Homeಮುಖಪುಟಕಾಶ್ಶೀರ ರಾಜ್ಯ ನೆಲಸಮ ಮಾಡಿದ ವಾರ್ಷಿಕ ದಿನವೇ ಬಾಬ್ರಿ ಮಸೀದಿ ನೆಲಸಮವಾದ ಸ್ಥಳದಲ್ಲಿ ಮಂದಿರ ಶಿಲಾನ್ಯಾಸ...

ಕಾಶ್ಶೀರ ರಾಜ್ಯ ನೆಲಸಮ ಮಾಡಿದ ವಾರ್ಷಿಕ ದಿನವೇ ಬಾಬ್ರಿ ಮಸೀದಿ ನೆಲಸಮವಾದ ಸ್ಥಳದಲ್ಲಿ ಮಂದಿರ ಶಿಲಾನ್ಯಾಸ ಕಾಕತಾಳೀಯವೆ?

ರಾಮಮಂದಿರದ ನಿರ್ಮಾಣವು ಬಿಜೆಪಿಗೆ ಚುನಾವಣಾ ಲಾಭವನ್ನು ತರಬಹುದೆ? ಒಂದು ದೃಷ್ಟಿಕೋನವೆಂದರೆ, ಪ್ರತಿಕೂಲವಾಗಿ ಸುಪ್ರೀಂಕೋರ್ಟ್ ತೀರ್ಪು ಬಂದಿದ್ದರೆ ವಾಸ್ತವವಾಗಿ ಪಕ್ಷಕ್ಕೆ ಒಳ್ಳೆಯದನ್ನು ಮಾಡುತ್ತಿತ್ತು.

- Advertisement -
- Advertisement -

ನೀವು ಯಾವ ದಿಕ್ಕಿನಿಂದಾದರೂ ನೋಡಿ; ಆಗಸ್ಟ್ 5, 2020 ಭಾರತೀಯ ಗಣರಾಜ್ಯದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಲಿದೆ‌.

ಅದು, ಜಮ್ಮು ಮತ್ತು ಕಾಶ್ಮೀರ ಸ್ವಾಯತ್ತತೆಯನ್ನು ಬಿಜೆಪಿ ನೇತೃತ್ವದ ಸರಕಾರ ಏಕಪಕ್ಷೀಯವಾಗಿ ಕಿತ್ತುಹಾಕಲು ನಿರ್ಧರಿಸಿದ, ಅಲ್ಲಿನ ಎಲ್ಲಾ ಜನರನ್ನು ಸಾರಾಸಗಟಾಗಿ ಕರ್ಫ್ಯೂಗೆ ದೂಡಿ, ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ರದ್ದುಪಡಿಸಿ, ಹಿಂದಿನ ಮಿತ್ರರೂ ಸೇರಿದಂತೆ ಕಾಶ್ಮೀರ ಕಣಿವೆಯ ಪ್ರತಿಯೊಬ್ಬ ಪ್ರಮುಖ ರಾಜಕಾರಣಿಯನ್ನು ಜೈಲಿಗೆ ತಳ್ಳಿ, ಭಾರತದ ಏಕೈಕ ಮುಸ್ಲಿಂ ಬಾಹುಳ್ಯದ ರಾಜ್ಯವನ್ನು ಹೊಸದಿಲ್ಲಿಯ ನಿಯಂತ್ರಣಕ್ಕೆ ಬರುವ ಕೇಂದ್ರಾಡಳಿತ ಪ್ರದೇಶವಾಗಿ ಅಪಮೌಲ್ಯಗೊಳಿಸಿದ ಮೊದಲ ವರ್ಷದ ನೆನಪಿನ ದಿನ.

ಇದೇ ದಿನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಆರಂಭವನ್ನು ಸೂಚಿಸುವ ಮತ್ತು ಸರಕಾರಿ ದೂರದರ್ಶನದಲ್ಲಿ ನೇರ ಪ್ರಸಾರವಾಗಲಿರುವ ಧಾರ್ಮಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಮಂದಿರ ನಿರ್ಮಾಣವು ಸದ್ಯದ ಭಾರತೀಯ ರಾಜಕೀಯವು ಸುತ್ತುತ್ತಿರುವ ಹಿಂದೂ ರಾಷ್ಟ್ರೀಯವಾದದ ಬೆಳವಣಿಗೆಯ ಗೂಟವನ್ನು ಊರಲಾಗಿರುವ ನಿವೇಶನದಲ್ಲಿಯೇ ಆಗಲಿದೆ.

ನೀವು ಯಾವ ದೃಷ್ಟಿಯಿಂದ ನೋಡುತ್ತೀರೋ ಅದಕ್ಕೆ ಅನುಗುಣವಾಗಿ, ಒಂದು ವರ್ಷ ಮೊದಲು ಸರಕಾವು ಕಾಶ್ಮೀರದಲ್ಲಿ ದಮನಕಾರಿ ಕ್ರಮವನ್ನು ಆರಂಭಿಸಿದ ದಿನದಂದೇ ರಾಮ ಮಂದಿರದ ನಿರ್ಮಾಣ ಕಾರ್ಯ ಆರಂಭವಾಗುತ್ತಿರುವುದು ಈ ಕೆಳಗಿನ ಎರಡು ವಿಷಯಗಳನ್ನು ಸೂಚಿಸುತ್ತದೆ.

* ಗುಜರಾತ್ ಮತ್ತು ದಿಲ್ಲಿಯ ಕೋಮುಗಲಭೆಗಳ ವೇಳೆಯಲ್ಲಿ ಅಧಿಕಾರದಲ್ಲಿ ಇದ್ದ ಹಿಂದೂತ್ವದ ನಾಯಕನಾದ ನರೇಂದ್ರ ಮೋದಿಯ ವ್ಯಕ್ತಿತ್ವ ಮತ್ತು ರಾಜಕೀಯದಲ್ಲಿ ಭಾರತದ ಒಂದು ಶತಮಾನದಷ್ಟು ಹಳೆಯ ಹಿಂದೂ ರಾಷ್ಟ್ರೀಯ ಚಳವಳಿಯು ಪರ್ಯಾವಸಾನವಾಗಿದ್ದು, ಜಾಗತಿಕವಾಗಿ ಒಂದು ನಾಗರಿಕ ಶಕ್ತಿಯಾಗಿ ಭಾರತದ ಸ್ಥಾನಮಾನವನ್ನು ಮರುಸ್ಥಾಪಿಸುವ ಭರವಸೆ ನೀಡಲಿದೆ. ಆಥವಾ…

* ಸ್ವತಂತ್ರ ಭಾರತದ ಜಾತ್ಯತೀತ ಆದರ್ಶವನ್ನು ದೃಢವಾಗಿ ಮೂಲೆಗೆ ತಳ್ಳುವಲ್ಲಿ ಹಿಂದೂತ್ವದ ಮುಸ್ಲಿಂ ವಿರೋಧಿ ಆಷಾಢಭೂತಿ ಸಿದ್ಧಾಂತದ ಯಶಸ್ವಿ ಬಳಕೆಯನ್ನು ಪ್ರತಿಫಲಿಸುತ್ತದೆ. ಇದು ಎಷ್ಟರಮಟ್ಟಿಗೆ ಎಂದರೆ, ಅದು ದೇಶದ ಸಾಂಸ್ಕೃತಿಕ ಸಂರಚನೆಯನ್ನೇ ಚಿಂದಿಮಾಡಿ, ಹಿಂದೂತ್ವದ ಗುಂಪು ಹಿಂಸಾಚಾರವು ಆಳುವವರ ಸಕ್ರಿಯ ಬೆಂಬಲ ಪಡೆಯುವಷ್ಟರ ಮಟ್ಟಿಗೆ. ಮೋದಿಯ ರಾಜಕೀಯ ಉತ್ಥಾನಕ್ಕೆ ಕಾರಣವಾದ ಆರ್ಥಿಕ ಮತ್ತು ಅಭಿವೃದ್ಧಿಯ ಭರವಸೆಗಳು ನುಚ್ಚುನೂರಾಗಿದ್ದರೂ ಬಹುಸಂಖ್ಯಾತ ಹಿಂದೂಗಳ ಗಮನವೇ ಆ ಕಡೆಗೆ ಹೋಗದಂತೆ ಯಶಸ್ವಿಯಾಗಿ ಮಾಡುವಷ್ಟು.

