Homeಅಂಕಣಗಳುಪಿಕೆ ಟಾಕೀಸ್: ಹೆಣ್ಣಿನ ಸಾಮಾನ್ಯ ಬದುಕಿಗೆ ಕನ್ನಡಿ ಹಿಡಿಯುವ ಶಾಂತಾಲ್‌ರ ಸಿನಿಮಾಗಳು

ಪಿಕೆ ಟಾಕೀಸ್: ಹೆಣ್ಣಿನ ಸಾಮಾನ್ಯ ಬದುಕಿಗೆ ಕನ್ನಡಿ ಹಿಡಿಯುವ ಶಾಂತಾಲ್‌ರ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 13/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಶಾಂತಾಲ್ ಅಕೆಮನ್

ಜೀನ್ ಡೀಲ್‌ಮನ್, 23 ಕ್ವಾಡು ಕಾಮರ್ಸ್, 1080 ಬ್ರಕ್ಸೆಲ್ಸ್ (ಫ್ರೆಂಚ್, 1975): ಯಾವುದೇ ವ್ಯಕ್ತಿಯ ದಿನಚರಿಯನ್ನೇ ಸಿನಿಮಾ ಮಾಡಿದರೆ, ಇದರಲ್ಲಿ ಕಂಡುಬರುವ ಕಥೆಯಾದರೂ ಎಂತಹದ್ದು? ಸಿನಿಮಾಗೆ ಕಥೆ ಅಷ್ಟು ಮುಖ್ಯವಾ? ಕಥೆ ಇಲ್ಲದೆ ಸಿನಿಮಾವೂ ಇಲ್ಲವಾ?

ನಡುವಯಸ್ಸಿನ ವಿಧವೆ ಬೆಳೆದ ಮಗನ ಜೊತೆ ಬದುಕುತ್ತಿರುತ್ತಾಳೆ. ಸಿನಿಮಾದ ಶೀರ್ಷಿಕೆಯೇ ಅವಳ ಹೆಸರು, ವಿಳಾಸ. ಈ ಸಿನಿಮಾದ ಕಾಲಾವಧಿ ಮೂರು ಗಂಟೆ ಇಪ್ಪತ್ತೊಂದು ನಿಮಿಷಗಳು. ಡೀಲ್‌ಮನ್‌ಳ ಮೂರು ದಿನಗಳ ದಿನಚರಿಯನ್ನು ಸುಮಾರು ಮೂರು ಗಂಟೆ ಅವಧಿಗೆ ಚಿತ್ರಿಸಲಾಗಿದ್ದು, ಕೊನೆಯಲ್ಲಿ ಒಂದು ಆಘಾತದೊಂದಿಗೆ ಸಿನಿಮಾ ಮುಗಿಯುತ್ತದೆ.

ಡೀಲ್‌ಮನ್‌ಳ ದಿನಚರಿ ಎಂದರೆ: ಕಾಫಿ ತಯಾರಿಸಿ ಕುಡಿಯುವುದು, ಅಲೂಗಡ್ಡೆ ಸಿಪ್ಪೆ ಸುಲಿಯುವುದು, ಹಾಸಿಗೆಯ ಹೊದಿಕೆಯನ್ನು ಬದಲಾಯಿಸಿ ಚೊಕ್ಕವಾಗಿ ಇಡುವುದು, ಮಗನ ಬೂಟ್‌ಗಳಿಗೆ ಪಾಲಿಶ್ ಮಾಡುವುದು, ಅಡುಗೆ ಮಾಡುವುದು, ಪಾತ್ರೆಗಳನ್ನು ತೊಳೆಯುವುದು, ತೊಳೆದ ಪಾತ್ರೆಗಳನ್ನು ಒರೆಸುವುದು, ಊಟದ ಡೈನಿಂಗ್ ಟೇಬಲ್‌ಗೆ ಬಟ್ಟೆ ಹೊದಿಸಿ, ಚಮಚಗಳನ್ನು ಜೋಡಿಸುವುದು, ಬಟ್ಟೆಗಳನ್ನು ಒಗೆಯುವುದು, ಒಗೆದ ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಮನೆಯ ಬಿಲ್‌ಗಳನ್ನು ಪಾವತಿಸುವುದು, ಪಕ್ಕದ ಮನೆಯವರ ಮಗುವನ್ನು ನೋಡಿಕೊಳ್ಳುವುದು- ಹೀಗೆ ಮಾಡಲು ಯಾವುದೇ ಕೆಲಸವಿಲ್ಲದಾಗ ರೆಡಿಯೋದಲ್ಲಿ ಬರುವ ಬೆಥೋವನ್‌ನ ಪಿಯಾನೋ ಕೇಳುತ್ತಾ ಸ್ವೆಟರ್ ಹೆಣಿಯುವುದು. ಹೀಗೆ ಮನೆಯಲ್ಲಿನ ದಿನನಿತ್ಯದ ನೀರಸ ಚಟುವಟಿಕೆಗಳೇ ಈ ಸಿನಿಮಾ.

