Homeಎಲೆಮರೆಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

- Advertisement -
- Advertisement -

ತೆಲಂಗಾಣದಿಂದ 27 ಕಿಮೀ ದೂರದ ಸೇಡಂ ತಾಲೂಕಿನ ತೆಲುಗು ಭಾಷಿಕರೇ ಹೆಚ್ಚಿರುವ ಜಾಕನಪಲ್ಲಿ ಎಂಬ ಹಳ್ಳಿಯ ಹೈಸ್ಕೂಲ್ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ತನ್ನೂರ ದೊಡ್ಡಾಟ ಶೈಲಿಯ `ಬಲಲಲ ಬಲಿಯೇ’ ನಾಟಕ ಪ್ರದರ್ಶಿಸಿ ತೃತೀಯ ಬಹುಮಾನ ಪಡೆಯುತ್ತಾರೆ. `ಮಣ್ಣು ರೈತನ ಕಣ್ಣು’ ಎನ್ನುವ ನಾಟಕವನ್ನು ಮೈಸೂರು ಜಿಲ್ಲೆ ಹೆಗ್ಗಡದೇವನ ಕೋಟೆ ತಾಲೂಕಿನ ಹೊಸಳ್ಳಿ ಗ್ರಾಮವನ್ನು ಒಳಗೊಂಡಂತೆ, ಹೆಗ್ಗೋಡು, ಬೆಂಗಳೂರು, ಬಿಜಾಪುರ, ಚಿತ್ರದುರ್ಗದಲ್ಲಿ ಅಭಿನಯಿಸಿ ಬೆರಗು ಮೂಡಿಸುತ್ತಾರೆ. ಹೀಗೆ ಕರ್ನಾಟಕದ ಅಂಚಿನ ಹಳ್ಳಿಯೊಂದರ ಮಕ್ಕಳು ರಾಜ್ಯದ ಇನ್ನೊಂದು ಅಂಚನ್ನು ತಲುಪಿ ನಾಟಕ ಪ್ರದರ್ಶನ ಮಾಡುವಂತೆ ಮಕ್ಕಳನ್ನು ರೂಪಿಸಿದವರು ರಂಗ ಶಿಕ್ಷಕ ಅಶೋಕ ತೋಟ್ನಳ್ಳಿ.

ಚಿತ್ತಾಪುರ ತಾಲೂಕಿನ ಗದ್ದಿಗೆ ಅಳ್ಳೊಳ್ಳಿ ಎನ್ನುವ ಗ್ರಾಮದ ಅಶೋಕ್ ಅವರು ಪದವಿ ನಂತರ ಶರಣಬಸವೇಶ್ವರ ಆರ್ಟ್ಸ್ ಕಾಲೇಜಿನಲ್ಲಿ ಎಂ.ಎ ಫೈನ್ ಆರ್ಟ್ಸ ಮುಗಿಸಿ,2006-07ರಲ್ಲಿ ನೀನಾಸಂನಲ್ಲಿ ನಾಟಕ ಡಿಪ್ಲೊಮಾ ಮಾಡುತ್ತಾರೆ. 2008ಅಕ್ಟೋಬರ್ 30ಕ್ಕೆ ನಾಟಕ ಶಿಕ್ಷಕರಾಗಿ ಜಾಕನಪಲ್ಲಿಯ ಪ್ರೌಢಶಾಲೆಗೆ ಬರುತ್ತಾರೆ.

