Homeಕರ್ನಾಟಕವಿಶ್ಲೇಷಣೆ: ಭಾರತ್‌ ಜೋಡೋ ನಂತರ ಕರ್ನಾಟಕ ಬಿಜೆಪಿಯ ಪ್ರತಿಕ್ರಿಯೆಗಳು

ವಿಶ್ಲೇಷಣೆ: ಭಾರತ್‌ ಜೋಡೋ ನಂತರ ಕರ್ನಾಟಕ ಬಿಜೆಪಿಯ ಪ್ರತಿಕ್ರಿಯೆಗಳು

- Advertisement -
- Advertisement -

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ಯಾತ್ರೆ’ಯು ಸೆಪ್ಟೆಂಬರ್‌ 30ರಂದು ಕರ್ನಾಟಕ ರಾಜ್ಯವನ್ನು ಪ್ರವೇಶಿಸಿತು. ಆನಂತರದಲ್ಲಿ ಕರ್ನಾಟಕ ಬಿಜೆಪಿ ಘಟಕವು ಕನಿಷ್ಠ ಸೌಜನ್ಯವನ್ನು ಪಾಲಿಸದೆ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ರಾಜಕೀಯ ಸ್ವಾಸ್ಥ್ಯದ ಪ್ರಶ್ನೆಯನ್ನು ಹುಟ್ಟಿಹಾಕಿದೆ.

ರಾಹುಲ್ ಗಾಂಧಿಯವರೊಂದಿಗೆ ಸಾವಿರಾರು ಜನರು ಹೆಜ್ಜೆಹಾಕತೊಡಗಿದ್ದಾರೆ. ಈ ಯಾತ್ರೆಯ ಪರಿಣಾಮಗಳೇನು ಎಂಬುದು ಈಗಲೇ ನಿರ್ಧರಿಸಲಾಗದು. “ಜನರನ್ನು ಒಂದುಗೂಡಿಸುವುದು, ಪ್ರೀತಿಯನ್ನು ಪಸರಿಸುವುದು ನನ್ನ ಗುರಿ” ಎಂದು ರಾಹುಲ್‌ ಹೇಳುತ್ತಿದ್ದಾರೆ. ಕಾಂಗ್ರೆಸ್ಸೇತರ ಅನೇಕ ಸಂಘಟನೆಗಳೂ ಭಾರತ್‌ ಜೋಡೋ ಯಾತ್ರೆಗೆ ಬೆಂಬಲ ನೀಡಿವೆ. ಮತ್ತೊಂದೆಡೆ ರಾಹುಲ್ ಮತ್ತು ಕಾಂಗ್ರೆಸ್‌ಗೆ ಕೌಂಟರ್‌ ನೀಡುವ ಭರದಲ್ಲಿ ಕರ್ನಾಟಕ ಬಿಜೆಪಿ ನಂಜು ಕಾರುತ್ತಿರುವುದು ಸ್ಪಷ್ಟವಾಗಿದೆ. ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪಗಳು ಇದ್ದೇ ಇರುತ್ತವೆ. ಎಲ್ಲಕ್ಕೂ ಸಾಂವಿಧಾನಿಕ ಚೌಕಟ್ಟು ಇರುತ್ತದೆ. ಆದರೆ ಅವುಗಳನ್ನು ಮೀರಿ, ವ್ಯಕ್ತಿತ್ವ ಹರಣ ಮಾಡುವುದು ಕರ್ನಾಟಕದ ರಾಜಕೀಯ ಗುಣಕ್ಕೆ ಸರಿಹೊಂದುವುದಿಲ್ಲ. ಆದರೆ ಇಂತಹ ಬೆಳವಣಿಗೆಗೆ ಮಾಧ್ಯಮಗಳೂ ಪ್ರೋತ್ಸಾಹಿಸಿರುವುದು ಆಘಾತಕಾರಿ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸೆಪ್ಟೆಂಬರ್‌ 30ರಂದು ಕರ್ನಾಟಕಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದಾಗ, ಕರ್ನಾಟಕ ಬಿಜೆಪಿ ಮಾಡಿದ ಟ್ವೀಟ್, “ಇಂದು ರಾಜ್ಯದಲ್ಲಿ ರಾಹುಕಾಲ ಆರಂಭದ ಸಮಯ ಬೆಳಿಗ್ಗೆ 10.30. ಆದುದರಿಂದ ದಿನನಿತ್ಯದ ನೆಮ್ಮದಿ ಮತ್ತು ಶಾಂತಿಗಾಗಿ ರಾಹು ಸಂಬಂಧಿತವಾದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಜನಹಿತಕ್ಕಾಗಿ ಜಾರಿ” ಎಂಬುದಾಗಿತ್ತು.

ಜಾಮೀನಿನ ಆಧಾರದಲ್ಲಿ ಜೈಲಿನಿಂದ ಹೊರಗಿದ್ದುಕೊಂಡು ಭಾರತ್‌ ಜೋಡೋ ಯಾತ್ರೆ ಮಾಡುತ್ತಿರುವ ಭ್ರಷ್ಟ ಪರಿವಾರದ ನಕಲಿ ಗಾಂಧಿ ಕುಡಿ ರಾಹುಲ್ ಗಾಂಧಿಯವರಿಗೆ ಆತ್ಮೀಯ ಸ್ವಾಗತ” ಎಂದು ಮತ್ತೊಂದು ಟ್ವೀಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ಅಮಿತ್ ಶಾ ಹಾಗೂ ಬಿ.ಎಸ್.ಯಡಿಯೂರಪ್ಪನವರ ಮೇಲೂ ಪ್ರಕರಣಗಳಿವೆ. ಅನೇಕ ಬಿಜೆಪಿ ನಾಯಕರು ತಮ್ಮ ವಿರುದ್ಧ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ ತಂದಿದ್ದಾರೆ” ಎಂದು ಕುಟುಕಿದರು.

ಇದನ್ನೂ ಓದಿರಿ: ಪತ್ರಕರ್ತ ವಿಶ್ವೇಶ್ವರ ಭಟ್ಟರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಜನಾಂಗೀಯ ನಿಂದನೆ

ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ, “ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಹೊಂದಿ, ದೇಶ ವಿಭಜಕರ ಜೊತೆ ಸಂಬಂಧ ಹೊಂದಿರುವ ರಾಹುಲ್‌ ಗಾಂಧಿ ಅವರಿಗೆ ಸ್ವಾಗತ. ರಾಹುಲ್ ಗಾಂಧಿ‌ ಮಾಡುತ್ತಿರುವುದು ಭಾರತ ಜೋಡೋ ಯಾತ್ರೆಯಲ್ಲ, ಎಐಸಿಸಿ ಮುಂದಿನ ಅಧ್ಯಕ್ಷ ಸ್ಥಾನವನ್ನು ನಕಲಿ ಗಾಂಧಿಗಳ ಕುಟುಂಬದಲ್ಲೇ ಇರಿಸಿಕೊಳ್ಳಲು ಮತ್ತು ನಿಯಂತ್ರಿಸಲು ನಡೆಸುತ್ತಿರುವ ಕಸರತ್ತು” ಎಂದಿತ್ತು.

ಪೇಸಿಎಂ ಪೋಸ್ಟರ್‌ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗಷ್ಟೇ, “ಕಾಂಗ್ರೆಸ್ ಡರ್ಟಿ ಪಾಲಿಟಿಕ್ಸ್‌ ಮಾಡುತ್ತಿದೆ” ಎಂದು ದೂರಿದ್ದರು. ಆದರೆ ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದಂತೆ ಬಿಜೆಪಿ ಆರಂಭಿಸಿದ ‘ಡರ್ಟಿ ಪಾಲಿಟಿಕ್ಸ್‌’ ಸಾರ್ವಜನಿಕ ವಲಯದಿಂದ ಟೀಕೆಗಳನ್ನು ಎದುರಿಸಿತು. ‘ಕನ್ನಡಪ್ರಭ’ ದಿನಪತ್ರಿಕೆಗೆ ಬಿಜೆಪಿ ನೀಡಿದ ಜಾಹೀರಾತಿನ ಮೂಲಕ ಬಿಜೆಪಿಯ ಅಸಹನೆ ಢಾಳಾಗಿ ವ್ಯಕ್ತವಾಗಿತ್ತು. ‘ತೋಡೋ ಪಿತಾಮಹನ ಮರಿಮಗನಿಂದ ಜೋಡಿಸಲು ಸಾಧ್ಯವೆ?’ ಎಂಬ ದೊಡ್ಡ ಶೀರ್ಷಿಕೆಯಲ್ಲಿ ಜಾಹೀತಾತು ಪ್ರಕಟಿಸಲಾಯಿತು. ಮಹಮ್ಮದ್‌ಅಲಿ ಜಿನ್ನಾ ಹಾಗೂ ಜವಹರಲಾಲ್‌ ನೆಹರೂ ಅವರ ಫೋಟೋಗಳನ್ನು ಬಳಸಲಾಗಿತ್ತು.