PC : High On Films, (ಜೀನ್ ಡೀಲ್‌ಮನ್, 23 ಕ್ವಾಡು ಕಾಮರ್ಸ್, 1080 ಬ್ರಕ್ಸೆಲ್ಸ್)

ಈ ನೀರಸ ದಿನನಿತ್ಯದ ಕೆಲಸಗಳಲ್ಲಿ ಡೀಲ್‌ಮನ್ ಮಧ್ಯಾಹ್ನ ಹೊತ್ತಿನಲ್ಲಿ ಮನೆಯಲ್ಲಿಯೇ ವೇಶ್ಯಾವಾಟಿಕೆಯನ್ನು ನಡೆಸುತ್ತಿರುತ್ತಾಳೆ. ದಿನಕ್ಕೊಬ್ಬ ಗಿರಾಕಿ ಬರುತ್ತಾನೆ. ಯಾಂತ್ರಿಕವಾಗಿ ಅವನ ಕೋಟ್ ಮತ್ತು ಮಫ್ಲರನ್ನು ತೆಗೆದು ಗೋಡೆಗೆ ಸಿಕ್ಕಿಸಿ ಇಬ್ಬರೂ ಬೆಡ್‌ರೂಮಿಗೆ ಹೋಗುತ್ತಾರೆ. ನಂತರ ಹೊರಬಂದು ಮುಂದಿನ ಭೇಟಿಯ ದಿನವನ್ನು ನಿರ್ಧರಿಸಿ ಹಣವನ್ನು ಕೊಟ್ಟು ಹೋಗುತ್ತಾನೆ. ಆಮೇಲೆ ಡೀಲ್‌ಮನ್ ಕಾಲೇಜು ಮುಗಿಸಿ ಬರುವ ಮಗನಿಗಾಗಿ ಊಟದ ತಯಾರಿಯಲ್ಲಿ ನಿರತಳಾಗುತ್ತಾಳೆ.

ಸಿನಿಮಾದಲ್ಲಿ ಮಾತುಗಳು ಅತಿ ವಿರಳ. ಕೆನಡಾದಲ್ಲಿರುವ ತನ್ನ ಸಹೋದರಿಯಿಂದ ಬಂದ ಪತ್ರವನ್ನು ಮಗನಿಗೆ ಓದಿ ತಿಳಿಸುವಾಗ, ಪ್ರೇಕ್ಷಕರಿಗೆ ಅವಳು ವಿಧವೆಯಾಗಿ ಆರು ವರ್ಷಗಳು ಕಳೆದಿರುವುದರ ಬಗ್ಗೆ ತಿಳಿಯುತ್ತದೆ. ಆ ಪತ್ರಕ್ಕೆ ಪ್ರತ್ಯುತ್ತರ ಬರೆಯಲು ಪ್ರಯತ್ನಿಸಿ, ಅದನ್ನು ಮುಂದೂಡುತ್ತಾ ತನ್ನ ಮತ್ತಿರರ ಕೆಲಸಗಳಲ್ಲಿ ಮುಳುಗಿ ಹೋಗುತ್ತಾಳೆ.

ಮನೆಯಿಂದ ಹೊರಗೆ ಹೋಗುವುದು, ಮಗನ ಕೋಟಿಗೆ ಗುಂಡಿ ಹುಡುಕಲು, ಮಗನಿಗೆ ಹೆಣಿಯುತ್ತಿರುವ ಸ್ವೆಟರ್‌ನ ಉಣ್ಣೆದಾರವನ್ನು ತರಲು ಹಾಗೂ ಅಡುಗೆಗೆ ತರಕಾರಿ, ಹಣ್ಣು ಮತ್ತು ದಿನಸಿಯನ್ನು ತರಲು ಮಾತ್ರ.

