Homeಮುಖಪುಟಹಾದರವೋ, ಹನಿಟ್ರ್ಯಾಪೋ, ಅಸಹ್ಯವೋ?..

ಹಾದರವೋ, ಹನಿಟ್ರ್ಯಾಪೋ, ಅಸಹ್ಯವೋ?..

- Advertisement -
- Advertisement -

ಈ ಹನಿಟ್ರ್ಯಾಪ್ ಪ್ರಕರಣದಿಂದ ಹಲವು ಪ್ರಶ್ನೆಗಳು ಎದ್ದಿವೆ. ಹನಿಟ್ರ್ಯಾಪ್‍ಗೆ ಒಳಗಾದ ಶಾಸಕರಲ್ಲಿ ಐದು ಜನ ಡಿಸೆಂಬರ್ 5ರಂದು ನಡೆಯಲಿರುವ ಚುನಾವಣೆಯನ್ನು ಎದುರಿಸುತ್ತಿರುವ ಆಡಳಿತ ಪಕ್ಷದವರಾಗಿದ್ದಾರೆ ಎನ್ನಲಾಗಿದೆ. ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ಇದರಿಂದ ಯಾವುದಾದರೂ ನಷ್ಟ ಉಂಟಾಗಲಿದೆಯೇ?

ಕೋರ್ಟಿನಿಂದ ನಿರ್ಬಂಧ ಬರುವ ಮುಂಚೆ ಎಲ್ಲೆಡೆ ಓಡಾಡಿದ್ದು ಮಧ್ಯ ಕರ್ನಾಟಕದ ಹಾಲಿ ಶಾಸಕರೊಬ್ಬರ ರಾಸಲೀಲೆಯ ವಿಡಿಯೋ. ಆ ನಂತರ ಎಲ್ಲರಿಗೂ ಲಭ್ಯವಾಗಿದ್ದು ಸಾಹುಕಾರರೊಬ್ಬರ ಆಡಿಯೋ. ಅವರ ದನಿ ಪರಿಚಯ ಇರುವ ಯಾರಿಗೂ ಸಂದೇಹ ಉಳಿದಿಲ್ಲ. ಗುಟ್ಟಾಗಿ ಕೆಲವರಿಗೆ ಮಾತ್ರ ಲಭ್ಯವಾಗಿರುವುದು ಮಹಿಳೆಯೊಬ್ಬರು ಯಲ್ಲಮ್ಮನ ಜಾತ್ರೆ ನಂತರ ಸಿಗುತ್ತೇನೆ ಎಂದು ಹೇಳಿದ ‘ಅವರು’ ತನ್ನನ್ನು ಪಟಾಯಿಸಲು ಮಾಡಿದ ಯತ್ನದ ಕುರಿತಾದ ಆಡಿಯೋ. ಆದರೆ, ಎಲ್ಲಿಯೂ ಯಾವ ಆಡಿಯೋ ಅಥವಾ ವಿಡಿಯೋ ಸಿಗದೇ ಇದ್ದರೂ ಕೋರ್ಟಿಗೆ ಹೋಗಿ ಇನ್ನೊಬ್ಬ ಶಾಸಕರೂ ನಿರ್ಬಂಧಕಾಜ್ಞೆ ತಂದುಬಿಟ್ಟರು. ಅಲ್ಲಿಗೆ ಪತ್ರಕರ್ತರ ವಲಯದಲ್ಲಿ ವಿಪರೀತ ವದಂತಿಗಳು ಓಡಾಡಲು ಶುರು ಮಾಡಿದವು.

ಯಾರ ವಿಡಿಯೋ ಓಡಾಡಿತೋ, ಉತ್ತರ ಕರ್ನಾಟಕದ ಆ ಶಾಸಕರು ಹನಿಟ್ರ್ಯಾಪ್‍ಗೆ ಬಲಿಯಾಗಿದ್ದೇನೆಂದು ದೂರು ಕೊಟ್ಟು ಹೀಗೆ ಹೇಳಿದರಂತೆ. ಅವರಿಗೆ ಹಲವಾರು ಕೋಟಿ ದುಡ್ಡಿನ ಬೇಡಿಕೆಯಿಟ್ಟು, ಆ ದುಡ್ಡನ್ನು ಕೊಡದಿದ್ದರೆ ತಮ್ಮಲ್ಲಿರುವ ವಿಡಿಯೋ ಅನ್ನು ಬಹಿರಂಗ ಪಡಿಸುವುದಾಗಿ ಬ್ಲ್ಯಾಕ್ ಮಾಡಲಾಯಿತು. ಆಗ ಶಾಸಕರು ಪೊಲೀಸ್ ಮೊರೆ ಹೊಕ್ಕು, ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ ಹಾಗೂ ಆ ವಿಡಿಯೊ ಮತ್ತು ಆಡಿಯೊ ತುಣುಕಗಳು ಬಹಿರಂಗಪಡಿಸದಂತೆ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದಿದ್ದಾರೆ.