ಹಿಂದೂತ್ವದ ಗುಂಪುಗಳು 1992ರಲ್ಲಿ ನೆಲಸಮ ಮಾಡಿದ ಮಧ್ಯಯುಗೀನ ಬಾಬ್ರಿ ಮಸೀದಿಯಿದ್ದ ಜಾಗದಲ್ಲಿ ಕಟ್ಟಲಾಗುವ ರಾಮ ಮಂದಿರದ ಸಂಕೀರ್ಣ ಇತಿಹಾಸವನ್ನು ಮತ್ತೆ ವಿವರಿಸಲು ಹಲವಾರು ಪುಸ್ತಕಗಳು (ಅಥವಾ ಒಂದು ಗಮನಾರ್ಹವಾದ ಸಾಕ್ಷ್ಯಚಿತ್ರ) ಬೇಕಾದಾವು.

ವಿಷ್ಣುವಿನ ಅವತಾರಗಳಲ್ಲಿ ಒಂದೆಂದು ಹೇಳಲಾಗುವ ರಾಮನ ಜನ್ಮಸ್ಥಳವಿದು ಎಂದು ಹಿಂದೂತ್ವವಾದಿಗಳು ಹೇಳುವುದರೊಂದಿಗೆ, ಬಾಬ್ರಿ ಮಸೀದಿ ಇದ್ದ ಸ್ಥಳದ ಕುರಿತು ಹಿಂದೂಗಳು ಮತ್ತು ಮುಸ್ಲಿಮರು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಸಂಘರ್ಷ ನಡೆಸಿದ್ದಾರೆ. 1948ರಲ್ಲಿ ಹಿಂದೂತ್ವದ ಸಂಘಟನೆಗಳು ಇಲ್ಲಿ ರಾತೋರಾತ್ರಿ ರಾಮನ ಮೂರ್ತಿಯನ್ನು ಸ್ಥಾಪಿಸಿ, ಪರಿಣಾಮಕಾರಿಯಾಗಿ ಅದನ್ನೊಂದು ತಾತ್ಕಾಲಿಕ ರಾಮಮಂದಿರವನ್ನಾಗಿ ಮಾಡಿದುದು, ಈ ಜಾಗದ ಮಾಲಕತ್ವ ಯಾರದ್ದು ಎಂಬ ಕುರಿತು ಕೋರ್ಟ್ ಖಟ್ಲೆಗೆ ಕಾರಣವಾಗಿತ್ತು.

ನಂತರ 1980ರ ದಶಕದಲ್ಲಿ ಬಿಜೆಪಿ ಮತ್ತು ಅದರ ಮಾತೃ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಜನರ ಭಾವನೆಗಳನ್ನು ಕೆರಳಿಸುವ (ಆ ಮೂಲಕ ಹಿಂಸಾಚಾರ ಹುಟ್ಟಿಸುವ) ಸಲುವಾಗಿ ರಾಷ್ಟ್ರವ್ಯಾಪಿ ರಾಮಮಂದಿರ ನಿರ್ಮಾಣ ಅಭಿಯಾನ ಆರಂಭಿಸಿದುದು ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯ ಮತ್ತು 1992ರ ಡಿಸೆಂಬರ್ 6ರಂದು ಮಸೀದಿಯ ನಾಶಕ್ಕೆ ಕಾರಣವಾಗಿತ್ತು.

ತೊಡರಿನ ವಿಷಯಗಳಲ್ಲಿ ಒಂದು ಎಂದರೆ, ಕಾನೂನುಬಾಹಿರವಾಗಿ ನಾಶ ಮಾಡಲಾಗಿದೆ ಎಂದು ತಾನೇ ಹೇಳಿರುವ ಮಸೀದಿಯು ನಿಂತಿದ್ದ ಸ್ಥಳದಲ್ಲಿಯೇ ಮಂದಿರ ಕಟ್ಟುವುದಕ್ಕೆ ವಾಸ್ತವವಾಗಿ ಜವಾಬ್ದಾರನಾಗಿರುವ ಭಾರತದ ಸುಪ್ರೀಂಕೋರ್ಟಿನ ಪಾತ್ರ.

