HomeUncategorizedಬಿಡದಿಯ ಹಕ್ಕಿಪಿಕ್ಕಿ ಬಾಲಕಿ ಸಾವು ಪ್ರಕರಣ: ರೈಲು ಡಿಕ್ಕಿ ಎಂದ ಪೊಲೀಸ್ ತನಿಖೆ, ಮರುತನಿಖೆಗೆ ಆಗ್ರಹ

ಬಿಡದಿಯ ಹಕ್ಕಿಪಿಕ್ಕಿ ಬಾಲಕಿ ಸಾವು ಪ್ರಕರಣ: ರೈಲು ಡಿಕ್ಕಿ ಎಂದ ಪೊಲೀಸ್ ತನಿಖೆ, ಮರುತನಿಖೆಗೆ ಆಗ್ರಹ

- Advertisement -
- Advertisement -

ಬೆಂಗಳೂರು: ಬಿಡದಿ ಬಳಿಯ ಭದ್ರಾಪುರದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಇದೇ ಮೇ 12ರಂದು ರೈಲು ಹಳಿಯ ಬಳಿ ಶವವಾಗಿ ಪತ್ತೆಯಾಗಿದ್ದ 14 ವರ್ಷದ ಬಾಲಕಿಯ ಪ್ರಕರಣವು ‘ಅತ್ಯಾಚಾರ-ಕೊಲೆ’ ಎಂದು ರಾಜ್ಯಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ರೈಲು ಡಿಕ್ಕಿಯಿಂದ ಸಂಭವಿಸಿದೆ ಎಂದು ಘೋಷಿಸಿದೆ. ಈ ಕುರಿತು ಹಲವು ಅನುಮಾನಗಳನ್ನು ವ್ಯಕ್ತಪಡಿಸಿ ಬಾಲಕಿಯ ಸಾವಿನ ಕುರಿತು ಸರ್ಕಾರ ಮತ್ತು ಪೊಲೀಸ್‌ ವ್ಯವಸ್ಥೆಗೆ ಒಂದು ಬಹಿರಂಗ ಪತ್ರ ಬರೆದಿರುವ ‘ನಾವೆದ್ದು ನಿಲ್ಲದಿದ್ದರೆ- ಕರ್ನಾಟಕ’ವು ಸ್ವತಂತ್ರ ಮರುತನಿಖೆಗೆ ಆಗ್ರಹಿಸಿದೆ.

ಬಾಲಕಿಯ ಸಾವು ಸಂಭವಿಸಿದ್ದು ಹೇಗೆ? ರೈಲ್ವೇ ಅಪಘಾತದಿಂದಲೋ ಅಥವಾ ಕ್ರೂರ ಹಿಂಸೆಯಿಂದಲೋ? ಎಂದು ‘ನಾವೆದ್ದು ನಿಲ್ಲದಿದ್ದರೆ’ ವೇದಿಕೆಯಿಂದ ಪತ್ರಿಕಾ ಹೇಳಿಕೆ ನೀಡಿರುವ ಮಲ್ಲಿಗೆ ಸಿರಿಮನೆಯವರು, ಘಟನೆಯ ಸಂಬಂಧ ಮಾತು ಬಾರದ ಮತ್ತು ಕಿವಿ ಕೇಳದ ಅಕ್ಕಿಪಿಕ್ಕಿ ಸಮುದಾಯದ ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲಾಗಿದೆ ಎಂದು ಪೋಷಕರೇ ಈ ಹಿಂದೆ ಆರೋಪಿಸಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಬುಧವಾರ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಇದು ಸಾಕಷ್ಟು ಅನುಮಾನಕ್ಕೀಡು ಮಾಡಿದೆ. ನಾವು ಬಾಲಕಿಯ ಸಾವಿನ ಕುರಿತು ನ್ಯಾಯಕ್ಕಾಗಿ ಮರುತನಿಖೆಗೆ ಆಗ್ರಹಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಬಾಲಕಿಯು ಶವವಾಗಿ ಪತ್ತೆಯಾಗಿದ್ದಾಗ ಸ್ಥಳೀಯ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಹಲವು ಕಥೆಗಳು ಹರಿದಾಡಿದ್ದವು. ಮೇಲ್ನೋಟಕ್ಕೆ ಎಲ್ಲ ಸಂಗತಿಗಳೂ ಈ ಸಾವಿನ ಹಿಂದೆ ಆತಂಕ ಹುಟ್ಟಿಸುವಂತಹ ವಿಚಾರಗಳಿವೆ ಎಂದು ಸೂಚಿಸುತ್ತಿದ್ದವು. ಅವಳು ಹಿಂದಿನ ಸಂಜೆಯಿಂದ ಕಾಣೆಯಾಗಿದ್ದಳು ಎಂಬ ಅಂಶದಿಂದ ಹಿಡಿದು ಆಕೆಯ ದೇಹವು ಪತ್ತೆಯಾದ ನಿರ್ಜನ ಸ್ಥಳ, ಆಕೆಯ ಬಟ್ಟೆಗಳ ಹರಿದ ಸ್ಥಿತಿ, ಗಂಭೀರವಾದ ಏಟು ಬಿದ್ದಿದ್ದ ತಲೆ, ಮುರಿದ ಕಾಲು ಮತ್ತು ಬೆನ್ನು ಸೇರಿದಂತೆ ಆಕೆಯ ದೇಹದ ಮೇಲಿನ ಗಂಭೀರ ಗಾಯಗಳ ಗುರುತುಗಳವರೆಗೆ ಅನೇಕ ವಿಷಯಗಳು ಮೊದಲ ದಿನವೇ ಕುಟುಂಬದ ಸದಸ್ಯರ ಹೇಳಿಕೆಗಳಲ್ಲಿ ಕೇಳಬಂದವು. ಹಾಗೆಯೇ ಅಪರಿಚಿತ ಕಾರೊಂದು ದೇಹ ಸಿಕ್ಕಿದ ಸ್ಥಳದ ಸಮೀಪದವರೆಗೆ ಬಂದು ಹಿಂತಿರುಗಿ ಹೋಗಿದ್ದಕ್ಕೆ ಸಿಸಿಟಿವಿ ಫೂಟೇಜ್‌ ಇದೆ ಎಂಬ ಮಾಧ್ಯಮವೊಂದರ ಪತ್ರಿಕಾ ವರದಿಯವರೆಗೆ ಎಲ್ಲವೂ ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತಿದ್ದವು. ಪೊಲೀಸರೇ ಆರಂಭದಲ್ಲಿ ಇದು ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣ ಎಂದು ಪರಿಗಣಿಸಿ, ವಿಚಾರಣೆಗಾಗಿ ಕೆಲವರನ್ನು ಠಾಣೆಗೆ ಕರೆಸಿದ್ದರು. ಡಿ.ಕೆ.ಶಿವಕುಮಾರ್ ಅವರಂತಹ ಹಲವರ ಭೇಟಿ ನೀಡಿ ಹೆಣ್ಣುಮಗುವಿನ ಸಾವಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದರು. ಈಗ ನೋಡಿದರೆ
ರಾಮನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಇದು ರೈಲ್ವೇ ಅಪಘಾತ ಎಂದು ಘೋಷಿಸಿದ್ದಾರೆ. ಈ ಇಡೀ ಪ್ರಕ್ರಿಯೆ ಮತ್ತು ಪ್ರಕರಣವನ್ನು ನಿಭಾಯಿಸಿದ ರೀತಿ ನಮ್ಮಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯು, ಉತ್ತರಗಳನ್ನು ಒದಗಿಸುವುದಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿರುವುದರಿಂದ, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಣಾಯಕ ಕಾಳಜಿಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ. ವೇದಿಕೆಯಾಗಿ ನಾವು
