Homeಕರ್ನಾಟಕಐದು ದಶಕಗಳ ರಾಜ್ಯ ರಾಜಕಾರಣದ ಅಪರೂಪದ ಸಾಕ್ಷಿಪ್ರಜ್ಞೆ: ಎ.ಕೆ.ಸುಬ್ಬಯ್ಯ

ಐದು ದಶಕಗಳ ರಾಜ್ಯ ರಾಜಕಾರಣದ ಅಪರೂಪದ ಸಾಕ್ಷಿಪ್ರಜ್ಞೆ: ಎ.ಕೆ.ಸುಬ್ಬಯ್ಯ

- Advertisement -
- Advertisement -

ತಮ್ಮ ಪ್ರಖರ ಮಾತಿನ ವೈಖರಿಯಿಂದ ಗಮನ ಸೆಳೆಯುತ್ತಿದ್ದ ಸುಬ್ಬಯ್ಯ ಹೋರಾಟ, ಪ್ರಾಮಾಣಿಕತೆ, ಜಾತ್ಯತೀತ ಮೌಲ್ಯಗಳ ಪ್ರತೀಕದಂತಿದ್ದರು. ಮಾತಿನ ಮನೆಯನ್ನು ಮಾತಿನ ಮೂಲಕವೇ ವಶಕ್ಕೆ ಪಡೆದ ಸುಬ್ಬಯ್ಯ ತರಹದ ನಾಯಕರು ಅಪರೂಪ. ನಾಲ್ಕು ಬಾರಿ ಮೇಲ್ಮನೆ ಸದಸ್ಯರಾಗಿದ್ದ ಸುಬ್ಬಯ್ಯ ಅವರು ಆಡಲು ನಿಂತರೆ ಆಡಳಿತ ಪಕ್ಷದವರಿಗೆ ಆತಂಕ, ಗಾಬರಿ ಉಂಟಾಗುತ್ತಿತ್ತು.

ಸದಾ ವಿರೋಧ ಪಕ್ಷದವರಾಗಿಯೇ ಇರಲು ಬಯಸಿದ ಸುಬ್ಬಯ್ಯ ಬಯಸಿದ್ದರೆ ‘ಅಧಿಕಾರ’ ಅವರಿಂದ ದೂರ ಉಳಿಯುತ್ತಿರಲಿಲ್ಲ. ಹಲವು ಬಾರಿ ಅಧಿಕಾರ ಅವರ ಸಮೀಪ ಬಂದು ಹೋದದ್ದಿದೆ. ಅವರು ಅದಕ್ಕಾಗಿ ಆಸೆ ಪಟ್ಟವರಲ್ಲ. ಆಡಳಿತಾರೂಢ ಪಕ್ಷದ ಲೋಪ ಎತ್ತಿ ತೋರಿಸುವ ಯಾವ ಅವಕಾಶವನ್ನೂ ಸುಬ್ಬಯ್ಯ ಕೈ ಬಿಡುತ್ತಿರಲಿಲ್ಲ. ಮಾತಿನ ಚಟಾಕಿಯ ಮೂಲಕ ತಿವಿಯುತ್ತಿದ್ದರು. ಪ್ರಭುತ್ವದ ಅರೆಕೊರೆಗಳನ್ನು ಅವರ ಹಾಗೆ ದಾಖಲಿಸಿದವರು ವಿರಳ.

ಕಾನೂನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ರಾಜಕೀಯದ ರುಚಿ ಕಂಡವರು ಸುಬ್ಬಯ್ಯ. ಪ್ರಬಲ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದ ಪ್ರಜಾ ಸೋಷಲಿಸ್ಟ್ ಪಾರ್ಟಿ (ಪಿಎಸ್‍ಪಿ)ಯ ಅಭ್ಯರ್ಥಿಯ ಪರವಾಗಿ ಭಾಷಣ ಮಾಡುತ್ತಿದ್ದರು. ವೇದಿಕೆಯಲ್ಲಿ ಗಮನ ಸೆಳೆಯುತ್ತಿದ್ದ ಯುವಕ ಸುಬ್ಬಯ್ಯ ಅವರು ಇಂದಿರಾಗಾಂಧಿ ಎಮರ್ಜೆನ್ಸಿ ಹೇರಿದಾಗ ಮೊದಲಿಗೆ ಜೈಲಿಗೆ ಹೋಗಿದ್ದರು. ಮತ್ತು ಕೊನೆಯವರಾಗಿ ಹೊರ ಬಂದರು. ಜೈಲಿನಲ್ಲಿ ಮಾಂಸಾಹಾರ-ಶಾಖಾಹಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಬಂದಾಗ ಸುಬ್ಬಯ್ಯನವರು ‘ಆಹಾರ ಸ್ವಾತಂತ್ರ್ಯ’ದ ಪರವಾಗಿ ನಿಂತಿದ್ದರು.

