ಗೇಟ್ ಹಾರುವುದು, ಕಾಂಪೌಂಡ್ ಹಾರುವುದು ಶಾಲಾ-ಕಾಲೇಜು ಯುವಕ-ಯುವತಿಯರ ಸಾಧಾರಣ ಕೃತ್ಯ. ಆದರೆ ಆನೆಯೊಂದು ಗೇಟ್ ಹಾರಬಹುದೆ? ಆನೆಯ ದೈತ್ಯ ಆಕಾರ ನೆನೆಸಿಕೊಂಡರೆ ಸಾಧ್ಯವಿಲ್ಲ ಎನಿಸುತ್ತದೆ ಅಲ್ಲವೇ? ಆದರೆ ಇಲ್ಲೊಂದು ಆನೆ ಕಷ್ಟಪಟ್ಟು ಗೇಟ್ ಹಾರುವ ಮೂಲಕ ನೆಟ್ಟಿಗರ ಗಮನ ಸೆಳೆದಿದೆ.
ಮೈಸೂರಿನ ನಾಗರಹೊಳೆ ರಕ್ಷಿತ ಅರಣ್ಯ ಪ್ರದೇಶದ ವೀರನಹೊಸಳ್ಳಿ ರೇಂಜ್ನಲ್ಲಿ ನವೆಂಬರ್ 16ರ ಬೆಳಿಗ್ಗೆ ಆನೆಯೊಂದು ಕಬ್ಬಿಣದ ತಡೆಗೋಡೆಯನ್ನು ದಾಟುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಡಿನಿಂದ ಪ್ರಾಣಿಗಳು ಮುಖ್ಯವಾಗಿ ಆನೆಗಳು ನಮ್ಮ ಹೊಲಕ್ಕೆ ಬರಬಾರದೆಂದು ಕೆಲವರು ಕಬ್ಬಿಣದ ತಡೆಗೋಡೆ ಹಾಕಿದ್ದಾರೆ. ಅದನ್ನು ದಾಟಿ ಬಂದಿರುವ ಆನೆಯೊಂದು ಮೇವು ತಿಂದು ನಂತರ ವಾಪಸ್ ಕಾಡಿನೊಳಕ್ಕೆ ಗೇಟು ದಾಟುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯ ಸಾಹುರವರು ತಮ್ಮ ಟ್ವಿಟರ್ ಖಾತೆಯಲ್ಲಿ ನವೆಂಬರ್ 17 ರಂದು “ಮಾತುಗಳಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. 28 ಸೆಕೆಂಡ್ಗಳ ಈ ವಿಡಿಯೋವನ್ನು ಇದುವರೆಗೂ 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
Speechless ? #elephants pic.twitter.com/6S1WJqEkZS
— Supriya Sahu IAS (@supriyasahuias) November 17, 2021
ಈ ವಿಡಿಯೋಗೆ ಸಾಕಷ್ಟು ಜನರು ಅದ್ಭುತವಾಗಿದೆ, ಕ್ಯೂಟ್ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಆನೆಗೆ ಟ್ರಾಫಿಕ್ ಪೊಲೀಸರು 500 ರೂ ದಂಡ ವಿಧಿಸಬೇಕೆಂದು ಹಾಸ್ಯ ಮಾಡಿದ್ದಾರೆ. ಇನ್ನು ಕೆಲವರು ಇದು ವನ್ಯಜೀವಿಗಳು ಮತ್ತು ಮಾನವರ ನಡುವಿನ ಸಂಘರ್ಷವಾಗಿದ್ದು, ತಡೆಗೋಡೆ ಹಾಕಿ ಆನೆಯ ಆಹಾರಕ್ಕೆ ಏಕೆ ಅಡ್ಡಿ ಮಾಡಲಾಗುತ್ತಿದೆ? ಆ ತಡೆಗೋಡೆ ಕಾನೂನುಬದ್ಧವೇ? ಕಾನೂನು ಬಾಹಿರವೇ? ಎಂದು ಪ್ರಶ್ನಿಸಿದ್ದಾರೆ.
ತಮಿಳುನಾಡು ಶಾಸಕ ಟಿಆರ್ಬಿ ರಾಜಾರವರು ಇದೇ ವೀಡಿಯೊವನ್ನು ತಮಿಳುನಾಡಿನ ಹಣಕಾಸು ಸಚಿವರಿಗೆ ಟ್ಯಾಗ್ ಮಾಡಿ ಹಂಚಿಕೊಂಡಿದ್ದಾರೆ. “ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯ ಸಮಯದಲ್ಲಿ ಆನೆ ಕಂದಕಗಳು ಮತ್ತು ಬ್ಯಾರಿಕೇಡ್ಗಳ ಕಳಪೆ ನಿರ್ವಹಣೆಯಿಂದ ಮನುಷ್ಯ ಮತ್ತು ಪ್ರಾಣಿಗಳ ಸಂಘರ್ಷವನ್ನು ತಡೆಯಲು ಅಸಮರ್ಥವಾದ ಬಗ್ಗೆ ಬಡ ಅರಣ್ಯ ಇಲಾಖೆ ಅಧಿಕಾರಿಗಳನ್ನು ನಾವು ದೂಷಿಸುತ್ತಿರುವಾಗ ಈ ಚೋರ ಜಂಬೋಗಳು ಹೊಸ ತಂತ್ರಗಳನ್ನು ಕಲಿಯುತ್ತಲೇ ಇದ್ದಂತೆ ತೋರುತ್ತಿದೆ” ಎಂದು ಬರೆದಿದ್ದಾರೆ.
Perhaps a lesson that man cannot always/permanently pervert the course of nature, my friend @TRBRajaa…. https://t.co/akn4Q0IJmM
— Dr P Thiaga Rajan (PTR) (@ptrmadurai) November 17, 2021
ಕಾಡಿನ ನಾಶ, ಅರಣ್ಯ ಪ್ರದೇಶಗಳಲ್ಲಿ ಅಭಿವೃದ್ದಿ ಕಾರ್ಯಗಳು ಹೆಚ್ಚಾಗುತ್ತಿರುವುದರಿಂದ ಮನುಷ್ಯ ಮತ್ತು ಕಾಡಿನ ಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ. ಕಾಡು ಕಡಿಮೆಯಾದಂತೆಲ್ಲ ಅಲ್ಲಿನ ಪ್ರಾಣಿಗಳು ನಾಡಿನ ಮೇಲೆ ದಾಳಿ ಮಾಡಲು ಆರಂಭಿಸುತ್ತಿವೆ. ಕಾಡಿನಂಚಿನ ಜನರಿಗೆ ಇದು ನಿತ್ಯ ತಲೆನೋವಿನ ವಿಷಯವಾಗಿದೆ. ಅದರ ರೂಪಕವಾಗಿ ಈ ವಿಡಿಯೋ ಹೊರಹೊಮ್ಮಿದೆ ಎನ್ನಬಹುದು. ನಿಮಗೆ ಏನು ಅನ್ನಿಸುತ್ತದೆ ಎಂಬುದನ್ನು ಕಮೆಂಟ್ ಮಾಡಿ.
ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ಯೋಜನೆ; ರಾಜ್ಯಗಳ ಮತ್ತು ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಯ ನಡುವೆ ಪರಿಸರವಾದಿಗಳ ಕಾಳಜಿ