ಹಲವಾರು ಸದಸ್ಯರು ಭದ್ರಾಪುರ ಹಕ್ಕಿ ಪಿಕ್ಕಿ ಕಾಲೋನಿಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ ಮತ್ತು ತನಿಖೆ ಸಂಪೂರ್ಣವಾಗಿ ಮತ್ತು ಪಾರದರ್ಶಕವಾಗಿ ನಡೆಯುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರನ್ನು ಭೇಟಿಯಾಗಿದ್ದೇವೆ. ನಮ್ಮಲ್ಲಿ ಕೆಲವರು ಈ ಸಮುದಾಯದೊಂದಿಗೆ ಅವರ ಮೂಲಭೂತ ಹಕ್ಕುಗಳು ಮತ್ತು ಘನತೆಗೆ ಸಂಬಂಧಿಸಿದ ವಿಷಯಗಳ ಮೇಲೆ ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದು, ಸಮುದಾಯದ ಮುಂದಾಳುಗಳಿಗೆ ಪರಿಚಿತರಾಗಿದ್ದೇವೆ. ನಮ್ಮ ತಂಡವು ಹಲವು ವಿಚಾರಗಳನ್ನು ಕೆದಕಿದಾಗ ಆರಂಭಿಕ ಹಂತದಿಂದಲೇ ಪೊಲೀಸ್ ತನಿಖೆಗಳು ನಡೆಯುತ್ತಿರುವ ರೀತಿಯಲ್ಲಿ ಸಮಸ್ಯೆಗಳಿವೆ ಎಂದು ನಾವು ಕಂಡುಕೊಂಡೆವು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಾಧ್ಯಮ ವರದಿಗಳು ಮತ್ತು ನಮ್ಮದೇ ಅವಲೋಕನಗಳಿಂದ ಸ್ಪಷ್ಟವಾದಂತೆ, ದೇಹವು ಪತ್ತೆಯಾದ ಸ್ಥಳವನ್ನು ಅಪರಾಧ ಸ್ಥಳವೆಂದು ಪರಿಗಣಿಸಿ, ಹೊರಗಿನವರು ಪ್ರವೇಶಿಸದಂತೆ ಸಂಚಾರವನ್ನು ನಿರ್ಬಂಧಿಸಲಾಗಿರಲಿಲ್ಲ. ಯಾವುದೇ ಅಡೆತಡೆಗಳಿಲ್ಲದೆ ಸಾರ್ವಜನಿಕರಿಗೆ ಆ ಪ್ರದೇಶದಲ್ಲಿ ಓಡಾಡಲು ಅವಕಾಶ ನೀಡಲಾಯಿತು, ಇದು ಯಾವುದೇ ಸ್ಥಳದ ಸಾಕ್ಷ್ಯವನ್ನು ತಿರುಚುವ ಅಥವಾ ಹಸ್ತಕ್ಷೇಪ ಮಾಡುವ ಸಾಧ್ಯತೆಗೆ ಕಾರಣವಾಗುವಂತಿತ್ತು.
ಅದಲ್ಲದೆ, ನಿರ್ಜನವಾಗಿದ್ದ ಆ ಪ್ರದೇಶ, ಪಕ್ಕದಲ್ಲಿದ್ದ ರೈಲ್ವೇ ಹಳಿ, ಇಂತಹ ಅಪಾಯಕರ ಪರಿಸರದಲ್ಲಿ ಈ ಹಿಂದೆ ನಡೆದಿರುವ ಅನೇಕ ಹೆಣ್ಣುಮಕ್ಕಳ ಅಸಹಜ ಸಾವುಗಳು ಅಥವಾ ಕೊಲೆಗಳು, ಇಂತಹ ಘಟನೆಗಳ ಸಂಧರ್ಭಗಳಲ್ಲಿ ಬಲಿಯಾದ ಹೆಣ್ಣುಮಕ್ಕಳು ಅಲೆಮಾರಿ, ಭಿಕ್ಷುಕ, ಬುದ್ಧಿಮಾಂದ್ಯ ಕಡುಬಡತನದ ಹಿನ್ನೆಲೆಯವರಾಗಿದ್ದಾಗ, ಅವು ಕಣ್ಣಿಗೂ ಕಾಣದೆ ಮರೆಯಾಗುವುದು- ಇವೇ ಮೊದಲಾದ ಕಾರಣಗಳಿಂದಾಗಿ ನಾವು ಸ್ವತಂತ್ರ ಮರುತನಿಖೆಗೆ ಒತ್ತಾಯಿಸುತ್ತೇವೆ ಎಂದು ವೇದಿಕೆಯು ಹೇಳಿದೆ.

