Homeಅಂಕಣಗಳುಪಿಕೆ ಟಾಕೀಸ್: ಹೆಣ್ಣಿನ ಸಾಮಾನ್ಯ ಬದುಕಿಗೆ ಕನ್ನಡಿ ಹಿಡಿಯುವ ಶಾಂತಾಲ್‌ರ ಸಿನಿಮಾಗಳು

ಪಿಕೆ ಟಾಕೀಸ್: ಹೆಣ್ಣಿನ ಸಾಮಾನ್ಯ ಬದುಕಿಗೆ ಕನ್ನಡಿ ಹಿಡಿಯುವ ಶಾಂತಾಲ್‌ರ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 13/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಶಾಂತಾಲ್ ಅಕೆಮನ್

ಜೀನ್ ಡೀಲ್‌ಮನ್, 23 ಕ್ವಾಡು ಕಾಮರ್ಸ್, 1080 ಬ್ರಕ್ಸೆಲ್ಸ್ (ಫ್ರೆಂಚ್, 1975): ಯಾವುದೇ ವ್ಯಕ್ತಿಯ ದಿನಚರಿಯನ್ನೇ ಸಿನಿಮಾ ಮಾಡಿದರೆ, ಇದರಲ್ಲಿ ಕಂಡುಬರುವ ಕಥೆಯಾದರೂ ಎಂತಹದ್ದು? ಸಿನಿಮಾಗೆ ಕಥೆ ಅಷ್ಟು ಮುಖ್ಯವಾ? ಕಥೆ ಇಲ್ಲದೆ ಸಿನಿಮಾವೂ ಇಲ್ಲವಾ?

ನಡುವಯಸ್ಸಿನ ವಿಧವೆ ಬೆಳೆದ ಮಗನ ಜೊತೆ ಬದುಕುತ್ತಿರುತ್ತಾಳೆ. ಸಿನಿಮಾದ ಶೀರ್ಷಿಕೆಯೇ ಅವಳ ಹೆಸರು, ವಿಳಾಸ. ಈ ಸಿನಿಮಾದ ಕಾಲಾವಧಿ ಮೂರು ಗಂಟೆ ಇಪ್ಪತ್ತೊಂದು ನಿಮಿಷಗಳು. ಡೀಲ್‌ಮನ್‌ಳ ಮೂರು ದಿನಗಳ ದಿನಚರಿಯನ್ನು ಸುಮಾರು ಮೂರು ಗಂಟೆ ಅವಧಿಗೆ ಚಿತ್ರಿಸಲಾಗಿದ್ದು, ಕೊನೆಯಲ್ಲಿ ಒಂದು ಆಘಾತದೊಂದಿಗೆ ಸಿನಿಮಾ ಮುಗಿಯುತ್ತದೆ.

ಡೀಲ್‌ಮನ್‌ಳ ದಿನಚರಿ ಎಂದರೆ: ಕಾಫಿ ತಯಾರಿಸಿ ಕುಡಿಯುವುದು, ಅಲೂಗಡ್ಡೆ ಸಿಪ್ಪೆ ಸುಲಿಯುವುದು, ಹಾಸಿಗೆಯ ಹೊದಿಕೆಯನ್ನು ಬದಲಾಯಿಸಿ ಚೊಕ್ಕವಾಗಿ ಇಡುವುದು, ಮಗನ ಬೂಟ್‌ಗಳಿಗೆ ಪಾಲಿಶ್ ಮಾಡುವುದು, ಅಡುಗೆ ಮಾಡುವುದು, ಪಾತ್ರೆಗಳನ್ನು ತೊಳೆಯುವುದು, ತೊಳೆದ ಪಾತ್ರೆಗಳನ್ನು ಒರೆಸುವುದು, ಊಟದ ಡೈನಿಂಗ್ ಟೇಬಲ್‌ಗೆ ಬಟ್ಟೆ ಹೊದಿಸಿ, ಚಮಚಗಳನ್ನು ಜೋಡಿಸುವುದು, ಬಟ್ಟೆಗಳನ್ನು ಒಗೆಯುವುದು, ಒಗೆದ ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಮನೆಯ ಬಿಲ್‌ಗಳನ್ನು ಪಾವತಿಸುವುದು, ಪಕ್ಕದ ಮನೆಯವರ ಮಗುವನ್ನು ನೋಡಿಕೊಳ್ಳುವುದು- ಹೀಗೆ ಮಾಡಲು ಯಾವುದೇ ಕೆಲಸವಿಲ್ಲದಾಗ ರೆಡಿಯೋದಲ್ಲಿ ಬರುವ ಬೆಥೋವನ್‌ನ ಪಿಯಾನೋ ಕೇಳುತ್ತಾ ಸ್ವೆಟರ್ ಹೆಣಿಯುವುದು. ಹೀಗೆ ಮನೆಯಲ್ಲಿನ ದಿನನಿತ್ಯದ ನೀರಸ ಚಟುವಟಿಕೆಗಳೇ ಈ ಸಿನಿಮಾ.