ಜಡಗೊಂಡಿದ್ದ ಶಾಲೆಯನ್ನು ತನ್ನೊಳಗಿನ ಕ್ರಿಯಾಶೀಲ ‘ಕಲಾವಿದ’ನ ನೆರವಿಂದ ನಿಧಾನಕ್ಕೆ ಜೀವಂತಗೊಳಿಸಲು ಶುರುಮಾಡುತ್ತಾರೆ. ಶಾಲೆಯ ಕಡೆಗೆ ಊರಿನ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. 2009 ರಲ್ಲಿ ‘ಹಮದ ಮೊಚಿ’ ನಾಟಕವನ್ನು ಒಳಗೊಂಡಂತೆ ಗಡಿನಾಡ ಸಮ್ಮೇಳನದಲ್ಲಿ ಮಕ್ಕಳಿಂದ ಮೂರು ನಾಟಕಗಳನ್ನು ಮಾಡಿಸಿ ಗಮನ ಸೆಳೆಯುತ್ತಾರೆ. ಆಗ ಶಾಲೆಯ ಚಟುವಟಿಕೆಯ ಜೊತೆ ಊರನ್ನು ಬೆಸೆಯಲು ೨೦೧೦ ರಲ್ಲಿ `ತಿಂಗಳ ಸಂಜೆ’ ಎನ್ನುವ ವೇದಿಕೆಯೊಂದನ್ನು ಹುಟ್ಟುಹಾಕುತ್ತಾರೆ. ಇದರ ಚಟುವಟಿಕೆಗಳಿಗೆ ಪೂರಕವಾಗಿ ಶಾಲೆಯಲ್ಲಿ `ನಾನು-ನನ್ನೂರು’ ಎನ್ನುವ ಮಕ್ಕಳ ವೇದಿಕೆಯನ್ನು ಶುರುಮಾಡುತ್ತಾರೆ. ತಿಂಗಳು ಪೂರ್ತಿ ಕಲಿತ ಮಕ್ಕಳ ನಾಟಕ, ಅಭಿನಯಗಳು ಈ ತಿಂಗಳ ಸಂಜೆಯಲ್ಲಿ ಪ್ರದರ್ಶನವಾಗುವಂತೆಯೂ, ಹಳ್ಳಿಯ ಜನರೆಲ್ಲರೂ ಈ ಸಂಜೆಯಲ್ಲಿ ತಮ್ಮದೇ ಮಕ್ಕಳ ಅಭಿನಯವನ್ನು ಸವಿಯುವಂತೆ ಮಾಡಲಾಗುತ್ತದೆ.

ನಂತರ ಊರಿನ ಹಿರಿಯರಲ್ಲಿರುವ ಜನಪದ ಕಲೆಯನ್ನು ಶಾಲೆಯ ಮಕ್ಕಳಲ್ಲಿ ಕಸಿ ಮಾಡುವ ಪ್ರಯತ್ನ ಶುರುಮಾಡುತ್ತಾರೆ. ಜಾಕನಪಲ್ಲಿಯಲ್ಲಿ ಮರೆವಿಗೆ ಸರಿದಿದ್ದ ದೊಡ್ಡಾಟಕ್ಕೆ ಜೀವ ತುಂಬುತ್ತಾರೆ. ಊರಲ್ಲಿನ ದೊಡ್ಡಾಟದ ಕಲಾವಿದರನ್ನು ಶಾಲೆಗೆ ಕರೆಸಿ ಮಕ್ಕಳಿಗೆ ತರಬೇತಿ ಕೊಡಿಸುತ್ತಾರೆ. ಅಜ್ಜ ಅಜ್ಜಿಯರ ಕರೆಸಿ ಜನಪದ ಕಥೆಗಳನ್ನು ಹೇಳಿಸುತ್ತಾರೆ. ಇದಕ್ಕೆ ಬೆಂಗಳೂರಿನ ಫೋಕ್ ಆರ್ಟ್ ಫೌಂಡೇಷನ್ ಕಲಿ-ಕಲಿಸು ಯೋಜನೆಯಡಿಯಲ್ಲಿ ಸಹಾಯ ಮಾಡುತ್ತದೆ. ಹೀಗೆ ನಿಧಾನಕ್ಕೆ ಶಾಲೆಗೆ ಸರಕಾರ ನೇಮಿಸಿದ ಶಿಕ್ಷಕರಲ್ಲದೆ ಊರಿನ ಹಿರಿಯ ಕಲಾವಿದರೂ ಶಿಕ್ಷಕರಾಗಿ ರೂಪಾಂತರ ಹೊಂದುತ್ತಾರೆ.

