ಮುಂಬರುವ ಗೋವಾ ವಿಧಾನಸಭಾ ಚುನಾವಣೆಗೆ ಪ್ರಸ್ತುತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪರ ಲಾಬಿ ನಡೆಸುತ್ತಿರುವ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಬಿಜೆಪಿ ಭಾರತೀಯ ರಾಜಕೀಯದ ಕೇಂದ್ರಬಿಂದುವಾಗಿ ಉಳಿಯುತ್ತದೆ ಮತ್ತು “ಮುಂದಿನ ಹಲವು ದಶಕಗಳವರೆಗೆ” ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಜನರು ತಕ್ಷಣ ಬಿಜೆಪಿಯನ್ನು ಕಿತ್ತೊಗೆಯುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಯುಪಿ ಚುನಾವಣೆ: 30 ಲಕ್ಷ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆ ನೀಡಿದ ಬಿಜೆಪಿ
ಪ್ರಶಾಂತ್ ಕಿಶೋರ್ ಗೋವಾದಲ್ಲಿ ಖಾಸಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಈ ವಿಡಿಯೋ ಗೋವಾದಲ್ಲಿ ಬುಧವಾರ ನಡೆದ ಖಾಸಗಿ ಸಭೆಯ ವೀಡಿಯೊ ಎಂದು ಅವರ ನೇತೃತ್ವದ ಗುಂಪಾದ ಐ-ಪ್ಯಾಕ್ ಹಿರಿಯ ನಾಯಕರೊಬ್ಬರು ಖಚಿತಪಡಿಸಿದ್ದಾರೆ.
ವೀಡಿಯೋದಲ್ಲಿ, ಕಿಶೋರ್, “ಬಿಜೆಪಿ ಭಾರತದ ರಾಜಕೀಯದ ಕೇಂದ್ರವಾಗಲಿದೆ, ಅವರು ಗೆದ್ದರೂ, ಸೋತರೂ, ಕಾಂಗ್ರೆಸ್ಸಿಗೆ ಮೊದಲ 40 ವರ್ಷಗಳಂತೆ ಬಿಜೆಪಿ ಎಲ್ಲಿಯೂ ಹೋಗುವುದಿಲ್ಲ” ಎಂದು ಹೇಳುವುದು ಕೇಳಿಬರುತ್ತಿದೆ.
“ಒಮ್ಮೆ ನೀವು ಭಾರತೀಯ ಮಟ್ಟದಲ್ಲಿ 30% ದಷ್ಟು ಮತಗಳನ್ನು ಪಡೆದುಕೊಂಡರೆ, ಅಷ್ಟು ಬೇಗ ರಾಜಕೀಯ ವಲಯದಿಂದ ದೂರ ಹೋಗಲು ಆಗುವುದಿಲ್ಲ. ಆದ್ದರಿಂದ, ಜನರು ಕೋಪಗೊಳ್ಳುತ್ತಾರೆ ಮತ್ತು ಅವರು ಪ್ರಧಾನಿ ಮೋದಿಯನ್ನು ಕಿತ್ತೊಗೆಯುತ್ತಾರೆ ಎಂಬ ಟ್ರಾಪ್ಗೆ ಬೀಳದಿರಿ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಮೂರು ವಾರಗಳ ಬಳಿಕ ಆರ್ಯನ್ ಖಾನ್ಗೆ ಜಾಮೀನು ಮಂಜೂರು
“ಬಹುಶಃ, ಜನರು ಮೋದಿಯನ್ನು ಕಿತ್ತೊಗೆದರೂ, ಬಿಜೆಪಿ ಎಲ್ಲಿಯೂ ಹೋಗುತ್ತಿಲ್ಲ. ಅವರು ಇಲ್ಲಿಯೆ ಇರುತ್ತಾರೆ, ಮುಂದಿನ ಹಲವು ದಶಕಗಳವರೆಗೆ ನೀವು ಅವರ ವಿರುದ್ಧ ಹೋರಾಡಬೇಕು. ಬಿಜೆಪಿ ಅಷ್ಟು ಬೇಗ ಹೋಗುವುದಿಲ್ಲ. ರಾಹುಲ್ ಗಾಂಧಿಗೆ ಸಮಸ್ಯೆ ಇರುವುದು ಇಲ್ಲಿಯೆ. ಬಹುಶಃ, ಜನರು ಮೋದಿಯನ್ನು ದೂರವಿಡುತ್ತಾರೆ ಎಂದು ಅವರು ಭಾವಿಸುತ್ತಾರೆ. ಅದು ಆಗುತ್ತಿಲ್ಲ” ಎಂದು ಪ್ರಶಾಂಶ್ ಕಿಶೋರ್ ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಮತ್ತು ಡಿಎಂಕೆಗೆ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಲು ಕಿಶೋರ್ ಸಹಾಯ ಮಾಡಿದ್ದರು. ಆ ರಾಜ್ಯಗಳಲ್ಲಿ ಈ ಪಕ್ಷಗಳು ಜಯಭೇರಿ ಬಾರಿಸಿದ್ದವು.
ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಟಿಎಂಸಿ ಘೋಷಿಸಿದೆ. ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಇಂದು ಸಂಜೆಯಿಂದ ಗೋವಾಕ್ಕೆ ಮೂರು ದಿನಗಳ ಭೇಟಿಯನ್ನು ಆರಂಭಿಸಲಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್, ಬಿಜೆಪಿಯಲ್ಲಿ ಭಾರೀ ಭ್ರಷ್ಟಾಚಾರ: ಮೇಘಾಲಯ ರಾಜ್ಯಪಾಲರ ಗಂಭೀರ ಆರೋಪ