ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರಲು ಹೊರಟಿರುವ ಕೃಷಿ ಮತ್ತು ಭೂ ಸುಧಾರಣಾ ಕಾಯ್ದೆಗಳ ಕುರಿತ ವಿಚಾರ ಸಂಕಿರಣವನ್ನು ಕರ್ನಾಟಕ ರೈತ ಸಂಘ (AIKKS), ರಾಯಚೂರು ವತಿಯಿಂದ ನವೆಂಬರ್ 7 ರಂದು ಹಮ್ಮಿಕೊಳ್ಳಲಾಗಿದ್ದು, ನವೆಂಬರ್ 9 ರಂದು ಮಾನ್ವಿ ತಾಲ್ಲೂಕಿನ ತಹಶೀಲ್ದಾರ್ ಕಛೇರಿಗೆ ಕಾಲ್ನಡಿಗೆ- ಚಾಥ ನಡೆಸಲಾಗುತ್ತಿದೆ.
ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ನಾನು ಗೌರಿ.ಕಾಂ ಜೊತೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷರಾದ ಡಿ.ಎಚ್.ಪೂಜಾರ್ ಹೇಳಿದರು.
ಇದನ್ನೂ ಓದಿ: ರೈತ ವಿರೋಧಿ ಕಾಯ್ದೆ: SDPI ಪಕ್ಷದಿಂದ ’ಜಾಗೋ ಕಿಸಾನ್’ ಅಭಿಯಾನ ಆರಂಭ
“ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಕೃಷಿ ಕ್ಷೇತ್ರವನ್ನು ಕಾಪೋರೇಟ್ ಕಂಪನಿಗಳಿಗೊಪ್ಪಿಸಿದೆ. ಎಪಿಎಂಸಿ, ಭೂ ಸುಧಾರಣೆ, ಕಾಂಟ್ರಾಕ್ಟ್ ಪಾರ್ಫಿರಿಗ್, ವಿದ್ಯುತ್ ಇತರೆ ಕಾಯ್ದೆಗಳಿಗೆ ತಿದ್ದುಪಡಿ ಮಾಡಿದ್ದರಿಂದ ದೇಶದ ಶೇ 86 ರಷ್ಟು ಸಣ್ಣ ಮಧ್ಯಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇಷ್ಟು ಮಾತ್ರವಲ್ಲ ವಿದೇಶಿ ಕಂಪನಿಗಳು ಆಹಾರ ಕ್ಷೇತ್ರದ ಮೇಲೆ ಏಕಸ್ವಾಮ್ಯತೆ ಸಾಧಿಸಲಿವೆ. ರೈತರು-ಇತರೆ ವರ್ಗದ ಜನರು, ಆಹಾರ ಕ್ಷೇತ್ರದ ಮೇಲಿನ ಸಾರ್ವಭೌಮತ್ವ ಕಳೆದುಕೊಳ್ಳಲಿದ್ದಾರೆ. ಮೆಕ್ಕೆ ಜೋಳ, ಸಜ್ಜೆ ಇತರೆ ಬೆಳೆಗಳಿಗೆ ಕಳೆದ ವರ್ಷಕ್ಕಿಂತ ಅರ್ಧದಷ್ಟು ಬೆಲೆ ಕಡಿಮೆಯಾಗಿದೆ. ಇನ್ನು ಮುಂದೆ ಬೆಂಬಲ ಬೆಲೆ ನಿಗದಿ ಮಾಡುವ ಮತ್ತು ಖರೀದಿ ಕೇಂದ್ರ ತೆರೆಯುವ ಜವಾಬ್ದಾರಿಯಿಂದ ಸರ್ಕಾರ ಹಿಂದೆ ಸರಿಯಲಿದೆ. ಈಗಾಗಲೆ ಒಂದು ತಿಂಗಳಿಂದ ಮೆಕ್ಕೆ ಜೋಳ, ಸಜ್ಜೆ ಇತರೆ ಬೆಳೆ ಕಟಾವು ಮಾಡುತ್ತಿದ್ದರೂ ಖರೀದಿ ಕೇಂದ್ರ ತೆರೆದಿಲ್ಲ. ಹಾಗಾಗಿ, ವೈಜ್ಞಾನಿಕ ಬೆಲೆ, ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮತ್ತು ರೈತ ವಿರೋಧಿ ಕಾಯ್ದೆಗಳನ್ನು ವಾಪಾಸ್ ಪಡೆಯಲು ಒತ್ತಾಯ 250 ಕ್ಕೂ ಸಂಘಟನೆಗಳು ನಿರಂತರವಾಗಿ ಹೋರಾಡುತ್ತಿವೆ. ನವೆಂಬರ್ 26,27.2020 ರಂದು ರಾಷ್ಟ್ರ ಮಟ್ಟದಲ್ಲಿ ಪುನಃ ಹೋರಾಟ ಹಮ್ಮಿಕೊಳ್ಳಲಾಗಿದೆ. ರೈತರು ಮತ್ತು ಪ್ರಜ್ಞಾವಂತ ಜನರು ಆಯಾ ಕ್ಷೇತ್ರದ ಸಂಸದರು, ಶಾಸಕರ ಮೇಲೆ ಒತ್ತಾಯ ಹೇರಬೇಕಾಗಿದೆ. ಹಾಗಾಗಿ ಇದನ್ನು ಹೋರಾಟದ ಭಾಗವಾಗಿ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಆರ್ಸಿಇಪಿ ಬಿಜೆಪಿ ಸರ್ಕಾರದ ರೈತ ವಿರೋಧಿ ಒಪ್ಪಂದ, ರೈತರಿಗೆ ಮರಣಶಾಸನ: ಸಿದ್ದರಾಮಯ್ಯ
ನಮ್ಮ ಹಕ್ಕೊತ್ತಾಯಗಳು:
- ಹೂವಿನಬಾವಿ ಗ್ರಾಮದ ಸ.ನಂ.32,43 ಒಟ್ಟು 605 ಎಕರೆ ಭೂಮಿಯ ಪೈಕಿ 300 ಎಕರೆ ಭೂಮಿಯನ್ನು ಕುರಿ, ಮೇಕೆ, ದನಕರುಗಳನ್ನು ಮೇಯಿಸಲು ಮೀಸಲಿಡಬೇಕು. ಈ ಭೂಮಿಯಲ್ಲಿ ಕಳೆದ 50 ವರ್ಷಗಳಿಂದ ಸಾಗುವಳಿ ಮಾಡುವ ಭೂ ರಹಿತ ಬಡವರಿಗೆ ಪಟ್ಟಾ ಕೊಡಬೇಕು.
