ಪ್ರಧಾನಿ ನರೇಂದ್ರ ಮೋದಿಯವರ ತವರು ಕ್ಷೇತ್ರ ವಾರಣಾಸಿಯಲ್ಲಿ ದಲಿತ ಕಾರ್ಮಿಕರೊಬ್ಬರು ಮ್ಯಾನ್ ಹೋಲ್ ಸ್ವಚ್ಚಗೊಳಿಸುವಾಗ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಹಿಂದೆ ಪ್ರಧಾನಿ ಮೋದಿ ಸ್ವಚ್ಚತಾ ಕಾರ್ಮಿಕರ ಪಾದ ತೊಳೆದು ಸುದ್ದಿಯಾಗಿದ್ದ ಅದೇ ಜಾಗದಲ್ಲಿ ದುರ್ಘಟನೆ ನಡೆದಿದೆ ಎಂದು ದಿ ಮೂಕನಾಯಕ ವರದಿ ಮಾಡಿದೆ.
ಆಘಾತಕಾರಿ ಸಂಗತಿಯೆಂದರೆ, ಉತ್ತರ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 400 ನೈರ್ಮಲ್ಯ ಕಾರ್ಮಿಕರು ಮ್ಯಾನ್ಹೋಲ್, ಚರಂಡಿಗಳನ್ನು ಸ್ವಚ್ಚಗೊಳಿಸುವಾಗ ಪ್ರಾಣ ಕಳೆದುಕೊಂಡಿದ್ದಾರೆ. ಇದು ಉತ್ತರ ಪ್ರದೇಶದಲ್ಲಿ ಮುಂದುವರಿದಿರುವ ಭೀಕರ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಅಂತಹ ಸಾವು ನೋವುಗಳಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.
ವಾರಣಾಸಿಯ ಆದಂಪುರ ಪ್ರದೇಶದ ಭೈಸಾಪುರ ಘಾಟ್ನಲ್ಲಿ ಕಾರ್ಮಿಕ ಮೃತಪಟ್ಟಿದ್ದಾರೆ. ಇಬ್ಬರು ಕಾರ್ಮಿಕರು ಮ್ಯಾನ್ಹೋಲ್ಗೆ ಇಳಿದು ಸ್ವಚ್ಚಗೊಳಿಸುತ್ತಿದ್ದಾಗ ವಿಷಕಾರಿ ಅನಿಲದಿಂದ ಉಸಿರುಗಟ್ಟಿದೆ. ಇದರಿಂದ ಒಬ್ಬ ಕಾರ್ಮಿಕ ಮ್ಯಾನ್ಹೋಲ್ ಒಳಗಿನ ಕೊಳಚೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮತೋರ್ವನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
#Terrible In UP's Varanasi, two Dalit men died due to suffocation from poisonous gas while cleaning sewerage. This area is the parliamentary constituency of Prime Minister Narendra Modi#DalitLivesMatter pic.twitter.com/gCHyeji0gt
— The Dalit Voice (@ambedkariteIND) April 6, 2024
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಘಟನೆಯ ಹಿಂದಿನ ಕಾರಣ ತಿಳಿಯಲು ಮತ್ತು ಭವಿಷ್ಯದಲ್ಲಿ ಇಂತಹ ದುರಂತಗಳನ್ನು ನಡೆಯದಂತೆ ತಡೆಯಲು ತಕ್ಷಣದ ತನಿಖೆಗೆ ಆದೇಶಿಸಿದ್ದಾರೆ.
ಘಟನೆ ಕುರಿತು ಮೂಕನಾಯಕ ಜೊತೆ ಮಾತನಾಡಿರುವ ಸ್ವಚ್ಚತಾ ಕಾರ್ಮಿಕ ರಾಮ್ಬಾಬು, “ರಾಜ್ಘಾಟ್ನ ರವಿದಾಸ್ ದೇವಸ್ಥಾನದ ಮುಂಭಾಗದಲ್ಲಿ ಚರಂಡಿ ಬ್ಲಾಕ್ ಆಗಿದ್ದ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ಗಂಗಾ ಮಾಲಿನ್ಯ ಇಲಾಖೆ ಮಚ್ಚೋದಾರಿ ಪ್ರದೇಶದ ಘುರೆಲಾಲ್ (40 ವರ್ಷ) ಮತ್ತು ಸುನೀಲ್ ಅವರನ್ನು ಸ್ವಚ್ಛತಾ ಕಾರ್ಯಕ್ಕಾಗಿ ಭೈಸಾಸೂರ್ ಘಾಟ್ಗೆ ಕರೆಸಿತ್ತು. ಜೊತೆಯಾಗಿ ಬಂದ ಘುರೆಲಾಲ್ ಮತ್ತು ಸುನಿಲ್ ಮ್ಯಾನ್ಹೋಲ್ಗೆ ಇಳಿದಿದ್ದಾರೆ. ಅವರ ಮೂವರು ಸಹೋದ್ಯೋಗಿಗಳು ಮೇಲ್ಗಡೆ ಹಗ್ಗ ಹಿಡಿದು ನಿಂತಿದ್ದರು” ಎಂದು ತಿಳಿಸಿದ್ದಾರೆ.