ಈ ದೂರಿನ ಮೇಲೆ ಕ್ರಮ ಕೈಗೊಳ್ಳುತ್ತ ಪೊಲೀಸರು ರಾಘವೇಂದ್ರ ಎಂಬ ವ್ಯಕ್ತಿಯನ್ನು ಮತ್ತು ಆತನ ಇಬ್ಬರು ಮಹಿಳಾ ಸಹಚರರನ್ನು ಬಂಧಿಸಿದ್ದಾರೆ. ಬಂಧನದ ಜೊತೆಗೆ ಒಂದು ಹಾರ್ಡ್ ಡಿಸ್ಕ್, ಕೆಲವು ಪೆನ್ ಡ್ರೈವ್, ಕೆಲವು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ವಶಪಡಿಸಿಕೊಂಡದ್ದರಲ್ಲಿ ದೂರು ನೀಡಿದ ಶಾಸಕರಷ್ಟೇ ಅಲ್ಲದೇ ಇನ್ನೂ ಹತ್ತು ಶಾಸಕರ ವಿಡಿಯೋಗಳು ಇವೆ ಎನ್ನಲಾಗಿದೆ. ಬಂಧಿತನಾದ ರಾಘವೇಂದ್ರ ಶಿವಮೊಗ್ಗೆ ಜಿಲ್ಲೆಯವನಾಗಿದ್ದು, ಈಗಾಗಲೇ ಸೈಬರ್ ಅಪರಾಧ ಪ್ರಕರಣಗಳಲ್ಲಿ ಇವನ ವಿರುದ್ಧ ಅನೇಕ ಪ್ರಕರಣಗಳಿವೆ.

ಇಷ್ಟರಲ್ಲಿ ಆಡಿಯೋ ತುಣುಕು ವೈರಲ್ ಆಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ತಾವೂ ಆ ಆಡಿಯೊ ಅನ್ನು ಕೇಳಿಸಿಕೊಂಡಿದ್ದಾಗಿ ಹೇಳಿ, ಆ ಆಡಿಯೊದಲ್ಲಿನ ಧ್ವನಿ ಸಾಹುಕಾರರ ಧ್ವನಿ ಇದ್ದಂತಿದೆ ಎಂದರು. ಆ ಸಾಹುಕಾರ ಯಾರು ಎಂದು ಅವರು ಬಹಿರಂಗಪಡಿಸದಿದ್ದರೂ, ವಲಯದ ಎಲ್ಲರಿಗೂ ಆ ಸಾಹುಕಾರ ಯಾರು ಎಂಬುದು ಸ್ಪಷ್ಟವಾಗಿ ತಿಳಿದಿದೆ. ಈ ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ, ನಿಷ್ಪಕ್ಷಪಾತವಾದ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ‘ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಅಥವಾ ಉದ್ದೇಶಪೂರ್ವಕ ಬಲಿ ಹಾಕುವ ಪ್ರಯತ್ನ ತಮ್ಮದಲ್ಲ’ ಎಂದು ಹೇಳಿಕೆ ನೀಡಬೇಕಾಗಿ ಬಂದಿತು.

ಈ ಹನಿಟ್ರ್ಯಾಪ್ ಪ್ರಕರಣದಿಂದ ಹಲವು ಪ್ರಶ್ನೆಗಳು ಎದ್ದಿವೆ. ಹನಿಟ್ರ್ಯಾಪ್‍ಗೆ ಒಳಗಾದ ಶಾಸಕರಲ್ಲಿ ಐದು ಜನ ಡಿಸೆಂಬರ್ 5ರಂದು ನಡೆಯಲಿರುವ ಚುನಾವಣೆಯನ್ನು ಎದುರಿಸುತ್ತಿರುವ ಆಡಳಿತ ಪಕ್ಷದವರಾಗಿದ್ದಾರೆ ಎನ್ನಲಾಗಿದೆ. ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ ಇದರಿಂದ ಯಾವುದಾದರೂ ನಷ್ಟ ಉಂಟಾಗಲಿದೆಯೇ? ಬರೀ ಹನಿ ಟ್ರ್ಯಾಪ್ ಅಷ್ಟೇ ಅಲ್ಲ. ನಮ್ಮ ಪ್ರತಿನಿಧಿಗಳು ಒಳಗೊಂಡಿದ್ದಾರೆ ಎನ್ನಲಾದ ಲೈಂಗಿಕ ಹಗರಣಗಳು ಈ ಮುಂಚೆಯೂ ಹೊರಬಂದಿವೆ. ವಿಧಾನಸಭೆಯಲ್ಲಿ ನೀಲಿ ಚಿತ್ರವನ್ನು ನೋಡುತ್ತ ಕೆಲವರು ಸಿಕ್ಕಿಹಾಕಿಕೊಂಡಿದ್ದರು. ಅವರೇ ಇಂದು ರಾಜ್ಯದ ಉಪಮುಖ್ಯಮಂತ್ರಿಯಾಗಿ ಬಡ್ತಿ ಪಡೆದಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಸಾರ್ವಜನಿಕರು ಇದೆಲ್ಲದರಿಂದ ತಮಗೆ ಪುಗಸಟ್ಟೆ ಮನರಂಜನೆ ಸಿಕ್ಕಿತು ಎಂದು ಕೃತಜ್ಞರಾಗುವ ಸಂಭವವೇ ಹೆಚ್ಚು ಎಂಬುದಕ್ಕೆ ಮೈಸೂರಿನ ಹಾಲಿ ಸಂಸದರೇ ಸಾಕ್ಷಿ. ಅವರ ಕುರಿತಾದ ಆಡಿಯೋ ಮತದಾನಕ್ಕೆ ಮುಂಚೆ ಯಾವ ಪರಿ ಓಡಿತೆಂದರೆ, ಬಹುಶಃ ಅತ್ಯಂತ ಹೆಚ್ಚು ವೈರಲ್ ಆದ ಧ್ವನಿಮುದ್ರಿಕೆ ಅದು. ಅಂದರೆ, ಜನರು ಈ ಹಗರಣಗಳನ್ನು ಸುಲಭವಾಗಿ ಕ್ಷಮಿಸಿಬಿಡುತ್ತಾರೆಯೇ? ಅಥವಾ ಪುರುಷನ ಲೈಂಗಿಕ ಸ್ವೇಚ್ಛಾಚಾರವು ಎಂದಿಗೂ ಕ್ಷಮಾರ್ಹ ವಿಷಯವೇ ಆಗಿದೆಯೇ? ‘ಶೀಲ’ ಎನ್ನುವುದು ಮಹಿಳೆಯರಿಗೆ ಮೀಸಲಾಗಿಸಲ್ಪಟ್ಟ ವಿಷಯ ಎನ್ನುವುದು ಮುಂಚೆಯಿಂದಲೂ ತಿಳಿದ ವಿಷಯ.

ಹಾಗಾಗಿ ಸಾರ್ವಜನಿಕವಾಗಿ ಸದರಿ ಪ್ರಕರಣದಲ್ಲಿ ಉಳಿದುಕೊಂಡಿರುವುದು ಇನ್ನೂ ಯಾರ್ಯಾರ ವೀಡಿಯೋಗಳು ಅಥವಾ ಆಡಿಯೋಗಳು ಸಿಕ್ಕಿವೆಯಂತೆ ಎಂಬ ಕುತೂಹಲ ಬಿಟ್ಟರೆ ಬೇರೇನೂ ಇಲ್ಲ. ಹನಿಟ್ರ್ಯಾಪ್ ಮಾಡಿದವರ ದುರುದ್ದೇಶವೂ ಈಡೇರದೇ ಹೋಗುವ ದುಸ್ಥಿತಿ ಇದೆ. ಏಕೆಂದರೆ ಯಾರಿಗೂ ಮರ್ಯಾದೆ ಹೋಗುತ್ತದೆಂಬ ಭಯ ಕಾಡುತ್ತಿರುವ ಸಾಧ್ಯತೆ ಕಾಣುತ್ತಿಲ್ಲ. ಬೆತ್ತಲೆ ವಿಡಿಯೋಗಳು ಎಲ್ಲೆಡೆ ಕಂಡುಬಂದ ಶಾಸಕರೊಬ್ಬರ ಪತ್ನಿಯ ನಿಗೂಢ ಸಾವೂ ಸಹ ಅವರನ್ನು ಒಂದು ಅವಧಿಗೆ ಮಾತ್ರ ಶಾಸಕಸ್ಥಾನದಿಂದ ವಂಚಿತನನ್ನಾಗಿಸಿತು. ಅದೂ ಸಹಾ ರಾಜ್ಯಾದ್ಯಂತ ಅವರ ಪಕ್ಷದ ಪರವಾದ ಅಲೆ ಇರದಿದ್ದಾಗ. ಈ ಮಧ್ಯೆ ದೇಶಕ್ಕೆಲ್ಲಾ ರಾಮರಾಜ್ಯದ ಕುರಿತು ಪಾಠ ಮಾಡುವ ಸ್ವಾಮೀಜಿಗಳ ಜೊತೆಗೇ ಓಡಾಡುತ್ತಾ ಅವರು ಉಳಿದುಕೊಂಡಿದ್ದರು.

