Homeಚಳವಳಿಮರೆತಹೋದ ಸ್ವಾತಂತ್ರ್ಯ ಸಂಗ್ರಾಮದ ರತ್ನ: ಮೌಲಾನಾ ಮುಹಮ್ಮ‍ದ್‌ ಅಲೀ ಜೌಹರ್

ಮರೆತಹೋದ ಸ್ವಾತಂತ್ರ್ಯ ಸಂಗ್ರಾಮದ ರತ್ನ: ಮೌಲಾನಾ ಮುಹಮ್ಮ‍ದ್‌ ಅಲೀ ಜೌಹರ್

ಮೌಲಾನಾರು 1911 ಜನವರಿ 11 ರಂದು "ಕಾಮ್ರೇಡ್" ಎಂಬ ಆಂಗ್ಲ ಪತ್ರಿಕೆಯೊಂದನ್ನು ಕಲ್ಕತ್ತಾದಿಂದ ಪ್ರಾರಂಭಿಸಿ ವಸಾಹತುಶಾಹಿಗಳ ವಿರುದ್ಧ ಅಕ್ಷರ ಸಮರಕ್ಕಿಳಿದಿದ್ದರು.

- Advertisement -
- Advertisement -

ಭಾರತದ ಸ್ವಾತಂತ್ರ್ಯ ಹೋರಾಟಗಾರರ ಅಗ್ರಪಂಕ್ತಿಯ ಹೆಸರುಗಳಲ್ಲೊಂದು ಮೌಲಾನಾ ಮುಹಮ್ಮದ್ ಅಲೀ ಜೌಹರ್. ಇಂದು ಡಿಸೆಂಬರ್ 10 ಅವರ ನೂರ ನಲ್ವತ್ತಮೂರನೆಯ ಜನ್ಮ ದಿನ. ಈ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜೀವ ತೇಯ್ದ ಮಹಾನುಭಾವರನ್ನು ದೇಶ ಆಗಾಗ ನೆನಪಿಸಿಕೊಳ್ಳುತ್ತಿರುತ್ತದೆ. ಆದರೆ ದೇಶದ ಸ್ವಾತಂತ್ರ್ಯಕ್ಕೆ ಸಾಟಿಯಿಲ್ಲದ ಕೊಡುಗೆ ನೀಡಿ ದೇಶ ವಸಾಹತುಶಾಹಿಗಳ ಕಪಿಮುಷ್ಟಿಯಿಂದ ಬಿಡುಗಡೆಯಾಗುವುದಕ್ಕಿಂತ ಹದಿನಾರು ವರ್ಷ ಮುಂಚಿತವಾಗಿ ಲಂಡನ್ನಿನ ಬ್ರಿಟಿಷ್ ರಾಣಿಯ ಸಿಂಹಾಸನವೇ ಗುಡುಗುವಂತೆ ಗರ್ಜಿಸುತ್ತಾ ಹುತಾತ್ಮರಾದ ಈ ಅಪ್ರತಿಮ ಸ್ವಾತಂತ್ರ್ಯ ಸೇನಾನಿಯನ್ನು ದೇಶ ಮರೆತೇ ಬಿಟ್ಟಿರುವುದು ವಿಷಾದನೀಯ. ಮೌಲಾನಾ ಮುಹಮ್ಮದ್ ಅಲಿಯವರ ಹೊರತಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆ ನಿಸ್ಸಂದೇಹವಾಗಿಯೂ ಅಪೂರ್ಣ.

ಮುಹಮ್ಮದ್ ಅಲಿ ಓರ್ವ ಶ್ರೇಷ್ಠ ಇಸ್ಲಾಮಿಕ್ ವಿದ್ವಾಂಸರಾಗಿದ್ದುದರಿಂದ ಅವರ ಹೆಸರಿನೊಂದಿಗೆ ಮೌಲಾನಾ ಎಂಬ ಪದವಿ ಅಂಟಿಕೊಂಡಿತ್ತು.ಅವರ ದೇಶ ನಿಷ್ಟೆಯನ್ನು ಅಂದಿನ ಆರೆಸ್ಸೆಸ್ ಮುಖಂಡರು ಪ್ರಶ್ನಿಸಿ ನಿಮಗೆ ದೇಶ ಮೊದಲೋ, ಧರ್ಮ ಮೊದಲೋ ಎಂದು ಚೇಡಿಸಿದಾಗ ಮೌಲಾನಾ ಕೊಟ್ಟ ಉತ್ತರ “ನಾನು ಮೊದಲನೆಯದಾಗಿ ಮುಸ್ಲಿಂ, ಎರಡನೆಯದಾಗಿಯೂ ಮುಸ್ಲಿಂ ಮತ್ತು ಮೂರನೆಯದಾಗಿಯೂ ಮುಸ್ಲಿಂ. ದೇಶದ ವಿಚಾರಕ್ಕೆ ಬಂದಾಗ ನಾನು ಮೊದಲನೆಯದಾಗಿ ಭಾರತೀಯ, ಎರಡನೆಯದಾಗಿಯೂ ಭಾರತೀಯ ಮತ್ತು ಮೂರನೆಯದಾಗಿಯೂ ಭಾರತೀಯ” ಎಂಬುದಾಗಿತ್ತು.

