Homeಅಂಕಣಗಳುದೇಹವೊಂದೇ ಎಲ್ಲವೂ ಅಲ್ಲ v

ದೇಹವೊಂದೇ ಎಲ್ಲವೂ ಅಲ್ಲ v

- Advertisement -
- Advertisement -

ಡಾ.ವಿನಯಾ ಒಕ್ಕುಂದ |

ಗೋಕರ್ಣದ ಕಲ್ಪನಾ ಟಾಕೀಸು ವರ್ಷದಲ್ಲಿ ಮೂರು ತಿಂಗಳು ಚಾಲೂ ಇದ್ದರೆ ಅದೇ ಸ್ವರ್ಗ ಎಂದುಕೊಂಡ ದಿನಗಳವು. ಸುತ್ತಲ ಹಳ್ಳಿಗೆ ಎಡವಿ ಬಿದ್ದರೆ ಸಿಗುವ ಪೇಟೆ ಗೋಕರ್ಣವೇ. ವರ್ಷಕ್ಕೊಮ್ಮೆ ಮಂಕಾಳಮ್ಮನ ಗುಡಿ ಪ್ರಸಾದ ಕೈಗೆ ಬಿದ್ದರೆ ಅಲ್ಲಿಗೆ, ನಾವು ನಮ್ಮ ಹಳ್ಳಿಯ ಜಂಬೂದ್ವೀಪದಿಂದ ಹೊರಲೋಕಕ್ಕೆ ಸಂಪರ್ಕ ಇಟ್ಟುಕೊಂಡಿದ್ದಕ್ಕೆ ಸಾಕ್ಷಿ. ಹೆಣ್ಣುಮಕ್ಕಳು, ಫಾರೆನ್ನರ್ಸ್ ಬರುವ ಬೀಚುಗಳಿಗೆ ಹೋಗುವುದು ಎಂದರೆ, ಮನೆ ಹೊಸ್ತಿಲು ದಾಟುವಾಗ ತಮ್ಮ ಶ್ರಾದ್ಧದ ಅನ್ನ ತಾವೇ ಇಕ್ಕಿ ಹೋಗಬೇಕು ಅಷ್ಟೇ. ಹಾಗಂತ ಇದು ಕಳೆದ ಶತಮಾನದ ಆರಂಭದ ಕಥೆಯೇನಲ್ಲ. ಹೆಂಗಸರು ಶಿಕ್ಷಣ ಉದ್ಯೋಗಗಳಿಗೆ ದೊಡ್ಡ ಮಟ್ಟದಲ್ಲಿ ಸೇರ್ಪಡೆಯಾಗಿ, ಸಾಮಾಜಿಕ ಬದುಕಿನಲ್ಲಿ ಮನ್ವಂತರ ಸಂಭವಿಸಿದ ನಂತರದ್ದು, ಕರಾವಳಿ ಜಿಲ್ಲೆಯಲ್ಲಂತೂ ಹೆಣ್ಣುಮಗಳಿಗೆ ಡಿಗ್ರಿವರೆಗಾದರೂ ಓದಿಸುವುದು ಘನಸ್ತಿಕೆ ಎಂದು ತಿಳಿದ ದಿನಮಾನವದು. ಹಾಗಿರುವಾಗ, ಗೋಕರ್ಣದ ಟಾಕೀಸಿಗೆ ಮುಖಹಾಕದೆ ಬದುಕಲಾದೀತೆ? ಮನೆ, ಊರು ಹೇಗೆ ಹೇಗೆ ಹೆಣ್ಣುಮಕ್ಕಳನ್ನು ಬಿಗಿದಿಡುತ್ತಿತ್ತೋ ಹಾಗೆ ಹಾಗೆ ಆ ಬಿಗಿತದ ಗಂಟು ಸಡಲಿಸಿಕೊಳ್ಳಲು ಅವರು ಸಾಹಸಯಾತ್ರೆಯಲ್ಲಿ ಪರಿಣತರಾಗುತ್ತಿದ್ದರು. ನಮ್ಮ ಬ್ಯಾಗುಗಳಲ್ಲಿ ಚೂಪು ಟಾಚಣಗಳು ವರ್ಷದ ಮುನ್ನೂರೈವತ್ತು ದಿನವೂ ಕೈಯಲ್ಲಿ ಅಂಬ್ರೆಲಾ ಕೊಡೆಗಳು ಏನು ಚೆಂದಕಿರುತ್ತಿದ್ದವೇ? ಬಸ್ ಪ್ರಯಾಣವನ್ನು ಸಲೀಸುಗೊಳಿಸಿದ, ಟಾಕೀಸಿನ ಕತ್ತಲಲ್ಲೂ ಕೂತು ಸಿನಿಮಾ ನೋಡುವ ಧೈರ್ಯಕೊಟ್ಟ ಆಪ್ತಮಿತ್ರಗಣಗಳಲ್ಲವೇ ಅವು? ಶಿವರಾತ್ರಿಯ ನಾಟಕ ನೋಡಲು ಸಕುಟುಂಬ ಪರಿವಾರ ಸಮೇತ ಹೋಗುವುದು ಅನಿವಾರ್ಯವಾಗಿತ್ತು. ಬೆಳತನಾ ನಡೆವ ಯಕ್ಷಗಾನಗಳಿಗಂತೂ ಮನೇಲಿರೋವು ದೆವ್ವಗಳು ಮಾತ್ರ ಅಂತಾಗಿತ್ತು. ಆದರೆ ಅದ್ಯಾಕೋ ಸಿನಿಮಾ ಟಾಕೀಸಿಗೆ ಮಾತ್ರ ಗೆಳತಿಯರೊಡನಾಟ ಮಾತ್ರ ಸರಿಯೆನಿಸಿತ್ತು. ಆದರೇನು? ಹೆಣ್ಣುಮಕ್ಕಳಿಗೆ ಸರಿಯೆನಿಸಿದ್ದನ್ನು ಒಪ್ಪಲು ಅದೇನು ಸಂವಿಧಾನವೇ? ಅಂತೂ ನಂನಮ್ಮ ಮನೆಗಳಲ್ಲಿ ಸಿನಿಮಾ ವೀಕ್ಷಣೆಗೆ ಒಪ್ಪಿ, ನಾವು ಮೂರ್ನಾಲ್ಕು ಹುಡುಗಿಯರು ಕಲ್ಪನಾ ಟಾಕೀಸಿನ ಮೆಟ್ಟಲು ಹತ್ತುವುದರಲ್ಲಿ ಅದೆಷ್ಟು ಅವಸ್ಥಾಂತರಗಳು? ಊರಿಗೆ ಮಧ್ಯಾಹ್ನ ಬರುವ ಬಸ್ಸಿಗೆ ಹೀಗೆ ಶಾಲೆ ಕಲಿವ ಹುಡುಗಿಯರು ಹತ್ತಿದರು ಅಂದರೆ, ‘ಇದೆ, ತಂಗಿ ಎಲ್ಲಿಗ್ರೆ. ಸಿನೇಮಕೆ ಹೋತರೇನೇ?’ ಎಂದು ಯಾರಾದರೂ ಕೇಳುವುದೇ. ಪ್ರಶ್ನೆ ಬಸ್ಸಿನೊಳಗಿಂದ ತೂರಿ ಬಂದರೂ ಬಂತೇ. ಆಹಾ, ಅದೆಷ್ಟು ಅದ್ಭುತವಾಗಿ ಗುಂಪಿನ ಮುಖಂಡೆಯಾಗಿದ್ದವಳಿಂದ ಪ್ರತ್ಯುತ್ತರ! ‘ಇಲ್ಲಪ್ಪ, ನಾವ ನೋಟ್ಸ್ ಝರಾಕ್ಸ್ ಮಾಡ್ಸಕಂಡ ಬರ್ತೇವೆ’ ಅಂತಲೋ, ‘ಇದ್ಕ ಹುಷಾರಿಲ್ಲ. ಮಲ್ಲಣ್ಣ ಡಾಕ್ಟರ ಹತ್ರ ಇಂಜಕ್ಷನ್’ ಅಂತಲೋ, ಪಟಾಪಟ್ ಹೇಳಿಯಾಗಿರುತ್ತಿತ್ತು. ಕೇಳಿದವರಿಗೂ ಈ ಒಡಕು ರೀಲು ರೂಢಿಯಾಗಿರುತ್ತಿತ್ತೋ ಏನೋ? ನಾವು ಸಿನಿಮಾಕ್ಕೆ ಹೋಗವವರಲ್ಲ ಎಂದ ಮೇಲೂ ಆ ಹಿರಿಯ ಇನ್ಯಾರೊಂದಿಗೋ, ಯಾರೂ ಇರದಿದ್ದರೆ ಬಸ್ಸಿನ ಕಂಡಕ್ಟರನೊಂದಿಗೋ, ಸಿನಿಮಾ ನೋಡಿ ಕೆಟ್ಟವರ ಬಗ್ಗೆ ಪುರಾಣ ಶುರುಮಾಡಿ ಆಗಿರುತ್ತಿತ್ತು. ಇಷ್ಟೆಲ್ಲ ಆಗಿ, ಮೇಲಿನ ಸ್ಟಾಪಿನಲ್ಲಿ ಇಳಿದರೆ ಸಿನಿಮಾಕ್ಕೆ ಅಂತ ಅನುಮಾನ ಬಂದೀತೇನೋ ಅಂದು, ಕೆಳಗೆ ರಥಬೀದಿಯ ಬಸ್‍ಸ್ಟಾಪಿಗೇ ಇಳಿದು, ಅವಸರದ ಓಡು ನಡಿಗೆಯಲ್ಲಿ ಏರಿ ಏರಿ ಬಂದರೆ. . . ಊರಿಗೆ ಬಂದ ರಿಕ್ಷಾದಲ್ಲಿ ಕೂಗಿದ ಸಿನಿಮಾ ಹೆಸರೇ ಒಂದು; ಇಲ್ಲಿ ರಾರಾಜಿಸುತ್ತಿರುವುದೇ ಒಂದು-ಎಂಬಂತಾಗಿರುತ್ತಿತ್ತು. ಮಗಳನ್ನು ನೋಡಿ ಬಾ ಅಂದರೆ ಅವ್ವನನ್ನು ನೋಡಿ ಬಂದ ಮಳ್ಳನ ಹಾಗೆ ಪೆಕರು ಪೆಕರಾಗಿ ಟಾಕೀಸಿನೊಳಗೆ ನುಸುಳಿಕೊಂಡಿದ್ದೂ ಇದೆ. ಈ ಪರಿಷೆ ನಡೆಯುತ್ತಿದ್ದುದು ವರ್ಷಕ್ಕೆ ಒಂದೆರಡು ಬಾರಿ ಮಾತ್ರ.
ಇಂತಹ ಒಮ್ಮೆ- ಸಿನಿಮಾದ ಹೆಸರು ಮರೆತಿದೆ. ಅನಂತನಾಗ ಮತ್ತು ಗಾಯತ್ರಿ ಅಭಿನಯ. ಹೆಂಡತಿಗೆ ಸ್ಟೌವ್ ಬಸ್ರ್ಟ್ ಆಗಿಯೇನೋ ಮುಖದ ಒಂದು ಭಾಗ ಸುಟ್ಟು ಹೋಗಿರುತ್ತದೆ. ಅವರ ದಾಂಪತ್ಯದಲ್ಲಿ ಉಂಟಾದ ತಳಮಳವನ್ನು, ಹೆಂಡತಿಯೆಂಬ ಪ್ರೀತಿಯಿದ್ದರೂ ಪ್ರೇಮಿಸಲಾಗದವನ ಸ್ಥಿತಿಯ ತಾಪ ದಣೇ ಈಗ ನಾನು ಆ ಸಿನಿಮಾ ನೋಡಿದೆನೆಂಬಷ್ಟು ಗಾಢವಾಗಿ ನನ್ನ ಪ್ರಜ್ಞೆಯಲ್ಲಿ ಸೇರಿಹೋಗಿದೆ. ಸಿನಿಮಾದ ಒಟ್ಟೂ ಸಂದೇಶವೇನಿತ್ತೋ ನೆನಪಿಲ್ಲ. ಆದರೆ, ಹೆಣ್ಣಿನ ದೇಹ ಸೌಂದರ್ಯ ಹಾಳಾದರೆ, ಅವಳು ಬದುಕುವ ಹಕ್ಕನ್ನೂ ಕಳೆದುಕೊಳ್ಳುತ್ತಾಳೆ. ಕಳೆದುಕೊಳ್ಳಬೇಕು-ಅದು ಮೌಲ್ಯ ಎಂಬಂತಹ ಪಾಠವನ್ನು ಉನ್ನತೀಕರಿಸಿದ ಸಿನಿಮಾಗಳ ಕಾಲ ಅದು. ಅದಕ್ಕೆ ಪೂರಕ ಪಠ್ಯವೆಂಬಂತೆ ಬಂಡಿಹಬ್ಬ, ಜಾತ್ರೆ, ಹಬ್ಬಗಳಲ್ಲಿ ಒಟ್ಟುಗೂಡುವ ಮನೆಗಳಲ್ಲಿ ದೂರದೂರುಗಳಲ್ಲಿ ಗಂಡ-ಹೆಂಡತಿಯರಿಬ್ಬರೂ ನೌಕರಿ ಮಾಡಿಕೊಂಡು ಸುಖವಾಗಿದ್ದಾರೆಂದು ಮೇಲ್ನೋಟಕ್ಕೆ ಕಾಣುವ ಸಂಸಾರಗಳ ಒಡಕು ಬಿಂಬಗಳು ಹೆಣ್ಣುಮಕ್ಕಳ ಪಿಸುಮಾತು-ಕಂಬನಿಗಳಲ್ಲಿ. . ಫಳಫಳಿಸುತ್ತಿತ್ತು. ಹೆಣ್ಣಿನ ಚೆಲುವಿಕೆಯ ಏಕರೂಪೀ ಸಂಹಿತೆ ಅದಾಗಲೇ ಚಾಲ್ತಿಗೆ ಬಂದ ದಿನಗಳವು. ಕುಮಟೆಗೆ ಹೋಗಿದ್ದ ನನ್ನ ಅಪ್ಪ ‘ಫೆರ್ ಆಂಡ್ ಲವ್ಲೀ’ಯನ್ನು ತಂದುಕೊಟ್ಟಿದ್ದ. ‘ತಕಾ, ಇದನ್ನರಾ ಹಚ್ಕಾ’ ಎಂದಿದ್ದ. ಆ ಮಾತಿನ ಅರ್ಥ ಆಗಂತೂ ಗೊತ್ತಾಗಿರಲಿಲ್ಲ. ಬಹುಶಃ ಟಿ.ವಿ. ಮನೆಯೊಳಗೆ ಬಂದು ಕೂತಿರದಿದ್ದರೆ, ರಾಮಾಯಣ-ಮಹಾಭಾರತ ಸೀರಿಯಲ್ಲುಗಳನ್ನು ಮಿಂದು ಮಡಿಯುಟ್ಟು ಕೂತು ನೋಡುತ್ತಿದ್ದ ಜನರಿಗೆ, ತರಹೇವಾರಿ ಜಾಹೀರಾತಿನ ಪಾಠ ಸಿಗದಿದ್ದರೆ. . . ನಮ್ಮಂತಹ ಹೆಣ್ಣುಮಕ್ಕಳ ಕೈಗೆ ಫೇರ್ ಆಂಡ್ ಲವ್ಲಿಯೂ ಸಿಗುತ್ತಿರಲಿಲ್ಲವೇನೋ, ಫೇರ್ ಮತ್ತು ಲವ್ಲಿಯ ಸರಿಯಾದ ಅರ್ಥ ಆಗುವ ಹೊತ್ತಿಗೆ ನಾವು ಬಳಸಿ ಬಿಸಾಕಿದ ಟ್ಯೂಬ್‍ಗಳು ಈ ಭೂಮಿಯ ಗರ್ಭವನ್ನು ಅದೆಷ್ಟು ನೋಯಿಸಿರಬಹುದು ಎನಿಸುತ್ತಿದೆ.
ಯಾಕೆ ಇದೆಲ್ಲ ನೆನಪಾಗುತ್ತಿದೆಯೆಂದರೆ- ಭಾರತೀಯ ಸಿನಿಮಾ ರಂಗದಲ್ಲಿ ಹೆಣ್ಣಿನ ವ್ಯಕ್ತಿತ್ವವನ್ನು ತಥಾಕಥಿತ ಪಿತೃತ್ವವು ರೂಪಿಸಿಟ್ಟ ದೇಹಸೌಂದರ್ಯದಾಚೆ ವಿಸ್ತರಿಸಿದ ಎರಡು ಸಂಗತಿಗಳು ಇತ್ತೀಚೆಗೆ ನಡೆದಿವೆ. ದೀಪಿಕಾ ಪಡುಕೋಣೆ ‘ಚಪಾಕ್’ ಸಿನಿಮಾದ ನಾಯಕಿಯಾಗಿ, ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ಥೆಯ ಹೋರಾಟದ ಬದುಕನ್ನು ಸಾಬೀತುಪಡಿಸುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ಸಿನಿಮಾ ಇದು. ದೀಪಿಕಾ ಅವರ ಬಗ್ಗೆ ಅಭಿಮಾನ ಮೂಡಲು ಕಾರಣಗಳಿವೆ- ದೀಪಿಕಾ ಈಗ ನಟನೆಯ ಮತ್ತು ವೈವಾಹಿಕ ಬದುಕಿನ ವಸಂತದಲ್ಲಿದ್ದಾರೆ. ಕಲಾವಿದೆಯಾಗಿ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳಲೇಬೇಕಾದ ಅಗತ್ಯವೇನೂ ಅವರಿಗಿಲ್ಲ. ಎರಡೆರಡು ಬಾರಿ ಫಿಲ್ಮಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದವರು. ಚಪಾಕ್ ಚಿತ್ರದ ಪಾತ್ರ ನಿರ್ವಹಣೆಯಲ್ಲಿ, ಗಂಡಸಿನ ವಿಕೃತ ಮನಸ್ಸಿಗೆ ದೇಹವನ್ನು ಕುರೂಪವಾಗಿಸಿಕೊಂಡು ಬದುಕಬೇಕಾದ ಹೆಣ್ಣಿನ ತಲ್ಲಣದ ಕಂಪನಗಳನ್ನು ಸ್ಪರ್ಶಿಸಬೇಕಿದೆ. ಚಪಾಕ್ ಚಿತ್ರ ಲಕ್ಷ್ಮಿ ಅಗರವಾಲ್ ಎಂಬ ಸಂತ್ರಸ್ತೆಯ ಬದುಕಿನ ಕಥೆ ಎಂದು ಹೇಳಲಾಗುತ್ತಿದೆ. 