Homeಮುಖಪುಟಮುದ್ದು ಮೇಲೆ ಕೇಸು ದಾಖಲಿಸಲು ಹೋಗಿ, ಕೊನೆಗೆ ಮದುವೆಗೆ ಸಾಕ್ಷಿ ಆದೆ - ಅಮೆರಿಕಾದಿಂದ ಜಿ.ಬಿ.ರಂಗಸ್ವಾಮಿ

ಮುದ್ದು ಮೇಲೆ ಕೇಸು ದಾಖಲಿಸಲು ಹೋಗಿ, ಕೊನೆಗೆ ಮದುವೆಗೆ ಸಾಕ್ಷಿ ಆದೆ – ಅಮೆರಿಕಾದಿಂದ ಜಿ.ಬಿ.ರಂಗಸ್ವಾಮಿ

ಇದೆಲ್ಲವನ್ನೂ ಮುದ್ದು ಆಗಾಗ್ಗೆ ನೆನಪಿಸಿ ನಗುತ್ತಿದ್ದರು. ಮುದ್ದು - ಇಂದ್ರಾಣಿಯವರು  ಆದರ್ಶ ದಂಪತಿಗಳಾಗಿ ಬಾಳ್ವೆ ಮಾಡಿದರು ಅಷ್ಟೇ ಅಲ್ಲ. ಅನೇಕ ಸರಳ, ಅಂತರ್ಜಾತಿಯ ಒಲವಿನ ಮದುವೆಗಳನ್ನು ಮಾಡಿಸಿ ಅದೆಷ್ಟೋ ಯುವಜೋಡಿಗಳಿಗೆ ಆಸರೆಯಾಗಿದ್ದರು. ಆದರ್ಶವಾಗಿದ್ದರು. 

- Advertisement -
- Advertisement -

|ಜೆ.ಬಿ.ರಂಗಸ್ವಾಮಿ| ಸಿಯಾಟಲ್ US

ಮೈಸೂರಿನವರಾದ ಮುದ್ದು ಕೃಷ್ಣ ಮತ್ತು ಇಂದ್ರಾಣಿ ದಂಪತಿಗಳು ಅಪರಿಮಿತ ಜೀವನೋತ್ಸಾಹ ಹೊಂದಿದ್ದವರು. ಮೈಸೂರಿನ ರಂಗಾಯಣದ ಮೂಲಕ ರಂಗಚಟುವಟಿಕೆಗಳಿಗೆ ರಂಗದ ಹಿಂದಿದ್ದುಕೊಂಡೇ ಕೆಲಸ ಮಾಡಿದ, ಎಂದೂ ವೇದಿಕೆಯನ್ನು ಬಯಸದ ಮುದ್ದು ಕೃಷ್ಣರವರು ಸಿನಿಮಾ ರಂಗಭೂಮಿಯ ಕುರಿತು ಅಪಾರ ಒಲವಿಟ್ಟುಕೊಂಡವರು. ಸಿನಿಮಾ ವಿಶ್ಲೇಷಣೆ, ಫೋಟೊಗ್ರಫಿ, ಪ್ರವಾಸ, ವೈವಿಧ್ಯ ಊಟ ಪರಿಚಯ ಸೇರಿದಂತೆ ಹಲವು ಹವ್ಯಾಸಗಳ ಮೂಲಕ ಗಮನ ಸೆಳೆದಿದ್ದರು. ಸಾಮಾಜಿಕ ಆಗುಹೋಗುಗಳಿಗೆ ಸಕ್ರಿಯವಾಗಿ ಸ್ಪಂದಿಸುತ್ತಿದ್ದ ಈ ಜೋಡಿ ಉತ್ತರ ಪ್ರದೇಶದ ಪ್ರವಾಸದಲ್ಲಿದ್ದಾಗ ಅಪಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತು ಅವರ ಒಡನಾಡಿಗಳು ಕಂಬನಿ ಮಿಡಿದಿದ್ದು ಅವರ ಸ್ನೇಹಿತರಾದ ಜೆ.ಬಿ ರಂಗಸ್ವಾಮಿಯವರು ಅವರ ಮದುವೆಯ ತಲ್ಲಣದ ಘಟನೆಗಳನ್ನು ಹಂಚಿಕೊಳ್ಳುವ ಮೂಲಕ ಮುದ್ದು ಕೃಷ್ಣರವರನ್ನು ಸ್ಮರಿಸಿದ್ದಾರೆ.

ಮುದ್ದೂ ಮದುವೆ 

ಅಮೇರಿಕಾದ ಸಿಯಾಟಲ್ ನ ಛಳಿಯಲ್ಲಿ ಕಳೆದ ತಿಂಗಳು BREAKING BAD ಎಂಬ 2008 ರ ಟಿವಿ ಸೀರಿಯಲ್ ಅನ್ನು ಬಿಡದೆ ನೋಡುತ್ತಿದ್ದಾಗ ಹಲವು ಹತ್ತು ಬಾರಿ ಮುದ್ದು ( ಕೃಷ್ಣ ) ನೆನಪಾಗಿದ್ದರು. ಆ ಮೆಗಾ ಸೀರಿಯಲ್ ಎಂಬತ್ತನಾಲ್ಕು (ಗಂಟೆ) ಎಪಿಸೋಡಿನದು.

ಹತ್ತು ದಿನ ಕುಳಿತು ಬಿಡದೆ ನೋಡಿದೆ. ನಮ್ಮ ಮುದ್ದುವೂ ಹಾಗೆಯೇ. ಚಲನಚಿತ್ರೋತ್ಸವಗಳಿಗೆ ಬಂದರೆಂದರೆ ದಿನಕ್ಕೆ ಆರು ಸಿನಿಮಾಗಳನ್ನು ಆಸ್ವಾದಿಸುವ ಅಭಿಮಾನಿ. ವೀಕ್ಷಿಸುವ ಪ್ರತಿ ಚಿತ್ರದ  ಬಗ್ಗೆಯೂ  ಮೊದಲೇ ಅಧ್ಯಯನ ಮಾಡಿಕೊಂಡು ನಂತರ ನೋಡುವ ಪ್ರವೃತ್ತಿ ಅವರದು. ನಾನು  ಚಿತ್ರೋತ್ಸವಗಳಿಗೆ  ಹೋದರೆ ಅವರನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಆಯಾ ದಿನ ನೋಡಬೇಕಾದ ಅತ್ಯುತ್ತಮ ಚಿತ್ರಗಳನ್ನು ಅವರಿಂದ ಗುರ್ತು ಹಾಕಿಸಿಕೊಳ್ಳುತ್ತಿದ್ದೆ. ಕೆಲವು ಮುಖ್ಯ ಚಿತ್ರಗಳನ್ನು ನೋಡುವಾಗ ಗಮನಿಸಬೇಕಿರುವ ಮಹತ್ವದ ಅಂಶಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದರು.

ಮೈಸೂರಿನಲ್ಲಿ ಸಿನಿಮಾ ಸಮಯ ಕೂಟದ ಮೂಲಕ ಅನೇಕ ಅಪರೂಪದ ಚಿತ್ರಗಳನ್ನು ಕಾಣಿಸಿದವರು ಅವರು. ಸಮುದಾಯದ ರಂಗ ಚಟುವಟಿಕೆ, ಪಕ್ಷಿವೀಕ್ಷಣೆ, ಅಂಚೆಸಂಗ್ರಹ ಹೀಗೆ ನಾನಾ ಚಟುವಟಿಕೆಗಳಲ್ಲಿದ್ದ ಅವರು ಪರಿಚಯವಾದದ್ದು ಓರ್ವ ಅಪರಾಧಿಯಾಗಿ !

ಅದು 1983.

ಹೌದು ಅವರ ಮೇಲೆ ಹುಡುಗಿಯೊಬ್ಬಳನ್ನು ಕಿಡ್ನ್ಯಾಪ್ ಮಾಡಿದ್ದಾರೆಂಬ ದೂರು ಬಂದಿತ್ತು. ಅವರು ಕೆಲಸದಲ್ಲಿದ್ದ  ಬ್ಯಾಂಕ್, ಮನೆ ಹೀಗೆ ಎಲ್ಲೆಡೆ ತಲಾಶ್ ಮಾಡುತ್ತಿದ್ದೆ.