“ಸ್ವಲ್ಪ ಸಮಯದ ಬಳಿಕ ಮ್ಯಾನ್ಹೋಲ್ನಿಂದ ಹೊರಬಂದ ಸುನೀಲ್, ಘುರೆಲಾಲ್ ಮೌನವಾಗಿದ್ದಾರೆ ಮ್ಯಾನ್ಹೋಲ್ ಒಳಗಡೆ ವಿಷಕಾರಿ ಗ್ಯಾಸ್ ಇದೆ ಎಂದು ತಿಳಿಸಿದ್ದಾರೆ. ತಕ್ಷಣ ಮೇಲ್ಗಡೆ ಇದ್ದ ಕಾರ್ಮಿಕರು ತಮ್ಮ ಮೇಲ್ವಿಚಾರಕ ಬಾಬು ಯಾದವ್ ಅವರಿಗೆ ಮಾಹಿತಿ ನೀಡಿದ್ದಾರೆ. ಅಪಾಯದ ಕುರಿತು ಅರಿತ ಬಾಬು ಯಾದವ್, ತನ್ನ ಕಾರ್ಮಿಕರಿಗೆ ಸಹಾಯ ಮಾಡುವುದರ ಬದಲಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಕಾರ್ಮಿಕರು ರಾಜ್ಘಾಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಎನ್ಆರ್ಎಫ್ ಸಿಬ್ಬಂದಿಯನ್ನು ಕರೆಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ ಎಂದು ರಾಮ್ ಬಾಬು ಮಾಹಿತಿ ನೀಡಿದ್ದಾರೆ.
ಎನ್ಡಿಆರ್ಎಫ್ ಸಿಬ್ಬಂದಿ ಘುರೆಲಾಲ್ ಅವರನ್ನು ಮೇಲೆತ್ತಿ ತಕ್ಷಣ ಶಿವಪ್ರಸಾದ್ ಗುಪ್ತಾ ವಿಭಾಗೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ವೈದ್ಯರು ಘುರೆಲಾಲ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸುಮಾರು 15 ವರ್ಷಗಳಿಂದ ಚರಂಡಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದ ಘುರೆಲಾಲ್ ಅವರು, ಗೋಲಾ ಘಾಟ್ನಲ್ಲಿರುವ ಒಳಚರಂಡಿ ಪಂಪಿಂಗ್ ಸ್ಟೇಷನ್ನಲ್ಲಿ ಗುತ್ತಿಗೆದಾರರೊಬ್ಬರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮಾಸಿಕ ವೇತನ 12 ಸಾವಿರ ರೂಪಾಯಿ ಆಗಿತ್ತು
ಮ್ಯಾನ್ಹೋಲ್ ಸ್ವಚ್ಚತೆ ಅಥವಾ ಅಸುರಕ್ಷಿತ ಚರಂಡಿ ಸ್ವಚ್ಛಗೊಳಿಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.
ನೈರ್ಮಲ್ಯ ಕಾರ್ಮಿಕರ ಜೀವ ರಕ್ಷಿಸುವ ಉದ್ದೇಶದೊಂದಿಗೆ ಅಪಾಯಕಾರಿ ಚರಂಡಿ ಸ್ವಚ್ಛಗೊಳಿಸುವ ಕೆಲಸಗಳ ಮೇಲೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಆಕ್ಟ್ 2013 ಮತ್ತು 20 ಅಕ್ಟೋಬರ್ 2023 ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಯಾವುದೇ ನೈರ್ಮಲ್ಯ ಕಾರ್ಮಿಕರು ಸರಿಯಾದ ಸುರಕ್ಷತಾ ಸಾಧನಗಳಿಲ್ಲದೆ ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ಗೆ ಇಳಿಯುವುದು ಶಿಕ್ಷಾರ್ಹ ಅಪರಾಧವಾಗಿದೆ.
ಇದನ್ನೂ ಓದಿ : ಕೇರಳ: ವಲಸೆ ಕಾರ್ಮಿಕನನ್ನು ಥಳಿಸಿ ಹತ್ಯೆ