ಸೆರೆಯಿಂದ ಹೊರ ಬಂದ ನಂತರ ಕೆಲಕಾಲ ಜನತಾ ಪಕ್ಷದ ಜೊತೆಗಿದ್ದ ಅವರು ನಂತರ ಭಾರತೀಯ ಜನ ಸಂಘದ ಮುಖ್ಯಸ್ಥರಾದರು. ಮುಂದೆ ಅದು ಭಾರತೀಯ ಜನತಾ ಪಕ್ಷ (ಬಿಜೆಪಿ) ಆದಾಗ ರಾಜ್ಯದಲ್ಲಿ ಅದರ ಚುಕ್ಕಾಣಿ ಹಿಡಿದಿದ್ದರು. ಬಲಪಂಥೀಯ (?) ಪಕ್ಷದ ಜೊತೆಗೆ ಗುರುತಿಸಿಕೊಳ್ಳುವಾಗ ಸುಬ್ಬಯ್ಯ ಅವರಿಗೆ ಕಾಣಿಸಿದ್ದು ಅದರ ಭ್ರಷ್ಟಾಚಾರ ವಿರೋಧಿ ನಿಲುವು. ಬಿಜೆಪಿಯ ಪ್ರಮುಖ-ಹಿರಿಯ ನಾಯಕರ ಜೊತೆ ಹತ್ತಿರದ ಒಡನಾಟ ಹೊಂದಿದ್ದ ಸುಬ್ಬಯ್ಯ ಅವರು ರಾಜ್ಯ ಅಧ್ಯಕ್ಷರಾಗುವುದಕ್ಕೆ ಅಡೆತಡೆಗಳೇ ಇರಲಿಲ್ಲ. 1983ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸರ್ಕಾರದ ಭಾಗವಾಗದೇ ಹೊರಗಿನಿಂದ ಬೆಂಬಲ ನೀಡುವ ನಿಲುವು ತಳೆಯುವುದಕ್ಕೆ ಸುಬ್ಬಯ್ಯ ಅವರೇ ಕಾರಣರಾಗಿದ್ದರು.

ಸುಬ್ಬಯ್ಯ ಚುನಾವಣಾ ರಾಜಕೀಯದಲ್ಲಿ ಕಾಣಿಸಿಕೊಂಡದ್ದು ಬಹಳ ಕಡಿಮೆ. ಒಮ್ಮೆ ಮಾತ್ರ ಅವರು 1979ರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಕರ್ನಾಟಕದಲ್ಲಿ ಬಿಜೆಪಿಗೆ ಆರಂಭದಲ್ಲೇ ಭದ್ರ ನೆಲೆ ಒದಗಿಸಿದವರಲ್ಲಿ ಸುಬ್ಬಯ್ಯ ಪ್ರಮುಖರು ಎಂಬುದರಲ್ಲಿ ಎರಡು ಮಾತಿಲ್ಲ. ರಾಜ್ಯದಲ್ಲಿ ಪಕ್ಷದ ಅಧ್ಯಕ್ಷರಾದ ನಂತರ ಆರ್‍ಎಸ್‍ಎಸ್ ಮೂಗು ತೂರಿಸುವುದಕ್ಕೆ ಅಡ್ಡಿಯುಂಟು ಮಾಡಿದರು. ಆರ್‍ಎಸ್‍ಎಸ್ ಜೊತೆಗಿನ ಅವರ ಸಂಘರ್ಷ ಪಕ್ಷ ತೊರೆಯುವುದಕ್ಕೂ ಕಾರಣವಾಯಿತು. ‘ಆರ್‍ಎಸ್‍ಎಸ್. ಅಂತರಂಗ’ ಕೃತಿ ಸುಬ್ಬಯ್ಯನವರ ಪ್ರಖರ ವೈಚಾರಿಕತೆಗೆ ಹಿಡಿದ ಕನ್ನಡಿಯಂತಿದೆ.

ವಿಚಾರದ ಖಚಿತತೆ ಸುಬ್ಬಯ್ಯನವರ ವೈಶಿಷ್ಟ್ಯ. ಅದರ ಜೊತೆಗೆ ನೇರಾನೇರ ಹೇಳುವ ಗುಣ ಅವರಿಗೆ ಮಿತ್ರರಿಗಿಂತ ಶತ್ರುಗಳ ಸಂಖ್ಯೆ ಹೆಚ್ಚುವುದಕ್ಕೆ ಕಾರಣವಾಗಿತ್ತು. ಮಾತು ಅವರ ಶಕ್ತಿಯಾಗಿತ್ತು. ಹಾಗೆಯೇ ಅದೇ ಅವರ ಮಿತಿಯೂ ಆಗಿತ್ತು. ಮಾತಿನ ಮೂಲಕ ಬಹಳಷ್ಟನ್ನು ಪಡೆದ ಸುಬ್ಬಯ್ಯ ಅದೇ ಮಾತಿನಿಂದ ಹಲವನ್ನು ಕಳೆದುಕೊಂಡರು. ಆ ಬಗ್ಗೆ ಅವರಿಗೆ ವಿಷಾದವೇನಿರಲಿಲ್ಲ.

ಅಧಿಕಾರಕ್ಕಾಗಿ ಹಪಾಹಪಿಸದ ಅವರ ನಿಲುವು ಅವರ ವ್ಯಕ್ತಿತ್ವದ ಗಟ್ಟಿತನಕ್ಕೆ ಕಾರಣವಾಗಿತ್ತು. ಯಾರೂ ಅವರಿಗೆ ಆಮಿಷ ಒಡ್ಡುವುದು ಸಾಧ್ಯವಿರಲಿಲ್ಲ. ಅಂತಹ ಎದೆಗಾರಿಕೆ ಆಡಳಿತ ಪಕ್ಷದ ಯಾವ ನಾಯಕನ ಬಳಿಯಲ್ಲಿಯೂ ಇರಲಿಲ್ಲ.

ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮೇಲ್ಮನೆಯ ಅಖಾಡದಲ್ಲಿ ಸುಬ್ಬಯ್ಯನವರ ಮಾತಿನ ವೈಖರಿ ಆರಂಭವಾಯಿತು. ಅದು ಎಷ್ಟರ ಮಟ್ಟಿಗೆ ಪ್ರಭಾವಶಾಲಿ ಆಗಿತ್ತೆಂದರೆ ಅರಸು ಮೇಲ್ಮನೆಯನ್ನು ‘ಇಲ್ಲ’ವಾಗಿಸುವ ಯೋಚನೆ ಮಾಡಿದ್ದರು.

ಅರಸು ನಂತರ ಮುಖ್ಯಮಂತ್ರಿಯಾದ ಗುಂಡೂರಾವ್ ಅವರಿಗೂ ಹಾಗೂ ಅವರ ಸಂಪುಟದ ಸದಸ್ಯರಿಗೂ ಸುಬ್ಬಯ್ಯ ದುಃಸ್ವಪ್ನವಾಗಿದ್ದರು. ದೀರ್ಘ ಕಾಲದ ಕಾಂಗ್ರೆಸ್ ಆಡಳಿತದ ಅವಧಿ ಮುಗಿದು ಕಾಂಗ್ರೇಸ್ಸೇತರ ಜನತಾ ಸರ್ಕಾರ ಅಧಿಕಾರಕ್ಕೆ ಬಂದರೂ ಸುಬ್ಬಯ್ಯನವರ ಆರ್ಭಟವೇನೂ ಕಡಿಮೆಯಾಗಲಿಲ್ಲ. ಹೆಗಡೆ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವಲ್ಲಿ ಸುಬ್ಬಯ್ಯನವರ ಪಾತ್ರ ಗಮನಾರ್ಹವಾದದ್ದು.

ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ನೆಲೆ ನಿಲ್ಲಲು ಕಾರಣರಾದ ಕಾನ್ಶಿರಾಮ್ ಅವರ ಪ್ರೀತಿ-ಆಗ್ರಹಕ್ಕೆ ಮಣಿದು ಪಕ್ಷ ಸೇರಿದ ಸುಬ್ಬಯ್ಯ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದರು. ವಿಧಾನಸಭೆಯಲ್ಲಿ ಪಕ್ಷದ ಪ್ರತಿನಿಧಿ ಕಾಣಿಸಿಕೊಳ್ಳಲು ಕಾರಣರಾಗಿದ್ದರು. ಪಕ್ಷದೊಳಗಿನ ಅಸಹನೆ-ಧೋರಣೆಯಿಂದ ಹೆಚ್ಚು ಕಾಲ ಬಿಎಸ್‍ಪಿಯಲ್ಲಿಯೂ ಉಳಿಯಲಿಲ್ಲ. ಕಾಂಗ್ರೆಸ್ ಪಕ್ಷ ಸೇರಿದ ಸುಬ್ಬಯ್ಯ ಅವರು ಅಲ್ಲಿದ್ದದ್ದು ತೀರಾ ಕಡಿಮೆ ಅವಧಿಗೆ.

ಬಲಪಂಥೀಯರು ಪ್ರಭುತ್ವದ ಚುಕ್ಕಾಣಿ ಹಿಡಿಯುವುದರ ವಿರುದ್ಧ ಸುಬ್ಬಯ್ಯ ಅವರು ಬಹುತ್ವದ ನೆಲೆಯಿಂದ ದೇಶ ಕಟ್ಟಬಯಸುವ ಧೋರಣೆ ಉಳ್ಳವರಾಗಿದ್ದರು. ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ-ಧರ್ಮ ನಿರಪೇಕ್ಷ ನಿಲುವು ಅವರ ಆಸಕ್ತಿ ಹಾಗೂ ಕಾಳಜಿಗಳಾಗಿದ್ದವು. ಅದಕ್ಕಾಗಿ ಅವರು ಬೀದಿಗೆ ಇಳಿಯಲು ಎಂದೂ ಹಿಂದೇಟು ಹಾಕಿದವರಲ್ಲ. ‘ಸಮೂಹ ಸನ್ನಿ’ಯ ವಿರುದ್ಧದ ನಿಲುವು ತಳೆಯುವ ಧಾಷ್ಟ್ರ್ಯ ಮತ್ತು ಎದೆಗಾರಿಕೆಗಳೆರಡೂ ಅವರಿಗಿದ್ದವು. ರಾಜ್ ಅಭಿಮಾನಿಗಳನ್ನು ಎದುರಿಸಿದ ರೀತಿಯೇ ಅದಕ್ಕೆ ಸಾಕ್ಷಿ.

ಸುಬ್ಬಯ್ಯನವರ ರಾಜಕೀಯ-ಸಾಮಾಜಿಕ ಬದುಕು ಕರ್ನಾಟಕದ ರಾಜಕೀಯ-ಸಾಮಾಜಿಕ ಬದುಕಿನೊಂದಿಗೆ ತಳುಕು ಹಾಕಿಕೊಂಡಿದೆ. ಸುಬ್ಬಯ್ಯನವರ ಗೆಲುವು ರಾಜ್ಯ ರಾಜಕಾರಣದ ದಿಕ್ಕು ಬದಲಿಸುವುದಕ್ಕೆ ಕಾರಣವಾಗಿದೆ. ಹಾಗೆಯೇ ಅವರ ‘ಸೋಲು’ ಇಂದಿನ ದುಸ್ಥಿತಿಗೆ ದಾರಿ ಮಾಡಿಕೊಟ್ಟಿದೆ. ಕರ್ನಾಟಕದ ಸಾಕ್ಷಿಪ್ರಜ್ಞೆಯಂತಿದ್ದ ಸುಬ್ಬಯ್ಯ ಅವರು ಜೀವಪರ-ಜನಪರ ಕಾಳಜಿಯಿದ್ದ ಅಪರೂಪದ ನಾಯಕ. ‘ಮಾದರಿ’ ನಾಯಕರಾಗಿದ್ದ ಸುಬ್ಬಯ್ಯ ಅವರ ನಿರ್ಗಮನದಿಂದ ತೆರವಾದ ಸ್ಥಳವನ್ನು ಯಾರೂ ತುಂಬಲು ಸಾಧ್ಯವಿಲ್ಲ. ತುಂಬದ-ತುಂಬಲಾಗದ ‘ಸ್ಥಿತಿ’ ಕರ್ನಾಟಕದ ಸಾರ್ವಜನಿಕ ಬದುಕು ತಲುಪಿರುವ ದುಸ್ಥಿತಿಯ ದ್ಯೋತಕ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ....

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...