ಭಾರತೀಯ ಸುಪ್ರೀಂಕೋರ್ಟ್, ನ್ಯಾಯಾಂಗದ ಸ್ವಾತಂತ್ರ್ಯದ ಭಾವನೆಯ ನಡುವೆಯೂ ಭಾರತದ ಆ ಕ್ಷಣದ ಬಹುಸಂಖ್ಯಾತರ ಭಾವೊದ್ವೇಗದ ಪರವಾಗಿ ಬಾಗುವಂತೆ ತೋರಿತು. ಇಂತಹಾ ಪ್ರವೃತ್ತಿ ಕಳೆದ ಆರು ವರ್ಷಗಳಿಂದ ಹೆಚ್ಚಾಗುತ್ತಿದೆ.

ರಾಮಮಂದಿರ ನಿರ್ಮಾಣಕ್ಕೆ ಹಾದಿ ಸುಗಮ ಮಾಡಿಕೊಟ್ಟ 2019ರ ತೀರ್ಪು ಈ ಕೆಳಗಿನವುಗಳಿಗೆ ಪರಿಪೂರ್ಣ ಉದಾಹರಣೆಯಾಗಿದೆ:

* 1949ರಲ್ಲಿ ಮಸೀದಿಯೊಳಗೆ ಪ್ರತಿಮೆ ಇರಿಸಿದ್ದು ಮತ್ತು 1992ರಲ್ಲಿ ಗುಂಪು ಸೇರಿ ಮಸೀದಿ ಕೆಡವಿದ್ದು ಕಾನೂನುವಿರೋಧಿ ಎಂದು ನ್ಯಾಯಾಲಯವು ಕಂಡುಕೊಂಡಿತಾದರೂ, ಈ ಕಾನೂನುಬಾಹಿರ ಕೃತ್ಯಗಳಿಗೆ ಪ್ರೇರಣೆಯಾದ ನಂಬಿಕೆಗಳನ್ನು ಆ ಜಮೀನನ್ನು ಹಿಂದೂಗಳಿಗೆ ಹಸ್ತಾಂತರಿಸುವುದಕ್ಕೆ ಬಳಸಿಕೊಂಡಿತು.

* ಅದು ಆ ಜಮೀನನ್ನು ಹಿಂದೂ ಮತ್ತು ಮುಸ್ಲಿಮರ ನಡುವೆ ಹಂಚುವ ಕಲ್ಪನೆಯನ್ನು ತಿರಸ್ಕರಿಸಿತು. ಆದರೆ, ತನ್ನ ಕಾನೂನು ತರ್ಕವನ್ನು ಅದೇ ವಿಭಜನೆಯ ಆಧಾರದಲ್ಲಿ ಮಾಡಿತು.

* ಮುಸ್ಲಿಮರ ಕಕ್ಷಿಯು (ಪಕ್ಷವು) ಜಮೀನಿನ “ವಿಶೇಷ ಸ್ವಾಧೀನತೆ”ಯನ್ನು ಸಾಬೀತುಪಡಿಸುವಂತೆ ವಿಧಿಸಿತು. ಆದರೆ, ಹಿಂದೂ ಕಕ್ಷಿಗೆ (ಪಕ್ಷಕ್ಕೆ) ಇದೇ ಮಾನದಂಡವನ್ನು ಅನ್ವಯಿಸಲಿಲ್ಲ.

