ಛತ್ತೀಸ್ಘಡ ರಾಜ್ಯದ ಬಸ್ತಾರ್ ಜಿಲ್ಲೆಯ ಬಿಜಾಪುರದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನೂರಾರು ಸಹಾಯಕ ಕಾನ್ಸ್ಟೆಬಲ್ಗಳು ಡಿಸೆಂಬರ್ 8ರಂದು ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ದೀರ್ಘಕಾಲದ ಬೇಡಿಕೆಗಳಾದ ಪೊಲೀಸ್ ಪಡೆಗಳಲ್ಲಿ ಖಾಯಂಗೊಳಿಸುವಿಕೆ, ಸಂಬಳ ಮತ್ತು ಇತರ ಸವಲತ್ತುಗಳ ಹೆಚ್ಚಳಕ್ಕಾಗಿ ಒತ್ತಾಯಿಸಿ ಪೊಲೀಸ್ ಸಹಾಯಕ ಕಾನ್ಸ್ಟೇಬಲ್ಗಳ ಕುಟುಂಬ ಸದಸ್ಯರು ಹೋರಾಟ ನಡೆಸುತ್ತಿದ್ದಾರೆ.
ಸಹಾಯಕ ಕಾನ್ಸ್ಟೇಬಲ್ಗಳ ಕುಟುಂಬ ಸದಸ್ಯರು ಪೊಲೀಸ್ ಪ್ರಧಾನ ಕಚೇರಿಗೆ ಘೇರಾವ್ ಹಾಕಲು (ಮುತ್ತಿಗೆ ಹಾಕಲು) ಪ್ರಯತ್ನಿಸಿದಾಗ, ಪೊಲೀಸರು ಅವರನ್ನು ತಡೆದಿದ್ದಾರೆ. ಹೋರಾಟದ ಭಾಗವಾಗಿದ್ದ ಕೆಲವು ಮಹಿಳೆಯರು, “ನಮ್ಮ ಮೇಲೆ ದೌರ್ಜನ್ಯ ನಡೆಸಲಾಗಿದೆ, ಪೊಲೀಸರು ಥಳಿಸಿದ್ದಾರೆ. ನಮ್ಮ ಬಟ್ಟೆಗಳನ್ನು ಹರಿದಿದ್ದಾರೆ” ಎಂದು ಆರೋಪಿಸಿದ್ದಾರೆ. ಪ್ರತಿಭಟನೆ ನಡೆಸಿದ ಮಹಿಳೆಯರು, ಮಕ್ಕಳು ಮತ್ತು ಗಂಡಸರನ್ನು ರಾಯ್ಪುರದ ಸಪ್ರೆ ಶಾಲೆಯಲ್ಲಿರುವ ತಾತ್ಕಾಲಿಕ ಜೈಲಿನಲ್ಲಿ ಇರಿಸಲಾಗಿತ್ತು.
ತಮ್ಮ ಕುಟುಂಬದವರ ಮೇಲಾದ ಈ ದೌರ್ಜನ್ಯದಿಂದ ಕುಪಿತರಾದ ಬಿಜಾಪುರದ ಕುಟ್ರು, ಪೊಲೀಸ್ ಲೈನ್, ಮಿರ್ತೂರು, ಗಂಗಾಳೂರು ಮತ್ತು ಇತರ ಪ್ರದೇಶಗಳಲ್ಲಿ ನಿಯೋಜಿಸಲಾದ ಸಹಾಯಕ ಕಾನ್ಸ್ಟೇಬಲ್ಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಠಾಣೆಗೆ ಒಪ್ಪಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ‘ದಿ ವೈರ್’ ವರದಿ ಮಾಡಿದೆ.
ಇದನ್ನೂ ಓದಿರಿ: ಆತ್ಮಚರಿತ್ರೆಯಲ್ಲಿ ‘ಅಯೋಧ್ಯೆ ತೀರ್ಪು ಆಚರಣೆ’ ಶಿರ್ಷಿಕೆ; ವಿವಾದದ ನಂತರ ‘ಅದು ಆಚರಣೆಯಲ್ಲ’ ಎಂದ ನಿವೃತ್ತ ಸಿಜೆಐ ರಂಜನ್ ಗೊಗೊಯ್
ಪ್ರತಿಭಟನಾಕಾರರಲ್ಲಿ ಒಬ್ಬರಾದ ರಮೇಶ ಕೊಸರೆ ಮಾತನಾಡಿ, “ನನ್ನನ್ನು ಸಹಾಯಕ ಕಾನ್ಸ್ಟೆಬಲ್ ಆಗಿ ನಿಯೋಜಿಸಲಾಗಿದೆ. ನನ್ನ ಕುಟುಂಬ ಸದಸ್ಯರು ರಾಯ್ಪುರದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಆದರೆ ರಾಜಧಾನಿಯಿಂದ 28 ಕಿಮೀ ಮುಂದಿರುವ ಅಭನ್ಪುರದಲ್ಲಿ ಅವರನ್ನು ತಡೆದು ಥಳಿಸಲಾಯಿತು. ನಮ್ಮ ಕುಟುಂಬದ ಮಹಿಳೆಯರನ್ನು ಇರಿಸಿದ್ದ ಕೊಠಡಿಗಳಲ್ಲಿ ದೀಪಗಳನ್ನು ಆಫ್ ಮಾಡಲಾಯಿತು. ಮಹಿಳೆಯರ ಮೇಲೆ ವಾರ್ಡನ್ಗಳು ಹಲ್ಲೆ ನಡೆಸಿದರು” ಎಂದು ಆರೋಪಿಸಿದ್ದಾರೆ.
