“ರೈತ ಹೋರಾಟ…” ಕಳೆದ 6 ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಅನ್ನದಾತರ ಹೋರಾಟದ ಕುರಿತು ಇಲ್ಲಿಯವರೆಗೆ ಸರ್ಕಾರ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಚುನಾವಣೆ ಹಿನ್ನೆಲೆ ಮಾತುಕತೆಗಳನ್ನು ನಿಲ್ಲಿಸಿದ್ದ ಕೇಂದ್ರ ಮತ್ತೆ ಮಾತುಕತೆಗೆ ಮುಂದಾಗಿಲ್ಲ. ಇವೆಲ್ಲದರ ನಡುವೆ ದೇಶದಲ್ಲೇ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರೂ ಗಡಿಗಳಲ್ಲಿ ಸೋಂಕಿನ ಸುಳಿವಿಲ್ಲ.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನವೆಂವರ್ 26, 27 ರಂದು ದೆಹಲಿ ಚಲೋಗೆ ಪಂಜಾಬ್ ರೈತರ ನೇತೃತ್ವದಲ್ಲಿ ದೇಶದ ರೈತರು ಕರೆ ನೀಡಿದ್ದರು. ಅಂದಿನಿಂದ ದೆಹಲಿಯ ಗಡಿಗಳನ್ನು ಸುತ್ತುವರೆದಿರುವ ರೈತರು ಈ ಕರಾಳ ಕಾನೂನುಗಳ ರದ್ದತಿಗೆ ಆಗ್ರಹಿಸಿದ್ದಾರೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕಾನೂನು ಜಾರಿ ಮಾಡಲು ಆಗ್ರಹಿಸಿದ್ದಾರೆ.
ಈ ಆರು ತಿಂಗಳಲ್ಲಿ ರೈತರು ಅನುಭವಿಸಿದ್ದು ಕೇವಲ ಸರ್ಕಾರದ ಕಿರುಕುಳವಲ್ಲ, ಜೊತೆಗೆ ಪ್ರಕೃತಿ ನೀಡಿದ ಸವಾಲುಗಳನ್ನು ಎದುರಿಸಿದ್ದಾರೆ. ತೀವ್ರ ಚಳಿ, ಮಳೆ, ಬಿಸಿಲು ಅದರ ಜೊತೆಗೆ ಕೊರೊನಾ ಸಾಂಕ್ರಾಮಿಕ ರೋಗ ಕೂಡ. ಇಡೀ ದೇಶದಲ್ಲಿ ಕೊರೊನಾ ಸೋಂಕು ಹರಡಿರುವ ಮಧ್ಯೆಯೇ ಈ ಸಾವಿರಾರು ಮಂದಿ ಒಂದೆಡೆ ಇರುವ ಸ್ಥಳದಲ್ಲಿ ಸೋಂಕು ಇಲ್ಲವೆ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟುತ್ತದೆ.
ಇದನ್ನೂ ಓದಿ: ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ – ಫೇಕ್, ಸುಳ್ಳು ಮತ್ತು ತಿರುಚುವಿಕೆಯೇ `ಜೀವಾಳ’
ಆದರೆ, ಅಚ್ಚರಿಯೆಂದರೆ ಇಲ್ಲಿ ಕೊರೊನಾ ಸೋಂಕಿತ ಪ್ರಕರನಗಳು ವರದಿಯಾಗಿಲ್ಲ. ಇದಕ್ಕೆ ಮೂಲ ಕಾರಣ ಇಲ್ಲಿ ಪ್ರತಿಭಟನೆ ಆರಂಭವಾದಾಗಿನಿಂದ ಇರುವ ಆಸ್ಪತ್ರೆಗಳು. ಹೌದು, ಪ್ರತಿಭಟನಾ ನಿರತ ಸಿಂಘು, ಟಿಕ್ರಿ, ಗಾಜಿಪುರ್, ಶಹಾಜಾನ್ಪುರ ಗಡಿಗಳಲ್ಲಿ ನೂರಾರು ಮೆಡಿಕಲ್ ಕ್ಯಾಂಪ್ಗಳಿವೆ. ಜೊತೆಗೆ ಎಲ್ಲಾ ಸೌಲಭ್ಯಗಳಿರುವ 24 ಗಂಟೆಗಳು ಕಾರ್ಯನಿರ್ವಹಿಸುವ ಆಸ್ಪತ್ರೆಗಳಿವೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ, ಕಳೆದ ನವೆಂಬರ್ ತಿಂಗಳಿನಿಂದ ಸಿಂಘು ಗಡಿಯಲ್ಲಿರುವ ಮಾರುತಿ ಮಾನವ್, ’ಇಲ್ಲಿ ಯಾವುದೇ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ. ನಾನು ಇಲ್ಲಿಯೇ ಇದ್ದೇನೆ. ಜನರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಮೆಡಿಕಲ್ ಕ್ಯಾಂಪ್ಗಳು ಇರುವುದರಿಂದ ಸಣ್ಣ ಪುಟ್ಟ ಜ್ವರ ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆ ಪಡೆಯಲಾಗುತ್ತದೆ’ ಎಂದಿದ್ದಾರೆ.
’ಮೇ 26 ಕ್ಕೆ ಕರಾಳ ದಿನ ಆಚರಣೆಗೆ ಕರೆ ನೀಡಿರುವ ಹಿನ್ನೆಲೆ, ಕಳೆದೆರಡು ದಿನಗಳಿಂದ ರೈತರು ಗಡಿಯಲ್ಲಿ ಹೆಚ್ಚಾಗುತ್ತಿದ್ದಾರೆ. ಎರಡು ವೇದಿಕೆಗಳ ಬಳಿ ಮೊದಲು ಇದ್ದಷ್ಟೇ ಜನರು ಈಗಲೂ ಇದ್ದಾರೆ. 26 ರ ವೇಳೆಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಟ್ಯ್ರಾಲಿಗಳಿಗಿಂತ ಟೆಂಟ್ಗಳು ಹೆಚ್ಚಾಗಿವೆ’ ಎಂದಿದ್ದಾರೆ.