ಇನ್ನು ಸ್ವಾಮೀಜಿಗಳ ವಿಚಾರಕ್ಕೆ ಬರುವುದಾದರೆ, ಅದನ್ನು ಹೇಳದಿರುವುದೇ ಲೇಸು. ಒಪ್ಪಿತ ಲೈಂಗಿಕ ಸಂಬಂಧ ಅಷ್ಟೇ ಅಲ್ಲದೇ ವಿಕೃತ ಲೈಂಗಿಕತೆಗೂ ಮುಂದಾಗಿರುವ ಸ್ವಾಮೀಜಿಗಳು ಸರ್ವಮಾನ್ಯರಾಗಿ ವ್ಯವಹಾರಗಳನ್ನು ನಡೆಸಿಕೊಂಡು ಮುಂದಾಗಿದ್ದಾರೆ. ಶಿಶುಕಾಮಿಯೂ ಇರಬಹುದು ಎನ್ನುವ ಸ್ವಾಮೀಜಿಯ ತೊಡೆಯ ಮೇಲೆ ಹೆಣ್ನುಮಕ್ಕಳನ್ನು ಕುಳ್ಳಿರಿಸಿ ದೀಕ್ಷೆ ಕೊಡಿಸುವ ಸುಶಿಕ್ಷಿತ ತಂದೆ ತಾಯಂದಿರು ಈಗಲೂ ಇದ್ದಾರೆ.

ಈ ಸದ್ಯ ಇದರಲ್ಲೇನಾದರೂ ರಾಜಕೀಯ ಹುನ್ನಾರದ ವಾಸನೆ ಇದೆಯೇ ಎಂಬುದನ್ನು ಪತ್ರಿಕೆ ಕೆದಕಲು ನೋಡಿತು. ಹಾಲಿ (ನಮ್ಮ ಕೈಗೇ ಆಡಿಯೋ, ವಿಡಿಯೋ ಸಿಕ್ಕಿಲ್ಲವಾದರೂ) ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಹೆಚ್ಚಿನವರು ಬಿಜೆಪಿಯಲ್ಲಿ ಇದ್ದಾರಾದರೂ ಒಂದಿಬ್ಬರು ಕಾಂಗ್ರೆಸ್ ಶಾಸಕರೂ ಇದ್ದಾರೆ. ಹೀಗಾಗಿ ಇದನ್ನು ಒಂದು ಪಕ್ಷದವರು ಇನ್ನಾರನ್ನೋ ಸಿಕ್ಕಿ ಹಾಕಿಸಲು ಮಾಡಿದ ತಂತ್ರ ಎನ್ನುವ ಹಾಗಿಲ್ಲ. ಅನರ್ಹ ಶಾಸಕರನ್ನು ಬೆದರಿಸಲು ಬಿಜೆಪಿ ಮೊದಲೇ ಮಾಡಿಸಿತ್ತು ಎಂಬ ವದಂತಿಯೂ ಒಂದಷ್ಟು ಓಡಾಡಿತಾದರೂ, ಬಿಜೆಪಿಯೊಳಗೇ ಇರುವ ಶಾಸಕರು ಮತ್ತು ಸಂಘಪರಿವಾರದ ಮೂಲದ ಶಾಸಕರೂ ಇರುವುದು ಅದನ್ನೂ ಸುಳ್ಳಾಗಿಸಿದೆ. ಯಡಿಯೂರಪ್ಪನವರ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಅರವಿಂದ ಲಿಂಬಾವಳಿಯ ಸಲಿಂಗರತಿಯ ವಿಡಿಯೋ ಬಹಿರಂಗವಾಗಿದ್ದು ಬಿಜೆಪಿಯವರಿಂದಲೇ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಏಕೆಂದರೆ, ಆಗ ಓಡಾಡಿದ ಆಡಿಯೋಗಳಲ್ಲಿ ಒಂದು ಸದರಿ ‘ಹುಡುಗರು’ ಈಶ್ವರಪ್ಪನವರ ಜೊತೆ ಇದರ ಕುರಿತೇ ಮಾತನಾಡುತ್ತಿದ್ದುದೂ ಇತ್ತು. ಅದಕ್ಕೆ ತಕ್ಕುನಾಗಿ ‘ಪ್ರಭಾವಿ’ಗಳಲ್ಲೊಬ್ಬರಾದ ಲಿಂಬಾವಳಿಯು ನಂತರ ಸಚಿವರೂ ಆಗಲಿಲ್ಲ; ರಾಜ್ಯಾಧ್ಯಕ್ಷರೂ ಆಗಲಿಲ್ಲ.

ತೇಜಸ್ವಿ ಸೂರ್ಯರ ‘ಹಗರಣ’ಗಳ ವಿಚಾರದಲ್ಲಿ ‘ಸಂತ್ರಸ್ತೆ’ ಪ್ರತಾಪ್‍ಸಿಂಹರಿಗೆ ದೂರು ಕೊಡುವುದು; ಪ್ರತಾಪ್‍ಸಿಂಹರ ಆಡಿಯೋದಲ್ಲಿ ರಾಮದಾಸ್ ಹೆಸರು ಕೇಳಿಬರುವುದು ಇವೆಲ್ಲವೂ ಬಿಜೆಪಿಯೊಳಗೆ ಇಂಥಾ ಹಲವು ಒಳಸುಳಿಗಳಿರುವ ಸೂಚನೆಯನ್ನಂತೂ ನೀಡುತ್ತಿವೆ. ಕಾಂಗ್ರೆಸ್ ಸರ್ಕಾರವಿದ್ದಾಗ ಸಚಿವ ಎಚ್.ವೈ.ಮೇಟಿ ಇಂಥದ್ದೇ ಒಂದರಲ್ಲಿ ಸಿಕ್ಕಿಕೊಂಡು ರಾಜೀನಾಮೆ ಕೊಟ್ಟರು. ಒಂದೆರಡು ಚಾನೆಲ್ ಬಿಟ್ಟರೆ ಮಿಕ್ಕೆಲ್ಲವೂ ಎಗ್ಗು ಸಿಗ್ಗಿಲ್ಲದೇ ವಿಡಿಯೋವನ್ನೇ ಪ್ರಸಾರ ಮಾಡಿದ್ದವು. ಕಾಂಗ್ರೆಸ್ ನಾಯಕರುಗಳ ಲೈಂಗಿಕ ಸಂಬಂಧಗಳ ಕುರಿತಂತೆ ಗಾಸಿಪ್‍ಗಳಿಗೆ ಕಡಿಮೆಯಿಲ್ಲವಾದರೂ ಮೇಟಿಯವರ ವಿಡಿಯೋ ಬಿಟ್ಟರೆ ಹೊರಬಂದಿದ್ದು ಕಡಿಮೆ. ಆದರೆ, ಬಿಜೆಪಿಯೊಳಗೆ ಸದಾಕಾಲ ಒಂದಲ್ಲಾ ಒಂದು ಕಡೆ ಯಾರದ್ದೋ ರೆಕಾರ್ಡಿಂಗ್ ನಡೆಯುತ್ತಿರಬಹುದು ಇಲ್ಲವೇ ಸಂಚು ರೂಪಿತವಾಗುತ್ತಿರಬಹುದು ಎನ್ನುವ ಮಟ್ಟಿಗೆ ‘ಲೀಲೆಗಳು’ ಇದ್ದಂತಿವೆ. ಇಂತಹ ಲೀಲೆಗಳಲ್ಲಿ ಈಗ ಸಿಕ್ಕಿ ಹಾಕಿಕೊಂಡಿರುವ ಅನರ್ಹರೂ ಕಾಂಗ್ರೆಸ್‍ನಲ್ಲಿದ್ದವರೇ ಆಗಿರುವುದನ್ನೂ ಮರೆಯುವಂತಿಲ್ಲ. ಒಟ್ಟಿನಲ್ಲಿ ಸಾರ್ವಜನಿಕ ಜೀವನದಲ್ಲಿರುವವರಿಗೆ ಇರಬೇಕಾದ ಶಿಸ್ತು, ನೀತಿ ಸಂಹಿತೆಗಳಿಂದ ದೂರ ನಿಂತಿರುವುದಷ್ಟೇ ಅಲ್ಲದೇ, ಸಾರ್ವಜನಿಕರೂ ಇವೆಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳದಿರುವುದು ಒಳ್ಳೆಯ ಬೆಳವಣಿಗೆಯೋ ದುರಂತವೋ ಗೊತ್ತಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎಂಬ ಮಾತಿಗೆ ಅನುಗುಣವಾಗಿ ನಮ್ಮ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...