Homeಅಂತರಾಷ್ಟ್ರೀಯಟಿಪ್ಪುಸುಲ್ತಾನರ ವಂಶಜರಾದ ನೂರ್ ಇನಾಯತ್‍ಖಾನಳ ಸಾಹಸಗಾಥೆ ನಿಮಗೆ ಗೊತ್ತೆ?

ಟಿಪ್ಪುಸುಲ್ತಾನರ ವಂಶಜರಾದ ನೂರ್ ಇನಾಯತ್‍ಖಾನಳ ಸಾಹಸಗಾಥೆ ನಿಮಗೆ ಗೊತ್ತೆ?

- Advertisement -
- Advertisement -

ವೈಚಾರಿಕ ಚರಿತ್ರೆ ಕೆಲವೊಮ್ಮೆ ಊಹಾತೀತವಾಗಿ ಚಲಿಸಿಬಿಡುತ್ತದೆ. ಇದಕ್ಕೆ ನೂರ್ ಇನಾಯತ್‍ಖಾನಳ (1914-1944) ಬಾಳುವೆ ಸಾಕ್ಷಿ. ಟಿಪ್ಪುಸುಲ್ತಾನರ ವಂಶಜರಾದ ಸೂಫಿದಾರ್ಶನಿಕನ ಮಗಳಾದ ಈಕೆ, ರಷ್ಯಾದಲ್ಲಿ ಹುಟ್ಟಿದವಳು; ಎರಡನೇ ಮಹಾಯುದ್ಧದಲ್ಲಿ ಇಂಗ್ಲೆಂಡಿನ ಗೂಢಚಾರಿಣಿಯಾಗಿ ಫ್ರಾನ್ಸಿಗೆ ಹೋಗಿ, ಜರ್ಮನಿಯ ನಾಜಿಗಳ ಕೈಯಲ್ಲಿ ಸಿಕ್ಕು, ಡಕಾವ್ ಕಾನ್ಸಂಟ್ರೇಶನ್ ಕ್ಯಾಂಪಿನಲ್ಲಿ ಜೀವಂತ ಸುಟ್ಟುಹೋದವಳು.

ಅವಳ ಪೂರ್ವಜ ಟಿಪ್ಪು, ಬ್ರಿಟಿಷರನ್ನು ಆಜನ್ಮವೈರಿಗಳೆಂದು ಪರಿಭಾವಿಸಿ ಜೀವನವಿಡೀ ಅವರ ವಿರುದ್ಧ ಹೋರಾಡುತ್ತ, ರಣರಂಗದಲ್ಲಿ ನೆತ್ತರು ಹರಿಸುತ್ತ ಪ್ರಾಣಬಿಟ್ಟಿದ್ದನು. ಅವನ ವಂಶದ ಕುಡಿಯೊಂದು ಒಂದೂವರೆ ಶತಮಾನದ ನಂತರ, ಇದೇ ಬ್ರಿಟಿಷರ ಪ್ರತಿನಿಧಿಯಾಗಿ ಹೋಗಿ, ಸಜೀವ ದಹನವಾಯಿತು. ಟಿಪ್ಪುವನ್ನು ಕೊಂದು ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ರಹದಾರಿ ಮಾಡಿಕೊಂಡ ಬ್ರಿಟಿಷರೇ, ಟಿಪ್ಪುವಿನ ವಂಶದ ಕುಡಿಯನ್ನು ತಮ್ಮ ಯುದ್ಧದಲ್ಲಿ ಉಪಕರಣವಾಗಿ ಬಳಸಿದರು. ಚರಿತ್ರೆಯ ವೈರುಧ್ಯವೆಂದರೆ ಇದೇ ಇರಬೇಕು. ಈ ವೈರುಧ್ಯವನ್ನು ಕೊಲ್ಕತ್ತೆಯಲ್ಲಿರುವ ಟಿಪ್ಪುಸುಲ್ತಾನ ಮಸೀದಿಯಲ್ಲಿ ಕೂಡ ಕಾಣಬಹುದು. ಈ ಮಸೀದಿಯನ್ನು ಬ್ರಿಟಿಷರು ಟಿಪ್ಪು ವಂಶಜರಿಗೆ ಕೊಟ್ಟ ಪರಿಹಾರದ ಹಣದಲ್ಲಿ ಕಟ್ಟಲಾಯಿತು. ಅದೂ ಬ್ರಿಟಿಷ್ ವಾಸ್ತುಶಿಲ್ಪದ ವಿನ್ಯಾಸದಲ್ಲಿ!