ಅಪ್ರತಿಮ ಮಾತುಗಾರ, ನಿರ್ಭೀತ ಬರಹಗಾರ, ಸ್ವಾತಂತ್ರ್ಯ ಯೋಧ ಮುಹಮ್ಮದ್ ಅಲಿ. ಮೌಲಾನಾರದ್ದು ನೆಪೋಲಿಯನ್‌ನ ಹೃದಯ, ಮೆಕಾಲೆಯ ಲೇಖನಿ ಮತ್ತು ಬರ್ಕ್‌ನ ಮಾತುಗಾರಿಕೆ ಎಂದು ಬ್ರಿಟಿಷರೇ ಅಂದು ಹೇಳುತ್ತಿದ್ದರು. ದೇಶ ಮತ್ತು ಇಸ್ಲಾಮ್ ಎರಡಕ್ಕೂ ನಿಸ್ವಾರ್ಥವಾಗಿ ದುಡಿದವರು ಮೌಲಾನಾ.

ಬರೋಡಾ ನವಾಬರ ಮಂತ್ರಿಯಾಗಿದ್ದ ಅಬ್ದುಲ್ ಅಲಿ ಖಾನ್ ಮತ್ತು ಆಬಿದಾ ಬೇಗಂ (ಬೀ ಅಮ್ಮಾ) ದಂಪತಿಗಳ ಕಿರಿಯ ಪುತ್ರನಾಗಿ ಉತ್ತರ ಪ್ರದೇಶದ ರಾಂಪುರದಲ್ಲಿ 1878 ಡಿಸೆಂಬರ್ 10ರಂದು ಮುಹಮ್ಮದ್ ಅಲಿ ಜನಿಸಿದರು. ಮುಹಮ್ಮದ್ ಅಲಿಯವರಿಗೆ ಎರಡು ವರ್ಷ ಪ್ರಾಯವಾಗುವಾಗಲೇ ಪಿತೃ ವಿಯೋಗವಾಯಿತು. ಮಕ್ಕಳ ಶಿಕ್ಷಣದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಆಬಿದಾ ಬೇಗಂ ತನ್ನ ಒಡವೆಗಳನ್ನು ಮಾರಿ ಮಕ್ಕಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡಿದರು. ಬಿ.ಎ.ಪದವಿಯಲ್ಲಿ ಅಲಹಾಬಾದ್ ವಿಶ್ವವಿದ್ಯಾನಿಲಯಕ್ಕೆ ಮುಹಮ್ಮದ್ ಅಲಿ ಪ್ರಥಮ ಸ್ಥಾನ ಗಳಿಸಿದರು. ಆ ಬಳಿಕ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದರು. ಆಕ್ಸ್‌ಫರ್ಡ್ ಯುನಿವರ್ಸಿಟಿಯಿಂದ ಆಧುನಿಕ ಇತಿಹಾಸದ ವಿಷಯದಲ್ಲಿ ಆನರ್ಸ್ ಪದವಿ ಪಡೆದರು. ಆನರ್ಸ್ ಪದವಿಗಾಗಿ ಆಕ್ಸ್‌ಫರ್ಡ್‌ನಲ್ಲಿ ಕಲಿಯುತ್ತಿರುವಾಗ ಇಸ್ಲಾಮ್‌ನ ಕುರಿತಂತೆ ಗಾಢ ಅಧ್ಯಯನ ನಡೆಸಿದರು. ಇಂಗ್ಲಿಷ್ ಭಾಷೆಯಲ್ಲಿ ಅದ್ಭುತ ಹಿಡಿತ ಹೊಂದಿದ್ದ ಮುಹಮ್ಮದ್ ಅಲಿ ಆಕ್ಸ್‌ಫರ್ಡ್ ಯುನಿವರ್ಸಿಟಿ ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದರು. ಆಕ್ಸ್‌ಫರ್ಡ್ ಯುನಿವರ್ಸಿಟಿ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದ ಮೊದಲ ಏಷ್ಯನ್ ವ್ಯಕ್ತಿ ಎಂಬ ಹೆಗ್ಗಳಿಕೆ ಮುಹಮ್ಮದ್ ಅಲಿಯವರದ್ದಾಗಿತ್ತು.
………………..

ಆನರ್ಸ್ ಪದವಿ ಪಡೆದು ಸ್ವದೇಶಕ್ಕೆ ಮರಳಿದ ಮೌಲಾನಾ ಬರೋಡಾದಲ್ಲಿ ಸರಕಾರಿ ಹುದ್ದೆಗೆ ಸೇರಿದರು. ಆದರೆ ಬ್ರಿಟಿಷ್ ಸಾಮ್ರಾಜ್ಯಶಾಹಿಯು ತನ್ನ ದೇಶವಾಸಿಗಳ ಮೇಲೆ ನಡೆಸುತ್ತಿದ್ದಂತಹ ದೌರ್ಜನ್ಯವನ್ನು ಕಂಡು ರೋಸಿಹೋದ ಅವರು ಬ್ರಿಟಿಷ್ ಸರಕಾರದ ಉದ್ಯೋಗದಲ್ಲಿದ್ದುಕೊಂಡೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಬೆಂಕಿಯುಗುಳುವಂತಹ Thoughts on present discontents ಎಂಬ ಲೇಖನಮಾಲಿಕೆಯನ್ನು Times of India ದಲ್ಲಿ ಬರೆಯಲಾರಂಭಿಸಿದರು. ಸರಕಾರದ ಹುದ್ದೆಯಲ್ಲಿದ್ದು ಸರಕಾರದ ವಿರುದ್ಧ ಬರೆಯುವುದರ ಪರಿಣಾಮ ನೆಟ್ಟಗಿರಲ್ಲ ಎಂದು ಬ್ರಿಟಿಷರು ಎಚ್ಚರಿಸಿದಾಗ ಮೌಲಾನಾ ತನ್ನ ಹುದ್ದೆಗೆ ರಾಜೀನಾಮೆ ಎಸೆದು ಹೊರಬಂದು ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಣಕ್ಕೆ ದುಮುಕಿದರು.

ಮೌಲಾನಾರು 1911 ಜನವರಿ 11 ರಂದು “ಕಾಮ್ರೇಡ್” ಎಂಬ ಆಂಗ್ಲ ಪತ್ರಿಕೆಯೊಂದನ್ನು ಕಲ್ಕತ್ತಾದಿಂದ ಪ್ರಾರಂಭಿಸಿ ವಸಾಹತುಶಾಹಿಗಳ ವಿರುದ್ಧ ಅಕ್ಷರ ಸಮರಕ್ಕಿಳಿದರು.

ಬ್ರಿಟಿಷ್ ಪ್ರಭುತ್ವದ ವಿರುದ್ಧ ಬೆಂಕಿ ಚೆಂಡುಗಳಂತಹ ತೀಕ್ಷ್ಣ ಬರಹಗಳನ್ನು ಬರೆದು ಸ್ವಾತಂತ್ರ್ಯ ಹೋರಾಟಗಾರರಲ್ಲಿ‌ ಅದಮ್ಯ ಸ್ಪೂರ್ತಿಯನ್ನು ತುಂಬಿದರು. ಮೊದಲು ಕಲ್ಕತ್ತಾವನ್ನು ಕೇಂದ್ರವಾಗಿರಿಸಿಕೊಂಡು ಪ್ರಕಟಗೊಳ್ಳುತ್ತಿದ್ದ ‘ ಕಾಮ್ರೇಡ್ ‘ ಪತ್ರಿಕೆ ಹೆಚ್ಚು ಹೆಚ್ಚು ಜನರನ್ನು ತಲುಪಬೇಕೆಂದು ಅದನ್ನು ದೆಹಲಿಗೆ ಸ್ಥಳಾಂತರಿಸಿದರು. ಇಂಗ್ಲಿಷ್ ಜನಸಾಮಾನ್ಯರನ್ನು ತಲುಪಲಾರದು ಎಂದು ಮತ್ತೊಂದು ಉರ್ದು ಪತ್ರಿಕೆ ಹಮ್‌ದರ್ದ್ ಸ್ಥಾಪಿಸಿದರು. ಇವೆರಡೂ ಪತ್ರಿಕೆಗಳ ಮೂಲಕ‌ ನಿರಂತರವಾಗಿ ನಿರ್ಬಿಡೆಯ ಬರಹಗಳನ್ನು ಪ್ರಕಟಿಸಿ ಬ್ರಿಟಿಷರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದರು. ಇದೇ ಸಾಮ್ರಾಜ್ಯಶಾಹಿ ಶಕ್ತಿಗಳು ಅತ್ತ ಯುರೋಪ್‌ನಲ್ಲಿ ತುರ್ಕಿಯ ಮೇಲೆ ನಡೆಸುತ್ತಿದ್ದಂತಹ ದಬ್ಬಾಳಿಕೆಯನ್ನು ವಿರೋಧಿಸಿಯೂ ಮೌಲಾನಾ ಪ್ರಚೋದನಕಾರಿಯಾಗಿ ಬರೆಯಲಾರಂಭಿಸಿದರು. ಖಿಲಾಫತ್ ಚಳುವಳಿಯು ಭಾರತದಲ್ಲಿ ಹುಟ್ಟಿಕೊಳ್ಳವ ನಿಟ್ಟಿನಲ್ಲಿ ಪ್ರಧಾನ ಭೂಮಿಕೆ ನಿರ್ವಹಿಸಿದ್ದ ಅವರು ತನ್ನ ಬರಹಗಳ ಮೂಲಕ ಚಳವಳಿಗೆ ಶಕ್ತಿ ತುಂಬುವುದರೊಂದಿಗೆ ಅದ್ವಿತೀಯ ನೇತೃತ್ವ ನೀಡಿದರು.

ಬ್ರಿಟಿಷ್ ಪ್ರಭುತ್ವದ ದಬ್ಬಾಳಿಕೆಯ ವಿರುದ್ಧ ಪ್ರಬಲ ಧ್ವನಿಯಾದ ಮೌಲಾನಾ ಬ್ರಿಟಿಷರಿಗೆ ಸಿಂಹಸ್ವಪ್ನವಾದರು. ಇದರಿಂದ ಕಂಗೆಟ್ಟ ಬ್ರಿಟಿಷ್ ಪ್ರಭುತ್ವ 1914 ರಲ್ಲಿ ಅವರ ಎರಡೂ ಪತ್ರಿಕೆಗಳಿಗೆ ನಿಷೇಧ ಹೇರಿ ಅವರನ್ನು ಮತ್ತು ಅವರ ಸಹೋದರ ಶೌಕತ್ ಅಲಿಯವರನ್ನು ಬಂಧಿಸಿ ಜೈಲಿಗೆ ತಳ್ಳಿತು. ಐದು ವರ್ಷಗಳ ದೀರ್ಘ ಸೆರೆವಾಸದ ಬಳಿಕ 1919 ರ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ಸ್ವಾತಂತ್ರ್ಯದೆಡೆಗಿನ ಮೌಲಾನಾರ ತುಡಿತವನ್ನು ಅರ್ಥೈಸಿದ ಮುಸ್ಲಿಂ ಲೀಗ್ 1917 ರಲ್ಲಿ ಅಂದರೆ ಮೌಲಾನಾ ಜೈಲಿನಲ್ಲಿರುವಾಗಲೇ ಮುಸ್ಲಿಂ ಲೀಗ್‌ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಿತು. ಜೈಲಿನಿಂದ ಬಿಡುಗಡೆಯಾದ ಬಳಿಕವೂ ಅವರು ತಮ್ಮ ಅದೇ ಉರಿಭಾಷೆಯಲ್ಲಿ ಬ್ರಿಟಿಷರ ವಿರುದ್ಧ ಸಮರ ಘೋಷ ಮೊಳಗಿಸಿದರು. 1921ರಲ್ಲಿ ಬ್ರಿಟಿಷರು ಅವರನ್ನು ಮತ್ತೆ ಕಂಬಿಯೊಳಕ್ಕೆ ತಳ್ಳಿದರು. 1923ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಮೌಲಾನಾ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕೊಕ್ಕನಾಡ ಅಧಿವೇಶನದ ಅಧ್ಯಕ್ಷತೆ ವಹಿಸಿ ಅವರು ಸ್ವಾತಂತ್ರ್ಯ ಯೋಧರಿಗೆ ನೀಡಿದ ಕರೆ ಸ್ವಾತಂತ್ರ್ಯ ವಾಂಛೆ ಇಮ್ಮಡಿಗೊಳ್ಳುವಂತೆ ಮಾಡಿತು. “ನಾವೆಲ್ಲ ಐಕ್ಯದಿಂದ ಹೋರಾಡೋಣ, ಅಗತ್ಯ ಬಿದ್ದರೆ ಪ್ರಾಣಾರ್ಪಣೆಗೂ ಸಿದ್ಧರಾಗೋಣ. ಒಂದು ವರ್ಷದೊಳಗೆ ಬ್ರಿಟಿಷರು ದೇಶಬಿಟ್ಟು ತೊಲಗದಿದ್ದರೆ ನಾವೇ ಸ್ವಾತಂತ್ರ್ಯ ಘೋಷಿಸೋಣ.” ಮೌಲಾನಾರ ಈ ಕರೆಗೆ ಓಗೊಟ್ಟು ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿ ಯುವ ಸಮೂಹ ಹೋರಾಟದ ಕಣಕ್ಕೆ ದುಮುಕಿತು.

ಮೌಲಾನಾರ ಬಂಧನದ ಕುರಿತಂತೆ ಯಂಗ್ ಇಂಡಿಯಾದ 1923ರ ಸೆಪ್ಟೆಂಬರ್ ಸಂಚಿಕೆಯಲ್ಲಿ ಗಾಂಧೀಜಿ ತನ್ನ ಲೇಖನದಲ್ಲಿ “ಮೌಲಾನಾರ ಬಂಧನ ಸ್ವಾತಂತ್ರ್ಯ ಸ್ಥಾಪನೆಯ ಮೊದಲ ನಡೆ” ಎಂದು ಬರೆದಿದ್ದರು.

1930ರ ಕೊನೆಯಲ್ಲಿ ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನಕ್ಕೆ ಗಾಂಧೀಜಿಯ ಜೊತೆಗೆ ಮೌಲಾನಾ ತೆರಳಿದ್ದರು. ಆ ಸಮ್ಮೇಳನದಲ್ಲಿ ಮೌಲಾನಾ ಮಾಡಿದ ಭಾಷಣ ಬ್ರಿಟಿಷ್ ಪ್ರಭುತ್ವದ ಎದೆಗೆ ಇರಿದಂತಿತ್ತು. “ಭಾರತದಲ್ಲಿ ನಾವು ಮೂವತ್ತೆರಡು ಕೋಟಿ ಜನ ಅನಕ್ಷರತೆ, ಬಡತನ, ಹಸಿವು ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ಆದರೂ ನಮ್ಮ ಸ್ವಾತಂತ್ರ್ಯ ದಾಹ ಕಿಂಚಿತ್ತೂ ಕಡಿಮೆಯಾಗದು. ಸ್ವಾತಂತ್ರ್ಯ ನೀವು ಕೊಡುವ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ನಮ್ಮ ಸ್ವಾತಂತ್ರ್ಯಕ್ಕಾಗಿ ನಾವು ನಿಮ್ಮ ಫಿರಂಗಿ, ಗುಂಡುಗಳಿಗೆ ಎ‍ದೆಯೊಡ್ಡಲೂ‌ ಸಿದ್ಧ. ಮೂವತ್ತೆರಡು ಕೋಟಿ ಭಾರತೀಯರನ್ನು ಕೊಲ್ಲುವ ತಾಕತ್ತು ಮತ್ತು ಧೈರ್ಯವಿರುವ ನೂರು ಜನರೂ ಇಡೀ ಬ್ರಿಟನ್‌ನಲ್ಲಿ ಹುಡುಕಿದರೆ ಸಿಗಲಾರರು..” ಎಂದು ಗುಡುಗಿದ್ದರು.