ಇದನ್ನೂ ಓದಿ: “ನಾವೂ ಬದುಕಬೇಕು”: ಜನಾಗ್ರಹ ಆಂದೋಲನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲ
ಇನ್ನು “ರಾಜಸ್ಥಾನದ ಶಹಜಾನ್ಪುರ ಗಡಿಗೆ ರಾಜಸ್ಥಾನದಿಂದ ಸಾವಿರಾರು ರೈತರು ಕಪ್ಪು ದಿನ ಆಚರಣೆಗೆ ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಇಲ್ಲಿಗೆ ಬಂದು ರೈತರಲ್ಲಿ ಹುಮ್ಮಸ್ಸು ತುಂಬಿದ್ದಾರೆ. ಈ ಬಾರಿಯ ಕಪ್ಪು ದಿನ ಆಚರಣೆಯನ್ನು ಸರ್ಕಾರ ನೆನಪು ಇಟ್ಟುಕೊಳ್ಳುತ್ತದೆ” ಎಂದು ಸ್ವರಾಜ್ ಇಂಡಿಯಾದ ರಾಜೀವ್ ಅವರು ನಾನುಗೌರಿ.ಕಾಂ ಜೊತೆಗೆ ಹಂಚಿಕೊಂಡಿದ್ದಾರೆ.
ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ಟಿಕ್ರಿ ಗಡಿಯಲ್ಲಿಯೂ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಭಾನುವಾರ ಪಂಜಾಬ್ನ ಸಾಗ್ರೂರ್ನಲ್ಲಿರುವ ಖಾನೌರಿ ಪ್ರತಿಭಟನಾ ಸ್ಥಳದಿಂದ ಹೊರಟ ಸಾವಿರಾರು ಜನರು ಸೇರಿಕೊಂಡಿದ್ದಾರೆ. ಟಿಕ್ರಿ ಗಡಿಯಲ್ಲಿನ ಪಕೋಡಾ ಚೌಕ್ನಲ್ಲಿರುವ ಭಾರತೀಯ ಕಿಸಾನ್ ಯೂನಿಯನ್ ಉಗ್ರಾಹನ್ ಸಂಘಟನೆಯ ಸಾವಿರಾರು ಮಂದಿ ಗಡಿಯನ್ನು ಸೇರಿಕೊಂಡಿದ್ದಾರೆ.
ಟಿಕ್ರಿಗಡಿಯಲ್ಲಿ ಜನ ನಾಯಕ್ ದೇವಿಲಾಲ್ ಕಿಸಾನ್ ಹೆಸರಿನ 40 ಬೆಡ್ಗಳಿರುವ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಇಂಡಿಯನ್ ನ್ಯಾಷನಲ್ ಲೋಕ್ ದಳ ವತಿಯಿಂದ ಆರಂಭವಾದ ಈ ಆಸ್ಪತ್ರೆ ಎರಡು ಜನರಲ್ ವಾರ್ಡ್, ಒಂದು ಮಹಿಳಾ ವಾರ್ಡ್ ಒಳಗೊಂಡಿದೆ.
ಪ್ರತಿಭಟನಾ ನಿರತ ಗಡಿಗಳು ಈಗ ಮತ್ತೆ ರೈತರಿಂದ ತುಂಬುತ್ತಿವೆ. ಹೋರಾಟಕ್ಕೆ 6 ತಿಂಗಳು ತುಂಬುತ್ತಿರುವ ಹಿನ್ನೆಲೆ ಸಂಯುಕ್ತ ಕಿಸಾನ್ ಮೋರ್ಚಾ ಕಪ್ಪು ದಿನಕ್ಕೆ ಕರೆ ನೀಡಿದೆ. ಸಾವಿರಾರು ರೈತರು ತಮ್ಮ ಹಳ್ಳಿಗಳಿಂದ ದೆಹಲಿಯ ಗಡಿಗಳನ್ನು ಸೇರಿಕೊಳ್ಳುತ್ತಿದ್ದಾರೆ.
ಕೊರೊನಾ ಲಾಕ್ಡೌನ್ ನೆಪದಲ್ಲಿ ರೈತರನ್ನು ಗಡಿಗಳಿಂದ ಎತ್ತಂಗಡಿ ಮಾಡಲು ಸರ್ಕಾರ ಪ್ರಯತ್ನ ಪಡುತ್ತಿದೆ. ಆದರೆ, ಗಡಿಗಳಲ್ಲಿ ಇಲ್ಲಿಯವರೆಗೆ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ರೈತರು ವಹಿಸಿರುವ ಮುನ್ನೆಚ್ಚರಿಕೆ ಮತ್ತು ದೇಶ-ವಿದೇಶಗಳ ರೈತರು ತೆಗೆದುಕೊಳ್ಳುತ್ತಿರುವ ಆರೈಕೆಯಿಂದಾಗಿ ಅಂತಹ ಕೇಸ್ಗಳು ಇಲ್ಲಿ ಕಂಡು ಬಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಮೇ 26 ಕ್ಕೆ ಪ್ರತಿಭಟನಾ ಗಡಿಗಳಲ್ಲಿ ಕರಾಳ ದಿನ: ದೆಹಲಿಗೆ ಹೊರಟ ಅನ್ನದಾತರು