ಒಂದೇ ಕುಟುಂಬದಲ್ಲಿ ಹುಟ್ಟಿದ ಆದರೆ ಬೇರೆಬೇರೆ ಕಾಲಘಟ್ಟಕ್ಕೆ ಸೇರಿದ ಟಿಪ್ಪು ಮತ್ತು ನೂರ್ ಇಬ್ಬರಲ್ಲೂ ಒಂದು ವಿಷಯದಲ್ಲಿ ಸಮಾನತೆಯಿದೆ. ಅದೆಂದರೆ, ಟಿಪ್ಪು ಹಾಗೂ ನೂರ್, ವಸಾಹತುಶಾಹಿ ಮತ್ತು ಫ್ಯಾಸಿಸಂ ಎಂಬ ನಾಗರಿಕ ಸಮಾಜ ಕಂಡ ಎರಡು ರೋಗಗ್ರಸ್ತ ರಾಜಕೀಯ ವ್ಯವಸ್ಥೆಗಳ ವಿರುದ್ಧ ಸೆಣಸಾಡಿದವರು. ಮನುಕುಲಕ್ಕೆ ಮಹಾಕಂಟಕವಾಗಿದ್ದ ಫ್ಯಾಸಿಸಂ ಮುಂದೆ ವಸಾಹತುಶಾಹಿಯು ಆಮೇಲೆ ವಿಚಾರಿಸಿಕೊಳ್ಳಬಹುದಾದ, ಚಿಕ್ಕಶತ್ರುವಾಗಿ ಕಾಣಿಸಿತು. ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಕಾಂಗ್ರೆಸ್, ಸ್ವತಃ ಫ್ಯಾಸಿಸಂ ವಿರುದ್ಧ ಹೋರಾಡಲು ಬ್ರಿಟಿಷರ ಜತೆ ಕೈಜೋಡಿಸಬೇಕೆಂದು ಕರೆಗೊಟ್ಟಿದ್ದು ಇದೇ ಹಿನ್ನೆಲೆಯಲ್ಲಿ. ಇದರ ಭಾಗವಾಗಿ ನೂರಳ ಸೈನಿಕ ಸೇವೆಯನ್ನು ಗಮನಿಸಬೇಕು.

ಇಂತಹ ಅಪರೂಪದ ಮತ್ತು ಬಹಳ ಜನರಿಗೆ ತಿಳಿಯದ ವ್ಯಕ್ತಿಯಾದ ನೂರ್ ಬಗ್ಗೆ, ಕನ್ನಡದ ಯುವಲೇಖಕರಾದ ಚಂದ್ರಶೇಖರ ಮಂಡೆಕೋಲು ಅವರು ವ್ಯಾಪಕವಾದ ಹುಡುಕಾಟ ಮಾಡಿ ಜೀವನಚರಿತ್ರೆಯನ್ನು ರಚಿಸಿದ್ದಾರೆ. ಅದರ ಹಸ್ತಪ್ರತಿಯನ್ನು ಓದುತ್ತ ಅದರ ವಿಶಿಷ್ಟತೆಗಳನ್ನು ಓದುಗರಿಗೆ ಹಂಚಿಕೊಳ್ಳಬೇಕು ಅನಿಸಿತು. ನನಗೆ ನೂರಳ ತಂದೆ ಹಜರತ್ ಇನಾಯತ್ ಖಾನರ ಬಗ್ಗೆ ತುಸು ಗೊತ್ತಿತ್ತು. ಪಂಡಿತ ರವಿಶಂಕರರ ಹಾಗೆ, ನುಸ್ರತ್‍ಫತೇ ಅಲಿಖಾನರ ಹಾಗೆ ಇನಾಯತ್ ಖಾನ್ (1882-1927) ಭಾರತದ ಉಪಖಂಡದ ಸಂಗೀತವನ್ನು ಪಶ್ಚಿಮದ ಜತೆ ಸಮ್ಮಿಲನಗೊಳಿಸುವ ಕಾರ್ಯ ಮಾಡಿದವರು. ಅವರಿಗೆ ಸೂಫೀ ದೀಕ್ಷೆ ಕೊಟ್ಟವರು ಹೈದರಾಬಾದಿನ ಇಬ್ಬರು ಸೂಫಿಸಂತರು.

