ಉತ್ತರ ಪ್ರದೇಶದ ದಿಯೋಬಂದ್ನಲ್ಲಿರುವ ಪ್ರಸಿದ್ದ ಮುಸ್ಲಿಂ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ಆವರಣದಲ್ಲಿ ಶಿವಲಿಂಗವಿದೆ ಎಂದು ಪ್ರತಿಪಾದಿಸಿರುವ ಹಿಂದೂ ರಕ್ಷಾ ದಳ ಸಂಘಟನೆ, ಆಗಸ್ಟ್ 11 ರಂದು ಸಂಸ್ಥೆಗೆ ಭೇಟಿ ನೀಡಿ ಗಂಗಾಜಲ ಅರ್ಪಿಸುವುದಾಗಿ ಘೋಷಣೆ ಮಾಡಿದೆ.
ಶನಿವಾರ (ಆ.8) ವಿಡಿಯೋ ಬಿಡುಗಡೆ ಮಾಡಿರುವ ಹಿಂದೂ ರಕ್ಷಾ ದಳದ ಉತ್ತರಾಖಂಡ ರಾಜ್ಯಾಧ್ಯಕ್ಷ ಲಲಿತ್ ಶರ್ಮಾ, ತಮ್ಮ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪಿಂಕಿ ಚೌಧರಿ ನೇತೃತ್ವದಲ್ಲಿ ಪದಾಧಿಕಾರಿಗಳು ಹರಿದ್ವಾರದಿಂದ ದಿಯೋಬಂದ್ಗೆ ಗಂಗಾಜಲವನ್ನು ಕೊಂಡೊಯ್ಯಲಿದ್ದಾರೆ ಎಂದು ಹೇಳಿದ್ದಾರೆ.
ದಾರುಲ್ ಉಲೂಮ್ ಆವರಣದಲ್ಲಿ ಶಿವ ದೇವಾಲಯವಿದೆ ಎಂಬ ತಮ್ಮ ಆರೋಪದ ಕುರಿತು ತನಿಖೆ ನಡೆಸುವಂತೆ ಸಂಘಟನೆಯು ಈ ಹಿಂದೆ ಸಹರಾನ್ಪುರ ಆಡಳಿತಕ್ಕೆ ಮನವಿ ಮಾಡಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶರ್ಮಾ ಪ್ರತಿಪಾದಿಸಿದ್ದಾರೆ. ಇದರ ಬೆನ್ನಲ್ಲೇ ಸಂಘಟನೆಯು ಸಂಸ್ಥೆಗೆ ಭೇಟಿ ನೀಡಿ ಗಂಗಾಜಲ ಅರ್ಪಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಿಯೋಬಂದ್ ಸರ್ಕಲ್ ಆಫೀಸರ್ ಅಮಿತ್ ಕುಮಾರ್ ಸಿಂಗ್, “ಯಾವುದೇ ವ್ಯಕ್ತಿಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಅವಕಾಶ ನೀಡುವುದಿಲ್ಲ. ಇಲ್ಲಿನ ಶಾಂತಿಯುತ ವಾತಾವರಣವನ್ನು ಹಾಳುಮಾಡಲು ಯತ್ನಿಸುವ ಯಾರೇ ಆದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.


