“ಎಐಎಡಿಎಂಕೆ ನೇತೃತ್ವದ ಮೈತ್ರಿಯಿಂದ ನಟ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷವು ಹೊರನಡೆದಿರುವುದು ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ” ಎಂದು ತಮಿಳುನಾಡು ಬಿಜೆಪಿ ಹೇಳಿದೆ.
ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ತಮಿಳುನಾಡು ಅಧ್ಯಕ್ಷ ಎಲ್ ಮುರುಗನ್, “ನಾವು ನಮ್ಮ ಹಿತಾಸಕ್ತಿಗಳನ್ನು ಸಿಇಸಿಗೆ ತಿಳಿಸಿದ್ದೇವೆ. ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು” ಎಂದು ಶನಿವಾರ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯೊಂದಿಗಿನ (ಸಿಇಸಿ) ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ: ಕುಂಭಮೇಳಕ್ಕೆ ಬರುವ ಭಕ್ತಾದಿಗಳಿಗೆ ಕೊರೊನಾ ನೆಗೆಟಿವ್ ವರದಿ ಅಗತ್ಯವಿಲ್ಲ: ಉತ್ತರಾಖಂಡ್ ಸಿಎಂ
“ಎಐಎಡಿಎಂಕೆ ಪಕ್ಷವು ಮೈತ್ರಿಕೂಟದ ನೇತೃತ್ವ ವಹಿಸಿದೆ. ನಾವು ಮೈತ್ರಿಕೂಟದಲ್ಲಿ ಸಣ್ಣ ಪಾಲುದಾರರಾಗಿದ್ದೇವೆ. ಮೈತ್ರಿಕೂಟಕ್ಕೆ ವಿದಾಯ ಹೇಳುವ ಪಕ್ಷಗಳು ಎಐಎಡಿಎಂಕೆ ಜೊತೆ ಚರ್ಚೆ ನಡೆಸಿದ್ದವು. ಆ ಚರ್ಚೆಗಳ ಬಗ್ಗೆ ನಮಗೆ ತಿಳಿದಿಲ್ಲ. ಎಐಎಡಿಎಂಕೆ ತೆಗೆದುಕೊಂಡ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಮೈತ್ರಿಕೂಟದ ಪಾಲುದಾರರು ಮೈತ್ರಿಯಿಂದ ನಿರ್ಗಮಿಸುವುದರಿಂದಾಗಿ ನಮ್ಮ ಗೆಲುವಿನ ಅವಕಾಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾವು ಗೆದ್ದು ಸರ್ಕಾರ ರಚಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯ ಮತ್ತು ಮಹಿಳೆಯರ ಸಮರ್ಪಕ ಪ್ರಾತಿನಿಧ್ಯ ಇರುತ್ತದೆ ಎಂದರು.
234 ಸದಸ್ಯರ ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಆಂಧ್ರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆ: ಜಗನ್ ಪಕ್ಷಕ್ಕೆ ಭಾರೀ ಮುನ್ನಡೆ