- ಮದಕಿನಾಳ ಗ್ರಾಮದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಸಿರುವ ಸಪ್ತಗಿರಿ ಸ್ಟೋನ್ ಕ್ರಷರ್ ಮಾಲಿಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಮತ್ತು ಗಣಿಗಾರಿಕೆಯನ್ನು ನಿಷೇಧಿಸಬೇಕು.
- ಕೃಷ್ಣ 5 ಎ ಮತ್ತು ಬಿ. ಸ್ಕೀಂ ಯೋಜನೆ ಅಡಿಯಲ್ಲಿ ಮಸ್ಕಿ ತಾಲೂಕಿನ ಎಲ್ಲಾ ಹಳ್ಳಿಗಳನ್ನು ಸಂಪೂರ್ಣ ನೀರಾವರಿಗೊಳಪಡಿಸಬೇಕು. ಕನಕನಾಲ ಜಲಾಶಯದ ಆಳು ತೆಗೆದು 14 ಹಳ್ಳಿಗಳ ಭೂಮಿಗೆ ನೀರಾವರಿ ಕಲ್ಪಿಸಬೇಕು.
- ತೀವ್ರ ಮಳೆಯಿಂದ ಸೂರ್ಯಕಾಂತಿ, ತೊಗರೆ, ಸಜ್ಜೆ, ಜೋಳ, ಭತ್ತ, ಈರುಳ್ಳಿ ಸೇರಿದಂತೆ ಇತರೆ ಬೆಳೆಗಳು ನಷ್ಟವಾಗಿವೆ: ರೈತರ ಪ್ರತಿ ಎಕರೆ ಭೂಮಿಗೆ 30-50 ಸಾವಿರ ಪರಿಹಾರ ಒದಗಿಸಬೇಕು. ಕುಸಿದು ಬಿದ್ದಿರುವ ಮನೆಗಳನ್ನು ತೀವ್ರಗತಿಯಲ್ಲಿ ಪುನರ್ ನಿರ್ಮಾಣ ಮಾಡಬೇಕು.
- ಬಹುಗ್ರಾಮ ಯೋಜನೆ ಅಡಿಯಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಶುದ್ಧವಾದ ಕುಡಿಯುವ ನೀರು ಒದಗಿಸಬೇಕು.
- ಹಲವು ಗ್ರಾಮಗಳಲ್ಲಿ ನಿರ್ಮಾಣಗೊಂಡಿರುವ ಶುದ್ದೀಕರಣ ಘಟಕಗಳು ಅನುಪಯುಕ್ತವಾಗಿವೆ. ಕಳಪೆ ಕಾಮಗಾರಿ ಮತ್ತು ತುಕ್ಕು ಹಿಡಿದಿರುವ ಯಂತ್ರಗಳ ಕುರಿತು ತನಿಖೆ ನಡೆಸಬೇಕು.
- ಮಸ್ಕಿ ತಾಲೂಕಿನ ಪಾಮನಕೆಲೂರ, ಕೋಟೆಕಲ್, ಹಾಲಪುರ, ರಾಮಲದಿನ್ನಿ, ಬೋಗಪುರ, ರತ್ನಾಪುರ ಹಟ್ಟಿ, ಗಂಟೆರ ಹಟ್ಟಿ, ವಿರಾಮರ ಇತರೆ ಗ್ರಾಮಗಳಲ್ಲಿ ಸರ್ಕಾರಿ ಭೂಮಿ ಸಾಗುವಳಿ ಮಾಡುವ ರೈತರಿಗೆ ಪಟ್ಟಾ ಒದಗಿಸಬೇಕು. ತಾಲೂಕಿನ ಗ್ರಾಮಗಳಲ್ಲಿರುವ ಸ್ಮಶಾನದ ಸಮಸ್ಯೆಯನ್ನು ಪರಿಹರಿಸಬೇಕು.
ಈ ಮೇಲಿನ ಸಮಸ್ಯೆಗಳ ಪರಿಹರಿಸುವಿಕೆ ಸೇರಿದಂತೆ ಇನ್ನೂ ಹತ್ತಾರು ಸಮಸ್ಯೆಗಳ ಬಗ್ಗೆ ವಿಚಾರ ಸಂಕಿರಣ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅವುಗಳ ಆಧಾರದ ಮೇಲೆ ಕಾಲ್ನಡಿಗೆ ಜಾತವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸುವ ರೈತರನ್ನು ಭಯೋತ್ಪಾದಕರು ಎಂದ ನಟಿ ಕಂಗನಾ!