ರಾಮಮಂದಿರದ ನಿರ್ಮಾಣವು ಬಿಜೆಪಿಗೆ ಚುನಾವಣಾ ಲಾಭವನ್ನು ತರಬಹುದೆ? ಒಂದು ದೃಷ್ಟಿಕೋನವೆಂದರೆ, ಪ್ರತಿಕೂಲವಾಗಿ ಸುಪ್ರೀಂಕೋರ್ಟ್ ತೀರ್ಪು ಬಂದಿದ್ದರೆ ವಾಸ್ತವವಾಗಿ ಪಕ್ಷಕ್ಕೆ ಒಳ್ಳೆಯದನ್ನು ಮಾಡುತ್ತಿತ್ತು. ಯಾಕೆಂದರೆ, ತನ್ನ ಬೆಂಬಲಿಗರನ್ನು ಒಟ್ಟು ಸೇರಿಸಲು ಅದಕ್ಕೆ ಇನ್ನೊಂದು ಜನಪ್ರಿಯ ವಿಷಯ ಸಿಗುತ್ತಿತ್ತು. ಬದಲಾಗಿ ಮೋದಿಯ ಮಟ್ಟಿಗೆ ಇದು ಹೆಚ್ಚಾಗಿ ಉತ್ತರ ಭಾರತದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿ ಇರುವಂತೆಯೇ ಒಂದು ಚಳವಳಿಯ ಸಮಾಪ್ತಿಯಂತೆ ಕಾಣುತ್ತಿದೆ. ಮಂದಿರವು ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಪಕ್ಷಕ್ಕೆ ಹೆಚ್ಚುವರಿ ಬೆಂಬಲಿಗರನ್ನು ತಂದುಕೊಡುವ ಸಾಧ್ಯತೆಯಿಲ್ಲ. ಇದನ್ನು ಹೇಳುತ್ತಿರುವಂತೆಯೇ ಅದಿತಿ ಫಡ್ನವೀಸ್ ಮತ್ತು ಶಿಖಾ ಶಾಲಿನಿ ಇದು ಲಾಭ ತರಬಹುದಾದ ಬೇರೆಯವರನ್ನು ಸೂಚಿಸುತ್ತಾರೆ:

States cannot hire workers of the uttar pradesh without permission: Yogi Adityanath

“ಅಸ್ತಿತ್ವದ ಪ್ರಶ್ನೆ ಬದಿಗಿರಲಿ, ರಾಮಮಂದಿರದ ಪ್ರಮುಖ ಲಾಭ ಪಡೆಯುವಾತ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಆದಿತ್ಯನಾಥ ಎಂಬ ಬಗ್ಗೆ ಬಿಜೆಪಿ ಮತ್ತು ಆರೆಸ್ಸೆಸ್‌ನೊಳಗೆ ಸಹಮತವಿದೆ. ಆತ ವೈಯಕ್ತಿಕವಾಗಿ ಬ್ರಾಹ್ಮಣ ವಿರೋಧಿಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ಆತ ಬ್ರಾಹ್ಮಣ ವಿರೋಧಿ ಎಂಬ ಭಾವನೆ ಬ್ರಾಹ್ಮಣರಲ್ಲಿದೆ. ಮಂದಿರ ನಿರ್ಮಾಣ ಯೋಚನೆಯು ಆ ಕಲ್ಪನೆಯನ್ನು ಮರೆಮಾಚುತ್ತದೆ” ಎಂದು ರಾಮಮಂದಿರ ಚಳವಳಿಯ ಮುಂಚೂಣಿಯಲ್ಲಿದ್ದ ಗೋವಿಂದಾಚಾರ್ಯ ಹೇಳುತ್ತಾರೆ.

ಜಿ.ಬಿ. ಪಂತ್ ಸೋಷಿಯಲ್ ಸೈನ್ಸ್‌ ಇನ್ಸ್ಟಿಟ್ಯೂಟ್‌ನ ಪ್ರಾಧ್ಯಾಪಕ ಬದ್ರಿ ನಾರಾಯಣ್ ಅವರ ಪ್ರಕಾರ, “ಆದಿತ್ಯನಾಥ ಮಂದಿರ ನಿರ್ಮಾಣದ ಮೇಲುಸ್ತುವಾರಿ ನಡೆಸುತ್ತಾರೆ. ಮುಂದಿನ ಎರಡು ವರ್ಷಗಳ ಕಾಲ ಉತ್ಸಾಹವೂ ಇರುತ್ತದೆ. ಜನಕ್ರೋಢೀಕರಣವೂ ನಡೆಯಬಹುದು. ಇದರ ಲಾಭ ಅತನಿಗೇ ಹೋಗುತ್ತದೆ.”

