“ಲಕ್ಷ ವರ್ಷಗಳ ಹಿಂದೆಯೇ ಪರಮಾಣು ವಿಜ್ಞಾನದ ಬಗ್ಗೆ ಭಾರತಕ್ಕೆ ಗೊತ್ತಿತ್ತು.” ಜ್ಯೋತಿಷ್ಯದ ಮುಂದೆ ವಿಜ್ಞಾನ ಏನೇನು ಅಲ್ಲ. ಜ್ಯೋತಿಷ್ಯವು ಅತಿ ದೊಡ್ಡ ವಿಜ್ಞಾನವಾಗಿದೆ. ಅದು ವಿಜ್ಞಾನಕ್ಕಿಂತ ಹೆಚ್ಚಾಗಿರುತ್ತದೆ. ಹಾಗಾಗಿ ನಾವದನ್ನು ಹೆಚ್ಚು ಪ್ರಚಾರ ಮಾಡಲೇಬೇಕು.
ಈ ಮಾತುಗಳನ್ನು ಕೇಳಿದರೆ ನಿಮಗೆ ಏನನಿಸುತ್ತದೆ? ಯಾರೋ ಜೋಕರ್ ಹೇಳಿದ್ದಾನೆಂದು ನಗಬೇಡಿ. ಇದನ್ನು ಹೇಳಿದವರು ನಮ್ಮ ಮಕ್ಕಳ ಭವಿಷ್ಯವನ್ನು ತೀರ್ಮಾನಿಸುವ, ಭಾರತದ ಶಿಕ್ಷಣದ ನೀತಿಗಳನ್ನು ರೂಪಿಸುವ ನಮ್ಮ ನೂತನ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರಾದ ರಮೇಶ್ ಪೋಖ್ರಿಯಾಲ್ ನಿಶಾಂಕ್.
ಹೌದು ಸಂದೇಹವೇ ಬೇಡ. ಉತ್ತರಖಂಡದ ಮಾಜಿ ಮುಖ್ಯಮಂತ್ರಿ, ಹಾಲಿ ಹರಿದ್ವಾರದಿಂದ ಸಂಸದರಾಗಿ ಆಯ್ಕೆಯಾಗಿ ನೂತನ ಮಾನವ ಸಂಪನ್ಮೂಲ ಸಚಿರಾಗಿ ಆಯ್ಕೆಯಾಗಿರುವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಟಿವಿ ವಾಹಿನಿಗೆ ಹೇಳಿದ ಮಾತಿದು. 2014ರ ಡಿಸೆಂಬರ್ ನಲ್ಲಿ ಲೋಕಸಭೆಯಲ್ಲಿ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ (ಎಸ್.ಪಿ.ಎ) ಬಿಲ್ ಕುರಿತ ಚರ್ಚೆಯಲ್ಲಿ ಜ್ಯೋತಿಷ್ಯದ ಮುಂದೆ ವಿಜ್ಞಾನ ಏನೇನು ಅಲ್ಲ. ಜ್ಯೋತಿಷ್ಯವು ಅತಿ ದೊಡ್ಡ ವಿಜ್ಞಾನವಾಗಿದೆ. ಅದು ವಿಜ್ಞಾನಕ್ಕಿಂತ ಹೆಚ್ಚಾಗಿರುತ್ತದೆ ಎಂದು ಹೇಳಿದ್ದರು.
ಅವರು “ನಾವಿಂದು ಪರಮಾಣು ವಿಜ್ಞಾನದ ಕುರಿತು ಮಾತಾಡುತ್ತೇವೆ. ಆದರೆ ಒಂದು ಲಕ್ಷ ವರ್ಷಗಳ ಹಿಂದೆಯೇ ಋಷಿ ಕಾನದ್ ರವರು ಪರಮಾಣು ಪರೀಕ್ಷೆ ನಡೆಸಿದ್ದರು” ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದರು. ಅಷ್ಟೆ ಅಲ್ಲದೇ ಆ ಕಾಲದಲ್ಲಿಯೇ ನಾವು ಕಸಿ ವಿಜ್ಞಾನವನ್ನು ಸಹ ಕಲಿತಿದ್ದೇವೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದ ಗಣೇಶನಿಗೆ ವೇದಗಳ ಕಾಲದಲ್ಲಿಯೇ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿತ್ತು ಎಂಬ ಮಾತನ್ನು ಪುನರುಚ್ಚರಿಸಿದ್ದರು.
ನಾವು ನಮ್ಮ ಮಕ್ಕಳು ಹೆಚ್ಚು ಹೆಚ್ಚು ಆಧುನಿಕರಾಗಬೇಕು, ವಿಜ್ಞಾನವನ್ನು ಚೆನ್ನಾಗಿ ಕಲಿತು ಪ್ರಪಂಚದೊಟ್ಟಿಗೆ ಸ್ಪರ್ದಿಸಬೇಕೆಂದು ಬಯಸಿದರೆ, ವಿಜ್ಞಾನದ ಬಗ್ಗೆ ಅಪನಂಬಿಕೆ ಹೊಂದಿರುವ ವೇದ, ಪುರಾಣದ ಬಗ್ಗೆ ಭಕ್ತಿ ತೋರಿಸುವ ರಮೇಶ್ ಪೋಖ್ರಿಯಾಲ್ ರವರು ನಮ್ಮ ಸಚಿವರಾಗಿದ್ದಾರೆ. ಅವರು ಮುಂದೆ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.
“ಪ್ರಾಥಮಿಕ, ಪ್ರೌಢಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯದವರೆಗೂ ವ್ಯವಹರಿಸುವ, ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವ ಈ ವ್ಯಕ್ತಿ ಈಗ ನಮ್ಮ ನೂತನ ಎಚ್ಆರ್ಡಿ ಸಚಿವರಾಗಿದ್ದಾರೆ. ನಿಮಗೆ ಸ್ವಾಗತ. #ನ್ಯೂಇಂಡಿಯಾ” ಎಂದು ಮಾರ್ಮಿಕವಾಗಿ ಪೋಸ್ಟ್ ಹಾಕುವ ಮೂಲಕ ಯುವ ಚಿಂತಕ ಧೃವ್ ರಾಠೀ ಫೇಸ್ಬುಕ್ ರಮೇಶ್ ಪೋಖ್ರಿಯಾಲ್ರವರ ಮೇಲಿನ ಹೇಳಿಕೆಗಳ ಕುರಿತು ‘ದಿ ಹಿಂದೂ’ ಪತ್ರಿಕೆಯಲ್ಲಿ ಬಂದಿರುವ ಲೇಖನವನ್ನು ಷೇರ್ ಮಾಡಿದ್ದಾರೆ.