Homeಮುಖಪುಟವಿಶ್ಲೇಷಣೆ: ಯುಪಿಯಲ್ಲಿ ಒಬಿಸಿ ನಾಯಕರು ಬಿಜೆಪಿ ತೊರೆಯುತ್ತಿರುವುದು ಏತಕ್ಕೆ? ಎಸ್‌ಪಿಗೆ ಗೆಲುವು ಸುಲಭವೇ?

ವಿಶ್ಲೇಷಣೆ: ಯುಪಿಯಲ್ಲಿ ಒಬಿಸಿ ನಾಯಕರು ಬಿಜೆಪಿ ತೊರೆಯುತ್ತಿರುವುದು ಏತಕ್ಕೆ? ಎಸ್‌ಪಿಗೆ ಗೆಲುವು ಸುಲಭವೇ?

- Advertisement -
- Advertisement -

ಉತ್ತರ ಪ್ರದೇಶದ ಚುನಾವಣಾ ಚರ್ಚೆಯಲ್ಲಿ ದೊಡ್ಡ ಪ್ರಶ್ನೆಯೊಂದು ಮುನ್ನಲೆಗೆ ಬಂದಿದೆ. ಯಾದವೇತರ ಇತರೆ ಹಿಂದುಳಿದ ವರ್ಗದ ಸಮುದಾಯಗಳನ್ನು ಬಿಜೆಪಿಯಿಂದ ದೂರವಿಡುವ ಪ್ರಯತ್ನದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಅಂತಿಮವಾಗಿ ಯಶಸ್ಸು ಪಡೆಯಬಹುದೇ?- ಎಂಬುದು ಸದ್ಯದ ಪ್ರಶ್ನೆ.

ರಾಜ್ಯದ ಚುನಾವಣಾ ಫಲಿತಾಂಶವು ಈ ನಿರ್ಣಾಯಕ ಅಂಶದ ಮೇಲೆ ಅವಲಂಬಿತವಾಗಿದೆ ಎಂದು ರಾಜಕೀಯ ವಿಶ್ಲೇಷಕರು ನಿರೀಕ್ಷಿಸಿದ್ದಾರೆ.

ಕಳೆದ ಕೆಲವು ಚುನಾವಣೆಗಳಲ್ಲಿ ಅತ್ಯಂತ ಹಿಂದುಳಿದ ವರ್ಗಗಳನ್ನು ಒಟ್ಟುಗೂಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ವರ್ಗಗಳಲ್ಲಿ ಬಹುದೊಡ್ಡ ಮತದಾರರಿದ್ದಾರೆ. ಆ ಸಂಖ್ಯೆ ಒಟ್ಟು ಮತದಾರರ ಪೈಕಿ ಶೇ.30 ಎನ್ನಲಾಗುತ್ತದೆ. ಯಾದವರ ವಿರುದ್ಧ ಈ ವರ್ಗಗಳನ್ನು ಬಿಜೆಪಿ ಸಂಘಟಿಸಿತ್ತು.

ಇದನ್ನೂ ಓದಿ:ಉತ್ತರ ಪ್ರದೇಶ ಚುನಾವಣೆ: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಕಾಂಗ್ರೆಸ್‌ನಿಂದ ಟಿಕೆಟ್

ರಾಜ್ಯ ರಾಜಕೀಯದಲ್ಲಿ ಇಲ್ಲಿಯವರೆಗೆ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದ ಕುರ್ಮಿ, ಲೋಧ್ ರಜಪೂತ್, ಪಾಲ್ಸ್, ಸೈನಿ, ಕಶ್ಯಪ್, ಮೌರ್ಯ ಥರದ ಅತ್ಯಂತ ಹಿಂದುಳಿದ ವರ್ಗಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹೊಂದಿದ್ದವು. ಅಲ್ಲದೆ ನರೇಂದ್ರ ಮೋದಿ ಅವರು ಕೂಡ ಪ್ರಬಲವಲ್ಲದ ಒಬಿಸಿ ಸಮುದಾಯಕ್ಕೆ ಸೇರಿದವರು.