15 ವರ್ಷದ ಎಳೆಯ ಸುಂದರಿ, ಆ್ಯಸಿಡ್ ಹಲ್ಲೆಯಿಂದ ವಿಕಾರಗೊಂಡು ಯಾತನೆ, ಹಿಂಸೆಗಳಿಂದ ತತ್ತರಿಸುತ್ತಾಳೆ. ಗೌರವಾನ್ವಿತ ಬಾಳಿಗಾಗಿ ಆ ನಂತರವೂ ಪ್ರಯತ್ನಿಸುತ್ತಾಳೆ. ವಿಕಾರ ರೂಪಕ್ಕೆ ಕಾಲಿಟ್ಟಲೆಲ್ಲಾ ಸೋಲು, ಆದರೆ ಧೃತಿಗೆಡದೆ ಆ್ಯಸಿಡ್ ಸಂತ್ರಸ್ತೆಯರಿಗಾಗಿ ನಿರಂತರ ಹೋರಾಡಿ – ಆ್ಯಸಿಡ್ ಸುಲಭ ಸಾಧ್ಯ ಲಭ್ಯವಾಗದ ಹಾಗೆ ಮಾಡುವ ಕಾನೂನು ತರುವಲ್ಲಿ ಯಶಸ್ವಿಯಾಗುತ್ತಾರೆ. 2013ರಲ್ಲಿ ನಮ್ಮ ದೇಶದಲ್ಲಿದು ಕಾನೂನಾಯಿತು. ಈ ಲಕ್ಷ್ಮಿ ಅಗರವಾಲ್ 2014ರಲ್ಲಿ ಅಮೇರಿಕಾದಿಂದ ‘‘International Woman of Courage’’ ಪ್ರಶಸ್ತಿ ಪಡೆದರು. ಪತಿ ಅಲೋಕ್ ದೀಕ್ಷಿತ್, ಮಗು ಪಿಹೂ ಜೊತೆ ಬಾಳುತ್ತಿದ್ದಾರೆ. ಲಕ್ಷ್ಮೀ ಅಗರವಾಲ್ ಎನ್‍ಜಿಓ ನಡೆಸುತ್ತಿದ್ದಾರೆ. ಲಕ್ಷ್ಮೀ ಬಾಳು- ಚೆಲುವಿನ ಮಾಪನ ದೇಹಸಂಬಂಧಿಯೋ, ವ್ಯಕ್ತಿತ್ವ ಸಂಬಂಧಿಯೋ ಎಂಬ ತಾತ್ವಿಕತೆಯನ್ನು ಮುಂದಿಟ್ಟಿದೆ. ಇದನ್ನು ಕಲಾತ್ಮಕವಾಗಿ ಜನಮಾನಸಕ್ಕೆ ತಲುಪಿಸುವ ಕೆಲಸವನ್ನು ಚಪಾಕ್ ಮಾಡಬಲ್ಲದು. ಹೆಣ್ಣಿನ ದೇಹವನ್ನೇ ಬಂಡವಾಳವಾಗಿಸಿಕೊಂಡು ಅದನ್ನೇ ಪ್ರತಿಪಾದಿಸುತ್ತ ಬಂದ ಸಿನಿಮಾರಂಗಕ್ಕೆ ಮಾತ್ರ ಮುರಿವ ಶಕ್ತಿಯಿದೆ. ಈ ಕಾರಣಕ್ಕೆ ದೀಪಿಕಾ ಪಡುಕೋಣೆ ಮತ್ತು ಮೇಘನಾ ಗುಲ್ಜಾರ ಅಭಿನಂದನಾರ್ಹರು.
