿ ಗರಿಷ್ಠ ಜನಸಂದಣಿಯನ್ನು ಸೇರುತ್ತಿದೆ ಇದು ಕೊರೊನಾ ಹಾಟ್ಸ್ಪಾಟ್ ಆಗಲಿದೆ ಮತ್ತು ಇಲ್ಲಿ ಭಾಗವಹಿಸಿದವರು ಸೂಪರ್-ಸ್ಪ್ರೆಡರ್ ಆಗಬಹುದು ಎಂದು ವಿಮರ್ಶಕರು ಅಂದಾಜಿಸಿದ್ದಾರೆ. ಆದರೂ ಕೂಡ ಕುಂಭಮೇಳಕ್ಕೆ ತೆರೆ ಎಳೆಯಲು ಸರ್ಕಾರ ಮತ್ತು ಪ್ರಮುಖ ಅಖಾರರು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಕುಂಭಮೇಳದ ’ಶಾಹಿ ಸ್ನಾನ’ದಲ್ಲಿ ದೈಹಿಕ ಅಂತರ ಅಸಾಧ್ಯ ಎಂದ ಅಧಿಕಾರಿಗಳು


