Homeಮುಖಪುಟಇದು ನಮ್ಮ ಕಾಲ, ಎದ್ದೇಳು ಬಾ ಎನ್ನುವ 'ಸರಪಟ್ಟ ಪರಂಪರೈ' - ಬಿ. ಶ್ರೀಪಾದ ಭಟ್

ಇದು ನಮ್ಮ ಕಾಲ, ಎದ್ದೇಳು ಬಾ ಎನ್ನುವ ‘ಸರಪಟ್ಟ ಪರಂಪರೈ’ – ಬಿ. ಶ್ರೀಪಾದ ಭಟ್

ಇಲ್ಲಿ ಡಾನ್ಸಿಂಗ್ ರೋಸಿಯ ಸ್ಟೈಲ್ ಇದೆ, ‘ಜೀವ ಹೋದರೂ ಪರವಾಗಿಲ್ಲ, ಮೌಲ್ಯಗಳನ್ನು ಬಿಡಲಾರೆ’ ಎನ್ನುವ ರಂಗನ್ ವಾದ್ಯಾರ್‌ರ ಬಾಳ್ವೆಯ ಬದುಕಿದೆ.

- Advertisement -
- Advertisement -

ಜಾತಿಯ ಹೆಸರು ಹೇಳಿದರೆ ಬೆಚ್ಚಿಬೀಳುವ ಭಾರತೀಯ ಸಿನಿಮಾ ರಂಗದಲ್ಲಿ ‘ದಲಿತರು ಮತ್ತು ಸಿನಿಮಾ’ ಎನ್ನುವ ಮಾತು ಮೊನ್ನೆಯವರೆಗೂ ಕಿವಿಗೆ ಬೀಳುತ್ತಿರಲಿಲ್ಲ. ಇಲ್ಲಿನ ರೋಗಗ್ರಸ್ಥ ಜಾತಿ ಸಮಾಜದಲ್ಲಿ ಆ ತರಹದ ಕಲ್ಪನೆಯೂ ಸಾಧ್ಯವಿಲ್ಲದಂತಹ ಪರಿಸ್ಥಿತಿಯಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ನಾಗ್ರಾಜ್ ಮಂಜುಳೆ, ಪ.ರಂಜಿತ್ ಮತ್ತು ಮಾರಿ ಸೆಲ್ವರಾಜ್ ಜಾತಿ ಪ್ರಶ್ನೆಯನ್ನು ಶೋಷಿತರ ನೆಲೆಯಿಂದ ಮಾತನಾಡತೊಡಗಿದಾಗ ಈ ಪಟ್ಟಭದ್ರ ಸಿನಿಮಾರಂಗದಲ್ಲಿ ಬಂಡೆಯನ್ನು ಸೀಳಿಕೊಂಡು ಸಮಾನತೆ, ಸ್ವಾತಂತ್ರ್ಯದ ಹುಲ್ಲು ಮೊಳಕೆಯೊಡಗಿತು. ಈವರೆಗಿನ ಸಿದ್ದ ಮಾದರಿಯನ್ನು ಕೆಡವಿ, ಮುರಿದು ಸಬಲ್ಟ್ರಾನ್ ಕಥನವನ್ನು ಮತ್ತೆ ಕಟ್ಟತೊಡಗಿದರು. ಮಂಜುಳೆ ಜಾತಿ ದೌರ್ಜನ್ಯದ ನಿರೂಪಣೆಯನ್ನು ಆಯ್ಕೆ ಮಾಡಿಕೊಂಡರೆ, ಪ.ರಂಜಿತ್ ದಲಿತರ assertion ಕುರಿತು ಮಾತ್ರ ಮಾತನಾಡುತ್ತೇನೆ ಎಂದು ಹೊಸ ಅಲೆಯ ಮತ್ತೊಂದು ಮಾದರಿಯನ್ನೇ ಸೃಷ್ಟಿಸಿದರು. ಆದರೆ ರಂಜಿತ್ ಇದನ್ನು ಪರ್ಯಾಯ ಸಿನಿಮಾ ಪರಂಪರೆಯಾಗಿ ಬೆಳೆಸದೆ ಬದಲಿಗೆ ಜನಪ್ರಿಯ ಸಿನಿಮಾದ ಕ್ಷೇತ್ರದೊಳಗೆ ಸಾದಿಸುತ್ತಾರೆ. ಮುರಿದು ಕಟ್ಟುವ ಪ.ರಂಜಿತ್ ಇಂದು ಅಂಬೇಡ್ಕರ್‌ವಾದದ ಹೊಸ ಅರ್ಥಗಳನ್ನೇ ಬಿಚ್ಚಿಡುತ್ತಿದ್ದಾರೆ. ಸಬಲ್ಟ್ರಾನ್ ಕಥನದ ಮರು ಕಟ್ಟುವ ಈ ಪ್ರಯೋಗಗಳು ಕಬಾಲಿ, ಕಾಲಾದ ನಂತರ ಈಗ ‘ಸರಪಟ್ಟ ಪರಂಪರೈ’ ನಲ್ಲಿ ಮತ್ತೊಂದು ಮಜಲನ್ನು ತಲುಪಿದೆ ಮತ್ತು ‘ಇದು ನಮ್ಮ ಕಾಲ’ ಎಂದು ಹಿರಿಮೆಯಿಂದ, ಘನತೆಯಿಂದ ಆತ್ಮವಿಶ್ವಾಸದಿಂದ ಹಾಡುತ್ತಿದ್ದಾರೆ.