ಅಷ್ಟರಲ್ಲಿ ಮಿತ್ರ ಆಂದೋಲನದ  ರಾಜಶೇಖರ ಕೋಟಿಯವರ ಫೋನ್ ಬಂತು. ಮುದ್ದುಕೃಷ್ಣನನ್ನು ಕಳಿಸಿಕೊಡುತ್ತೇನೆಂದು ಪ್ರಾಮಿಸ್ ಮಾಡಿದರು.

ಸಂಜೆ ವೇಳೆಗೆ ಲಿಂಗದೇವರು ಹಳೆಮನೆ ಮುಂತಾದ ನಾಲ್ಕಾರು ಗೆಳೆಯರೊಂದಿಗೆ ಆರೋಪಿ ಮುದ್ದುಕೃಷ್ಣ  ಹಾಜರಾದ . ನೋಡಿದರೆ ಪರಿಚಿತ ಆಸಾಮಿಯೇ!. ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡಿದ್ದ ಮನುಷ್ಯ.

ಆಗ ಚಳುವಳಿಕೋರ. ಈಗ ಕಿಡ್ನ್ಯಾಪಿಂಗ್ ಅಪರಾಧಿ!.

ಜೊತೆಗೆ ಬಂದಿದ್ದವರನ್ನು ಹೊರ ಕಳಿಸಿ ವಿಚಾರಿಸಿದೆ.

“ನಾನು ಯಾರನ್ನೂ ಕಿಡ್ನ್ಯಾಪ್ ಮಾಡಿಲ್ಲ. ಆ ಹುಡುಗಿ ಎಲ್ಲಿದ್ದಾಳೋ ಗೊತ್ತಿಲ್ಲ. ನನ್ನ ಮೇಲೆ ಸುಳ್ಳು ಕಂಪ್ಲೇಂಟ್ ಕೊಟ್ಟಿದ್ದಾರೆ.” ಮುದ್ದುಕೃಷ್ಣನ ಮುದ್ದು ಮಾತು !

“ಈ ಕ್ಷಣ ಆ ಹುಡುಗಿನ ಒಪ್ಪಿಸಲಿಲ್ಲಾ ಅಂದ್ರೆ ಲಾಕಪ್ಪಲ್ಲಿ ಹಾಕಿ ತೀಡುತ್ತೀನಿ ಮಗನೇ.  ಕೆಲಸದಿಂದ ಡಿಸ್ಮಿಸ್ ಮಾಡ್ಸಿ ಜೀವಾವಧಿ ಜೈಲಲ್ಲಿ ಕೂರಿಸುತ್ತೇನೆ” ಅಂತ ಮಾಮೂಲಿ ಗುಟುರು ಹಾಕಿದೆ.

ಹೊರಗಿದ್ದ ಅವರ ಜೊತೆಗಾರರು ಒಳಬಂದರು. ಹಳೆಮನೆಯವರು, ಮುದ್ದುವಿನ ಪ್ರೇಮ ಪ್ರವರ ಬಿಚ್ಚಿಟ್ಟರು.

“ಹುಡುಗಿ ಸೇಫಾಗಿ ಸ್ನೇಹಿತರ ಮನೆಯಲ್ಲಿದ್ದಾಳೆ. ತಿಂಗಳ ಹಿಂದೆಯೇ ರಿಜಿಸ್ಟರ್ ಮ್ಯಾರೇಜ್ ಗೆ ಅರ್ಜಿ ನೀಡಿದ್ದಾರೆ. ಇನ್ನು ನಾಲ್ಕೈದು ದಿನಕ್ಕೆ ಮದುವೆ”. ಅಂತ ದಾಖಲಾತಿಗಳನ್ನು ತೋರಿಸಿದರು.

“ನಿಮ್ಮ ಪುರಾಣ ಎಲ್ಲಾ ಪಕ್ಕಕ್ಕಿಡ್ರೀ. ಇನ್ನು ಅರ್ಧ ಗಂಟೆಯೊಳಗೆ ಆ ಹುಡುಗಿ ಇಲ್ಲಿರಬೇಕು. ಇಲ್ಲಾಂದ್ರೆ ನಾನು ಕೇಸು ರಿಜಿಸ್ಟರ್ ಮಾಡೋದೇ. ಆಮೇಲೆ ಯಾರೇನು ತಿಪ್ಪರಲಾಗ ಹೊಡೆದರೂ ಏನೂ ಮಾಡೋದಿಕ್ಕೆ ಆಗೋದಿಲ್ಲ. ಕಿಡ್ನ್ಯಾಪ್ ಮಾಡಿಲ್ಲ ಅಂತ ಆ ಹುಡುಗೀನೇ  ಇಲ್ಲಿ ಬಂದು ಹೇಳಬೇಕು.” ನಿಷ್ಠುರವಾಗಿ ಹೇಳಿದೆ.