PC : High On Films, (ಜೀನ್ ಡೀಲ್‌ಮನ್, 23 ಕ್ವಾಡು ಕಾಮರ್ಸ್, 1080 ಬ್ರಕ್ಸೆಲ್ಸ್)

ಈ ನೀರಸ ದಿನನಿತ್ಯದ ಕೆಲಸಗಳಲ್ಲಿ ಡೀಲ್‌ಮನ್ ಮಧ್ಯಾಹ್ನ ಹೊತ್ತಿನಲ್ಲಿ ಮನೆಯಲ್ಲಿಯೇ ವೇಶ್ಯಾವಾಟಿಕೆಯನ್ನು ನಡೆಸುತ್ತಿರುತ್ತಾಳೆ. ದಿನಕ್ಕೊಬ್ಬ ಗಿರಾಕಿ ಬರುತ್ತಾನೆ. ಯಾಂತ್ರಿಕವಾಗಿ ಅವನ ಕೋಟ್ ಮತ್ತು ಮಫ್ಲರನ್ನು ತೆಗೆದು ಗೋಡೆಗೆ ಸಿಕ್ಕಿಸಿ ಇಬ್ಬರೂ ಬೆಡ್‌ರೂಮಿಗೆ ಹೋಗುತ್ತಾರೆ. ನಂತರ ಹೊರಬಂದು ಮುಂದಿನ ಭೇಟಿಯ ದಿನವನ್ನು ನಿರ್ಧರಿಸಿ ಹಣವನ್ನು ಕೊಟ್ಟು ಹೋಗುತ್ತಾನೆ. ಆಮೇಲೆ ಡೀಲ್‌ಮನ್ ಕಾಲೇಜು ಮುಗಿಸಿ ಬರುವ ಮಗನಿಗಾಗಿ ಊಟದ ತಯಾರಿಯಲ್ಲಿ ನಿರತಳಾಗುತ್ತಾಳೆ.

ಸಿನಿಮಾದಲ್ಲಿ ಮಾತುಗಳು ಅತಿ ವಿರಳ. ಕೆನಡಾದಲ್ಲಿರುವ ತನ್ನ ಸಹೋದರಿಯಿಂದ ಬಂದ ಪತ್ರವನ್ನು ಮಗನಿಗೆ ಓದಿ ತಿಳಿಸುವಾಗ, ಪ್ರೇಕ್ಷಕರಿಗೆ ಅವಳು ವಿಧವೆಯಾಗಿ ಆರು ವರ್ಷಗಳು ಕಳೆದಿರುವುದರ ಬಗ್ಗೆ ತಿಳಿಯುತ್ತದೆ. ಆ ಪತ್ರಕ್ಕೆ ಪ್ರತ್ಯುತ್ತರ ಬರೆಯಲು ಪ್ರಯತ್ನಿಸಿ, ಅದನ್ನು ಮುಂದೂಡುತ್ತಾ ತನ್ನ ಮತ್ತಿರರ ಕೆಲಸಗಳಲ್ಲಿ ಮುಳುಗಿ ಹೋಗುತ್ತಾಳೆ.

ಮನೆಯಿಂದ ಹೊರಗೆ ಹೋಗುವುದು, ಮಗನ ಕೋಟಿಗೆ ಗುಂಡಿ ಹುಡುಕಲು, ಮಗನಿಗೆ ಹೆಣಿಯುತ್ತಿರುವ ಸ್ವೆಟರ್‌ನ ಉಣ್ಣೆದಾರವನ್ನು ತರಲು ಹಾಗೂ ಅಡುಗೆಗೆ ತರಕಾರಿ, ಹಣ್ಣು ಮತ್ತು ದಿನಸಿಯನ್ನು ತರಲು ಮಾತ್ರ.