ಬಿಜೆಪಿಯು ಈ ಸಮುದಾಯಗಳ ನಾಯಕರಿಗೆ ಚುನಾವಣಾ ಕಣದಲ್ಲಿ ಇತರ ಪಕ್ಷಗಳಿಗಿಂತ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿತು. ಭಾರೀ ಅಂತರದಿಂದ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವವನ್ನು ನೋಡಿದ ರೀತಿ ಬೇರೆಯಾಗಿತ್ತು.

ಬಿಜೆಪಿ ನಾಯಕರ ಇತ್ತೀಚಿನ ವಲಸೆಯು ಬಹುಶಃ ಇದನ್ನು ಎತ್ತಿ ಹಿಡಿಯುತ್ತದೆ. ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ ಎಲ್ಲಾ ಹಾಲಿ ಬಿಜೆಪಿ ಶಾಸಕರು (ಸಚಿವರು ಸೇರಿದಂತೆ ಒಟ್ಟು 15 ಮಂದಿ) ಪ್ರಾಬಲ್ಯವಿಲ್ಲದ ಹಿಂದುಳಿದ ಸಮುದಾಯಗಳಿಗೆ ಸೇರಿದವರು. ರಾಜ್ಯದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಅವರ ನಾಲ್ಕು ಸಹೋದ್ಯೋಗಿಗಳ ರಾಜೀನಾಮೆಗಳು ಹೆಚ್ಚಿನ ಗಮನ ಸೆಳೆದಿವೆ. ಆದರೆ ಹೆಚ್ಚಿನ ಹಿಂದುಳಿದ ವರ್ಗಗಳ ನಾಯಕರಲ್ಲಿ ಬಂಡಾಯ ಪ್ರವೃತ್ತಿ ಕೋವಿಡ್‌ ಎರಡನೇ ಅಲೆಯ ಸಮಯದಲ್ಲಿಯೇ ವ್ಯಕ್ತವಾಗಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಸಚಿವ ಸ್ಥಾನ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಬಿಜೆಪಿಯ ಸ್ವಾಮಿ ಪ್ರಸಾದ್ ಮೌರ್ಯ

ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿಭಾಯಿಸದಿರುವ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾದವು. ರಾಜ್ಯ ಸರ್ಕಾರದ ವಿರುದ್ಧದ ಹೆಚ್ಚಿನ ಭಿನ್ನಾಭಿಪ್ರಾಯವು ಯಾದವೇತರ ಒಬಿಸಿ ಸಮುದಾಯಗಳಿಗೆ ಸೇರಿದ ನಾಯಕರಿಂದ, ಸ್ವಲ್ಪ ಮಟ್ಟಿಗೆ ಬ್ರಾಹ್ಮಣ, ಜಾಟರು ಅಲ್ಲದ ದಲಿತರಿಂದ ಹೊರಹೊಮ್ಮಿದೆ. ಎಲ್ಲಾ ಜಾತಿ ಗುಂಪುಗಳು ಆದಿತ್ಯನಾಥ್ ವಿರುದ್ಧ ಅಸಮಾಧಾನ ಹೊಂದಿವೆ. ಬಿಜೆಪಿಯ ಇಬ್ಬರು ಶಾಸಕರಾದ ರಾಕೇಶ್ ರಾಥೋಡ್ (ತೇಲಿ ಸಮುದಾಯ) ಮತ್ತು ಮಾಧುರಿ ವರ್ಮಾ (ಕುರ್ಮಿ ​​ಸಮುದಾಯ) ಈಗಾಗಲೇ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಮೌರ್ಯ ಮತ್ತು ಅವರ ಅನುಯಾಯಿಗಳು ಬಿಜೆಪಿ ಪಾಳಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ತೊರೆದ ಶಾಸಕರು ಹಿಂದುಳಿದ ಸಮುದಾಯಗಳಲ್ಲಿನ ಬೇಸರವನ್ನು ಸ್ಪಷ್ಟವಾಗಿ ಹೇಳಲು ಯತ್ನಿಸಿದ್ದಾರೆ.