“ಹುಡುಗಿಗೆ  ಇಪ್ಪತ್ತೈದು ವರ್ಷ, ಮೇಜರ್ ಆಗಿದ್ದಾಳೆ. ಅವಳ ಬರ್ತ್ ಸರ್ಟಿಫಿಕೇಟ್ ಇದೆ. ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ಅರ್ಜಿ ಕೊಟ್ಟಿದ್ದಾರೆ. ಯಾವುದೇ ವಿಷಯ ಮುಚ್ಚಿಟ್ಟಿಲ್ಲ. ಮದುವೆ ಬಗ್ಗೆ ತಕರಾರಿದ್ದರೆ ಅಲ್ಲಿ ಅರ್ಜಿ ಕೊಡಬೇಕಲ್ಲವೇ?. ಇದು ಸುಳ್ಳು ಕಂಪ್ಲೇಂಟ್ ಸಾರ್. . . .  ”

ಅವರ ವಾದವನ್ನು ತಡೆದು , “ನಿಮ್ಮ ಯಾವ ಮಾತೂ ಈಗ ಬೇಡಿ. ಹುಡುಗೀನೇ‌ ಬಂದು ಹೇಳಿಕೆ ಕೊಡಲಿ. ಆಮೇಲೆ ನೋಡೋಣ” ಎಂದೆ.

ಅಷ್ಟರಲ್ಲಿ ದೂರು ಕೊಟ್ಟಿದ್ದ ಹುಡುಗಿಯ  ಕಡೆಯವರು ನಜರ್ ಬಾದ್  ಸ್ಟೇಷನ್ ಮುಂದೆ ಜಮಾಯಿಸಿದ್ದರು. ಆಗಿನ ಶಾಸಕ ಅಜೀಜ್ ಸೇಠ್ ಮೊದಲ್ಗೊಂಡು ಅನೇಕರ ಫೋನ್ ಬಂದಿತ್ತು.

ಹುಡುಗಿ ಕಡೆಯ ಕೆಲವರು ಮುದ್ದುಕೃಷ್ಣನ ಮೇಲೆ ಉಗ್ರ ಕ್ರಮ ಜರುಗಿಸಬೇಕೆಂದು ವರಾತ ಶುರು ಮಾಡಿದ್ದರು.

ರಾತ್ರಿ ಎಂಟು ಗಂಟೆಯ ವೇಳೆಗೆ ಹುಡುಗಿಯನ್ನು ಕರೆತಂದರು. ಅವಳ ಕಡೆಯವರೆಲ್ಲಾ ಠಾಣೆಯ ತುಂಬಾ ತುಂಬಿಕೊಂಡರು.

ಓಪನ್ ಎನ್ ಕ್ವಯರಿ ಮಾಡಲಾದೀತೇ?. ಎಲ್ಲರನ್ನೂ ಹೊರಕಳಿಸಿ ಕಂಪ್ಲೇಂಟ್ ಕೊಟ್ಟವರ ಕಡೆಯ ನಾಲ್ಕಾರು ಜನ ಹಿರಿಯರು ಮತ್ತು ಹುಡುಗನ ಪರ ಒಂದಿಬ್ಬರನ್ನು ಇರಿಸಿಕೊಂಡೆ. ವಿಚಾರಣೆ ಶುರುವಾಯಿತು.

ತಮ್ಮಿಬ್ಬರ ಸ್ನೇಹ ಪ್ರೇಮ ತಿಳಿಸಿದ ಹುಡುಗಿ ತಾನಾಗಿ ಸ್ವತಃ ಮನೆಯಿಂದ ಹೋಗಿದ್ದೇನೆ. ಯಾರೂ ಬಲವಂತವಾಗಿ ಕರೆದೊಯ್ದಿಲ್ಲ. ತಾನೇ  ತನ್ನ ಆಪ್ತರ ಮನೆಯಲ್ಲಿ ಉಳಿದುಕೊಂಡಿದ್ದೇನೆ.‌ ಮದುವೆಯಾಗುವ ತನಕ ಅಲ್ಲಿಯೇ ಇರುತ್ತೇನೆಂದು ಹೇಳಿಕೆ ಕೊಟ್ಟಳು.