ಹಜರತ್ ಇನಾಯತ್ ಖಾನ್

ಹುಮನಾಬಾದಿನ ಮಾಣಿಕಪ್ರಭುಗಳ ಗದ್ದಿಗೆಗೆ ಇನಾಯತ್ ಖಾನರು ಬಂದುಹೋಗುತ್ತಿದ್ದರು. ನಾನು ದೆಹಲಿಗೆ ಹೋದಾಗಲೆಲ್ಲ ಹಜರತ್ ನಿಜಾಮುದ್ದೀನ್ ದರ್ಗಾದ ಹಿಂಬದಿಯಲ್ಲಿರುವ ಅವರ ದರ್ಗಾಕ್ಕೆ ಹೋಗುವುದುಂಟು. ಅವರ ಮೇಲೆ ಲೇಖನವನ್ನೂ ಪ್ರಕಟಿಸಿದ್ದುಂಟು. ಆದರೆ ಅವರ ಮಗಳು ನೂರ್ ಇನಾಯತ್ ಖಾನರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಮಂಡೆಕೋಲು ಅವರ ವಿಸ್ತಾರವಾದ ಸಂಶೋಧನೆಯ ಫಲಶೃತಿಯಾಗಿರುವ ಈ ಕೃತಿ, ನೂರಳ ಚರಿತ್ರೆಯನ್ನು ತಿಳಿಸಿಕೊಟ್ಟಿತು. ನೂರಳ ಈ ಜೀವನ ಚರಿತ್ರೆಯು ನಾಲ್ಕು ಆಯಾಮಗಳನ್ನು ಒಳಗೊಂಡಿದೆ.

ಮೊದಲನೆಯದು- ಕುಟುಂಬಕೇಂದ್ರಿತ ಆಯಾಮ. ಈ ಭಾಗವು ನೂರ್ ಇನಾಯತ್ ಖಾನರ ಕುಟುಂಬ, ಖಾನರು ಸೂಫಿ ದಾರ್ಶನಿಕರೂ ಸಂಗೀತಗಾರರೂ ಆಗಿ ರೂಪುಗೊಂಡ ಬಗೆ, ಮಾಡಿದ ದೇಶಾಂತರಗಳ ತಿರುಗಾಟ, ಮಕ್ಕಳನ್ನು ಸರ್ವಧರ್ಮದ ಸಮಭಾವದಲ್ಲಿ ಬೆಳೆಸುವ ಕಥನವನ್ನು ಒಳಗೊಂಡಿದೆ.

ಎರಡನೆಯದು- 20ನೇ ಶತಮಾನದ ಮೊದಲ ಭಾಗದಲ್ಲಿ ಸಂಭವಿಸಿದ ವಸಾಹತುಶಾಹಿ ಕಾಲಘಟ್ಟದ ಯುದ್ಧಗಳ ಕಥೆ. ಇಲ್ಲಿ ಫ್ಯಾಸಿಸಂ ವಿರೋಧಿಸುವ ಜಾಗತಿಕ ಚಳುವಳಿಯಲ್ಲಿ ಭಾಗವಹಿಸುವ ಇಂಗ್ಲೆಂಡಿನ ಪ್ರಜೆಯಾದ ನೂರ್ ದಾರುಣವಾಗಿ ಕೊಲೆಯಾಗುವ ಭಾಗ ಬರುತ್ತದೆ. ಇಲ್ಲಿ ನೂರಳ ಜೀವನಚರಿತ್ರೆಯು ದಾರುಣವೂ ಮೈನವಿರೇಳಿಸುವ ಘಟನೆಗಳಿಂದಲೂ ಕೂಡಿದ್ದು, ಪತ್ತೇದಾರಿ ಕಥೆಯಿದ್ದಂತಿದೆ. ಇದಕ್ಕೆ ಕಾರಣ, ಆಕೆ ಗೂಢಚಾರಿಣಿಯಾಗಿ ಅಪಾಯಕರವಾದ ನಾಜಿಗಳ ನಡುವೆ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದು. ಅದು ಯಾವುದೇ ಕ್ಷಣದಲ್ಲಿ ಪ್ರಾಣಹೋಗುವ ಕಾರ್ಯದಲ್ಲಿ ಮೂವತ್ತು ವರ್ಷದ ಈ ಸುಂದರಿ ಪ್ರಾಣತೆತ್ತಳು.

ಈಚೆಗೆ ಇಂಗ್ಲೆಂಡು ಆಕೆಯನ್ನು ಹುತಾತ್ಮಳೆಂದು ಕರೆದು ಗೌರವಿಸಿತು. ಆಕೆಯ ಹೆಸರಲ್ಲಿ ಸ್ಮಾರಕವನ್ನೂ ನಿರ್ಮಿಸಿತು. ಈ ಗೌರವವನ್ನು ಬ್ರಿಟಿಷರು ಹೂಡಿದ ಯುದ್ಧಗಳಲ್ಲಿ ಹಲವಾರು ದೇಶಗಳಿಗೆ ಹೋಗಿ ಮಡಿದ ಭಾರತೀಯ ಸೈನಿಕರಿಗೆ ಸಿಕ್ಕಿಲ್ಲ. ಗೌರವ ಸಿಕ್ಕಿರಲಿ ಸಿಗದಿರಲಿ, ವಸಾಹತುಗಳಿಗೆ ಸೇರಿದ ಜನ ವಸಾಹತುಶಾಹಿ ಹೂಡುವ ಯುದ್ಧಗಳಲ್ಲಿ ಉಪಕರಣವಾಗಿ ಬಳಕೆಯಾದ ವಾಸ್ತವವನ್ನು ಅಲ್ಲಗಳೆಯುವಂತಿಲ್ಲ.

ನೂರ್ ಫ್ಯಾಸಿಸಂ ವಿರುದ್ಧ ಹೋರಾಡುವ ದಿಟ್ಟತನ ತೋರಿದಳು. ಆದರೆ ಅವಳು ಬ್ರಿಟಿಷರಿಗೆ ಉಪಕರಣವಾಗಿ ಕೂಡ ಬಳಕೆಯಾದವಳು. ಅವಳ ಕೌಟುಂಬಿಕ ತಬ್ಬಲಿತನ ಬಡತನ ವಲಸೆ ಅಭದ್ರತೆಗಳು ಕೂಡ ಈ ಅಪಾಯಕಾರಿ ಕೆಲಸಕ್ಕೆ ಆಕೆಯನ್ನು ದೂಡಿದವು. ಹೀಗಾಗಿ ನೂರಳ ಜೀವನ ಚರಿತ್ರೆಯು, ಸೂಫಿ ಸಂಗೀತಗಾರನ ಕುಟುಂಬವೊಂದರ ಏಳುಬೀಳುಗಳನ್ನು 19-20ನೇ ಶತಮಾನದ ಜಗತ್ತಿನ ಏಳುಬೀಳಿನ ವಿದ್ಯಮಾನಗಳೊಂದಿಗೆ ಬೆಸೆದುಕೊಂಡಿದೆ. ಈ ಏಳುಬೀಳುಗಳಲ್ಲಿ ಮೈಸೂರು ಒಡೆಯರ ಹಾಗೂ ರಾಜಸ್ಥಾನದ ರಾಜರ ದೇಶೀಚರಿತ್ರೆಯೂ ಸೇರಿಕೊಳ್ಳುತ್ತದೆ. ಮೈಸೂರಿನಿಂದ ಶುರುವಾಗಿ ಅಮೆರಿಕ ರಷ್ಯ ಇಂಗ್ಲೆಂಡ್ ಫ್ರಾನ್ಸ್ ಹೀಗೆ ಸುತ್ತಾಡುವ ಈ ಚರಿತ್ರೆಯು, ಅಂತಾರಾಷ್ಟ್ರೀಯ ಆಯಾಮವುಳ್ಳ ಕರ್ನಾಟಕದ ಚರಿತ್ರೆಯನ್ನು ಕಟ್ಟಿಕೊಡುತ್ತದೆ.

ಮೂರನೆಯದು- ದಾರ್ಶನಿಕವಾಗಿ ಸೂಫಿಸಂ ಹಾಗೂ ಕಲೆಯಾದ ಸಂಗೀತಗಳು ಭಾರತದಲ್ಲಿ ಪರಸ್ಪರ ಕೂಡಿಬೆರೆತು ರೂಪುಗೊಂಡ ಸಾಂಸ್ಕೃತಿಕ ಕಥನ. ಅದು ರೂಪಿಸುವ ಅಂತಾರಾಷ್ಟ್ರೀಯ ಪ್ರಜ್ಞೆ, ಮಾನವತಾವಾದ ಹಾಗೂ ವಿಶ್ವಮಾನವ ಪ್ರಜ್ಞೆಗಳು. ಚರಿತ್ರೆ ಸಂಗೀತ ಮತ್ತು ದರ್ಶನಗಳನ್ನು ವಸಾಹತುಶಾಹಿ ಆಳ್ವಿಕೆಯ ವಿದ್ಯಮಾನಗಳ ಚೌಕಟ್ಟಿನಲ್ಲಿಟ್ಟು ಕಾಣಿಸುವುದರಿಂದ, ಕೃತಿಯು ಏಕಕಾಲಕ್ಕೆ ಕಲೆ ತತ್ವಶಾಸ್ತ್ರ ರಾಜಕಾರಣ ಹಾಗೂ ಚರಿತ್ರೆಯ ಕೃತಿಯಾಗಿದೆ. ಗಂಡುಹೆಣ್ಣಿನ ಪ್ರೇಮವನ್ನು, ವ್ಯಕ್ತಿಗಳ ಅನುಭಾವದ ಸಾಧನೆಯನ್ನು, ಸಂಗೀತದ ಅಭಿರುಚಿಯನ್ನು ಒಂದು ಕೇಂದ್ರಕ್ಕೆ ತರುತ್ತದೆ. ಈ ಮೂಲಕ ಭಾರತದ ಧಾರ್ಮಿಕ ಸಾಮರಸ್ಯದ ಅಪೂರ್ವ ಪರಂಪರೆಯನ್ನು ಕಾಣಿಸುತ್ತದೆ. ಈ ಪರಂಪರೆಯ ಒಳಗಿನ ಮಾನವೀಯ ಸಂಬಂಧಗಳನ್ನು ಶೋಧಿಸುತ್ತದೆ. ಈ ಕಾರಣಕ್ಕಾಗಿ ಇದು ಸಾಂಸ್ಕೃತಿಕ ಪಠ್ಯವೂ ಆಗಿದೆ.

ನಾಲ್ಕನೆಯದು-ಮಹಿಳೆಯರ ಚೈತನ್ಯಶೋಧಕ ಕೃತಿಯಾಗಿರುವುದು. ಇಲ್ಲಿ ನೂರಳ ಸಾಹಸಗಾಥೆಯ ಜತೆಗೆ ಎಲೆಮರೆಯ ಪಾತ್ರದಂತಿರುವ ನೂರಳ ತಾಯಿ ನೋರಾ ಬೇಕರ್ ಉರುಫ್ ಶಾರದಾ ಅಮೀನಾಬೇಗಮರ ಕತೆ ಸೆಳೆಯುತ್ತದೆ. ತಾನು ಪ್ರೀತಿಸಿದ ಇನಾಯತ್‍ಖಾನರ ಜತೆ ಬದುಕಲು, ತನ್ನ ಕುಟುಂಬದವರ ಪ್ರತಿರೋಧವನ್ನು ಲೆಕ್ಕಿಸದೆ, ಸಿರಿವಂತ ಬದುಕನ್ನು ತೊರೆದು ಆಕೆ ಬಂದವರು. ಬಂದಬಳಿಕ ಅಲೆಮಾರಿಯಾಗಿದ್ದ ಇನಾಯತ್ ಖಾನರ ಜತೆ ನಿಂತು, ದೇಶಾಂತರ ತಿರುಗುವ, ನಿರಂತರ ಕಷ್ಟಗಳನ್ನು ಹಂಚಿಕೊಂಡು ಬದುಕುವ ಕಠೋರದಾರಿಗೆ ಮೈಯೊಡ್ಡಿದವರು. ಬದುಕಿನ ಯಾವುದೊ ಒಂದು ಘಟ್ಟದಲ್ಲಿ ಗಂಡಸರು ಸಂಸಾರ ವಿಮುಖರಾಗಿ ತಮ್ಮ ಕಲೆಯಲ್ಲೊ ಅನುಭಾವದಲ್ಲೊ ತಲೆಮರೆಸಿಕೊಂಡಾಗ, ಸಂತಾನವನ್ನು ಪೋಷಿಸುವ ಹಾಗೂ ಕುಟುಂಬವು ಕುಸಿಯದಂತೆ ಹಿಡಿದುಕೊಳ್ಳುವ ಹೊಣೆಯನ್ನು ಮಹಿಳೆಯರು ಹೊರುತ್ತಾರೆ. ಅದು ಫ್ಯಾಸಿಸಂ ವಿರುದ್ಧದ ಯುದ್ಧಕ್ಕಿಂತ ಯಾವ ಬಗೆಯಲ್ಲೂ ಕಡಿಮೆಯಿಲ್ಲ. ಹೀಗಾಗಿ ಈ ಕೃತಿಯ ಅದೃಶ್ಯ ನಾಯಕಿ ನೂರಳ ತಾಯಿ. ಈಕೆ ಗಾರ್ಕಿಯ ‘ಮದರ್’ ಕಾದಂಬರಿಯ ತಾಯಿಯನ್ನು ನೆನಪಿಸುವರು.

ಚಂದ್ರಶೇಖರ ಮಂಡೆಕೋಲು

ಚಂದ್ರಶೇಖರ ಮಂಡೆಕೋಲು ಅವರು ಈಗಾಗಲೇ ಭಾರತದ ಮೊದಲ ವೈದ್ಯೆ ಆನಂದಿಬಾಯಿ ಮೇಲೆ ಕೃತಿ ರಚಿಸಿದವರು. ಕನ್ನಡದಲ್ಲಿ ಮಂಡೆಕೋಲು, ಎಂ.ಆರ್.ಕಮಲಾ, ಜಗದೀಶ ಕೊಪ್ಪ, ವೇಣುಗೋಪಾಲ-ಶೈಲಜ ಅವರು, ಕಳೆದ ಕೆಲವು ವರ್ಷಗಳಿಂದ ಮಹಿಳಾ ಸಾಧಕಿಯರ ಮೇಲೆ ಕೃತಿ ರಚಿಸಿದರು. ವೃತ್ತಿಪರ ಇತಿಹಾಸಕಾರರಲ್ಲದ ಇವರು, ರಾಜಮಹಾರಾಜರ ಕ್ಲಾಸಿಕಲ್ ಚರಿತ್ರೆಯು ಅವಗಣಿಸಿರುವ ಅಜ್ಞಾತರೂ ಮಹತ್ವದವರೂ ಆದ ವ್ಯಕ್ತಿಗಳ ಮೇಲೆ ಚರಿತ್ರೆ ಕಟ್ಟುತ್ತಿರುವರು. ಇದು ಸಾಂಪ್ರದಾಯಿಕ ಚರಿತ್ರೆಯನ್ನು ಬೇರೊಂದೇ ಬಗೆಯಲ್ಲಿ ನೋಡಲು ನಮ್ಮನ್ನು ಒತ್ತಾಯಿಸಬಲ್ಲದಾಗಿದೆ.