ಮೌರ್ಯ ಮತ್ತು ಅವರ ಅನುಯಾಯಿಗಳ ರಾಜೀನಾಮೆ ಪತ್ರಗಳು ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಸಂದೇಶವನ್ನು ನೀಡಲೆಂದೇ ಒಂದೇ ರೀತಿ ಇವೆ. “ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ದಲಿತ, ಹಿಂದುಳಿದ ಸಮುದಾಯಗಳು ಮತ್ತು ಅಲ್ಪಸಂಖ್ಯಾತರಿಗೆ ಸೇರಿದ ನಾಯಕರನ್ನು ನಿರ್ಲಕ್ಷಿಸಿದೆ. ದಲಿತರು, ಹಿಂದುಳಿದ ಸಮುದಾಯಗಳು, ನಿರುದ್ಯೋಗಿ ಯುವಕರು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಕಳವಳಗಳನ್ನು ನಿರ್ಲಕ್ಷಿಸಲಾಗಿದೆ” ಎಂದು ಅವರ ಪತ್ರಗಳಲ್ಲಿ ಹೇಳಲಾಗಿದೆ.

ಇದನ್ನೂ ಓದಿ:ಉತ್ತರ ಪ್ರದೇಶ: ಪೊಲೀಸರರು ಅತ್ಯಂತ ಪ್ರಾಮಾಣಿಕರು, ಹಣ ತೆಗೆದುಕೊಂಡರೆ ಕೆಲಸ ಮಾಡುತ್ತಾರೆ ಎಂದು ಲಂಚಕ್ಕೆ ಉತ್ತೇಜಿಸಿದ್ದ ಪೊಲೀಸ್ ಅಮಾನತು

ರಾಜಕೀಯ ತಜ್ಞರು ಹೇಳುವ ಪ್ರಕಾರ ಹಿಂದುಳಿದ ಸಮುದಾಯಗಳ ಬೇಸರಕ್ಕೆ ಎರಡು ಕಾರಣಗಳಿವೆ.

ಮೊದಲನೆಯದಾಗಿ, ಬಿಜೆಪಿಯು ಎಲ್ಲರನ್ನೂ ಒಳಗೊಳ್ಳುವ ವರ್ಚಸ್ಸಿಗೆ ತಕ್ಕಂತೆ ಉಳಿಯಲಿಲ್ಲ. “ಸಬ್ಕಾ ಸಾಥ್, ಸಬ್ಕಾ ವಿಶ್ವಾಸ್ [ಎಲ್ಲರಿಗಾಗಿ ಮತ್ತು ಅಭಿವೃದ್ಧಿ] ಎಂದ ಬಿಜೆಪಿಯು ಅದರಂತೆ ನಡೆದುಕೊಳ್ಳಲಿಲ್ಲ. ಬಿಜೆಪಿಯು ಕೇವಲ ಮೇಲ್ಜಾತಿ ಗುಂಪುಗಳ ನೇತೃತ್ವದ ಪಕ್ಷವಾಯಿತು. ಠಾಕೂರ್ ನಾಯಕ ಆದಿತ್ಯನಾಥ್ ಅವರು ಆಡಳಿತದ ಚುಕ್ಕಾಣಿ ಹಿಡಿಯುವ ಮೂಲಕ ಇದು ಮೇಲ್ಜಾತಿ ಪ್ರಣೀತ ಪಕ್ಷವೆಂಬ ಗ್ರಹಿಕೆಯನ್ನು ಹಿಂದುಳಿದ ಸಮುದಾಯಗಳಲ್ಲಿ ಬಿಜೆಪಿ ಮತ್ತೆ ಮೂಡಿಸಿತು. ಆದಿತ್ಯನಾಥ್ ಸ್ವತಃ ಠಾಕೂರ್ ನಾಯಕ ಎಂದು ಬಿಂಬಿಸಿಕೊಳ್ಳಲು ಹಿಂದೆ ಸರಿಯಲಿಲ್ಲ” ಎಂದು ಗೋರಖ್‌ಪುರ ಮೂಲದ ಹಿರಿಯ ಪತ್ರಕರ್ತ ಮನೋಜ್ ಸಿಂಗ್ ಹೇಳುತ್ತಾರೆ.