ಸಿನಿಮಾ ವಾಚ್ಯವಾಗದೆ, ಕಥೆಯಲ್ಲಿ ಉಬ್ಬರ ಇಳಿತಗಳನ್ನು ಹುಡುಕದೆ, ಮನೆಯ ಹೆಂಗಸಿನ (ಹೌಸ್‌ವೈಫ್‌ನ) ದಿನನಿತ್ಯದ ಬದುಕಿಗೆ ಕನ್ನಡಿ ಹಿಡಿದಂತೆ ಕಟ್ಟಲಾಗಿದೆ.

ಮೂರು ಗಂಟೆಗೂ ಮೀರಿದ ಈ ಸಿನಿಮಾ ನಿರಾಸಕ್ತಿಯೆನಿಸಿ, ಬದುಕಿನಲ್ಲಿ ಮುಖ್ಯವಲ್ಲದ ಕೆಲಸಗಳನ್ನು ನೋಡುವುದರಲ್ಲಿ ಅಂತಹ ವಿಶೇಷವೇನಿದೆ ಎಂಬ ಪ್ರಶ್ನೆ ಮೂಡಿದರೆ, ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಒಂದು ದಿನವೂ ತಪ್ಪದೇ ಈ ನೀರಸ ಕೆಲಸಗಳಲ್ಲಿಯೇ ಬಂಧಿಯಾಗಿರುವ ಹೆಂಗಸರ ಬದುಕು ಎಷ್ಟು ನಿರ್ಲಕ್ಷ್ಯಗೊಂಡಿದೆ ಎಂಬುದನ್ನು ಮನಗಾಣಿಸುತ್ತದೆ.

ಸಿನಿಮಾದ ಕೊನೆಯಲ್ಲಿ ಮೂರನೇ ದಿನ ಡೀಲ್‌ಮನ್ ಒಂದು ಗಂಟೆ ಮೊದಲೇ ನಿದ್ದೆಯಿಂದ ಎಚ್ಚರಗೊಳ್ಳುತ್ತಾಳೆ. ಆದುದರಿಂದ ಅವಳಿಗೆ ಎದ್ದ ತಕ್ಷಣ ಮಾಡುಲು ಕೆಲಸವಿರುವುದಿಲ್ಲ ಹಾಗೂ ಅವಳ ದಿನಚರಿ ಇರುಸು ಮುರಿಸಿಂದಲೇ ಶುರುವಾಗಿ, ಕೊನೆಗೆ ಅದು ಮಧ್ಯಾಹ್ನದ ಹೊತ್ತಿನಲ್ಲಿ ಬರುವ ಗಿರಾಕಿ ಹಾಸಿಗೆಯಲ್ಲಿ ಅವಳಿಗೆ ಇಷ್ಟವಿಲ್ಲದಂತೆಯೇ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾನೆ. ಇದನ್ನು ಸಹಿಸದ ಡೀಲ್‌ಮನ್ ಕ್ರಿಯೆಯ ನಂತರ ತನ್ನ ಬಟ್ಟೆಗಳನ್ನು ತೊಟ್ಟು, ಹಾಸಿಗೆಯಲ್ಲಿ ಮಲಗಿದ್ದ ಗಿರಾಕಿಯ ಕತ್ತಿಗೆ ಮೇಜಿನ ಮೇಲಿದ್ದ ಕತ್ತರಿಯಿಂದ ಇರಿದು ಕೊಲ್ಲುತ್ತಾಳೆ.

ಅವನನ್ನು ಕೊಂದ ನಂತರವಷ್ಟೇ ಮುಂದೇನೆಂಬ ಪ್ರಶ್ನೆ ಡೀಲ್‌ಮನ್ ಮತ್ತು ಪ್ರೇಕ್ಷಕರಿಗೆ ಎದುರಾಗುತ್ತದೆ! ಡೀಲ್‌ಮನ್ ಡೈನಿಂಗ್ ಟೇಬಲ್‌ನಲ್ಲಿ ರಕ್ತಸಿಕ್ತ ಕೈಯಲ್ಲಿ ಕೂತು ಯೋಚನೆ ಮಾಡುವಾಗಲೇ ಸಿನಿಮಾ ಮುಗಿಯುತ್ತದೆ.

ಮೀಟಿಂಗ್ಸ್ ಅಫ್ ಅನ್ನಾ (ಫ್ರೆಂಚ್, 1978): ಅನ್ನಾ ಸ್ವತಂತ್ರ ಸಿನಿಮಾ ನಿರ್ದೇಶಕಿ. ತನ್ನ ಸಿನಿಮಾಗಳನ್ನು ಯೂರೋಪಿನ ವಿವಿಧ ನಗರಗಳಲ್ಲಿ ಪ್ರದರ್ಶಿಸುತ್ತಾ, ಬೇರೆ ಬೇರೆ ಜನರನ್ನು ಭೇಟಿ ಮಾಡುವುದೇ ಈ ಸಿನಿಮಾದ ಕಥಾನಕ.

ಸೆಲ್ಫ್ ರೆಫ್ಲೆಕ್ಟಿವ್ ಜಾನರ್‌ಗೆ ಸೇರುವ ಈ ಸಿನಿಮಾ, ನಿರ್ದೇಶಕಿಯ ಸ್ವಂತಃ ಅನುಭವವನ್ನೇ ಸಿನಿಮಾವಾಗಿಸಿರುವ ಅನನ್ಯ ಪ್ರಯತ್ನವೆನಿಸುತ್ತದೆ.

ಅನ್ನಾ ಜರ್ಮನಿಯ ಹೋಟೆಲ್ ಒಂದರಲ್ಲಿ ಅಪರಚಿತನೊಬ್ಬನ ಜೊತೆಗೆ ಹಾಸಿಗೆಗೆ ಹೋಗುತ್ತಾಳೆ. ಆದರೆ ಹೊಂದಣಿಕೆಯಾಗದೆ, ಅವನು ಅಲ್ಲಿಂದ ಹೊರಟುಹೋಗುತ್ತಾನೆ. ಮರುದಿನ ಮಗಳ ಹುಟ್ಟುಹಬ್ಬದ ಸಲುವಾಗಿ ಮನೆಗೆ ಬರುವಂತೆ ಆಹ್ವಾನಿಸುತ್ತಾನೆ. ಅನ್ನಾ ಅವನ ಮನೆಗೆ ಹೋಗುತ್ತಾಳೆ. ಅವನ ಹೆಂಡತಿ ಕುಟುಂಬವನ್ನು ಬಿಟ್ಟು ಹೋಗಿರುವ ವಿಷಯ, ಅವನ ಮನೆಯ ಕುರಿತು ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲೂ ತನ್ನ ಮನೆ ಸುರಕ್ಷಿತವಾಗಿರುವುದರ ಬಗ್ಗೆ ಹೇಳುತ್ತಾನೆ. ಅನ್ನಾಳಿಗೆ ಟುಲಿಪ್ಸ್ ಹೂಗಳು ಇಷ್ಟವಾ ಎಂದು ಅವನು ಕೇಳಲು, ಅವಳು ಇಲ್ಲವೆನ್ನುತ್ತಾಳೆ. ಆಗ ಅನ್ನಾ ಎಲ್ಲ ಹೆಂಗಸರಂತಲ್ಲ ಎಂಬುದು ತಿಳಿಯುತ್ತದೆ.

ರೈಲ್ವೇ ನಿಲ್ದಾಣದಲ್ಲಿ ತನ್ನ ತಾಯಿಯ ಗೆಳತಿಯೊಬ್ಬಳನ್ನು ಭೇಟಿಯಾಗುತ್ತಾಳೆ. ಅವಳ ಕುಟುಂಬ ಮೊದಲು ಬೆಲ್ಜಿಯಂನ ಬ್ರಸೆಲ್ಸ್‌ನಿಂದ ವಲಸೆ ಬಂದು ಜರ್ಮನಿಯಲ್ಲಿ ನೆಲೆಯೂರಿರುತ್ತದೆ. ತನ್ನ ಸದಾ ಸುತ್ತುವ ಕೆಲಸದ ಕಾರಣದಿಂದ ತನ್ನ ಸಂಗಾತಿಯಿಂದ ಬೇರ್ಪಟ್ಟಿರುವುದಾಗಿ ಅನ್ನಾ ಹೇಳುತ್ತಾಳೆ. ಅದಕ್ಕೆ ತಾಯಿಯ ಗೆಳತಿ ತನ್ನ ಸುಂದರ ಮಗನನ್ನು ಮದುವೆಯಾಗಲು ಒತ್ತಾಯಿಸುತ್ತಾಳೆ. ಆದರೆ ಅದನ್ನು ನಿರಾಕರಿಸಿ ಅನ್ನಾ ಮುಂದೆ ಸಾಗುತ್ತಾಳೆ.