“ಬಸ್ತಾರ್ ಪ್ರದೇಶವು ನಕ್ಸಲ್ ಚಟುವಟಿಕೆಗಳಿಗೆ ಪ್ರಸಿದ್ಧವಾಗಿದೆ. ನಕ್ಸಲ್ ಚಟುವಟಿಕೆ ಹೆಚ್ಚಿರುವ ಕಾಡುಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಪ್ರಾಣಾಪಾಯವಿದ್ದರೂ ಸೇವೆ ಸಲ್ಲಿಸಲಾಗುತ್ತಿದೆ” ಎಂದು ಸಹಾಯಕ ಕಾನ್ಸ್ಟೆಬಲ್ಗಳು ಹೇಳುತ್ತಿದ್ದಾರೆ. ಆದರೆ ಪ್ರತಿಯಾಗಿ ಬಹಳ ಕಡಿಮೆ ವೇತನವನ್ನು ನೀಡಲಾಗುತ್ತದೆ. ವೇತನ ಹೆಚ್ಚಿಸಿ, ಸಕಾಲಿಕ ಬಡ್ತಿ ನೀಡಬೇಕಿದೆ. ಛತ್ತೀಸ್ಗಢದಲ್ಲಿ ಸಹಾಯಕ ಕಾನ್ಸ್ಟೇಬಲ್ಗಳಿಗೆ ತಿಂಗಳಿಗೆ 15,000 ರೂ., ರಹಸ್ಯ ಪಡೆಗಳು ಅಥವಾ ಪೊಲೀಸ್ ಮಾಹಿತಿದಾರರಿಗೆ 12,000 ರೂ. ಮತ್ತು ಗೃಹ ರಕ್ಷಕರಿಗೆ ತಿಂಗಳಿಗೆ 13,000 ರೂ. ನೀಡಲಾಗುತ್ತಿದೆ ಎಂಬುದು ಪ್ರತಿಭಟನೆಗೆ ಕಾರಣ.
ನಕ್ಸಲೀಯರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಸಲುವಾಗಿ, 2003 ಮತ್ತು 2018ರ ನಡುವೆ ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ರಮಣ್ ಸಿಂಗ್ ಸರ್ಕಾರವು ಬಸ್ತಾರ್ನಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳಾಗಿ (ಎಸ್ಪಿಒ) ಸೇವೆ ಸಲ್ಲಿಸಲು ಅನೇಕ ಯುವಕರನ್ನು ನೇಮಿಸಿಕೊಂಡಿತು. ಇವರಲ್ಲಿ ಹೆಚ್ಚಿನವರು ಶರಣಾದ ಮಾವೋವಾದಿಗಳಾಗಿದ್ದರು. ನಂತರ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಎಸ್ಪಿಒಗಳನ್ನು ಸಹಾಯಕ ಕಾನ್ಸ್ಟೆಬಲ್ಗಳಾಗಿ ಮಾಡಲಾಯಿತು.
ಆದರೆ ರಾಜ್ಯದಲ್ಲಿ 2018ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ ಎಸ್ಪಿಒಗಳು, ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷ ಅಧಿಕಾರ ನೀಡಿದರು. ಈಗ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಿಜೆಪಿಯ ನೀತಿಗಳನ್ನೇ ಅನುಸರಿಸುತ್ತಿದೆ ಎಂಬುದು ಪ್ರತಿಭಟನೆಯ ಹಿಂದಿನ ಆಕ್ರೋಶವಾಗಿದೆ.
ಇದನ್ನೂ ಓದಿರಿ: ಕೃಷಿ ಕಾಯಿದೆಗಳ ವಾಪಸಾತಿ; ದಣಿವರಿಯದ ಹೋರಾಟ ಕಲಿಸಿದ ಪಾಠಗಳೇನು?