ಯಾದವರು ಮತ್ತು ಮುಸ್ಲಿಮರ ನೇತೃತ್ವದ ಪಕ್ಷವಾಗಿ ಎಸ್‌ಪಿ ಬೆಳೆದಿತ್ತು. ಬಹುಜನ ಸಮಾಜ ಪಕ್ಷವು ಜಾಠವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿತ್ತು. ಹೀಗಾಗಿ ಬಿಜೆಪಿಯು ಇತರ ಹಿಂದುಳಿದ ಸಮುದಾಯಗಳ ಆಕಾಂಕ್ಷೆಗಳನ್ನು ಈಡೇರಿಸಬಹುದೆಂದು ಈ ಸಮುದಾಯಗಳು ಮತ್ತು ಜಾಠವೇತರರು ನಿರೀಕ್ಷಿಸಿದ್ದರು. ಈ ಸಮುದಾಯಗಳ ನಡುವೆ ವ್ಯಾಪಕ ಪ್ರಚಾರ ಕಾರ್ಯಕ್ರಮವನ್ನು ಬಿಜೆಪಿ ನಡೆಸಿತು. ಆದರೆ ಬಿಜೆಪಿ ಸರ್ಕಾರವನ್ನು ರಚಿಸಿದ ನಂತರ, ಈ ಗುಂಪುಗಳನ್ನು ಪ್ರತಿನಿಧಿಸುವ ನಾಯಕರಿಗೆ ಸರಿಯಾದ ಸ್ಥಾನ ಮಾನ ನೀಡಲಿಲ್ಲ. ಪ್ರಮುಖವಲ್ಲದ ಖಾತೆಗಳು ಮತ್ತು ಸ್ಥಾನಗಳಿಗೆ ‌ಈ ಸಮುದಾಯಗಳ ನಾಯಕರನ್ನು ಕೂರಿಸಿತು.

ಎರಡನೆಯದಾಗಿ, ಸಂಘಪರಿವಾರದ ಹಿಂದುತ್ವದ ರಾಜಕೀಯ ಮಾರ್ಗವನ್ನು ಮುನ್ನೆಲೆಗೆ ತರುವ ಪ್ರಯತ್ನದಲ್ಲಿ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಎಲ್ಲಾ ಕಾಳಜಿಗಳನ್ನು ಕಟ್ಟರ್ ಹಿಂದುತ್ವದ ನಾಯಕ ಎಂದೇ ಬಿಂಬಿತವಾಗಿರುವ ಆದಿತ್ಯನಾಥ್‌ ಮರೆತರು. ಆದಿತ್ಯನಾಥ್ ಅವರ ಹಿಂದುತ್ವದ ಕಾರ್ಯಚಟುವಟಿಕೆ ಸಾಮಾಜಿಕ ನ್ಯಾಯದ ಕಾಳಜಿಯನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸುತ್ತದೆ ಎಂದು ಹಿಂದುಳಿದ ಸಮುದಾಯಗಳು ಗ್ರಹಿಸಿವೆ.

ಮೇಲ್ಜಾತಿ ಗುಂಪುಗಳು, ಯಾದವೇತರ ಒಬಿಸಿಗಳು ಮತ್ತು ಜಾಠವೇತರ ದಲಿತರಿಂದ ಕೂಡಿದ ಬಿಜೆಪಿಯ ಸಾಮಾಜಿಕ ತಳಹದಿಯು ಕುಸಿಯುತ್ತಿರುವುದು ಖಚಿತ.

ಇದನ್ನೂ ಓದಿ:ಚುನಾವಣಾ ದಿನಾಂಕ ಘೋಷಣೆ: ಉತ್ತರ ಪ್ರದೇಶದ ನಾಲ್ಕು ಪ್ರಮುಖ ಪಕ್ಷಗಳ ಫಸ್ಟ್ ರಿಯಾಕ್ಷನ್ ಏನು?