‘ಭಾರತ ವಿಭಜನೆತೆಯ ಪಿತಾಮಹನ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ? ತನ್ನ ಅಧಿಕಾರದ ಹಪಹಪಿಗೆ ದೇಶವಾಸಿಗಳ ರಕ್ತಹರಿಸಿದ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ? ದೇಶ ವಿಭಜನೆಯ ಪರಂಪರೆಯಲ್ಲಿ ಬಂದವರಿಂದ ದೇಶ ಒಡೆಯುವವರನ್ನು ಬೆಂಬಲಿಸಿದವರಿಂದ ಭಾರತದ ಐಕ್ಯತೆ ಸಾಧ್ಯವೆ? ಭಾರತ ಐಕ್ಯತಾ ಯಾತ್ರೆಯ ನಿಜವಾದ ಅಜೆಂಡಾ ಭಾರತ ವಿಭಜನೆಯೇ ಆಗಿದೆ’ ಎಂದು ಜಾಹೀರಾತಿನಲ್ಲಿ ಹೇಳಲಾಗಿತ್ತು.

ಭಾರತ್ ಜೋಡೋ ಯಾತ್ರೆಯಿಂದಾಗಿ ಬಿಜೆಪಿ ಆತಂಕಗೊಂಡಿದೆ ಎಂದು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದರು. ಕನ್ನಡದಲ್ಲಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ಜಯರಾಮ್ ರಮೇಶ್‌, “#BharatJodoYatra ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ ಕನ್ನಡ ಪತ್ರಿಕೆಯೊಂದರಲ್ಲಿ ಎಂದಿನಂತೆ ಇತಿಹಾಸ ತಿರುಚುವ ಮುಖಪುಟದ ಜಾಹೀರಾತು ನೀಡಿದೆ. ಸಾವರ್ಕರ್ ಎರಡು ರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು, ಜಿನ್ನಾ ಅದನ್ನು ಪೂರೈಸಿಕೊಂಡರು. ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಬಂಗಾಳದ ವಿಭಜನೆಯಲ್ಲಿ ಮುಂದಾಳತ್ವ ವಹಿಸಿದ್ದರು” ಎಂದು ಸ್ಪಷ್ಟಪಡಿಸಿದ್ದರು.