ಸಾಯಿಪಲ್ಲವಿ ಎಂಬ ನಟಿಯ ದಿಟ್ಟ ನಿರ್ಧಾರವೊಂದು, ಹೆಣ್ಣಿನ ಅಸಲಿತನವನ್ನು ದೇಹಕ್ಕೆ ಲಗತ್ತಿಸುವ ರಾಜಕಾರಣವನ್ನು ತಳ್ಳಿಹಾಕಿದೆ. ಜಾಹೀರ ನಾಮೆ ಸ್ವತಃ ವೈದ್ಯೆಯಾಗಿರುವ, ಮೇಕಪ್‍ನ್ನು ನಿರಾಕರಿಸಿ ಅಭಿನಯಿಸುವ ಈ ಚೆಲುವೆ, ಕಾಸ್ಮೆಟಿಕ್ ಕಂಪನಿಯೊಂದರ 2 ಕೋಟಿ ರೂಪಾಯಿಯ ಜಾಹೀರಾತು ಆಫರ್‍ನ್ನು ತಿರಸ್ಕರಿಸಿದ್ದಾರೆ. ಹೆಣ್ಣೆಂದರೆ ತಮ್ಮ ಪ್ರೊಡಕ್ಟ್‍ಗಳ ಪ್ರಯೋಗ ಭೂಮಿ ಎಂಬ ಬಂಡವಾಳಶಾಹಿ ಅಹಂನ್ನು, ಹೆಣ್ಣೆಂದರೆ ದೇಹ ಸೌಂದರ್ಯ ಎಂಬ ಪಿತೃತ್ವದ ತಪ್ಪನ್ನು ಏಕಕಾಲದಲ್ಲಿ ವಿರೋಧಿಸಿದ ತೀರ್ಮಾನವಿದು. ಹೆಣ್ಣು ಎಂದರೆ ದೇಹ,ಆದೇಹ ಸಂರಕ್ಷಣೆ ಮತ್ತು ಆಕರ್ಷಣೆಯನ್ನು ಕಾಪಾಡುವುದು ಮಾರ್ಕೆಟ್ಟಿನ ಸೌಂದರ್ಯವರ್ಧಕಗಳ ಜವಾಬ್ದಾರಿ ಎಂಬ ಸಾಮಾಜಿಕ ಫೋಬಿಯಾದ ಕಾಲವನ್ನು ಒಂದಿಷ್ಟಾದರೂ ತಡೆಯಲು ಈ ಮಾತು ಸಹಾಯಕವಾದೀತೇನೋ.
ಈಗ ನಮ್ಮ ಗೋಕರ್ಣದ ಕಲ್ಪನಾ ಟಾಕೀಸು ನಡೆಯುತ್ತಿಲ್ಲ. ಅದೀಗ ಯಾವುದೋ ಗೋಡೌನ್ ಆಗಿದೆ. ನಮ್ಮ ಹಾಗೆ, ಆದರೆ ಏನೆಲ್ಲ ರಾದ್ಧಾಂತಗಳ ಮೂಲಕ ಸಿನಿಮಾ ನೋಡುವ ಗರಜು ನಮ್ಮ ಮಕ್ಕಳಿಗಿಲ್ಲ. ಅವರೀಗ ಸ್ವತಂತ್ರರು. ಯಾರ ಒಪ್ಪಿಗೆಯ ಹಂಗಿಲ್ಲದೆ, ಏನೆಲ್ಲವನ್ನೂ ತಮ್ಮ ಪ್ರಜ್ಞೆಗೆ ತಂದುಕೊಳ್ಳಬಲ್ಲವರು. ಅವರಿಗೆ ಚಪಾಕ್‍ನಂತಹ ಸಿನಿಮಾಗಳು, ಇಂತಹ ನಿರ್ಣಯಗಳು ಬದುಕನ್ನು ನೋಡುವ ಹೊಸ ಕಣ್ಣೋಟವನ್ನು ಕೊಡಲಿ. ಹೆಣ್ಣುಗಳು ಭಯ ಅಪಮಾನಗಳಿಂದ ಕುಗ್ಗುವುದು ನಿಲ್ಲಲಿ. ಗಂಡುಮಕ್ಕಳಿಗೆ ಹೆಣ್ಣೆಂದರೆ ದೇಹವಲ್ಲ ಎಂಬ ತಿಳಿವು ಸಿಗಲಿ. ಸಿನಿಮಾ ನಮ್ಮ ಭಾವವಲಯವನ್ನು ಮೀಟುವುದಕ್ಕೆ ಯಶಸ್ವಿಯಾದಷ್ಟು ಬೇರೆ ಯಾವ ಮಾಧ್ಯಮವೂ ಯಶಸ್ವಿಯಾಗದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...