ಸಿನಿಮಾ ವಾಚ್ಯವಾಗದೆ, ಕಥೆಯಲ್ಲಿ ಉಬ್ಬರ ಇಳಿತಗಳನ್ನು ಹುಡುಕದೆ, ಮನೆಯ ಹೆಂಗಸಿನ (ಹೌಸ್‌ವೈಫ್‌ನ) ದಿನನಿತ್ಯದ ಬದುಕಿಗೆ ಕನ್ನಡಿ ಹಿಡಿದಂತೆ ಕಟ್ಟಲಾಗಿದೆ.

ಮೂರು ಗಂಟೆಗೂ ಮೀರಿದ ಈ ಸಿನಿಮಾ ನಿರಾಸಕ್ತಿಯೆನಿಸಿ, ಬದುಕಿನಲ್ಲಿ ಮುಖ್ಯವಲ್ಲದ ಕೆಲಸಗಳನ್ನು ನೋಡುವುದರಲ್ಲಿ ಅಂತಹ ವಿಶೇಷವೇನಿದೆ ಎಂಬ ಪ್ರಶ್ನೆ ಮೂಡಿದರೆ, ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಒಂದು ದಿನವೂ ತಪ್ಪದೇ ಈ ನೀರಸ ಕೆಲಸಗಳಲ್ಲಿಯೇ ಬಂಧಿಯಾಗಿರುವ ಹೆಂಗಸರ ಬದುಕು ಎಷ್ಟು ನಿರ್ಲಕ್ಷ್ಯಗೊಂಡಿದೆ ಎಂಬುದನ್ನು ಮನಗಾಣಿಸುತ್ತದೆ.

ಸಿನಿಮಾದ ಕೊನೆಯಲ್ಲಿ ಮೂರನೇ ದಿನ ಡೀಲ್‌ಮನ್ ಒಂದು ಗಂಟೆ ಮೊದಲೇ ನಿದ್ದೆಯಿಂದ ಎಚ್ಚರಗೊಳ್ಳುತ್ತಾಳೆ. ಆದುದರಿಂದ ಅವಳಿಗೆ ಎದ್ದ ತಕ್ಷಣ ಮಾಡುಲು ಕೆಲಸವಿರುವುದಿಲ್ಲ ಹಾಗೂ ಅವಳ ದಿನಚರಿ ಇರುಸು ಮುರಿಸಿಂದಲೇ ಶುರುವಾಗಿ, ಕೊನೆಗೆ ಅದು ಮಧ್ಯಾಹ್ನದ ಹೊತ್ತಿನಲ್ಲಿ ಬರುವ ಗಿರಾಕಿ ಹಾಸಿಗೆಯಲ್ಲಿ ಅವಳಿಗೆ ಇಷ್ಟವಿಲ್ಲದಂತೆಯೇ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾನೆ. ಇದನ್ನು ಸಹಿಸದ ಡೀಲ್‌ಮನ್ ಕ್ರಿಯೆಯ ನಂತರ ತನ್ನ ಬಟ್ಟೆಗಳನ್ನು ತೊಟ್ಟು, ಹಾಸಿಗೆಯಲ್ಲಿ ಮಲಗಿದ್ದ ಗಿರಾಕಿಯ ಕತ್ತಿಗೆ ಮೇಜಿನ ಮೇಲಿದ್ದ ಕತ್ತರಿಯಿಂದ ಇರಿದು ಕೊಲ್ಲುತ್ತಾಳೆ.

ಅವನನ್ನು ಕೊಂದ ನಂತರವಷ್ಟೇ ಮುಂದೇನೆಂಬ ಪ್ರಶ್ನೆ ಡೀಲ್‌ಮನ್ ಮತ್ತು ಪ್ರೇಕ್ಷಕರಿಗೆ ಎದುರಾಗುತ್ತದೆ! ಡೀಲ್‌ಮನ್ ಡೈನಿಂಗ್ ಟೇಬಲ್‌ನಲ್ಲಿ ರಕ್ತಸಿಕ್ತ ಕೈಯಲ್ಲಿ ಕೂತು ಯೋಚನೆ ಮಾಡುವಾಗಲೇ ಸಿನಿಮಾ ಮುಗಿಯುತ್ತದೆ.

ಮೀಟಿಂಗ್ಸ್ ಅಫ್ ಅನ್ನಾ (ಫ್ರೆಂಚ್, 1978): ಅನ್ನಾ ಸ್ವತಂತ್ರ ಸಿನಿಮಾ ನಿರ್ದೇಶಕಿ. ತನ್ನ ಸಿನಿಮಾಗಳನ್ನು ಯೂರೋಪಿನ ವಿವಿಧ ನಗರಗಳಲ್ಲಿ ಪ್ರದರ್ಶಿಸುತ್ತಾ, ಬೇರೆ ಬೇರೆ ಜನರನ್ನು ಭೇಟಿ ಮಾಡುವುದೇ ಈ ಸಿನಿಮಾದ ಕಥಾನಕ.

ಸೆಲ್ಫ್ ರೆಫ್ಲೆಕ್ಟಿವ್ ಜಾನರ್‌ಗೆ ಸೇರುವ ಈ ಸಿನಿಮಾ, ನಿರ್ದೇಶಕಿಯ ಸ್ವಂತಃ ಅನುಭವವನ್ನೇ ಸಿನಿಮಾವಾಗಿಸಿರುವ ಅನನ್ಯ ಪ್ರಯತ್ನವೆನಿಸುತ್ತದೆ.

ಅನ್ನಾ ಜರ್ಮನಿಯ ಹೋಟೆಲ್ ಒಂದರಲ್ಲಿ ಅಪರಚಿತನೊಬ್ಬನ ಜೊತೆಗೆ ಹಾಸಿಗೆಗೆ ಹೋಗುತ್ತಾಳೆ. ಆದರೆ ಹೊಂದಣಿಕೆಯಾಗದೆ, ಅವನು ಅಲ್ಲಿಂದ ಹೊರಟುಹೋಗುತ್ತಾನೆ. ಮರುದಿನ ಮಗಳ ಹುಟ್ಟುಹಬ್ಬದ ಸಲುವಾಗಿ ಮನೆಗೆ ಬರುವಂತೆ ಆಹ್ವಾನಿಸುತ್ತಾನೆ. ಅನ್ನಾ ಅವನ ಮನೆಗೆ ಹೋಗುತ್ತಾಳೆ. ಅವನ ಹೆಂಡತಿ ಕುಟುಂಬವನ್ನು ಬಿಟ್ಟು ಹೋಗಿರುವ ವಿಷಯ, ಅವನ ಮನೆಯ ಕುರಿತು ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲೂ ತನ್ನ ಮನೆ ಸುರಕ್ಷಿತವಾಗಿರುವುದರ ಬಗ್ಗೆ ಹೇಳುತ್ತಾನೆ. ಅನ್ನಾಳಿಗೆ ಟುಲಿಪ್ಸ್ ಹೂಗಳು ಇಷ್ಟವಾ ಎಂದು ಅವನು ಕೇಳಲು, ಅವಳು ಇಲ್ಲವೆನ್ನುತ್ತಾಳೆ. ಆಗ ಅನ್ನಾ ಎಲ್ಲ ಹೆಂಗಸರಂತಲ್ಲ ಎಂಬುದು ತಿಳಿಯುತ್ತದೆ.

ರೈಲ್ವೇ ನಿಲ್ದಾಣದಲ್ಲಿ ತನ್ನ ತಾಯಿಯ ಗೆಳತಿಯೊಬ್ಬಳನ್ನು ಭೇಟಿಯಾಗುತ್ತಾಳೆ. ಅವಳ ಕುಟುಂಬ ಮೊದಲು ಬೆಲ್ಜಿಯಂನ ಬ್ರಸೆಲ್ಸ್‌ನಿಂದ ವಲಸೆ ಬಂದು ಜರ್ಮನಿಯಲ್ಲಿ ನೆಲೆಯೂರಿರುತ್ತದೆ. ತನ್ನ ಸದಾ ಸುತ್ತುವ ಕೆಲಸದ ಕಾರಣದಿಂದ ತನ್ನ ಸಂಗಾತಿಯಿಂದ ಬೇರ್ಪಟ್ಟಿರುವುದಾಗಿ ಅನ್ನಾ ಹೇಳುತ್ತಾಳೆ. ಅದಕ್ಕೆ ತಾಯಿಯ ಗೆಳತಿ ತನ್ನ ಸುಂದರ ಮಗನನ್ನು ಮದುವೆಯಾಗಲು ಒತ್ತಾಯಿಸುತ್ತಾಳೆ. ಆದರೆ ಅದನ್ನು ನಿರಾಕರಿಸಿ ಅನ್ನಾ ಮುಂದೆ ಸಾಗುತ್ತಾಳೆ.

ಮೀಟಿಂಗ್ಸ್ ಅಫ್ ಅನ್ನಾ

ರೈಲಿನಲ್ಲಿ ಮತ್ತೊಬ್ಬ ಅಪರಿಚತನೊಂದಿಗೆ ಲೋಕಾಭಿರಾಮದ ಸಂವಾದ. ಯಾರು ಯಾರ ಕುರಿತೂ ಆಸಕ್ತಿ ತೋರದೆ, ಸಿಗರೇಟ್‌ಗಳನ್ನು ಸೇದುತ್ತಾ ರೈಲಿನ ಕಿಟಕಿಯಿಂದ ಹೊರ ನೋಡುತ್ತಾ ಮಾತಾಡುತ್ತಾರೆ.

ಹೀಗೆ ಸಿನಿಮಾದಲ್ಲಿ ನೇರವಾಗಿ ಏನನ್ನೂ ಹೇಳದೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಗಿದೆ. ಆರ್ಥಿಕ ಕುಸಿತದಿಂದ ಇಡೀ ಯೂರೋಪ್ ಅನುಭವಿಸುತ್ತಿರುವ ಯಾತನೆ, ಹಣದುಬ್ಬರ, ಬೆಲೆ ಏರಿಕೆ, ವಲಸೆ ಮುಂತಾದ ವಿಷಯಗಳ ಜೊತೆಗೇ, ಜರ್ಮನಿಯನ್ನು ಯುದ್ಧದ ನಂತರ ಹೇಗೆ ಕಟ್ಟಿದರೆಂಬುದು ಒಂದು ಕಡೆಯಾದರೆ, ಮತ್ತೊಂದು ಕಡೆ ಒಂಟಿತನ, ಬದುಕಿನ ಅರ್ಥಹೀನತೆ, ಲೆಸ್ಬಿಯನ್‌ಗಳ ಕುರಿತು ನಿರ್ದೇಶಕಿಯ ವ್ಯಾಖ್ಯಾನ ಸಿನಿಮಾದಲ್ಲಿ ಮೂಡುತ್ತದೆ.

ಶಾಂತಾಲ್ ಅಕೆಮನ್: ಶಾಂತಾಲ್ ಅಕೆಮನ್‌ರ ಸಿನಿಮಾಗಳನ್ನು ಕೇವಲ ಫೆಮಿನಿಸಂ ಸಿನಿಮಾಗಳೆಂದು ವಿಂಗಡಿಸಿ ನೋಡದೆ, ಅವರ ಕಥಾವಸ್ತು ವೈಶಿಷ್ಟ್ಯಗಳಿಗೆ ಅತಿಯಾಗಿ ಒತ್ತು ನೀಡದೆ, ಅವರು ಸಿನಿಮಾ ಕಟ್ಟುವ ಕ್ರಮವನ್ನು ನೋಡುವುದು ಅತಿ ಮುಖ್ಯ.

ಸಿನಿಮಾದಲ್ಲಿ ಪುಲ್ ಶಾಟ್, ಮಿಡ್ ಶಾಟ್, ಕ್ಲೋಸ್‌ಅಪ್, ಎಕ್‌ಸ್ಟ್ರೀಮ್ ಕ್ಲೋಸ್‌ಅಪ್‌ಗಳೆಂದು ದೃಶ್ಯವನ್ನು ಕಟ್ಟುವ ವ್ಯಾಕರಣವಿರುತ್ತದೆ. ಇಲ್ಲಿ ಶಾಂತಾಲ್‌ರವರ ಶೈಲಿ ಅತಿ ಸರಳವಾದದ್ದು. ಅವರು ಮಿಡ್ ಶಾಟ್‌ನಿಂದ ದೃಶ್ಯವನ್ನು ಸಂಪೂರ್ಣವಾಗಿ ಚಿತ್ರಿಸುತ್ತಾರೆ. ಯಾವುದೇ ಕಾರಣಕ್ಕು ಕ್ಲೋಸ್‌ಅಪ್, ಪ್ರೊಫೈಲ್ ಶಾಟ್ಸ್ ಚಿತ್ರಿಸುವುದಿಲ್ಲ.

