ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶ್ವಾಸಮತ ಗೆದ್ದಿದ್ದಾರೆ. ಈ ಮೂಲಕ ಮತ್ತೊಮ್ಮೆ ಬಹುಮತ ಸಾಬೀತುಪಡಿಸಿದ್ದಾರೆ.
ಒಟ್ಟು 62 ಎಎಪಿ ಶಾಸಕರ ಪೈಕಿ 54 ಮಂದಿ ವಿಶ್ವಾಸ ಮತಯಾಚನೆ ವೇಳೆ ಹಾಜರಿದ್ದರು. ಎಲ್ಲರೂ ಮುಖ್ಯಮಂತ್ರಿ ಪರ ಮತ ಚಲಾಯಿಸಿದ್ದಾರೆ. “ನಮ್ಮ ಯಾವುದೇ ಶಾಸಕ ಪಕ್ಷಾಂತರ ಮಾಡಿಲ್ಲ. ಇಬ್ಬರು ಶಾಸಕರು ಜೈಲಿನಲ್ಲಿದ್ದಾರೆ, ಕೆಲವರಿಗೆ ಅನಾರೋಗ್ಯವಿದೆ, ಇನ್ನೂ ಕೆಲವರು ಹೊರಗಿದ್ದಾರೆ” ಎಂದು ವಿಶ್ವಾಸಮತ ಗೆದ್ದ ಬಳಿಕ ಕೇಜ್ರಿವಾಲ್ ಹೇಳಿದ್ದಾರೆ.
“ನಮ್ಮ ಸರ್ಕಾರಕ್ಕೆ ಬಹುಮತವಿತ್ತು. ಆದರೆ, ಬಿಜೆಪಿ ಕೆಲ ಶಾಸಕರಿಗೆ ಆಮಿಷವೊಡ್ಡಿ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದೆ. ಈ ಕಾರಣಕ್ಕೆ ವಿಶ್ವಾಸಮತ ಯಾಚನೆಯ ಅಗತ್ಯ ಬಂತು” ಎಂದಿದ್ದಾರೆ.
“ನಮ್ಮ ಕೆಲ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ. ಪಕ್ಷಾಂತರ ಮಾಡಲು ಹಣದ ಆಮಿಷವೊಡ್ಡಿದ್ದಾರೆ. ಸುಮಾರು ಏಳು ಮಂದಿ ಶಾಸಕರಿಗೆ ಪಕ್ಷಾಂತರ ಮಾಡುವಂತೆ ಆಫರ್ ನೀಡಲಾಗಿದೆ. ನನ್ನನ್ನು ಬಂಧಿಸುವ ಮೂಲಕ ಸರ್ಕಾರವನ್ನು ಉರುಳಿಸಬಹುದು ಎಂದು ಬಿಜೆಪಿ ತಂತ್ರ ಹೂಡುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ನೀವು ನನ್ನನ್ನು ಬಂಧಿಸಬಹುದು. ಆದರೆ, ನನ್ನ ಆಲೋಚನೆಗಳನ್ನು ಹೇಗೆ ಬಂಧಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
VIDEO | "On contacting our MLAs, we found out that they tried to poach seven of our legislators. These MLAs today said in the House that they approached (by the BJP). Like Rajesh Gupta said, they (BJP) want us to show a proof. How can we show a proof? A person doesn't carry tape… pic.twitter.com/inXHbPiChF
— Press Trust of India (@PTI_News) February 17, 2024
ಎಎಪಿ ಬಿಜೆಪಿಗೆ ದೊಡ್ಡ ಸವಾಲಾಗಿದೆ. ಅದಕ್ಕಾಗಿಯೇ ಅದು ಎಲ್ಲಾ ಕಡೆಯಿಂದ ದಾಳಿಗೆ ಒಳಗಾಗುತ್ತಿದೆ. ನಮ್ಮ ಮಂತ್ರಿಗಳನ್ನು ಬಂಧಿಸಿದ್ದಾರೆ. ದೇಶದಾದ್ಯಂತ ಜನರಿಗೆ ಇದರ ಅರಿವಿದೆ. ಜನರು ಮೂರ್ಖರು ಎಂದು ಅವರು ಭಾವಿಸಿದ್ದಾರೆ. ಆದರೆ, ಅದು ಅವರ ತಪ್ಪು ಕಲ್ಪನೆ. ಮೋದಿ ಅವರು ಅರವಿಂದ್ ಕೇಜ್ರಿವಾಲ್ ಅನ್ನು ಹತ್ತಿಕಲು ಯತ್ನಿಸುತ್ತಿದ್ದಾರೆ ಎಂದು ಇತ್ತೀಚೆಗೆ ಪಾರ್ಕ್, ಗ್ರೌಂಡ್ಗಳಲ್ಲಿಯೂ ಚರ್ಚೆ ನಡೆಯುತ್ತಿದೆ. ಮಕ್ಕಳು ಕೂಡ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
“ಬಿಜೆಪಿಗರು ತಮ್ಮನ್ನು ತಾವು ರಾಮಭಕ್ತರೆಂದು ಹೇಳಿಕೊಳ್ಳುತ್ತಾರೆ. ಆದರೆ, ನಮ್ಮ ಆಸ್ಪತ್ರೆಗಳಲ್ಲಿ ಬಡವರಿಗೆ ಔಷಧಿ ಸರಬರಾಜು ನಿಲ್ಲಿಸಿದ್ದಾರೆ. ಬಡವರಿಗಾಗಿ ಇರುವ ಔಷಧಿಗಳನ್ನು ತಡೆಯುವಂತೆ ಭಗವಾನ್ ರಾಮ ನಿಮ್ಮತ್ರ ಹೇಳಿದ್ದಾನಾ? ಎಂದು ಕೇಜ್ರಿವಾಲ್ ಕಿಡಿಕಾರಿದ್ದಾರೆ. 2029ರ ಒಳಗೆ ದೇಶವನ್ನು ಬಿಜೆಪಿ ಮುಕ್ತ ಮಾಡುವುದಾಗಿ ಶಪಥ ಮಾಡಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಇಂದು (ಫೆ.17) ಬೆಳಿಗ್ಗೆ ರೂಸ್ ಅವೆನ್ಯೂ ಕೋರ್ಟ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಮಧ್ಯಾಹ್ನದ ಬಳಿಕ ವಿಶ್ವಾಸಮತ ಗೆದ್ದಿದ್ದಾರೆ. ಈ ಮೂಲಕ ನಮ್ಮ ಸರ್ಕಾರ ಸುಭದ್ರವಾಗಿದೆ. ಎಲ್ಲಾ ಶಾಸಕರು ಜೊತೆಗಿದ್ದಾರೆ ಎಂಬ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ರಾಜೀನಾಮೆ ಸರಣಿಗೆ ಮತ್ತೆರಡು ಹೆಸರು ಸೇರ್ಪಡೆ; ಬಿಜೆಪಿ ಸೇರಲಿರುವ ಕಮಲ್ ನಾಥ್, ಅವರ ಪುತ್ರ ನಕುಲ್?