“ಅವಳಿಗೆ ಏನೂ ಗೊತ್ತಾಗೋದಿಲ್ಲ. ಅವನು ಹುಟ್ಟು ಪೋಲಿ. ಮಂಕುಬೂದಿ ಎರಚಿ ಕರೆದುಕೊಂಡು ಹೋಗಿದ್ದಾನೆ. ಅವಳು ಮೈನರ್ ಬೇರೆ. ನಮ್ಮ ವಶದಿಂದ ಕಿಡ್ನ್ಯಾಪ್ ಆಗಿದ್ದಾಳೆ. ನಮ್ಮ ಜೊತೆಗೆ ಕಳಿಸಿಕೊಡಿ”. ಹುಡುಗಿ ಕಡೆಯವರು ಪಟ್ಟು ಹಿಡಿದರು. ಏನು ಸಮಾಧಾನ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವರಿರಲಿಲ್ಲ.

“ಹುಡುಗ ಒಳ್ಳೆಯ ಕೆಲಸದಲ್ಲಿದ್ದಾನೆ. ಕಪ್ಪಗಿದ್ರೂ ಲಕ್ಷಣವಾಗಿದ್ದಾನೆ. ಚೆನ್ನಾಗಿ ನೋಡಿಕೊಳ್ತಾನೆ ಬಿಡ್ರೀ. ಅವರಿಬ್ಬರೂ ಪ್ರೀತಿಸಿ  ಮದುವೆಯಾಗ್ತಿದ್ದಾರೆ. ನೀವೇ ಮುಂದೆ ನಿಂತು ಆಶೀರ್ವಾದ ಮಾಡಿ ಒಳ್ಳೆಯದಾಗುತ್ತೆ.” ಇತ್ಯಾದಿ ಹೇಳಿದೆ.

ಕಿಡ್ನ್ಯಾಪ್ ಮಾಡಿದೋನನ್ನು ಒದ್ದು ಲಾಕಪ್ಪಿನಲ್ಲಿ ಹಾಕ್ತೀನಿ ಅಂತ ಭರವಸೆ ಕೊಟ್ಟಿದ್ದ ಸಬ್ ಇನ್ಸ್ ಪೆಕ್ಟರ್ ‌ಈಗ ಪ್ಲೇಟ್ ತಿರುಗಿಸಿ , ಅಪರಾಧಿಗೇ ಸಪೋರ್ಟ್ ಮಾಡ್ತಿದ್ದಾನೆ !. ಹುಡುಗಿ ಕಡೆಯವರು ಕನಲಿ ಹೋದರು.

“ಯಾವ ಸೀಮೆ  ಪ್ರೀತಿ ಮಾಡಿದ್ದಾರೆ ಸಾರ್. ಮೂರು ದಿನವೂ ಬಾಳ್ಮೆ ಮಾಡದೆ ಮೂರಾಬಟ್ಟೆಯಾಗಿರೋರನ್ನು ದಿನವೂ ನೋಡ್ತಿದ್ದೇವೆ. ಇವರು ಬರಕತ್ತಾಗೋದಿಲ್ಲ. ಇಬ್ಬರನ್ನೂ ಬೇರೆ ಮಾಡಿಸಿಕೊಡಿ.”

“ನೋಡ್ರೀ, ಇಬ್ಬರೂ ಪ್ರೀತಿಸಿದ್ದು, ಹುಡುಗ ಮದುವೆಯಾಗೋದಿಲ್ಲ ಅಂತ ಠಲಾಯಿಸುತ್ತಿದ್ದಾನೆ ಅಂದರೆ ಆಗ ಬೇರೆಯಾಗಿ ಅಂತ ಬುದ್ದಿ  ಹೇಳಬಹುದು. ಆದರೆ ಇಲ್ಲಿ ಕಾನೂನು ಪ್ರಕಾರ ಮದುವೆಯಾಗೋದಿಕ್ಕೆ ಅರ್ಜಿ ಕೊಟ್ಟಿದ್ದಾರೆ. ಈಗ ಏನೂ ಮಾಡೋದಿಕ್ಕೆ ಬರೋದಿಲ್ಲ. ”

ಕಂಪ್ಲೇಂಟ್ ಕೊಟ್ಟರೆ ನೀವೇ ಅವರಿಗೆ ಸಪೋರ್ಟ್ ಮಾಡ್ತಿದ್ದೀರಲ್ಲಾ ಸಾರ್ ? ಅವಳನ್ನ ನಮ್ಜೊತೆ ಯಾಕೆ ಕಳಿಸಿಕೊಡೋದಿಲ್ಲ ?” ಅಂತ ಕಾರ್ಪೊರೇಟರ್ ಸಮೇತ ಮುಗಿಬಿದ್ದರು.