ಈಚಿನ `ಒಂದು ರಾತ್ರಿ’ ನಾಟಕವನ್ನು ಒಳಗೊಂಡಂತೆ ಮಕ್ಕಳಿಗಾಗಿ ಅಶೋಕ್ ಈ ತನಕ 28 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಶಾಲಾ ಪಠ್ಯಗಳಲ್ಲಿ ಕೆಲವನ್ನು ಆಶು ಅಭಿನಯವಾಗಿ ರೂಪಾಂತರಗೊಳಿಸುತ್ತಾರೆ. ಶಿಲ್ಪ ಮತ್ತು ಚಿತ್ರ ಕಲಾವಿದರ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿ, ಸಾಂಜಿ ಕಲೆಯ ಕಾರ್ಯಾಗಾರ ನಡೆಸಿ ಮಕ್ಕಳಿಗೆ ಶಿಲ್ಪ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸುತ್ತಾರೆ. ಮಕ್ಕಳಿಂದ ಪತ್ರಿಕೆಗಳಲ್ಲಿ ಬಂದ ವ್ಯಂಗ್ಯಚಿತ್ರಗಳನ್ನು ಆಧರಿಸಿ ಕಥೆ ಬರೆಸುವ ಸ್ಪರ್ಧೆ ಏರ್ಪಡಿಸಿ, ವ್ಯಂಗ್ಯಚಿತ್ರ ಪ್ರದರ್ಶನ ಮಾಡಿಸಿದ್ದಾರೆ. ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಶಾಲಾ ಮಕ್ಕಳಿಂದ ಮಣ್ಣೆತ್ತು ಮಾಡಿಸಿ, ಮಣ್ಣಿನ ಗಣೇಶನ ಮಾಡಿಸುವ ಸ್ಪರ್ಧೆಗಳಲ್ಲಿ ಮಕ್ಕಳನ್ನು ಕಲೆಯತ್ತ ಸೆಳೆದಿದ್ದಾರೆ.

‘ಗ್ರಾಮೀಣ ನಾಟಕೋತ್ಸವ’ ಏರ್ಪಡಿಸಿ ಹಳ್ಳಿಗಳಲ್ಲಿ ಮಕ್ಕಳ ನಾಟಕದ ಅಭಿರುಚಿ ಹೆಚ್ಚಿಸಿ, ಸ್ಥಳೀಯ ಸಾಹಿತಿಗಳಿಂದ ಕಥೆ, ಕವಿತಾ ವಾಚನ ಮಾಡಿಸಿ ಸಾಹಿತ್ಯದ ಅಭಿರುಚಿ ಮೂಡಿಸಿದ್ದಾರೆ. ಗಾಂಧಿ ಜಯಂತಿಯಲ್ಲಿ `ಕುಡಿಯೋದ ಬಿಡ್ರಿ, ಒಳ್ಳೇದಲ್ಲ’ ಎಂದು ಜಾಗೃತಿ ಮೂಡಿಸುತ್ತಲೇ, ವಿಶ್ವರಂಗಭೂಮಿ ದಿನ ಊರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿ ಮಕ್ಕಳಿಂದ ನಾಟಕ ಆಡಿಸುತ್ತಾರೆ. `ಸರಕಾರಿ ಶಾಲೆಗಳೆ ನಮ್ಮ ಜೀವಾಳ’ ಎನ್ನುವ ಅಭಿಯಾನವನ್ನು ದೊಡ್ಡಾಟದ ವೇಷ ಧರಿಸಿ ಮಕ್ಕಳು ಸರಕಾರಿ ಶಾಲೆಯ ಮಹತ್ವವನ್ನು ಸಾರುತ್ತಾರೆ.