ಇಲ್ಲಿಯವರೆಗೂ ಅನಾಮಿಕವಾಗಿದ್ದ ‘ಉತ್ತರ ಮದ್ರಾಸ್’ ವೆಟ್ರಿಮಾರನ್ ಸಿನಿಮಾಗಳ ಮೂಲಕ ಬೆಳಕಿಗೆ ಬರತೊಡಗಿತು. ಈಗ ‘ಸರಪಟ್ಟ’ ಸಿನಿಮಾದ ಮೂಲಕ ಪ. ರಂಜಿತ್ ಅಲ್ಲಿನ ದುಡಿಯುವ ವರ್ಗಗಳ ಬದುಕು, ಬವಣೆಯ ವಿರಾಟ್ ಸ್ವರೂಪವನ್ನು ನಮಗೆಲ್ಲಾ ಎಳೆಎಳೆಯಾಗಿ ಬಿಚ್ಚಿ ತೋರಿಸಿದ್ದಾರೆ. ನೆಲಮೂಲ ಸಂಸ್ಕೃತಿಯ ಜೀವಂತಿಕೆ ಸ್ಪರ್ಶ ಮಾಡಿಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಈ ‘ಉತ್ತರ ಮದ್ರಾಸ್’ನ ಸ್ಲಂಗಳು, ಓಣಿಗಳು, ಕಾರ್ಖಾನೆಗಳಲ್ಲಿ ವಾಸಿಸುತ್ತಿರುವ ದುಡಿಯುವ ವರ್ಗದ ಬದುಕಿನ ಅನಾವರಣವಿದೆ. ಇಲ್ಲಿ ಈ ವರ್ಗದೊಳಗಿನ ಜಾತಿ ತಾರತಮ್ಯದ ಕ್ರೌರ್ಯವೂ ಸಹ ಬಿಚ್ಚಿಕೊಳ್ಳುತ್ತದೆ ಮತ್ತು ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಇದನ್ನು ‘ಬಾಕ್ಸಿಂಗ್ ಡ್ರಾಮಾ’ದ ಮೂಲಕ ನಿರೂಪಿಸಿದ್ದಾರೆ. ಸರಪಟ್ಟ ಬಾಕ್ಸಿಂಗ್ ಕ್ರೀಡೆಯ ಸಿನಿಮಾ ಎಂದು ಮಾತ್ರ ಕರೆದರೆ ರಂಜಿತ್‌ರವರ ಮುರಿದು ಕಟ್ಟುವ ಕಥನವನ್ನು ಮೂಲೆಗುಂಪು ಮಾಡಿದಂತಾಗುತ್ತದೆ. ಅದರಾಚೆಗೆ ಬೆಳೆದ ಚಿತ್ರಕತೆಯು ಅಲ್ಲಿ ವಾಸಿಸುತ್ತಿರುವ ವಿವಿಧ ವರ್ಗ, ಜಾತಿಗಳ ಜನರ ಬದುಕನ್ನು ಒಂದೇ ಹಾರದಲ್ಲಿ ಪೋಣಿಸಿ ಸುಂದರ ಹಾರದಂತೆ ಹೆಣೆಯಲಾಗಿದೆ.