ಸಮಾಜವಾದಿ ಪಾರ್ಟಿ ಮುಂದಿವೆ ಸವಾಲು

ಆದರೆ ಸಮಾಜವಾದಿ ಪಕ್ಷದ ನಾಯಕರು ಗೆಲುವು ಸಾಧಿಸುವುದೂ ಸವಾಲಿನ ಸಂಗತಿಯೇ ಸರಿ. ಅತ್ಯಂತ ಹಿಂದುಳಿದ ಸಮುದಾಯಗಳ ನಾಯಕರು ಎಸ್‌ಪಿಗೆ ಸೇರುವ ಸಾಧ್ಯತೆಯಿದೆಯಾದರೂ, ಯಾದವೇತರ ಒಬಿಸಿಗಳು ಮತ್ತು ದಲಿತರಿಗೆ ತಮ್ಮ ಹಾವಭಾವಗಳು ಪ್ರಾಮಾಣಿಕವೆಂದು ಮನವರಿಕೆ ಮಾಡುವ ಪ್ರಯತ್ನವನ್ನು ಅಖಿಲೇಶ್ ದೊಡ್ಡ ಮಟ್ಟದಲ್ಲಿ ಮಾಡಬೇಕಿದೆ.

ದಿ ವೈರ್‌ ಜಾಲತಾಣ ಅತ್ಯಂತ ಹಿಂದುಳಿದ ಸಮುದಾಯಗಳ ಜನರನ್ನು ಮಾತನಾಡಿಸಿ ವಾಸ್ತವಾಂಶಗಳನ್ನು ವರದಿ ಮಾಡಿದೆ. “ನಮ್ಮ ಮತಕ್ಕಾಗಿ ಬಿಜೆಪಿಯವರು ನಮ್ಮನ್ನು ಬಳಸಿಕೊಂಡಿದ್ದಾರೆ ಎಂದು ಭಾವಿಸುತ್ತೇವೆ. ಆದರೆ ನಮಗೆ ಉತ್ತಮ ಪರ್ಯಾಯವೂ ಕಾಣುತ್ತಿಲ್ಲ” ಎಂದು ಕನೌಜ್‌ನ ತಿರ್ವಾ ವಿಧಾನಸಭಾ ಕ್ಷೇತ್ರದಲ್ಲಿನ ಲೋಧ್ ಸಮುದಾಯಕ್ಕೆ ಸೇರಿದ ಅರವಿಂದ್ ಕುಮಾರ್ ಹೇಳುತ್ತಾರೆ.

“ಕನಿಷ್ಠ ಈ ಆಡಳಿತದಲ್ಲಿ ಪೊಲೀಸರು ನಮ್ಮಿಂದ ಸುಲಿಗೆ ಮಾಡುವುದನ್ನು ನಿಲ್ಲಿಸಿದ್ದಾರೆ. ಎಸ್ಪಿ ಆಡಳಿತಾವಧಿಯಲ್ಲಿ ಪೊಲೀಸರು ಬಡವರಿಂದ ಹಣ ವಸೂಲಿ ಮಾಡುವ ಕುಖ್ಯಾತಿಗೆ ಹೆಸರಾಗಿದ್ದರು. ನೀವು ಯಾದವರಾಗಿದ್ದರೆ ಮಾತ್ರ ಪೊಲೀಸರು ನಿಮ್ಮಿಂದ ದೂರ ಉಳಿಯುತ್ತಿದ್ದರು. ಆ ಅಭ್ಯಾಸಗಳು ಈಗ ನಿಂತುಹೋಗಿವೆ” ಎನ್ನುತ್ತಾರೆ.

ಇದನ್ನೂ ಓದಿ:ಉತ್ತರ ಪ್ರದೇಶದ ಬಿಜೆಪಿ ಶಾಸಕನ ಕೆನ್ನೆಗೆ ಬಾರಿಸಿದ ರೈತ: ಕಾರಣವೇನು?