“ಇಪ್ಪತ್ತೈದು ಆಗೋತನಕ ಮದುವೆ ಮಾಡಿಲ್ಲ ಅಂದರೆ ನಿಮಗೆ ಮದುವೆ ಮಾಡೋದಿಕ್ಕೆ ಯೋಗ್ತಿ ಇಲ್ಲ ಅಂತ. (ಆಗೆಲ್ಲ 20-22 ವರ್ಷದೊಳಗೆ ಹುಡುಗಿಯರ ಮದುವೆ ಮಾಡುತ್ತಿದ್ದರು. ) ಟೈಮ್ ಬಾರಾಗಿದೆ (bar). ಹುಡುಗಿ ವಿದ್ಯಾವಂತೆ ತನಗೆ ಬೇಕಾದ ಹುಡುಗನನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ತಾನಾಗಿ ಸ್ವಯಿಚ್ಚೆಯಿಂದ ಮನೆಯಿಂದ ಹೋಗಿದ್ದಾಳೆ. ನಾವೇನೂ ಮಾಡೋದಿಕ್ಕೆ ಆಗೋದಿಲ್ಲ. ಕಾನೂನೇ ಅವರ ಪರ ಇದೆ.

“ಇಲ್ಲೀ ತನಕ ನೀವೂ ಹಠ ಮಾಡಿದಿರಿ, ಸರಿ. ಈಗ ಕೈ ಮೀರಿಹೋಗಿದೆ. ನಿಮ್ಮ ಹುಡುಗಿ ಸರಿಯಾಗಿ ಬಾಳಲಿ ಅಂತಿದ್ರೆ ಆಶೀರ್ವಾದ ಮಾಡಿ. ಇಲ್ಲಾಂದ್ರೆ ಸುಮ್ಮನೆ ಇದ್ದುಬಿಡಿ. ನೀವೀಗ ಕೋರ್ಟಿಗೆ ಹೋದ್ರೂ ಉಪಯೋಗ ಆಗೊಲ್ಲ. ” ಅಂತ ತೀರ್ಮಾನ ಹೇಳಿದೆ.

ಅಲ್ಲಿಗೆ ಎಲ್ಲರೂ ಮೌನವಾದರು.

ಇನ್ನು ಹುಡುಗಿಯನ್ನೀಗ ಯಾರ ಸುಫರ್ದಿನಲ್ಲಿ ಕಳಿಸಿಕೊಡಬೇಕು?. ಸಮಸ್ಯೆ ಎದುರಾಯಿತು.

ಹುಡುಗನ ಜೊತೆಗಂತೂ ಕಳಿಸುವಂತಿರಲಿಲ್ಲ. ಇಬ್ಬರು ಹಿರಿಯ ಗೃಹಸ್ಥರನ್ನು ಕರೆಸಿ ಅವರ ಸುಫರ್ದಿನಲ್ಲಿ ಮದುವೆ ತನಕ ಹುಡುಗಿ ಇರತಕ್ಕದ್ದೆಂದು ಮುಚ್ಚಳಿಕೆ ಬರೆಸಿಕೊಂಡೆವು. ಹುಡುಗಿ ಯಾರ ಮನೆಯಲ್ಲಿ ಉಳಿದುಕೊಳ್ಳುತ್ತಾಳೆಂದು ಯಾರಿಗೂ ಗೊತ್ತಾಗಲಿಲ್ಲ.