‘ಪ್ರತಿಭಾ ಕಾರಂಜಿಗೆಂದು ತಯಾರು ಮಾಡಿದ ನಾಟಕಗಳನ್ನು ಮಕ್ಕಳು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಭಿನಯಿಸುತ್ತಾರೆ. ಹೀಗೆ ಹಳ್ಳಿಗಳಲ್ಲಿ ಮಕ್ಕಳು ನಾಟಕ ಆಡಿದಾಗ, ನಾಟಕ ಮೆಚ್ಚಿ ಊರಿನವರು ಆಯರ್ ಮಾಡುತ್ತಾರೆ. ಹೀಗೆ ಆಯರ್ ಮಾಡಿದ ಹಣವನ್ನು ಸಂಗ್ರಹಿಸಿ, ಅದಕ್ಕೆ ನಾವು ಒಂದಷ್ಟು ಹಣ ಹಾಕಿ ಟ್ರಾವೆಲ್ ಖರ್ಚು ತೆಗೆದು, ಉಳಿದ ಹಣದಲ್ಲಿ ಮಕ್ಕಳಿಗೆ ಟ್ರಾವೆಲಿಂಗ್ ಬ್ಯಾಗ್ ತಂದು ಕೊಟ್ಟಿದೀವಿ. ಮೈಸೂರು ಬೆಂಗಳೂರಿಗೆ ಪ್ರತಿಭಾ ಕಾರಂಜಿಗೆ ಹೋದಾಗ ಅದರ ಖೂನ ಇರಲಿ ಅಂತ ಮಕ್ಕಳಿಗೆ ಸ್ಟಡಿ ಚೇರು, ಸ್ಟಡಿ ಲ್ಯಾಂಪು ತಂದಿದ್ದೀವಿ’ ಎನ್ನುತ್ತಾರೆ.

ಮುಂದುವರಿದು `ಮೇಕಪ್, ಲೈಟಿಂಗ್, ಸೌಂಡ್ ಸಿಸ್ಟಮ್ ಎಲ್ಲವನ್ನು ಮಕ್ಕಳೆ ಮಾಡುತ್ತಾರೆ. ನನ್ನ ಸಂಬಳದಲ್ಲಿ ಕೊಂಡ ಎರಡುವರೆ ಲಕ್ಷದ ಪ್ರಾಪರ್ಟಿ ಇದೆ. ತುಂಬಾ ಅಗತ್ಯವಾದ ರಂಗಪರಿಕರಗಳು ನಮ್ಮಲ್ಲಿವೆ. ನಮ್ಮ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ನಮ್ಮ ಹೈಸ್ಕೂಲ್ ಕಾರ್ಯಕ್ರಮಗಳಿಗೆ ಜೊತೆಯಾಗುತ್ತಾರೆ. ನಮ್ಮ ಕೈಲಿ ದುಡ್ಡು ಹಾಕಿ ಮಕ್ಕಳನ್ನು ಪ್ರತಿಭಾ ಕಾರಂಜಿಗೆ ದೂರ ದೂರ ಕರಕೊಂಡು ಹೋಗಿ ಎರಡು ವರ್ಷ ಆದ್ರೂನು ಟ್ರಾವೆಲ್ ಬಿಲ್ ಬರೋದಿಲ್ಲ, ಆದ್ರೂ ಉತ್ಸಾಹ ಕಳಕೊಳ್ಳಂಗಿಲ್ಲ’ ಎಂದು ಅಶೋಕ್ ತಮ್ಮ ಬಿಕ್ಕಟ್ಟನ್ನೂ ಹೇಳುತ್ತಾರೆ.

ಮಕ್ಕಳೊಂದಿಗೆ ಅಶೋಕ ತೋಟ್ನಳ್ಳಿಯವರು

ಅಶೋಕ ತೋಟ್ನಳ್ಳಿಯವರು ಕಲಾವಿದರೂ, ನಾಟಕಕಾರರೂ ಆದ ಕಾರಣ ತಮಗೆ ಲಭ್ಯವಿರುವ ವಸ್ತುಗಳನ್ನೆ ನಾಟಕದ ಪರಿಕರಗಳನ್ನಾಗಿ ಪರಿವರ್ತಿಸುತ್ತಾರೆ. ಊರಿನ ಜನಪದ ವಸ್ತುಗಳನ್ನು ಸೇರಿಸಿ, ಅವುಗಳನ್ನು ಬಣ್ಣದಿಂದ ಸಿಂಗರಿಸಿದ್ದಾರೆ. ಹಾಗಾಗಿ ಶಾಲೆಯೆ ಒಂದು ಆರ್ಟ್ಗ್ಯಾಲರಿಯಂತಿದೆ. ಹೀಗೆ ಒಬ್ಬ ರಂಗಭೂಮಿ ಶಿಕ್ಷಕ ತನ್ನೊಳಗಿನ ಕಲಾವಿದನನ್ನು ಕ್ರಿಯಾಶೀಲಗೊಳಿಸಿ ಇಡೀ ಊರನ್ನೇ ರಂಗಭೂಮಿಯನ್ನಾಗಿ ರೂಪಾಂತರಿಸಿದ ಶ್ರಮ ಮತ್ತು ಬದ್ಧತೆ ನಿಜಕ್ಕೂ ಮೆಚ್ಚುವಂಥದ್ದು. ಊರಿನ ಜನರು, ಮಕ್ಕಳ ಸಹಕಾರ ಮರೆಯುವಂತಿಲ್ಲ ಎನ್ನುವ ಅಶೋಕ ಅವರು ಮತ್ತಷ್ಟು ಮಾದರಿ ಕೆಲಸಗಳಲ್ಲಿ ತೊಡಗಿಕೊಳ್ಳಲೆಂದು ಪತ್ರಿಕೆ ಶುಭಕೋರುತ್ತದೆ.