ಇದರ ಮೂಲ ಉದ್ದೇಶವೆಂದರೆ ಒಂದು ಕನಿಷ್ಠತೆಯಲ್ಲಿ ಸಿನಿಮಾ ಕಟ್ಟುವುದು. ಎರಡನೆಯದು, ಪ್ರತಿ ಬಾರಿಯೂ ಕ್ಯಾಮರಾವನ್ನು ಚಲಿಸುತ್ತಾ ಅಥವಾ ದೃಶ್ಯವನ್ನು ತುಂಡರಿಸುತ್ತಾ ಬೇರೆ ಕೋನಗಳಲ್ಲಿ ಚಿತ್ರಿಸದೇ, ದೃಶ್ಯದಲ್ಲಾಗುವ ಚಟುವಟಿಕೆಗಳನ್ನು ಯಾವುದೇ ರೀತಿ ಮ್ಯಾನಿಪುಲೇಟ್ ಮಾಡದೇ ಯಥಾವತ್ತಾಗಿ ಪ್ರೇಕ್ಷಕರ ಮುಂದಿಡುವ ದಿಟ್ಟ ನಿರ್ಧಾರ.

PC : The Guardian, (ಶಾಂತಾಲ್ ಅಕೆಮನ್)

ಹಾಗೂ ಕಥೆ ಮತ್ತು ಕಥೆಯಲ್ಲಾಗುವ ಏರಿಳಿತಗಳೇ ಮುಖ್ಯವೆನ್ನದೆ ದೃಶ್ಯ ಮತ್ತು ಶಬ್ದಗಳಿಂದ ಸಿನಿಮಾವನ್ನು ಕಟ್ಟುತ್ತಾರೆ. ಸಿನಿಮಾದಲ್ಲಿ ಖಾಲಿತನ ತುಂಬಲು ಮತ್ತು ಪ್ರೇಕ್ಷಕನ ಭಾವನೆಗಳನ್ನು ಮ್ಯಾನಿಪುಲೇಟ್ ಮಾಡುವ ಉದ್ದೇಶದಿಂದ ವೇಗದ ಎಡಿಟಿಂಗ್ ಮಾಡುವುದನ್ನು ಬಳಸದೆ, ಹಿನ್ನೆಲೆ ಸಂಗೀತವನ್ನು ಉಪಯೋಗಿಸದೆ ಬದುಕಿಗೆ ಹತ್ತಿರವಾಗಿರುವ ಸಿನಿಮಾಗಳನ್ನು ಶಾಂತಾಲ್ ಅಕೆಮನ್ ನಿರ್ದೇಶಿಸಿರುವುದು ಶ್ಲಾಘನಿಯ.

ಶಾಂತಾಲ್‌ರ ಸಿನಿಮಾಗಳು ಲಾಂಗ್ ಟೇಕ್ಸ್, ಹಿನ್ನೆಲೆ ಸಂಗೀತವಿಲ್ಲದೆ, ಕಥೆಗೆ ಜೋತು ಬೀಳದೆ, ಅಸಂಬದ್ಧವಾಗಿ ಮತ್ತು ಅಮೂರ್ತವಾಗಿ ಕಾಣುತ್ತದೆ. ಇವರು ಮೊದಮೊದಲು ಫ್ರೆಂಚ್ ನಿರ್ದೇಶಕ ಗೊದಾರ್ದ್‌ನ ಸಿನಿಮಾಗಳಿಂದ ಪ್ರಭಾವಿತಗೊಂಡಿದ್ದರೂ, ಸಿನಿಯಾನದಲ್ಲಿ ತಮ್ಮದೇ ಆದ ಶೈಲಿಯನ್ನು ಕಂಡುಕೊಂಡಿದ್ದಾರೆ.

ಶಾಂತಾಲ್‌ರ ಸಿನಿಮಾಗಳಲ್ಲಿ ಜೀನ್ ಡೀಲ್‌ಮನ್ ಚಿತ್ರ ಸಿನಿ ಇತಿಹಾಸದಲ್ಲಿ ಅತಿ ಮುಖ್ಯವಾದ ಸಿನಿಮಾ. ಮುಂದಿನ ಹಲವು ಪೀಳಿಗೆಯ ಸಿನಿಮಾ ವಿದ್ಯಾರ್ಥಿಗಳಿಗೆ ಇವರ ಸಿನಿಮಾಗಳು ಮತ್ತು ಶೈಲಿಯನ್ನು ನೋಡಿ ಕಲಿಯುವುದು ಸಾಕಷ್ಟಿದೆ.


ಇದನ್ನೂ ಓದಿ:  ಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...