ಇವೆಲ್ಲವೂ ನಡೆಯುವ ವೇಳೆಗೆ ಹುಡುಗಿ ಕಡೆಯವರು, ಮರ್ಡರ್ ಮಾಡ್ತೀವಿ ಎಂದೆಲ್ಲಾ ಕೂಗಾಡಿದ್ದರಿಂದ, ಅವರ ಬಳಿಯೂ ಮುಚ್ಚಳಿಕೆ ಬರೆಸಿಕೊಂಡೆವು.
“ನೀವು ಮರ್ಡರ್ ಮಾಡೋದಿರಲಿ. ಹುಡುಗ ಹುಡ್ಗಿ ತಾವೇ ಏನಾದ್ರೂ ಮಾಡಿಕೊಂಡ್ರೂ ನೀವೇ ಅದಕ್ಕೆ  ಜವಾಬ್ದಾರಿ. ಹುಷಾರ್ !” ಎಂದು ಹೆದರಿಸಿ ಕಳಿಸಿದೆವು.

ಇಷ್ಟಾಗುವ ವೇಳೆಗೆ ರಾತ್ರಿ ಎರಡು ಗಂಟೆಯಾಗಿತ್ತು. ಹುಡುಗನಿಗೂ ಬೇರೆ ಅಜ್ಞಾತ ಸ್ಥಳದಲ್ಲಿ ಇರುವಂತೆ ವ್ಯವಸ್ಥೆಯಾಯಿತು.

ಪೊಲೀಸ್ ಬಂದೋಬಸ್ತ್ ನಲ್ಲಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಮದುವೆ ನಡೆಯಿತು. ಬಹುಶಃ ನಾನೂ ಸಾಕ್ಷಿ ಸಹಿ ಹಾಕಿದೆನೆಂಬ ನೆನಪು.

“ನೋಡ್ರೀ ಮುದ್ದೂ. ಎಲ್ಲರೂ ನಿಮಗಾಗಿ ರಿಸ್ಕ್ ತಗೊಂಡು ಮದುವೆ ಮಾಡಿಸಿದ್ದಾರೆ. ಲವ್ ಮ್ಯಾರೇಜ್ ಅಂದರೆ ಯಾರಿಗೂ ನಂಬಿಕೆ ಇಲ್ಲ.  ಹುಡುಗೀನ ನೀವು ಸರಿಯಾಗಿ ಬಾಳಿಸಬೇಕು. ಇಲ್ಲಾಂದ್ರೆ ಗ್ರಾಚಾರ ಬಿಡಿಸ್ತೀವಿ” ಅಂದೆ. ಇದು ಅವರ ಮದುವೆಗೆ ಕೊಟ್ಟ ರೋಫ್ ದಾರಿಕೆ ಉಡುಗೊರೆ !.

ಇದೆಲ್ಲವನ್ನೂ ಮುದ್ದು ಆಗಾಗ್ಗೆ ನೆನಪಿಸಿ ನಗುತ್ತಿದ್ದರು. ಮುದ್ದು – ಇಂದ್ರಾಣಿಯವರು  ಆದರ್ಶ ದಂಪತಿಗಳಾಗಿ ಬಾಳ್ವೆ ಮಾಡಿದರು ಅಷ್ಟೇ ಅಲ್ಲ. ಅನೇಕ ಸರಳ, ಅಂತರ್ಜಾತಿಯ ಒಲವಿನ ಮದುವೆಗಳನ್ನು ಮಾಡಿಸಿ ಅದೆಷ್ಟೋ ಯುವಜೋಡಿಗಳಿಗೆ ಆಸರೆಯಾಗಿದ್ದರು. ಆದರ್ಶವಾಗಿದ್ದರು.

ಅವರಿಗೆ ಇಂತಹ ವಿದ್ರಾವಕ ಕೊನೆ ಬರಬಾರದಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...

ಎಸ್ಐಆರ್ ಬಳಿಕ ಮಣಿಪುರ, ಸಿಕ್ಕಿಂ, ಮಿಜೋರಾಂನಲ್ಲಿ 2.24 ಲಕ್ಷ ಮತದಾರರ ಹೆಸರು ಕಡಿತ: ಸಿಕ್ಕಿಂನಲ್ಲಿ ಶೇ.11.15ರಷ್ಟು ಇಳಿಕೆ 

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಈಶಾನ್ಯ ಭಾರತದ ಮಣಿಪುರ, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಈ ಮೂರು ರಾಜ್ಯಗಳಲ್ಲಿ...

ಜೆಎನ್‌ಯು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ : 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ದೂರು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು...

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...