ಹೀಗೆ ವ್ಯಕ್ತಿ, ಕುಟುಂಬ, ದೇಶ ಮತ್ತು ಪರಂಪರೆಗಳ ನಾಲ್ಕು ಆಯಾಮಗಳನ್ನು ಒಳಗೊಂಡಿರುವ, ಒಬ್ಬ ಮಹಿಳೆಯ ಮೇಲೆ ಜೀವನಚರಿತ್ರೆಯನ್ನು ಶ್ರದ್ಧೆಯಿಂದ ರಚಿಸಿರುವುದಕ್ಕಾಗಿ ಚಂದ್ರಶೇಖರ ಮಂಡೆಕೋಲು ಅವರಿಗೆ ಕನ್ನಡದ ಓದುಗರ ವತಿಯಿಂದ ಕೃತಜ್ಞತೆ ಸಲ್ಲಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...

SIR: ಚುನಾವಣಾ ಆಯೋಗ ನೀಡಿದ ಅಂಕಿ ಅಂಶಕ್ಕೂ, ಬೆಂಗಳೂರು ಮತದಾರರ ಪಟ್ಟಿಗೂ ತಲೆಬುಡವಿಲ್ಲ, ಮತ ಕಾವಲು ಸಮಿತಿ ಆರೋಪ

ರಾಜ್ಯದಲ್ಲಿ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಬೆಂಗಳೂರು ನಗರದ ಶೇಕಡಾ 48.41 ರಷ್ಟು—ಅಂದರೆ ಸುಮಾರು ಇಬ್ಬರಲ್ಲಿ ಒಬ್ಬ ಮತದಾರನನ್ನು—ಆಗಸ್ಟ್ 17ರ ಒಳಗಾಗಿ ಮತದಾರರ...

ಬೆಂಗಳೂರಿನಲ್ಲಿ ಮುಂದುವರೆದ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ: ಯುಬಿ ಸಿಟಿಯ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ ಪತ್ತೆ!

'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧಿ ಆಡಳಿತ ಇಲಾಖೆ'ಯ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ ಮುಂದುವರೆದಿದ್ದು, ಬೆಂಗಳೂರಿನ ಯುಬಿ ಸಿಟಿಯ ಐದು ಪ್ರಮುಖ ಹೋಟೆಲ್‌ಗಳ ಅಡುಗೆ ಮನೆಗಳ ಮೇಲೆ ಅಧಿಕಾರಿಗಳು ಇಂದು (ಆ.10)...

ಮತಗಳ್ಳತನದ ವಿರುದ್ಧ ‘ಕ್ವಿಟ್ ವೋಟ್ ಚೋರಿ’ ಆಂದೋಲನಕ್ಕೆ ಕರೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ 'ಮತ ಕಳ್ಳತನ'ವನ್ನು ತಡೆಗಟ್ಟಲು ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲೇ ದೇಶಾದ್ಯಂತ 'ಕ್ವಿಟ್ ವೋಟ್ ಚೋರಿ' (ಮತ ಬಿಟ್ಟು ತೊಲಗಿ) ಆಂದೋಲನವನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ....

SIR ಅವಾಂತರ : ಎನ್ಯುಮರೇಷನ್ ಫಾರಂ ಸರಿಯಾಗಿ ತುಂಬಿಕೊಟ್ಟರೂ ಕರಡು ಪಟ್ಟಿಯಲ್ಲಿ ಹೆಸರಿಲ್ಲ; ಆತಂಕಗೊಂಡು ಮತಗಟ್ಟೆಗಳತ್ತ ಧಾವಿಸಿದ ಜನರು-ವರದಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಆತಂಕಗೊಂಡ ಜಾರ್ಖಂಡ್‌ನ ರಾಂಚಿ ನಗರದ ಜನರು ಭಾನುವಾರ (ಆ.9) ಮತಗಟ್ಟೆಗಳಿಗೆ...

ನೇಮಕಾತಿ ಅಕ್ರಮ ಖಂಡಿಸಿ ಜಾರ್ಖಂಡ್‌ನಲ್ಲಿ ಧರಣಿ: ವಿದ್ಯಾರ್ಥಿಗಳ ಹೋರಾಟಕ್ಕೆ ತಲೆಬಾಗಿದ ಸಿಎಂ ಹೇಮಂತ್ ಸೊರೇನ್, ‘ನ್ಯಾಯದ ಭರವಸೆ’

ಜಾರ್ಖಂಡ್‌ನ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಹಾಗೂ ಯುವಜನತೆ ತಮ್ಮ ಭವಿಷ್ಯದ ಭದ್ರತೆಗಾಗಿ ಬೀದಿಗಿಳಿದು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು...

ಪ.ಬಂಗಾಳ : ಮಮತಾ ಬ್ಯಾನರ್ಜಿ ಕಾರಿನ ಮೇಲೆ ದಾಳಿ; ಕಲ್ಲು, ಚಪ್ಪಲಿ ತೂರಿದ ಗುಂಪು

ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಮನೆಗೆ ಹೋಗುತ್ತಿದ್ದಾಗ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದ ಕಾರಿನ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಭಾನುವಾರ...

SIR ನೆಪದಲ್ಲಿ 1 ಕೋಟಿ ಮತ ಡಿಲೀಟ್ ಮಾಡೋ ಸಂಚು: ಎಚ್ಚೆತ್ತುಕೊಳ್ಳುವಂತೆ ಕಾರ್ಯಕರ್ತರಿಗೆ ಡಿ.ಕೆ. ಶಿವಕುಮಾರ್ ಕರೆ

SIR ನೆಪದಲ್ಲಿ ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಹೆಚ್ಚು ಮತಗಳನ್ನು ಅಳಿಸುವ ಸಂಚು ನಡೆಯುತ್ತಿದೆ, ಕಾಂಗ್ರೆಸ್ ಕಾರ್ಯಕರ್ತರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಕೆಪಿಸಿಸಿ ಕಚೇರಿಯ...

‘ಮೋದಿ ದೇಶದ ಯುವಕರನ್ನು ಸಬಲೀಕರಣಗೊಳಿಸಲು ಶ್ರಮಿಸುತ್ತಿದ್ದಾರೆ ’: ‘ಜೆನ್ ಝೀ’ಗಳನ್ನು ‘ಬಾಹ್ಯ ಶಕ್ತಿಗಳು ದಾರಿ ತಪ್ಪಿಸುತ್ತಿವೆ’: ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ

ಭುವನೇಶ್ವರ: ಜಾಗತಿಕ ವೇದಿಕೆಯಲ್ಲಿ "ತಮ್ಮನ್ನು ದಾರಿ ತಪ್ಪಿಸಲು ಮತ್ತು ಭಾರತವನ್ನು ದುರ್ಬಲಗೊಳಿಸಲು" ನಿರಂತರವಾಗಿ ಪ್ರಯತ್ನಿಸುತ್ತಿರುವ "ಬಾಹ್ಯ ಶಕ್ತಿಗಳಿಗೆ" ಬಲಿಯಾಗಬೇಡಿ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭಾನುವಾರ ಜೆನ್ ಝೀ (GEN-Z)...

ಪದವಿ ಪ್ರದಾನ ಸಮಾರಂಭಕ್ಕೆ CJI ಆಹ್ವಾನಿಸಲು ಹೈದರಾಬಾದ್ ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವಿರೋಧ

ಹೈದರಾಬಾದ್‌ನ ‘ನಾಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಾರದು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಂದು ಗುಂಪು ಆಡಳಿತ...