’ಕೊನೆಗೂ ರೈತರ ವಂಶವನ್ನೇ ಯಡಿಯೂರಪ್ಪ ಸರ್ಕಾರ ನಿರ್ವಂಶ ಮಾಡಿದೆ. ಅವರು ರೈತ ಪರ ಎಂದಿದ್ದು ಕೋಟುಬೂಟು ಹಾಕಿರುವ ರೈತರ ಪರ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಅವರು ಐಕ್ಯ ಹೋರಾಟ ಸಮಿತಿ ವೇದಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೌರ್ಯ ಸರ್ಕಲ್ನಲ್ಲಿ ಐಕ್ಯ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಪ್ರತಿಬಟನೆಯಲ್ಲಿ ಅವರು ಮಾತನಾಡಿದರು. ’ಕಿಕ್ ಬ್ಯಾಕ್ ಕೊಟ್ಟಿರುವರು ಇವರನ್ನು ನಿದ್ದೆ ಮಾಡಲು ಬಿಡದೇ ಇದ್ದಿದ್ದಕ್ಕೆ ತುರಾತುರಿತಲ್ಲಿ ಯಡಿಯೂರಪ್ಪ ಮಸೂದೆ ಪಾಸ್ ಮಾಡಿದ್ದಾರೆ’ ಎಂದಿದ್ದಾರೆ.
ಸದನದಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಬೆಂಬಲ ಸೂಚಿಸಿರುವ ಜೆಡಿಎಸ್ ಕ್ರಮವನ್ನು ಟೀಕಿಸಿರುವ ನಾಗೇಂದ್ರ ಅವರು, ’ಜೆಡಿಎಸ್ನವರು ಮಾತಿಗೆ ತಪ್ಪುವುದರಲ್ಲಿ ನಂಬರ್ ಒನ್. ನಮ್ಮೊಂದಿಗೆ ನಿನ್ನೆ ಬಂದು ರೈತರಿಗೆ ಬೆಂಬಲ ಸೂಚಿಸಿ, ಸದನಕ್ಕೆ ಹೋಗಿ ಮಸೂದೆಗೆ ಮತ ಹಾಕಿದ್ದಾರೆ. ಇದರ ಹಿಂದೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರ ಬ್ರಹ್ಮಾಂಡ ಭ್ರಷ್ಟಾಚಾರ ಇದೆ’ ಎಂದು ಕಿಡಿಕಾರಿದ್ದಾರೆ.
“ಆದರೆ, ನಿನ್ನೆ ಸದನದಲ್ಲಿ ಪಾಸಾದ ಮಸೂದೆ ಸುಧಾರಣೆ ಅಲ್ಲ. ಚುನಾವಣೆ ಬಂದಾಗ ಜನರ ಬಳಿ ಮತ ಕೇಳಲು ಹೋಗುವ ಯಡಿಯೂರಪ್ಪ, ಕುಮಾರಸ್ವಾಮಿ, ರೇವಣ್ಣ, ದೇವೇಗೌಡ ಅವರಿಗೆ ರೈತರು ಅನ್ನ ತಿಂತೀಯ ಮಣ್ಣು ತಿಂತೀಯ ಎಂದು ಕೇಳುತ್ತಾರೆ’ ಎಂದಿದ್ದಾರೆ.
ಇದನ್ನು ಓದಿ: ಭಾರತ್ ಬಂದ್ | ಕರ್ನಾಟಕದಲ್ಲಿ ಯಶಸ್ವಿ; ಜಿಲ್ಲಾವಾರು ಹೋರಾಟದ ಚಿತ್ರಗಳು!
ಕಬ್ಬು ಬೆಳೆಗಾರರ ಸಂಘದ ಮುಖಂಡ, ಕುರುಬೂರು ಶಾಂತಕುಮಾರ್ ಮಾತನಾಡಿ, “ಕೇಂದ್ರ ಹಾಗೂ ರಾಜ್ಯದಲ್ಲಿ ಇರುವುದು ಒಂದೇ ಸರ್ಕಾರ. ರೈತರಿಗೆ ಕಿಸಾನ್ ಸಮ್ಮಾನ್ ಎಂಬ ಯೋಜನೆಯ ಎರಡು ಸಾವಿರ ರೂಪಾಯಿ ಭಿಕ್ಷೆಯ ಹಣ ಕೊಟ್ಟಿದ್ದಾರೆ. ಆದರೆ, ಬಂಡವಾಳಶಾಹಿಗಳಿಗೆ ಕೋಟಿ ಕೋಟಿ ಹಣವನ್ನು ನೀಡಿದ್ದಾರೆ’ ಎಂದು ಟೀಕಿಸಿದ್ದಾರೆ.
“ರೈತವಿರೋಧಿ ಮಸೂದೆಗೆ ಜನತಾದಳ ಕೂಡಾ ಕೈ ಜೋಡಿಸಿದ್ದು, ಅವರ ರೈತ ವಿರೋಧಿ ನೀತಿಯನ್ನು ತೋರಿಸುತ್ತದೆ. ಕರ್ನಾಟಕದಲ್ಲಿ ಇರುವಂತಹ ಭೂಹೀನ ರೈತರಿಗೆ ಈ ಕಾಯ್ದೆಯಿಂದ ಒಂದಿಂಚೂ ಭೂಮಿ ಸಿಗುವುದಿಲ್ಲ, ಲ್ಯಾಂಡ್ ಮಾಫಿಯಾವನ್ನು ಮೆಚ್ಚಿಸಲು ಯಡಿಯೂರಪ್ಪ ಈ ಮಸೂದೆ ಮಂಡಿಸಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿಯ ಕೆ. ಮಾವಳ್ಳಿ ಶಂಕರ್ ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್. ದೊರೆಸ್ವಾಮಿ ಅವರು ಭಾಗವಹಿಸಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ನಾಳೆ ರೈತರ, ದಲಿತ, ಕಾರ್ಮಿಕ, ಜನಪರ ಸಂಘಟನೆಗಳ ‘ಐಕ್ಯ ಹೋರಾಟ’ ವತಿಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ನಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಪ್ರತಿಭಟನಾಕಾರರು ರಾಜಭವನ ಮುತ್ತಿಗೆ ಹಾಕಲಿದ್ದಾರೆ.
ಕರಾಳ ಕಾನೂನುಗಳ ವಿರುದ್ದ ಹೋರಾಟ ನಡೆಸುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ನಡೆಸಿರುವ ದೌರ್ಜನ್ಯ ವಿರೋಧಿಸಿ ’ಐಕ್ಯ ಹೋರಾಟ’ ವೇದಿಕೆಯ ರಾಜ್ಯವ್ಯಾಪಿ ಜನಾಂದೋಲನ ಹಾಗೂ ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆಯ ಬಳಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದೆ.