ಕಬ್ಬಿಣದ ಅದಿರನ್ನು ಬಳ್ಳಾರಿಯಿಂದ ಉತ್ತರ ಕನ್ನಡದ ಬೇಲೇಕೇರಿ ಬಂದರಿಗೆ ಅಕ್ರಮವಾಗಿ ಸಾಗಿಸಿ, ವಿದೇಶಕ್ಕೆ ಕಳ್ಳ ಸಾಗಣಿಕೆ ಆಗುತ್ತಿದ್ದ ಪ್ರಕರಣವನ್ನು ನಿಷ್ಟುರ ತನಿಖೆಗೊಳಪಡಿಸಿದ್ದರು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ. ಅವರು ಸರಕಾರಕ್ಕೆ ವರದಿ ಕೊಟ್ಟಾಗ ರಾಜಕೀಯ ಎದ್ದ ಅಲ್ಲೋಲ ಕಲ್ಲೋಲ ನೆನಪಿದೆಯಾ? ಅಂದು ಮುಖ್ಯ ಮಂತ್ರಿಯಾಗಿದ್ದದ್ದು ಯಡಿಯೂರಪ್ಪ. ಆಗ ಅದಾನಿ ಕಂಪನಿಯಿಂದ ಲಂಚ ಪಡೆದು ಅಕ್ರಮವಾಗಿ ಅದಿರು ಸಾಗಾಣಿಕೆಗೆ ಅವಕಾಶಕೊಟ್ಟ ಆರೋಪದ ಮೇಲೆ ದೊಡ್ಡ-ದೊಡ್ಡ ಅಧಿಕಾರಿಗಳೇ ಜೈಲು ಪಾಲಾಗಿದ್ದರು!
ಅದಾನಿ ಎಂಟರ್ ಪ್ರೈಸೆಸ್ನಿಂದ ಲಂಚದ ಕಾಸು ಪಡೆದುಕೊಂಡು ಅದಿರು ಕಳ್ಳ ಸಾಗಾಣಿಕೆಗೆ ಸಹಕರಿಸುತ್ತಿದ್ದ ಆರೋಪದ ವಿಚಾರಣೆ 24 ಅಧಿಕಾರಿಗಳು ಎದುರಿಸುತ್ತಿದ್ದರು. ಇವರಿಗೆಲ್ಲ ಯಡಿಯೂರಪ್ಪ ಸಿಎಂ ಪೀಠದಿಂದ ನಿರ್ಗಮಿಸುವ 18 ದಿನ ಮೊದಲು ಕ್ಲೀನ್ ಚಿಟ್ ನೀಡಿದ್ದಾರೆ. 2021ರ ಜುಲೈ 8ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆರೋಪಿ ಅಧಿಕಾರಿಗಳನ್ನು ದೋಷ ಮುಕ್ತಗೊಳಿಸಿ ಆದೇಶ ಹೊರಡಿಸಿರುವುದು ಈಗ ರಾಜಕೀಯ ಮತ್ತು ಅಧಿಕಾರಿ ವಲಯದಲ್ಲಿ ನಾನಾ ನಮೂನೆಯ ವ್ಯಾಖಾನಗಳಿಗೆ ವಸ್ತುವಾಗಿದೆ.
ನ್ಯಾ.ಸಂತೋಷ್ ಹೆಗ್ಡೆ ವರದಿಯಲ್ಲಿ ಅಧಿಕಾರಿಗಳು ಲಂಚ ಪಡೆದು ಅದಿರು ಕಳ್ಳ ಸಾಗಾಣಿಕೆಗೆ ಅವಕಾಶ ಕೊಟ್ಟಿದ್ದಾರೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ಬಳ್ಳಾರಿ ಅಕ್ರಮ ಗಣಿಗಾರಿಕೆ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ದೂರು ದಾಖಲಿಸಿತ್ತು. ಸುಪ್ರೀಂ ಕೋರ್ಟು ಅಕ್ರಮ ಗಣಿಗಾರಿಕೆಯ ತನಿಖೆಗೆ ಉನ್ನತಾಧಿಕಾರ ಸಮಿತಿ [ಸಿಇಸಿ]ಯೊಂದನ್ನು ನೇಮಿಸಿತ್ತು. 8.50 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಕಳ್ಳ ಸಾಗಾಣಿಕೆಯಾಗಿರುವುದನ್ನು ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದ ಸಿಇಸಿ, ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಆದಾನಿ ಕಂಪನಿ ವಿರುದ್ಧವು ತನಿಖೆ ಮಾಡುವಂತೆ ತಿಳಿಸಿತ್ತು.
ಇತ್ತ ರಾಜ್ಯ ಸರಕಾರ ಕರ್ನಾಟಕ ಸಿವಿಲ್ ಸೇವಾ ನಿಯಮದಂತೆ ಆರೋಪಿತ ಅಧಿಕಾರಿಗಳ ವಿಚಾರಣೆ ಶುರು ಹಚ್ಚಿಕೊಂಡಿತ್ತು. ಅಂದಿನ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ನಿರ್ದೇಶಕ ಕ್ಯಾಪ್ಟನ್ ಆರ್.ಮೋಹನ್ ಮತ್ತು ಹಲವು ಅಧಿಕಾರಿಗಳು-ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಶಿಸ್ತು ಪ್ರಾಧಿಕಾರಿಯಾಗಿ ನೇಮಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆಯೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆಧೀನ ಕಾರ್ಯದರ್ಶಿ ಎಚ್.ಕೆ.ಕಾಂತರಾಜು 8-7-2021ರಂದು, ಅಂದರೆ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡುವ ಕಾಲ ಸನ್ನಿಹಿತವಾಗಿದ್ದ ಸಂದರ್ಭದಲ್ಲಿ ತಪ್ಪಿತಸ್ಥ ಅಧಿಕಾರಿಗಳು ನಿರ್ದೋಷಿಗಳೆಂದು ಆದೇಶ ಹೋರಡಿಸಿಬಿಟ್ಟಿದ್ದಾರೆ!!
ಆರೋಪಿತ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಯುತ್ತಿದ್ದ ಸಿಬಿಐ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣ ಬಾಕಿಯುಳಿದಿಲ್ಲವೆಂಬ ನೆಪದಿಂದ ಬಂದರು ಇಲಾಖೆಯ ನಿರ್ದೇಶಕರಾಗಿದ್ದ ಕ್ಯಾಪ್ಟನ್ ಆರ್.ಮೋಹನ್, ಕ್ಯಾಪ್ಟನ್ ಸಿ. ಸ್ವಾಮಿ ಮುಂತಾದ ಒಟ್ಟು 24 ಅಧಿಕಾರಿ ಹಾಗು ಸಿಬ್ಬಂದಿಯನ್ನು ಬಚಾವ್ ಮಾಡಲಾಗಿದೆ!
ನ್ಯಾಯಯುತ ವಿಚಾರಣೆ ನಡೆದಿಲ್ಲವೆಂದೂ, ಅಧಿಕಾರಿಗಳನ್ನು ರಕ್ಷಿಸಲೆಂದೇ ಕ್ಲಿನ್ಚಿಟ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮುಂದೆ ಏನಾಗಲಿದೆ ಕಾದು ನೋಡಬೇಕಿದೆ.
ಇದನ್ನೂ ಓದಿ: ಕೊರೊನಾ ನೆಪದಲ್ಲಿ ಜಿಲ್ಲಾ ಅದಿರು ಫೌಂಡೇಷನ್ ನಿಧಿ ದುರುಪಯೋಗ: ಎಚ್.ಎಸ್ ದೊರೆಸ್ವಾಮಿ