ಮೀಟಿಂಗ್ಸ್ ಅಫ್ ಅನ್ನಾ

ರೈಲಿನಲ್ಲಿ ಮತ್ತೊಬ್ಬ ಅಪರಿಚತನೊಂದಿಗೆ ಲೋಕಾಭಿರಾಮದ ಸಂವಾದ. ಯಾರು ಯಾರ ಕುರಿತೂ ಆಸಕ್ತಿ ತೋರದೆ, ಸಿಗರೇಟ್‌ಗಳನ್ನು ಸೇದುತ್ತಾ ರೈಲಿನ ಕಿಟಕಿಯಿಂದ ಹೊರ ನೋಡುತ್ತಾ ಮಾತಾಡುತ್ತಾರೆ.

ಹೀಗೆ ಸಿನಿಮಾದಲ್ಲಿ ನೇರವಾಗಿ ಏನನ್ನೂ ಹೇಳದೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಗಿದೆ. ಆರ್ಥಿಕ ಕುಸಿತದಿಂದ ಇಡೀ ಯೂರೋಪ್ ಅನುಭವಿಸುತ್ತಿರುವ ಯಾತನೆ, ಹಣದುಬ್ಬರ, ಬೆಲೆ ಏರಿಕೆ, ವಲಸೆ ಮುಂತಾದ ವಿಷಯಗಳ ಜೊತೆಗೇ, ಜರ್ಮನಿಯನ್ನು ಯುದ್ಧದ ನಂತರ ಹೇಗೆ ಕಟ್ಟಿದರೆಂಬುದು ಒಂದು ಕಡೆಯಾದರೆ, ಮತ್ತೊಂದು ಕಡೆ ಒಂಟಿತನ, ಬದುಕಿನ ಅರ್ಥಹೀನತೆ, ಲೆಸ್ಬಿಯನ್‌ಗಳ ಕುರಿತು ನಿರ್ದೇಶಕಿಯ ವ್ಯಾಖ್ಯಾನ ಸಿನಿಮಾದಲ್ಲಿ ಮೂಡುತ್ತದೆ.

ಶಾಂತಾಲ್ ಅಕೆಮನ್: ಶಾಂತಾಲ್ ಅಕೆಮನ್‌ರ ಸಿನಿಮಾಗಳನ್ನು ಕೇವಲ ಫೆಮಿನಿಸಂ ಸಿನಿಮಾಗಳೆಂದು ವಿಂಗಡಿಸಿ ನೋಡದೆ, ಅವರ ಕಥಾವಸ್ತು ವೈಶಿಷ್ಟ್ಯಗಳಿಗೆ ಅತಿಯಾಗಿ ಒತ್ತು ನೀಡದೆ, ಅವರು ಸಿನಿಮಾ ಕಟ್ಟುವ ಕ್ರಮವನ್ನು ನೋಡುವುದು ಅತಿ ಮುಖ್ಯ.

ಸಿನಿಮಾದಲ್ಲಿ ಪುಲ್ ಶಾಟ್, ಮಿಡ್ ಶಾಟ್, ಕ್ಲೋಸ್‌ಅಪ್, ಎಕ್‌ಸ್ಟ್ರೀಮ್ ಕ್ಲೋಸ್‌ಅಪ್‌ಗಳೆಂದು ದೃಶ್ಯವನ್ನು ಕಟ್ಟುವ ವ್ಯಾಕರಣವಿರುತ್ತದೆ. ಇಲ್ಲಿ ಶಾಂತಾಲ್‌ರವರ ಶೈಲಿ ಅತಿ ಸರಳವಾದದ್ದು. ಅವರು ಮಿಡ್ ಶಾಟ್‌ನಿಂದ ದೃಶ್ಯವನ್ನು ಸಂಪೂರ್ಣವಾಗಿ ಚಿತ್ರಿಸುತ್ತಾರೆ. ಯಾವುದೇ ಕಾರಣಕ್ಕು ಕ್ಲೋಸ್‌ಅಪ್, ಪ್ರೊಫೈಲ್ ಶಾಟ್ಸ್ ಚಿತ್ರಿಸುವುದಿಲ್ಲ.