ರಾಹುಲ್ ಗಾಂಧಿಯವರನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಯತ್ನವನ್ನು ಬಿಜೆಪಿ ಸತತ ಮಾಡುತ್ತಲೇ ಇದೆ. “ರಾಹುಲ್ ಗಾಂಧಿ ಯಾತ್ರೆ ಹಿಂದೂ ವಿರೋಧಿ ಯಾತ್ರೆಯಾಗಿ ಬದಲಾಗುತ್ತಿದೆ. ತಮಿಳುನಾಡಿನಿಂದ ಆರಂಭಗೊಂಡ ಯಾತ್ರೆ ಹೆಜ್ಜೆಹೆಜ್ಜೆಗೂ ಹಿಂದೂಗಳನ್ನು ಅವಮಾನಿಸುತ್ತಿದೆ. ಹಿಂದೂ ಸಮಾಜವನ್ನು ಕೆಣಕಿ ನಿಮ್ಮ ಮತಬ್ಯಾಂಕ್‌ ಗಟ್ಟಿಗೊಳಿಸುವ ಹುನ್ನಾರವೇ ಇದು? ಕೇರಳದಲ್ಲೂ ಹಿಂದೂ ದ್ವೇಷವನ್ನು ರಾಹುಲ್ ಗಾಂಧಿ ಮಂದುವರಿಸಿದರು. ನಡುಬೀದಿಯಲ್ಲಿ ಗೋವಿನ ತಲೆ ಕಡಿದ ಯುವ ಕಾಂಗ್ರೆಸ್‌ ಮುಖಂಡನೊಂದಿಗೆ ಪಾದಯಾತ್ರೆ ಮಾಡುವ ಮೂಲಕ ರಾಹುಲ್‌ ಗಾಂಧಿ ಬಹುಸಂಖ್ಯಾತ ಹಿಂದೂಗಳನ್ನು ಅಪಮಾನಿಸಿದ್ದಾರೆ. ಹಿಂದೂಗಳ ಪೂಜನೀಯ ಗೋವಿನ ಹತ್ಯೆಗೆ ರಾಹುಲ್‌ ಗಾಂಧಿ ಅವರ ಸಮ್ಮತಿಯಿದೆಯೇ?” ಎಂದು ಪ್ರಶ್ನಿಸಿತು.

ಬಿಜೆಪಿ ಇಷ್ಟಕ್ಕೆ ಸುಮ್ಮನಾಗದೆ ಒಂದಿಷ್ಟು ರಾಜಕೀಯ ಸೌಜನ್ಯವಿಲ್ಲದ, ದ್ವೇಷವನ್ನೇ ಕಾರುವ ಪೂರ್ಣ ಪುಟದ ಜಾಹೀರಾತನ್ನು ಸುದ್ದಿರೂಪದಲ್ಲಿ ನಾಲ್ಕು ಪತ್ರಿಕೆಗಳಿಗೆ (ಕನ್ನಡಪ್ರಭ, ಹೊಸದಿಗಂತ, ವಿಶ್ವವಾಣಿ, ಸಂಯುಕ್ತ ಕರ್ನಾಟಕ) ನೀಡಿತು. ಎಷ್ಟೋ ಓದುಗರು ಇದನ್ನು ಸುದ್ದಿಯೆಂದೇ ಭಾವಿಸಿರುವ ಸಾಧ್ಯತೆ ಇದೆ. ಜನರು ಬಿಜೆಪಿ ಹಾಗೂ ಪತ್ರಿಕೆಗಳ ನೈತಿಕ ಕುಸಿತವನ್ನು ತರಾಟೆಗೆ ತೆಗೆದುಕೊಂಡರು.

“ಇದು ಅತ್ಯಂತ ನೀಚ ಜಾಹೀರಾತು. ಪತ್ರಿಕೋದ್ಯಮ ಪಾತಾಳಕ್ಕೆ ತಲುಪಿರುವುದಕ್ಕೆ ಸಾಕ್ಷಿ. ಮೂರೂ ಪತ್ರಿಕೆಗಳಿಗೆ ಲೀಡ್ ಸುದ್ದಿ ಜಾಹೀರಾತನ್ನು ಡಿಜೈನ್, ಹೆಡಿಂಗ್ ಸಮೇತ ನೀಡಿದೆ ಬಿಜೆಪಿ. ಬಿಲ್ಲು ಸಹ ದುಬಾರಿಯೇ ಇರಬಹುದು. ಉಳಿದೆರಡು ಪತ್ರಿಕೆಗಳ ವಿಷಯ ಹಾಗಿರಲಿ, ಕನ್ನಡಪ್ರಭ ಹೀಗೆ ಬೀದಿಯಲ್ಲಿ ಬೆತ್ತಲಾಗಬಾರದಿತ್ತು‌” ಎಂಬ ಟೀಕೆಗಳು ವ್ಯಕ್ತವಾಗಿವೆ.