ಸರಪಟ್ಟ ಸಿನಿಮಾವನ್ನು ಉತ್ತರ ಮದ್ರಾಸ್‌ನ ಶ್ರಮಿಕರ ಬದುಕಿನ ಕೊಲಾಜ್ ಎಂದೇ ಕರೆಯಬಹುದು. ಆ ಬಹುಸಂಸ್ಕೃತಿಯ ಜಗತ್ತಿನಲ್ಲಿ ಅಂಬೇಡ್ಕರ್, ಬುದ್ದ ಕಾಣಿಸಿಕೊಳ್ಳುತ್ತಾರೆ, ಬೀಫ್ ಬಿರಿಯಾನಿ, ಮೊಲ ಮಾಂಸದ ಆಹಾರ ಸಂಸ್ಕೃತಿಯಿದೆ. ಇಲ್ಲಿ ಡಾನ್ಸಿಂಗ್ ರೋಸಿಯ ಸ್ಟೈಲ್ ಇದೆ, ‘ಜೀವ ಹೋದರೂ ಪರವಾಗಿಲ್ಲ, ಮೌಲ್ಯಗಳನ್ನು ಬಿಡಲಾರೆ’ ಎನ್ನುವ ರಂಗನ್ ವಾದ್ಯಾರ್‌ರ ಬಾಳ್ವೆಯ ಬದುಕಿದೆ. ‘ಪರಂಪರೆ ಮುಖ್ಯವಲ್ಲ, ನೀನು, ನಾನು, ಮುನುಷ್ಯರು ಮುಖ್ಯ’ ಎಂದು ಬದುಕಿನ ದೊಡ್ಡ ಪಾಠ ಹೇಳಿದ ಮಾರಿಯಮ್ಮಳ ಮಾನವೀಯತೆಯ ಒರತೆಯಿದೆ, ‘ಮಗ ಕೊಲೆಗಾರನಾಗಬಾರದು, ಕಳ್ಳನಾಗಬಾರದು, ಹಾಗೆಯೇ ಯಾರೂ ಸಹ’ ಎಂದು ಮುರಿದು ಬೀಳುತ್ತಿರುವ ಬದುಕನ್ನು ಮರಳಿ ಕಟ್ಟಲು ಹೆಣಗುತ್ತಿರುವ ಬಾಕಿಯಮ್ಮಳ ಛಲ, ದಿಟ್ಟತೆಯಿದೆ. ನಾವು ಬದುಕೋಣ, ಎಲ್ಲರೂ ಬದುಕೋಣ ಎನ್ನುವ ಡ್ಯಾಡಿಯ ಜೀವಪರತೆಯಿದೆ, ಶಕುನಿ ಮಾಮಾನನ್ನು ನೆನಪಿಸುವ ಕೋಣಿ ಚಂದನ್ ಇದ್ದರೆ ಕಾಯಕ ತತ್ವವನ್ನು ಉಸಿರಾಡುವ ಬೀಡಿ ರಾಯಪ್ಪನ್ ನಮ್ಮನ್ನು ಕಾಡುತ್ತಾನೆ. ಬಾಕ್ಸಿಂಗ್ ದೈತ್ಯ ವೆಂಬುಲಿಯ ಪೌರುಷದ ದುರಹಂಕಾರ ಒಂದೆಡೆಯಿದ್ದರೆ ಮತ್ತೊಂದೆಡೆ ಆಳುವ, ಗೋಳಾಡುವ, ಅಸಹಾಯಕನಾಗಿ ಕುಸಿದು ಹೋಗುವ ಈ ಸಿನಿಮಾದ ಪ್ರೊಟಗಾನಿಸ್ಟ್ ಕಬಿಲನ್ ನಮಗೆಲ್ಲ ಎಚ್ಚರಿಕೆಯ ಪಾಠದಂತಿದ್ದಾನೆ. ತಾನು ಬಾಕ್ಸರ್, ಆದರೆ ತನ್ನ ತಂದೆಯಿಂದಲೇ ತಿರಸ್ಕರಿಸ್ಪಡುವ ವೇಟ್ರಿಸೆಲ್ವನ್ ಬದುಕಿನ ಸಂಕೀರ್ಣತೆಯ ದುರಂತವಿದೆ. ಇವರೆಲ್ಲರ ಜೀವ ಮಿಡಿತದ ಸದ್ದು ‘ಸರಪಟ್ಟ’. ಇಲ್ಲಿ ಯಾರೂ ಅಮುಖ್ಯರಲ್ಲ. ಎಲ್ಲರೂ ಮುಖ್ಯ.

ಪ.ರಂಜಿತ್‌ಗೆ 1970ರ ದಶಕದ ‘ಉತ್ತರ ಮದ್ರಾಸ್’ನ ಆ ನಾಸ್ಟಾಲ್ಜಿಯಾದ ಕುರಿತು, ಆ ಕಾಲದ ಭೌಗೋಳಿಕತೆಯ ಕುರಿತು ಆಸಕ್ತಿಯಿಲ್ಲ. ಜನರು ಮಾತ್ರ ಮುಖ್ಯ ಎಂದು ನಂಬಿದ ನಿರ್ದೇಶಕ ಆ ಶೋಷಿತ ಜನರ ಬದುಕಿನ ಕಥನವನ್ನು ‘ಬಾಕ್ಸಿಂಗ್ ಕ್ರೀಡೆ’ಯ ಹಿನ್ನಲೆಯ ಮೂಲಕ ರೂಪಿಸುತ್ತಾ ಹೋಗುತ್ತಾರೆ. ಒಂದು ಕಾಲದಲ್ಲಿ ಕುಡಿತ ಮತ್ತು ಗೂಂಡಾಗಿರಿ ಮೇಲುಗೈ ಸಾಧಿಸಿ ಉತ್ತರ ಮದ್ರಾಸ್‌ನ ಬಾಕ್ಸಿಂಗ್ ಜಗತ್ತು ಕೊಳೆಯತೊಡಗಿತ್ತು, ಕುಟುಂಬಗಳ ಬದುಕು ಛಿದ್ರಗೊಳ್ಳತೊಡಗಿತ್ತು. ಇದನ್ನು ಎಲ್ಲಿಯೂ ಸಂಕೀರ್ಣಗೊಳಿಸದೆ ನೇರವಾಗಿ ಗತಕಾಲದ ವಾಸ್ತವವನ್ನು ಸಿನೀಮಿಯವಾಗಿ ಮುಂದಿಟ್ಟಿದ್ದಾರೆ. ಬಾಕ್ಸಿಂಗ್ ರಿಂಗ್‌ನ ಒಳಗೆ ನಡೆಯುವ ಎರಡು ವಂಶಗಳ ನಡುವಿನ ಹಣಾಹಣಿಯು ವೈಯಕ್ತಿಕವೂ ಹೌದು ಮತ್ತು ಸಾಮಾಜಿಕವೂ ಹೌದು. ಇದನ್ನು ಒಂದೇ ಸೂತ್ರದಲ್ಲಿ ಬೆಸಿದಿರುವ ನಿರ್ದೇಶಕ ಆ ಮೂಲಕ ಸಮುದಾಯದ ವಿಮೋಚನೆಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇದೇ ಈ ಸಿನಿಮಾದ ಗೆಲುವು. ತಮ್ಮ ಬಡತನದ ನಡುವೆಯೂ ಬಾಕ್ಸಿಂಗ್ ಕ್ರೀಡೆಯ ಕಾಳಗದ ಮೂಲಕ ಬದುಕನ್ನು ವರ್ಣರಂಜಿತಗೊಳಸಿಕೊಳ್ಳಲು ತವಕಿಸುವ ‘ಉತ್ತರ ಮದ್ರಾಸ್‘ನ ಶ್ರಮಿಕರ ಜೀವನಪ್ರೇಮವೂ ಈ ಸಿನಿಮಾದ ಆತ್ಮದಂತಿದೆ. ಆದರೆ ಈ ವರ್ಗದೊಳಗೂ ಜಾತಿ ತಾರತಮ್ಯವಿದೆ. ದಲಿತ ಎನ್ನುವ ಕಾರಣಕ್ಕೆ ಕಬಿಲನ್ ಗೆಲ್ಲಬಾರದೆಂದು ಹೆಣಗಾಡುವ ರಮಣ್ ಮತ್ತವನ ಚಿಕ್ಕಪ್ಪ ತಣಿಗೈನ ವಿಕೃತಿಗಳು ಜಾತಿ ದೌರ್ಜನ್ಯವನ್ನು ಅನಾವರಣಗೊಳಿಸುತ್ತವೆ.