ಇದರ ಮೂಲ ಉದ್ದೇಶವೆಂದರೆ ಒಂದು ಕನಿಷ್ಠತೆಯಲ್ಲಿ ಸಿನಿಮಾ ಕಟ್ಟುವುದು. ಎರಡನೆಯದು, ಪ್ರತಿ ಬಾರಿಯೂ ಕ್ಯಾಮರಾವನ್ನು ಚಲಿಸುತ್ತಾ ಅಥವಾ ದೃಶ್ಯವನ್ನು ತುಂಡರಿಸುತ್ತಾ ಬೇರೆ ಕೋನಗಳಲ್ಲಿ ಚಿತ್ರಿಸದೇ, ದೃಶ್ಯದಲ್ಲಾಗುವ ಚಟುವಟಿಕೆಗಳನ್ನು ಯಾವುದೇ ರೀತಿ ಮ್ಯಾನಿಪುಲೇಟ್ ಮಾಡದೇ ಯಥಾವತ್ತಾಗಿ ಪ್ರೇಕ್ಷಕರ ಮುಂದಿಡುವ ದಿಟ್ಟ ನಿರ್ಧಾರ.

PC : The Guardian, (ಶಾಂತಾಲ್ ಅಕೆಮನ್)

ಹಾಗೂ ಕಥೆ ಮತ್ತು ಕಥೆಯಲ್ಲಾಗುವ ಏರಿಳಿತಗಳೇ ಮುಖ್ಯವೆನ್ನದೆ ದೃಶ್ಯ ಮತ್ತು ಶಬ್ದಗಳಿಂದ ಸಿನಿಮಾವನ್ನು ಕಟ್ಟುತ್ತಾರೆ. ಸಿನಿಮಾದಲ್ಲಿ ಖಾಲಿತನ ತುಂಬಲು ಮತ್ತು ಪ್ರೇಕ್ಷಕನ ಭಾವನೆಗಳನ್ನು ಮ್ಯಾನಿಪುಲೇಟ್ ಮಾಡುವ ಉದ್ದೇಶದಿಂದ ವೇಗದ ಎಡಿಟಿಂಗ್ ಮಾಡುವುದನ್ನು ಬಳಸದೆ, ಹಿನ್ನೆಲೆ ಸಂಗೀತವನ್ನು ಉಪಯೋಗಿಸದೆ ಬದುಕಿಗೆ ಹತ್ತಿರವಾಗಿರುವ ಸಿನಿಮಾಗಳನ್ನು ಶಾಂತಾಲ್ ಅಕೆಮನ್ ನಿರ್ದೇಶಿಸಿರುವುದು ಶ್ಲಾಘನಿಯ.

ಶಾಂತಾಲ್‌ರ ಸಿನಿಮಾಗಳು ಲಾಂಗ್ ಟೇಕ್ಸ್, ಹಿನ್ನೆಲೆ ಸಂಗೀತವಿಲ್ಲದೆ, ಕಥೆಗೆ ಜೋತು ಬೀಳದೆ, ಅಸಂಬದ್ಧವಾಗಿ ಮತ್ತು ಅಮೂರ್ತವಾಗಿ ಕಾಣುತ್ತದೆ. ಇವರು ಮೊದಮೊದಲು ಫ್ರೆಂಚ್ ನಿರ್ದೇಶಕ ಗೊದಾರ್ದ್‌ನ ಸಿನಿಮಾಗಳಿಂದ ಪ್ರಭಾವಿತಗೊಂಡಿದ್ದರೂ, ಸಿನಿಯಾನದಲ್ಲಿ ತಮ್ಮದೇ ಆದ ಶೈಲಿಯನ್ನು ಕಂಡುಕೊಂಡಿದ್ದಾರೆ.

ಶಾಂತಾಲ್‌ರ ಸಿನಿಮಾಗಳಲ್ಲಿ ಜೀನ್ ಡೀಲ್‌ಮನ್ ಚಿತ್ರ ಸಿನಿ ಇತಿಹಾಸದಲ್ಲಿ ಅತಿ ಮುಖ್ಯವಾದ ಸಿನಿಮಾ. ಮುಂದಿನ ಹಲವು ಪೀಳಿಗೆಯ ಸಿನಿಮಾ ವಿದ್ಯಾರ್ಥಿಗಳಿಗೆ ಇವರ ಸಿನಿಮಾಗಳು ಮತ್ತು ಶೈಲಿಯನ್ನು ನೋಡಿ ಕಲಿಯುವುದು ಸಾಕಷ್ಟಿದೆ.


ಇದನ್ನೂ ಓದಿ:  ಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...