ಬಿಲ್ಹೌರ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಬ್ಬ ಕುರ್ಮಿ ಸಮುದಾಯದ ​​ವ್ಯಕ್ತಿ ಶಶಾಂಕ್ ವರ್ಮಾ ಹೀಗೆ ಹೇಳುತ್ತಾರೆ: “ಅಖಿಲೇಶ್ ಅವರು ಸಾಫ್ ಚಾವಿ ವಾಲಾ ನೇತಾ (ಕ್ಲೀನ್ ಇಮೇಜ್ ಹೊಂದಿರುವ ನಾಯಕ). ಆದರೆ ಪಕ್ಷದಲ್ಲಿ ಅವರಿಗಿಂತ ಕೆಳಗಿರುವವರು ನಿಜವಾದ ದಂಗೆಕೋರರು. ಎಸ್‌ಪಿ ನಾಯಕರು ಈಗ ಕೆಳಗಿಳಿದು ಮಾತನಾಡಿಸುತ್ತಾರೆ. ಆದರೆ ಅವರು ಅಧಿಕಾರಕ್ಕೆ ಬಂದ ಮರುಕ್ಷಣವೇ ಗೂಂಡಾಗಿರಿ ತೋರಿಸುತ್ತಾರೆ ಎಂಬುದು ನಮಗೆ ಗೊತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಳ್ಳೋ ಗಾಡಿಯಲ್ಲಿ ಆಹಾರವನ್ನು ಮಾರುತ್ತಾ ಜೀವನ ನಡೆಸುತ್ತಿರುವ ಲಖೀಂಪುರದ ತೇಲಿ ಜಾತಿಯ ಪ್ರಶಾಂತ್ ರಾಥೋಡ್ ಹೀಗೆ ಹೇಳುತ್ತಾರೆ: “ಕಳೆದ ಐದು ವರ್ಷಗಳಲ್ಲಿ ಆದಿತ್ಯನಾಥ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಅಖಿಲೇಶ್ ಸರ್ಕಾರ ಉತ್ತಮ ದಾಖಲೆ ಹೊಂದಿದೆ. ಆದರೆ ನನ್ನ ಮತ ಇನ್ನೂ ಬಿಜೆಪಿಗೆ. ಅಖಿಲೇಶ್‌ ಆಡಳಿತಕ್ಕೆ ಹೋಲಿಸಿದರೆ ಈಗ ಶಾಂತಿ ಇದೆ. ಈಗ ಯಾರೂ ಬಂದು ಉಚಿತವಾಗಿ ತಿನ್ನುವುದಿಲ್ಲ.”

ಅದೇನೇ ಇದ್ದರೂ, ಅಖಿಲೇಶ್ ಯಾದವ್‌‌ ಜಾತಿಗಳಾದ್ಯಂತ ಜನಪ್ರಿಯವಾಗಿದ್ದಾರೆ. ಅಖಿಲೇಶ್ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾಗಿವೆ ಎಂಬುದನ್ನು ಎಲ್ಲ ಜಾತಿಯ ಗುಂಪುಗಳು ಒಪ್ಪುತ್ತವೆ. ಆದರೆ ಅದು ಸಾಕಾಗದೇ ಇರಬಹುದು, ಏಕೆಂದರೆ ಯುಪಿ ಚುನಾವಣೆಯಲ್ಲಿ ಜಾತಿ ಧ್ರುವೀಕರಣಕ್ಕೆ ಐತಿಹಾಸಿಕ ಮಹತ್ವವಿದೆ. ಸಮಾಜವಾದಿ ಪಕ್ಷ ಗೆಲ್ಲಬೇಕಾದರೆ ಬಿಜೆಪಿಯ ಸಾಮಾಜಿಕ ತಳಹದಿಯನ್ನು ತೀವ್ರವಾಗಿ ಕೆಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜವಾದಿ ಪಾರ್ಟಿಯು ಪ್ರಬಲ ಒಬಿಸಿಗಳ ಕೈ ಮೇಲಾಗದಂತೆ ಎಚ್ಚರಿಕೆ ವಹಿಸಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು.

ಮೂಲ: ದಿ ವೈರ್ (ಅಜಯ್ ಆಶೀರ್ವಾದ್ ಮಹಾಪ್ರಶಾಸ್ತಾ)

ಇದನ್ನೂ ಓದಿರಿ: ದ್ವೇಷ ಭಾಷಣ ಕೇಸ್: ’ನೀವೆಲ್ಲರೂ ಸಾಯುತ್ತೀರಿ’ ಎಂದು ಪೊಲೀಸರಿಗೆ ಯತಿ ನರಸಿಂಗಾನಂದ ಬೆದರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...