ಬೆಂಗಳೂರಿನ ಆನೇಕಲ್-ಜಿಗಣಿ ರಸ್ತೆಯಲ್ಲಿ ಸೋಮವಾರ (ಡಿಸೆಂಬರ್ 27) ರಾತ್ರಿ 38 ವರ್ಷದ ಮಹಿಳೆಯನ್ನು ಐದು ಜನರ ತಂಡವು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಣಕಾಸಿನ ವಿವಾದಗಳು ಮತ್ತು ಅನೈತಿಕ ಸಂಬಂಧ ಕೊಲೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ಮಹಿಳೆಯನ್ನು ಜಿಗಣಿ ನಿವಾಸಿ ಅರ್ಚನಾ ರೆಡ್ಡಿ ಎಂದು ಗುರುತಿಸಲಾಗಿದೆ. ಎಂಟು ವರ್ಷಗಳ ಹಿಂದೆ ಪತಿಗೆ ವಿಚ್ಛೇದನ ನೀಡಿದ್ದ ಆಕೆ ನವೀನ್ ಕುಮಾರ್ ಎಂಬ ವ್ಯಕ್ತಿಯೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ನಲ್ಲಿ ಇದ್ದರು. ಆದರೆ, ಆಸ್ತಿ ವಿಚಾರಕ್ಕೆ ಗಲಟೆ ನಡೆದು ಆಕೆ ಆತನಿಂದ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದೆ.
ಆಸ್ತಿ ವಿಚಾರದ ಗಲಾಟೆ ಕುರಿತು ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ನವೀನ್ ಕುಮಾರ್ ಮತ್ತು ಆತನ ಸಹಚರರು ಹತ್ಯೆ ಮಾಡಿದ್ದಾರೆ ಎಂಬ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಡುಪಿ ದ್ವೇಷ ಭಾಷಣ: ಬೇಷರತ್ ಕ್ಷಮೆ ಕೇಳಿದ ತೇಜಸ್ವಿ ಸೂರ್ಯ
ರಾತ್ರಿ 10.30ರ ಸುಮಾರಿಗೆ ಜಿಗಣಿಯಿಂದ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಕೂಟರ್ನಲ್ಲಿ ಅರ್ಚನಾ ಅವರನ್ನು ಹಿಂಬಾಲಿಸಿದ್ದ ಆರೋಪಿಗಳು ಆಕೆಯ ಕಾರಿಗೆ ಅಡ್ಡಗಟ್ಟಿ, ಆಕೆಯನ್ನು ಕಾರಿನಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಆಕೆಯ ಡ್ರೈವರ್ ಪ್ರಮೋದ್ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೊಲೆಗೆ ಸಂಚು ರೂಪಿಸಿದ ಶಂಕಿತ ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ. ಜೊತೆಗೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ.