ವೈದ್ಯಕೀಯ ಜಾಮೀನಿನ ಮೇಲಿರುವ ಕವಿ ಹೋರಾಟಗಾರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿರುವ ವರವರ ರಾವ್ ಅವರ ಜಾಮೀನು ಅವಧಿಯನ್ನು ಶುಕ್ರವಾರ ಫೆಬ್ರವರಿ 5 ರವರೆಗೆ ಬಾಂಬೆ ಹೈಕೋರ್ಟ್ ವಿಸ್ತರಿಸಿದೆ.
ಕಳೆದ ವರ್ಷ ಫೆಬ್ರವರಿ 22 ರಂದು ಬಾಂಬೆ ಹೈಕೋರ್ಟ್ಎಂಟು ತಿಂಗಳ ಕಾಲ ವೈದ್ಯಕೀಯ ಜಾಮೀನು ಮಂಜೂರು ಮಾಡಿತ್ತು. ಬಳಿಕ ಅದನ್ನು 2022ರ ಜನವರಿ 7 ರವರೆಗೆ ವಿಸ್ತರಿಸಲು ಅನುಮತಿ ನೀಡಲಾಗಿತ್ತು.
ಶುಕ್ರವಾರ, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಎಸ್ ಶಿಂಧೆ ಮತ್ತು ಎನ್.ಆರ್ ಬೋರ್ಕರ್ ಅವರ ವಿಭಾಗೀಯ ಪೀಠ, ಒಂದು ವಾರದವರೆಗೆ ಮಾತ್ರ ಜಾಮೀನು ವಿಸ್ತರಿಬೇಕು ಎಂಬ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮನವಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ: ವರವರ ರಾವ್ ಕೃತಿ ಪ್ರಕಟಣೆ ವಿಳಂಬ: ಸರ್ಕಾರಕ್ಕೆ ಹೆದರಿತೇ ಪೆಂಗ್ವಿನ್ ಪ್ರಕಾಶನ ಸಂಸ್ಥೆ?
“ಮೂರನೇ ಅಲೆಯು 50 ರಿಂದ 60 ದಿನಗಳವರೆಗೆ ಇರಬಲ್ಲದು ಎಂದು ತಜ್ಞರು ಹೇಳುತ್ತಾರೆ. ಫ್ರಂಟ್ ಲೈನ್ ವರ್ಕರ್ಸ್ ಮತ್ತು ಪೊಲೀಸ್ ಸಿಬ್ಬಂದಿ ಕೋವಿಡ್ ಸೊಂಕಿಗೆ ಒಳಗಾಗುತ್ತಿದ್ದಾರೆ. ಅಂಕಿಅಂಶಗಳು ಮೊದಲ ಅಥವಾ ಎರಡನೆಯ ಅಲೆಯಲ್ಲಿ ಇದ್ದಂತೆ ಇಲ್ಲ. ಹೀಗಿರುವಾಗ ಅವರನ್ನು (ವರವರ ರಾವ್) ಜೈಲಿಗೆ ಕಳುಹಿಸಲು ಸಾಧ್ಯವೇ..? ನಮಗೆ ಸ್ವಲ್ಪ ಉಸಿರಾಡಲು ಬಿಡಿ” ಎಂದು ನ್ಯಾಯಮೂರ್ತಿ ಶಿಂಧೆ ಮೌಖಿಕವಾಗಿಯೇ ತನಿಖಾ ಸಂಸ್ಥೆಯನ್ನು ಟೀಕಿಸಿದ್ದಾರೆ.
ನ್ಯಾಯಮೂರ್ತಿಗಳಾದ ಶಿಂಧೆ ಮತ್ತು ಬೋರ್ಕರ್ ಅವರ ಪೀಠವು, ರಾವ್ ಅವರು ಸಲ್ಲಿಸಿದ ಹೊಸ ಅರ್ಜಿಗಳು ಸೇರಿದಂತೆ ಎಲ್ಲಾ ವಿವಾದಗಳನ್ನು ಮುಂದಿನ ವಿಚಾರಣೆಯ ದಿನಾಂಕವಾದ ಫೆಬ್ರವರಿ 4 ರಂದು ಪರಿಗಣಿಸುವುದಾಗಿ ಹೇಳಿದೆ. ಜೊತೆಗೆ ವರವರ ರಾವ್ ಅವರ ಜಾಮೀನನ್ನು ಫೆಬ್ರವರಿ 5 ರವರೆಗೆ ವಿಸ್ತರಿಸಿದೆ.
ಡಿಸೆಂಬರ್ 31, 2017 ರಂದು ಪುಣೆಯಲ್ಲಿ ಎಲ್ಗರ್ ಪರಿಷತ್ ಸಮಾವೇಶ ನಡೆದಿತ್ತು. ಈ ಸಮಾವೇಶದ ಮರುದಿನ ಪಶ್ಚಿಮ ಮಹಾರಾಷ್ಟ್ರದ ಹೊರವಲಯದಲ್ಲಿರುವ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ಭುಗಿಲೆದ್ದಿತ್ತು. ಸಮಾವೇಶದಲ್ಲಿ ಇವರು ಉದ್ರೇಕಕಾರಿ ಭಾಷಣ ಮಾಡಿದ್ದಾರೆ, ಇದರಿಂದಾಗಿ ಹಿಂಸಾಚಾರ ಸಂಭವಿಸಿದೆ ಎಂದು ಆರೋಪಿಸಿ ಅವರನ್ನು ಪೊಲೀಸರು ಬಂಧಿಸಿದ್ದರು.