ಪ ರಂಜಿತ್

ಮುಖ್ಯವಾಗಿ ಅನಾದಿ ಕಾಲದಿಂದಲೂ ವೈಭವೀಕರಿಸಲ್ಪಟ್ಟ ದ್ರೋಣಾಚಾರ್ಯ-ಅರ್ಜುನ ಪರಂಪರೆಯನ್ನು ಸಂಪೂರ್ಣವಾಗಿ ಒಡೆದು ಹಾಕುವ ಪ.ರಂಜಿತ್ ಸರಪಟ್ಟು ಸಿನಿಮಾದ ಮೂಲಕ ಏಕಲವ್ಯನಿಗೆ ಹೊಸ ಬದುಕು ಕಟ್ಟಿಕೊಡುತ್ತಾನೆ. ಇಲ್ಲಿ ಆತ ಹೆಬ್ಬೆರೆಳು ಕತ್ತರಿಸಿಕೊಡುವ ಅಗತ್ಯವಿಲ್ಲ. ಜಾತಿ ಕಾರಣಕ್ಕೆ ತಿರಸ್ಕೃತನಾದರೂ ಮತ್ತೆ ಮತ್ತೆ ಪುಟಿದೆದ್ದು ಗೆಲುವು ಸಾದಿಸುವ ಏಕಲವ್ಯನ ಹೊಸ ನಿರೂಪಣೆಯ ಮೂಲಕ ರಂಜಿತ್ ದಲಿತರ assertion ನ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ನಾಂದಿ ಹಾಡುತ್ತಾರೆ. ಹೀಗಾಗಿ ಇದನ್ನು ಕೇವಲ ಬಾಕ್ಸಿಂಗ್ ಕ್ರೀಡೆಯ ಸಿನಿಮಾ ಮಾತ್ರವಲ್ಲ, ಜೊತೆಗೆ ಬಾಕ್ಸಿಂಗ್ ಕ್ರೀಡೆಯನ್ನು ಹಿನ್ನಲೆಯಾಗುಳ್ಳ ಸಮಾಜೋ-ರಾಜಕೀಯ-ಸಾಂಸ್ಕೃತಿಕ ಕಥನ.

ಇದನ್ನೂ ಓದಿ; ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…

ಈ ಸಿನಿಮಾದ ಕಡೆಯ ಒಂದು ತಾಸು ನಿರ್ದೇಶಕರ ಬತ್ತಳಿಕೆಯ ಸರಕು ಖಾಲಿಯಾಗಿ ಪರದಾಡುವಂತಾಗಿರುವುದೂ ಸಹ ಇಲ್ಲಿನ ಮಿತಿ ಎನ್ನಬಹುದು. ಆದರೆ ಬಾಕ್ಸಿಂಗ್ ಕ್ರೀಡೆಯನ್ನು ಅದರ ವೃತಿಪರತೆಯಲ್ಲಿ ಮೈಗೂಡಿಸಿಕೊಂಡು ಚಿತ್ರಕತೆಗೆ ಅದ್ಭುತವಾಗಿ ಒಗ್ಗಿಸಿಕೊಂಡಿರುವುದು ಈ ಮಿತಿಗಳನ್ನು ಗೌಣಗೊಳಿಸುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಅಗತ್ಯವಾದ ಲಿಂಕ್‌ಗಳನ್ನು ಎಲ್ಲಿಯೂ ಸಡಿಲಗೊಳಿಸದೆ ನಿರಂತರತೆಯನ್ನು ಕಾಪಾಡಿಕೊಂಡಿರುವುದು ಸಣ್ಣ ಪುಟ್ಟ ದೋಶಗಳನ್ನು ಮರೆ ಮಾಚುತ್ತದೆ.

‘ಇದು ನಮ್ಮ ಕಾಲಂ, ಏಳಂದು ವಾ’ ಎಂಬ ಆತ್ಮವಿಶ್ವಾಸದ ಹಾಡಿನ ಮೂಲಕ ಶೋಷಿತ ಸಮುದಾಯಗಳ ಮೇಲ್ಮುಖ ಚಲನೆಯ, ಸಬಲೀಕರಣದ ದಿನಗಳು ಪ್ರಾರಂಭವಾಗಿದೆ ಎನ್ನುವ ಹೇಳಿಕೆ ಕೊಡುವ ‘ಸರಪಟ್ಟ’ ಸಿನಿಮಾವನ್ನು ಮತ್ತೆ ಮತ್ತೆ ನಿರ್ವಚಿಸಬೇಕಾಗುತ್ತದೆ.

  • ಶ್ರೀಪಾದ್ ಭಟ್

(ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.)


ಇದನ್ನೂ ಓದಿ; ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...