ಭಾರತದಲ್ಲಿ 5 ಜಿ ವೈರ್ಲೆಸ್ ನೆಟ್ವರ್ಕ್ ತಂತ್ರಜ್ಞಾನದ ಅನುಷ್ಠಾನದ ವಿರುದ್ಧ ನಟಿ ಜೂಹಿ ಚಾವ್ಲಾ ಸೋಮವಾರ ದೆಹಲಿ ಹೈಕೋರ್ಟ್ಗೆ ಮೊರೆ ಹೋಗಿದ್ದು, ನಾಗರಿಕರು, ಸಸ್ಯ ಮತ್ತು ಪ್ರಾಣಿಗಳ ಮೇಲೆ ವಿಕಿರಣ ಬೀರುವ ಪರಿಣಾಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿದ್ದಾರೆ. ಪ್ರಕರಣದ ವಿಚಾರಣೆ ಜೂನ್ 2 ರಂದು ನಡೆಯಲಿದೆ.
5 ಜಿ ತಂತ್ರಜ್ಞಾನ ಜಾರಿಗೆ ಬಂದರೆ ಭೂಮಿಯ ಮೇಲಿನ ಎಲ್ಲಾ ಜೀವಿಗಳು ವಿಕಿರಣಕ್ಕೆ ಒಳಗಾಗುತ್ತವೆ. ಅದು ಪ್ರಸ್ತುತ ಮಟ್ಟಕ್ಕಿಂತ 100 ಪಟ್ಟು ಹೆಚ್ಚಾಗುತ್ತದೆ. ಇದರಿಂದ ಮಾನವರ ಮೇಲೆ ಗಂಭೀರ ಮತ್ತು ಬದಲಾಯಿಸಲಾಗದ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ನ್ಯಾಯಮೂರ್ತಿ ಸಿ.ಹರಿ ಶಂಕರ್ ಪ್ರಕರಣದ ವಿಚಾರಣೆಯನ್ನು ಜೂನ್ 2ಕ್ಕೆ ನಿಗದಿಗೊಳಿಸಿ, ವಿಚಾರಣೆಗೆ ಮತ್ತೊಂದು ನ್ಯಾಯಪೀಠಕ್ಕೆ ವರ್ಗಾಯಿಸಿದ್ದಾರೆ.
ಇದನ್ನೂ ಓದಿ: “ನನ್ನನ್ನು ಈ ರೀತಿ ಅವಮಾನಿಸಬೇಡಿ”: ಪಿಎಂ ಜೊತೆಗಿನ ಭೇಟಿ ನಂತರ ಮಮತಾ ಅಸಮಾಧಾನ
ತಾಂತ್ರಿಕ ಪ್ರಗತಿಯ ಅನುಷ್ಠಾನಕ್ಕೆ ತಾನು ವಿರೋಧಿಯಲ್ಲದಿದ್ದರೂ, “ವಿಕಿರಣವು ಅತ್ಯಂತ ಅಪಾಯಕಾರಿ ಮತ್ತು ಜನರ ಆರೋಗ್ಯ ಮತ್ತು ಸುರಕ್ಷತೆಗೆ ಹಾನಿಕಾರಕವಾಗಿದೆ ಎಂಬುದಕ್ಕೆ ಸಾಕಷ್ಟು ಕಾರಣಗಳಿವೆ” ಎಂದು ನಟಿ ಜೂಹಿ ಚಾವ್ಲಾ ಹೇಳಿದ್ದಾರೆ.
ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಇದು ಕಾರಣವಾಗುತ್ತದೆ. ಸಸ್ಯ ಮತ್ತು ಪ್ರಾಣಿಗಳಲ್ಲಿನ ಡಿಎನ್ಎ, ಜೀವಕೋಶಗಳು ಮತ್ತು ಅಂಗ ವ್ಯವಸ್ಥೆಗಳಿಗೆ ಹಾನಿಯಾಗಿದೆ ಎಂಬ ಬಗ್ಗೆ ಕ್ಲಿನಿಕಲ್ ಮತ್ತು ಪ್ರಾಯೋಗಿಕ ಪುರಾವೆಗಳನ್ನು ವಕೀಲ ದೀಪಕ್ ಖೋಸ್ಲಾ ಅವರ ಮೂಲಕ ಅರ್ಜಿಯಲ್ಲಿ ಜೂಹಿ ಚಾವ್ಲಾ ಸಲ್ಲಿಸಿದ್ದಾರೆ.
ಭಾರತದಲ್ಲಿ 5 ಜಿ ಪ್ರಯೋಗಗಳನ್ನು ನಡೆಸಲು ದೂರಸಂಪರ್ಕ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರತಿ ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಎಂಟಿಎನ್ಎಲ್ ಅರ್ಜಿಗಳನ್ನು ಈ ತಿಂಗಳ ಆರಂಭದಲ್ಲಿ ಟೆಲಿಕಾಂ ಇಲಾಖೆ (ಡಿಒಟಿ) ಅನುಮೋದಿಸಿತು. ಸರ್ಕಾರದ ಆದೇಶದಂತೆ ಚೀನಾದ ತಂತ್ರಜ್ಞಾನ ಅಥವಾ ಘಟಕಗಳಿಲ್ಲದೆ ಪ್ರಯೋಗಗಳನ್ನು ನಡೆಸಲು ಕಂಪನಿಗಳಿಗೆ ಸೂಚಿಸಲಾಗಿದೆ.
ದೆಹಲಿ, ಮುಂಬೈ, ಕೋಲ್ಕತಾ, ಬೆಂಗಳೂರು, ಗುಜರಾತ್ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪ್ರಯೋಗಗಳನ್ನು ನಡೆಸಲಾಗುವುದು. ಟೆಲಿಕಾಂ ಇಲಾಖೆ ಪ್ರಕಾರ, 5 ಜಿ ತಂತ್ರಜ್ಞಾನವು 4 ಜಿ ಗಿಂತ 10 ಪಟ್ಟು ಉತ್ತಮ ಡೌನ್ಲೋಡ್ ವೇಗವನ್ನು ಮತ್ತು ಮೂರು ಪಟ್ಟು ಹೆಚ್ಚಿನ ಸ್ಪೆಕ್ಟ್ರಮ್ ದಕ್ಷತೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಏಕಾಏಕಿ ಎತ್ತಂಗಡಿ: ಬೆಂಗಳೂರಿನಲ್ಲಿ ನೆಲೆಯಿಲ್ಲದೆ ಅಲೆಯುತ್ತಿರುವ 15 ಬಡ ಕುಟುಂಬಗಳು