ಇನ್ನೊಂದು ಎಳೆಯೆಂದರೆ, ವಾಸ್ತವವಾಗಿ 1980 ಮತ್ತು 1990ರ ದಶಕದಲ್ಲಿ ರಾಮಮಂದಿರ ಚಳವಳಿಯ ನಾಯಕತ್ವ ವಹಿಸಿದ್ದ ಬಿಜೆಪಿ ನಾಯಕರನ್ನು ಎಷ್ಟು ಸುಲಭವಾಗಿ ಬದಿಗೆ ಸರಿಸಲಾಯಿತು ಎಂಬುದು. ಈ ನಾಯಕರು 1984ರಲ್ಲಿ ಕೇವಲ ಎರಡು ಲೋಕಸಭಾ ಸ್ಥಾನಗಳನ್ನು ಹೊಂದಿದ್ದಲ್ಲಿಂದ 2014 ಮತ್ತು 2019ರಲ್ಲಿ ಭಾರೀ ಬಹುಮತ ಪಡೆಯಲು ಪಕ್ಷಕ್ಕೆ ನೆರವಾದವರು.

ರಾಮಮಂದಿರ ಚಳವಳಿ ಮತ್ತು ಅದು ಹುಟ್ಟುಹಾಕಿದ ಹಿಂಸಾಚಾರಕ್ಕೆ ಜವಾಬ್ದಾರರಾದ ಇಬ್ಬರು ನಾಯಕರಾದ ಎಲ್.ಕೆ. ಆಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅಯೋಧ್ಯೆಯ ಕಾರ್ಯಕ್ರಮದಲ್ಲಿ ಮೋದಿ ಜೊತೆ ನೇರವಾಗಿ ಭಾಗವಹಿಸದೇ, ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಅದೇನೇ ಇದ್ದರೂ, ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾಗೆ ಪಕ್ಷದ ನಿಯಂತ್ರಣ ಬಿಟ್ಟುಕೊಡಲು ಹಿಂದೇಟು ಹಾಕಿದಕ್ಕಾಗಿ ಅವರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿದೆ ಎಂಬ ಭಾವನೆ ಬಲವಾಗಿ ಬೇರೂರಿದೆ.

ಇನ್ನೊಂದು ಕಡೆಯಲ್ಲಿ, ಬಿಜೆಪಿಯನ್ನು ನಿರಂತರವಾಗಿ ವಿರೋಧಿಸುವ ಮತ್ತು ಭಾರತದ ಜಾತ್ಯತೀತ ಆದರ್ಶಗಳ ರಕ್ಷಕನೆಂದು ಹೆಸರಿಗಾದರೂ ಭಾವಿಸಲಾಗುವ ಕಾಂಗ್ರೆಸ್ ಇದೆ. ಹಾಗಿದ್ದರೂ ಹಲವಾರು ರೀತಿಗಳಲ್ಲಿ ಮಂದಿರ ಪ್ರಕರಣವು ತೆಗೆದುಕೊಂಡ ತಿರುವುಗಳಿಗೆ ಅದು ಜವಾಬ್ದಾರ. ರಾಜೀವ್ ಗಾಂಧಿ ಪ್ರಧಾನಿಯಾದ ಬಳಿಕವಷ್ಟೇ ಬಾಬ್ರಿ ಮಸೀದಿಯ ಬೀಗ ತೆಗೆದು ಹಿಂದೂಗಳ ಪೂಜೆಗೆ ಅವಕಾಶ ಸಿಕ್ಕಿದ್ದು. ಕಾಂಗ್ರೆಸ್ ಈಗಲೂ ರಾಮಮಂದಿರ ನಿರ್ಮಾಣಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂಬ ಕುರಿತು ಸ್ಪಷ್ಟತೆ ಹೊಂದಿಲ್ಲ. ಇತರ ಪಕ್ಷಗಳು ಅದನ್ನು ಸ್ವಾಗತಿಸಿ, ತಮಗೆ ಆಹ್ವಾನ ನೀಡದಿರುವುದಕ್ಕಾಗಿ ದೂರುತ್ತಿದ್ದರೂ, ಕಾಂಗ್ರೆಸ್‌ನ ಉನ್ನತ ನಾಯಕತ್ವ ಮೌನವಾಗಿದೆ.

ಅಂತಿಮವಾಗಿ ಕಾಶ್ಮೀರದಿಂದ ಒಂದು ಅಭಿಪ್ರಾಯ. ನನ್ನ ಸಹೋದ್ಯೋಗಿ ಇಪ್ಸಿತಾ ಚಕ್ರವರ್ತಿ ಬರೆಯುತ್ತಾರೆ:

“ವಿಧಿ 370ನ್ನು ಕಿತ್ತುಹಾಕುವುದು ಮತ್ತು ರಾಮ ಮಂದಿರ ನಿರ್ಮಾಣ ಯಾವತ್ತೂ ಬಿಜೆಪಿಯ ಪ್ರಮುಖ ಕಾರ್ಯಕ್ರಮವಾಗಿತ್ತು. ಆದುದರಿಂದ, ವಿಧಿ 370ನ್ನು ಕಿತ್ತುಹಾಕಿದ ವಾರ್ಷಿಕ ದಿನದಂದೇ ಅಯೋಧ್ಯೆಯ ಕಾರ್ಯಕ್ರಮ ನಡೆಸುತ್ತಿರುವುದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಹೆಚ್ಚಿನ ಕಾಶ್ಮೀರಿಗಳ ಮಟ್ಟಿಗೆ ಇದೊಂದು ಉದ್ದೇಶಪೂರ್ವಕ ಯೋಜನೆ. ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ನೆಲಸಮ ಮಾಡಿದ ವಾರ್ಷಿಕ ದಿನದಂದೇ, ಬಾಬ್ರಿ ಮಸೀದಿ ನೆಲಸಮ ಮಾಡಿದ ಸ್ಥಳದಲ್ಲಿಯೇ ರಾಮಮಂದಿರ ನಿರ್ಮಾಣ ಕಾರ್ಯದ ಉದ್ಘಾಟನೆ ಮಾಡುವುದರ ಹಿಂದಿರುವ ಸಂದೇಶ ಗಟ್ಟಿಯಾಗಿದೆ ಮತ್ತು ಸ್ಪಷ್ಟವಾಗಿದೆ.”

ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವುದರಿಂದ ಈ ಪ್ರದೇಶಕ್ಕೆ ಅಭಿವೃದ್ಧಿ ಬರುವುದು, ದೇಶದ ಇತರ ಕಡೆಗಳಲ್ಲಿ ನಾಗರಿಕರು ಅನುಭವಿಸುತ್ತಿರುವ ಹಕ್ಕುಗಳು ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೂ ಸಿಗುವುದು ಎಂದು ಕೇಂದ್ರ ಸರಕಾರ ವಾದಿಸಿತ್ತು. ಆದರೆ, ಈ ವಾದವನ್ನು ಒಪ್ಪಿಕೊಳ್ಳುವವರು ಕಾಶ್ಮೀರದಲ್ಲಿ ಯಾರೂ ಇಲ್ಲ.

ವಿಶೇಷ ರಕ್ಷಣೆ, ಸ್ಥಾನಮಾನದ ಹಿಂತೆಗೆತವು ಮುಸ್ಲಿಂ ಬಾಹುಳ್ಯದ ಕಣಿವೆಯಲ್ಲಿ ಜನಸಂಖ್ಯಾ ಸ್ವರೂಪವನ್ನು ಬದಲಿಸುವುದಕ್ಕೆ ಮುನ್ನುಡಿ ಮತ್ತು ದೇಶದ ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಜ್ಯದ ಸ್ವರೂಪದ ಮೇಲೆ ನಡೆಯುತ್ತಿರುವ ಹಿಂದೂ ಬಹುಸಂಖ್ಯಾತ ದಾಳಿ ಎಂದೇ ಇಲ್ಲಿನ ನಿವಾಸಿಗಳು ಭಾವಿಸುತ್ತಾರೆ.

ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮವು ಈ ಭಾವನೆಯನ್ನು ದೃಢ ನಂಬಿಕೆಯಾಗಿ ಪರಿವರ್ತಿಸಿದೆ.

ರೋಹನ್ ವೆಂಕಟರಾಮಕೃಷ್ಣನ್, ಸ್ಕ್ರೋಲ್.ಇನ್

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: 370 ನೇ ವಿಧಿ ರದ್ಧತಿಯ ಮೊದಲ ವಾರ್ಷಿಕೋತ್ಸವಕ್ಕೆ ಮುಂಚೆಯೇ ಶ್ರೀನಗರದಲ್ಲಿ ಮತ್ತೆ ಕರ್ಫ್ಯೂ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...