ರಾಜಕೀಯ ಸೌಜನ್ಯವನ್ನು ಮೀರಿ ಇತ್ತೀಚೆಗೆ ಬಿಜೆಪಿ ವರ್ತಿಸಿರುವ ರೀತಿಯ ಕುರಿತು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿದ  ಚಿಂತಕ ಶ್ರೀಪಾದ್ ಭಟ್‌ ಅವರು, “ಬಿಜೆಪಿಯ ನಿಘಂಟಿನಲ್ಲಿ ನೈತಿಕ ರಾಜಕಾರಣ ಎಂಬುದಿಲ್ಲ. ಈ ಯಾತ್ರೆಯ ಬಗ್ಗೆ ಬಿಜೆಪಿಯವರು ಹತಾಶರಾದಂತೆ ಕಾಣುತ್ತಿದೆ. ಈ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ ಎಂದು ಬಿಜೆಪಿಯವರು ಭಾವಿಸಿದಂತಿತ್ತು. ಆದರೆ ಸ್ವತಃ ಕಾಂಗ್ರೆಸ್‌ಗೆ ಆಶ್ಚರ್ಯವಾಗುವ ರೀತಿಯ ಯಾತ್ರೆ ಬೆಳೆಯುತ್ತಿದೆ. ಪತ್ರಿಕೆಗಳು ಹೆಚ್ಚಿನ ಸ್ಪೇಸ್ ನೀಡದಿದ್ದರೂ ಸಾಮಾಜಿಕ ಮಾಧ್ಯಮಗಳ ಮೂಲಕ ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ಬಿಜೆಪಿ ಅಚ್ಚರಿ ಹಾಗೂ ಹತಾಶೆಗೊಂಡು ಕೆಟ್ಟದ್ದಾಗಿ ಜಾಹೀರಾತುಗಳನ್ನು ನೀಡಿದೆ” ಎಂದರು.

ಇದನ್ನೂ ಓದಿರಿ: ಗೌರಿ ಲಂಕೇಶ್ ಹೋರಾಟ ಸ್ಮರಿಸಿದ ರಾಹುಲ್ ಗಾಂಧಿ: ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆಹಾಕಿದ ಕವಿತಾ, ಇಂದಿರಾ ಲಂಕೇಶ್

“ಮುಖ್ಯವಾಗಿ ಮಾಧ್ಯಮಗಳ ವರ್ತನೆ ಅಪಾಯಕಾರಿಯಾಗಿದೆ. ಇದಕ್ಕಿಂತ ಕೆಳಗೆ ಮಾಧ್ಯಮಗಳು ಇಳಿಯುವುದಿಲ್ಲ ಎಂದು ಸೋಮವಾರ ನಾವು ಅಂದುಕೊಂಡಿದ್ದರೆ, ಮಂಗಳವಾರ ನಮ್ಮ ನಂಬಿಕೆಯನ್ನು ಹುಸಿಗೊಳಿಸುತ್ತವೆ. ಹಣಕ್ಕಾಗಿ ಈ ರೀತಿಯ ಜಾಹೀರಾತುಗಳನ್ನು ಹಾಕುವುದು ನಾಚಿಗೆಗೇಡಿನ ಸಂಗತಿ. ಮಾಧ್ಯಮಗಳು ಬಿಜೆಪಿ ಜೊತೆ ನಿಂತಂತೆ ಕಾಣುತ್ತಿದೆ” ಎಂದು ತಿಳಿಸಿದರು.

“ಕಾಂಗ್ರೆಸ್‌ ಯಾತ್ರೆಗೆ ಹೆಚ್ಚಿನ ಬೆಂಬಲ ಸಿಗುತ್ತಿದೆ. ಹಾಗೆಂದು ಇದು ಮತವಾಗಿ ಪರಿವರ್ತನೆಯಾಗುತ್ತದೆ ಎಂದು ಸದ್ಯಕ್ಕೆ ಕಾಂಗ್ರೆಸ್ಸಿಗರು ಭಾವಿಸುವಂತಿಲ್ಲ. ಬೂತ್‌ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಿದರೆ ಮಾತ್ರ ಕಾಂಗ್ರೆಸ್ ಯಶಸ್ಸು ಪಡೆಯಬಹುದು” ಎಂದು ಅಭಿಪ್ರಾಯಪಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...