ಅಶೋಕ ತೋಟ್ನಳ್ಳಿಯವರ ಯೂಟೂಬ್ ಚಾನಲ್‌ಗೆ ಇಲ್ಲಿ ಕ್ಲಿಕ್ ಮಾಡಿ

ಅವರ ಫೇಸ್‌ಬುಕ್ ನೋಡಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ ‘ಸಂತೋಷ ಗುಡ್ಡಿಯಂಗಡಿ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...

ನಾವು ದಾಖಲೆಗಳನ್ನು ಕೊಟ್ಟರೂ ನಮ್ಮನ್ನು ಹಕ್ಕುಗಳಿಂದ ವಂಚಿಸಲಾಗುತ್ತದೆ ಎಚ್ಚರ- ಡಿ.ಹೆಚ್.ಕಂಬಳಿ

ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ...

ಹುಬ್ಬಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಸಭೆ ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಹುಬ್ಬಳ್ಳಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜ್ಞಾನ ಮಂಟಪದಲ್ಲಿ ಮಂಗಳವಾರ (ಜೂ.16) ಸಂಜೆ ವಿವಿಧ ಜನ ಸಂಘಟನೆಗಳು ಮತ್ತು...

ಎಸ್ಐಆರ್ ಮೂಲಕ ಮನುವಾದದ ಮರು ಜಾರಿಗೆ ಯತ್ನ : ಡಾ. ಗಣೇಶ್ ದೇವಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಮನುವಾದದ ಮರು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಗಣೇಶ್ ದೇವಿ ಹೇಳಿದರು. ಮಂಗಳವಾರ (ಜೂ.16) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಳಿಯ...

ಎಡದೊರೆಯ ನಾಡಿನಲ್ಲಿ ಮೊಳಗಿದ SIR ವಿರೋಧಿ ಕೂಗು

ಕರ್ನಾಟಕದಲ್ಲಿ ಅವೈಜ್ಞಾನಿಕವಾಗಿ ಜಾರಿಮಾಡಲು ಹೊರಟಿರುವ SIR ಅನ್ನು ವಿರೋಧಿಸಿ ಜನಜಾಗೃತಿ ಜಾಥಾವು ಇಂದು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯನ್ನು ಪ್ರವೇಶಿಸಿತು. ಹೋರಾಟಗಳ ನೆಲ ರಾಯಚೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು, ವಿವಿಧ ಸಮುದಾಯದ...

ಜೂನ್ 20ರ ಬೆಂಗಳೂರಿನ ‘SIR’ ವಿರೋಧಿ ಸಮಾವೇಶಕ್ಕೆ ಶಿವಮೊಗ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ವಕೀಲರಾದ ಶ್ರೀಪಾಲ್ ಕರೆ

ಜೂನ್ 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ‘SIR’ ವಿರೋಧಿ ಜನಜಾಗೃತಿ ಸಮಾವೇಶಕ್ಕೆ ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಹಿರಿಯ ವಕೀಲರಾದ ಶ್ರೀಪಾಲ್ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಪ್ರಗತಿಪರ ಸಂಘಟನೆಗಳ...