ತೀವ್ರ ಜ್ವರದಿಂದ ಬಳಲುತ್ತಿದ್ದರೂ ದೇಶ ವಿಮೋಚನೆಯ ಕೆಲಸಕ್ಕಾಗಿ ಹೊರಡುವಾಗ ಅವರ ಕುಟುಂಬಿಕರು ಅವರನ್ನು ತಡೆಯಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಮಹಾತಾಯಿ ಮುಹಮ್ಮದ್ ಅಲಿಯವರ ಮಾತೆ ಬೀ ಅಮ್ಮಾ ತನ್ನ ದುಃಖಗಳನ್ನು ಮನದೊಳಗೆ ಅದುಮಿಟ್ಟು ಮಗನನ್ನು ಬೀಳ್ಕೊಟ್ಟಿದ್ದರು. ಲಂಡನ್‌ನಲ್ಲಿ ತಂಗಿದ್ದ ಹೋಟೆಲ್‌ನಿಂದ ದುಂಡು ಮೇಜಿನ ಸಮ್ಮೇಳನಕ್ಕೆ ಹೊರಡುವಾಗ ಮೌಲಾನಾರ ಆರೋಗ್ಯ ಸ್ಥಿತಿ ಕಂಡು ಗಾಂಧೀಜಿ ಕಂಗಾಲಾಗಿದ್ದರು. ಔಷಧಿ ಸೇವಿಸಿ ಮೌಲಾನಾ ಹೊರಟೇ ಬಿಟ್ಟರು. ಅಂದು ಅವರಾಡಿದ ಕೊನೆಯ ವಾಕ್ಯಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದಂತಹದ್ದು.. ” I want to go my country.. If I can go back with the substance of freedom in my hand; and if you do not give us freedom you have to give me a grave here…”

ಮೌಲಾನಾರ ಆರೋಗ್ಯ ತೀವ್ರ ಸ್ವರೂಪದಲ್ಲಿ ಹದಗೆಟ್ಟಿತು. ಅವರು ಗಾಂಧೀಜಿಯವರನ್ನು ಕರೆದು ತನ್ನ ಕೊನೆಯ ಆಶೆಯನ್ನು ಅರುಹಿದರು. ” ನನ್ನ ಕೊನೆ ಸಮೀಪಿಸಿತು. ಆದರೆ ಸ್ವಾತಂತ್ರ್ಯ ವಿಲ್ಲದ ಮಣ್ಣಲ್ಲಿ ನಾನು ಮಣ್ಣಾಗಲಾರೆ.. ನನ್ನ ಮೃತದೇಹವನ್ನು ಇಸ್ಲಾಮಿನ ಅನೇಕ ಪ್ರವಾದಿಗಳು ಮಣ್ಣಾಗಿರುವ ಮತ್ತು ಇಸ್ಲಾಮಿನ ಮೂರನೇ ಅತೀ ದೊಡ್ಡ ಪವಿತ್ರವಾಗಿರುವ ಮಸ್ಜಿದುಲ್ ಅಕ್ಸಾದ ಕಬರ್ ಸ್ಥಾನದಲ್ಲಿ ನನ್ನನ್ನು ದಫನ ಮಾಡಬೇಕು…”

ಮೌಲಾನಾ 1931ರ ಜನವರಿ ನಾಲ್ಕರಂದು ತನ್ನ ಐವತ್ತ ಮೂರನೇ ವಯಸ್ಸಿನಲ್ಲಿ ಚಿರನಿದ್ರೆಗೆ ಜಾರಿದರು.‌ ಅವರ ಇಚ್ಚೆಯಂತೆಯೇ ಅವರ ಮೃತದೇಹವನ್ನು ಫ್ಯಾಲೆಸ್ತೀನಿಗೆ ಕೊಂಡೊಯ್ದು ಮಸ್ಜಿದುಲ್ ಅಕ್ಸಾದ ದಫನ ಭೂಮಿಯಲ್ಲಿ ದಫನ ಮಾಡಲಾಯಿತು.

ಫ್ಯಾಲೆಸ್ತೀನ್‌ನಲ್ಲಿರುವ ಅವರ ಸಮಾಧಿ

ಉರ್ದು ಭಾಷೆಯ ಶ್ರೇಷ್ಠ ಕವಿಯೂ ಆಗಿದ್ದ ಅವರು ಜೌಹರ್ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದರು. ಜೌಹರ್ ಅರ್ಥಾತ್ ಅಮೂಲ್ಯ ರತ್ನ. ಅವರು ಈ ದೇಶದ ಸ್ವಾತಂತ್ರ್ಯ ಚಳವಳಿ ಕಂಡ ನಿಜವಾದ ಜೌಹರ್…

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...