ಇಷ್ಟು ಸೂಕ್ಷ್ಮವಾದ ವಿಚಾರದಲ್ಲಿ ವಹಿಸಬೇಕಾದಷ್ಟು ಎಚ್ಚರಿಕೆ ವಹಿಸದಿರುವುದು ಹಲವು ಅನಗತ್ಯ ಬೆಳವಣಿಗೆಗಳಿಗೆ ಕಾರಣವಾಯಿತು. ಪಾರದರ್ಶಕವಾಗಿ ಮತ್ತು ನಾಗರೀಕ ವಿಧಾನಗಳಲ್ಲಿ ಬಂದವರೊಂದಿಗೆ ಸಂವಾದ ನಡೆಸಿ ಆತಂಕಕ್ಕೆ ಕಾರಣವಿಲ್ಲದಂತೆ ಸಮಗ್ರ ಮಾಹಿತಿ ನೀಡುವ ಯಾವ ಪ್ರಯತ್ನವನ್ನೂ ಸ್ಥಳೀಯ ಪೊಲೀಸ್‌ ವ್ಯವಸ್ಥೆ ಮಾಡಿಲ್ಲ. ಘಟನೆಯ ಕುರಿತು ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ಮತ್ತು ಭರವಸೆ ದೊರೆಯದ ಸನ್ನಿವೇಶದಲ್ಲಿ, ಇನ್ನೂ ಹೆಚ್ಚಿನ ಆತಂಕ ಈ ವಿಚಾರದಲ್ಲಿ ಸಮಾಜದಲ್ಲಿ ಉಂಟಾಯಿತು. ಇದರಿಂದಾಗಿ ಕೆಲವು ಸಾಮಾಜಿಕ ಜಾಲತಾಣಿಗರು ತಮ್ಮ ಊಹೆಗೆ ತಕ್ಕಂತೆ ಸುದ್ದಿಗಳನ್ನು ಹರಿಬಿಡುವುದಕ್ಕೂ ಆಸ್ಪದವಾಯಿತು. ನೇರವಾಗಿ ಪೊಲೀಸರಿಂದಲೇ ಒತ್ತಾಸೆ ದೊರೆಯದಿದ್ದುದೇ ಈ ಮರು ತನಿಖೆ ಒತ್ತಾಯಿಸುತ್ತಿರುವುದಕ್ಕೆ ಕಾರಣವೆಂದು ಮಲ್ಲಿಗೆಯವರು ತಿಳಿಸಿದ್ದಾರೆ.

ಬಾಲಕಿಗೆ ನಿಜವಾಗಿಯೂ ರೈಲು ಡಿಕ್ಕಿ ಹೊಡೆದಿದ್ದರೆ, ಜಾನುವಾರುಗಳಿಗೆ ಡಿಕ್ಕಿ ಹೊಡೆದರೂ ಸಹ ಕೂಡಲೇ ರೈಲು ಚಾಲಕರು ಸಲ್ಲಿಸುವ ಘಟನೆ/ಅಪಘಾತ ವರದಿ ಇದೆಯೇ? ಇಂತಹ ಘಟನೆಗಳ ನಂತರ ಆರ್‌ಪಿಎಫ್‌ನಿಂದ ನಡೆಯುವ ಆರಂಭಿಕ ತನಿಖೆ ಏಕೆ ನಡೆಸಲಾಗಿಲ್ಲ? ಅವರು ಹಂಚಿಕೊಂಡ ಆ ದೃಶ್ಯಾವಳಿಗಳ ಸತ್ಯಾಸತ್ಯತೆ ಏನು – ವಿಧಿವಿಜ್ಞಾನ ಪರೀಕ್ಷೆಯ ಪ್ರಕ್ರಿಯೆಯ ಮೂಲಕ ಅದನ್ನು ಪರಿಶೀಲಿಸಲಾಗಿದೆಯೇ? ಯಾವ ಹಂತದಲ್ಲಿ ಮತ್ತು ಏಕೆ ಈ ದೃಶ್ಯಾವಳಿಗಳನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಯಿತು? ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳು ಸ್ಥಳೀಯ ಪೊಲೀಸರು ತನಿಖೆ ನಡೆಸಿದರು, ಆರ್‌ಪಿಎಫ್ ಅಲ್ಲ ಎಂದು ಸ್ಪಷ್ಟಪಡಿಸಿದರು. ಏಕೆಂದರೆ ಘಟನೆಯ ಬಗ್ಗೆ ಸುದ್ದಿ ಹರಡಿ ಅಷ್ಟರಲ್ಲಾಗಲೇ ಕೊಲೆ ಮತ್ತು ಲೈಂಗಿಕ ದೌರ್ಜನ್ಯ ಎಂದು ಸಾಮಾಜಿಕ ಮಾಧ್ಯಮ ವರದಿಗಳು ಬಂದಿದ್ದರಿಂದ ಅದಕ್ಕೆ ಪ್ರತಿಕ್ರಿಯೆಯಾಗಿ ತಾವು ಹಾಗೆ ಮಾಡಿದ್ದೇವೆ ಎಂದು ಹೇಳಿದರು. ಅಂದರೆ ಇದು ಸಾಮಾಜಿಕ ಅಭಿಪ್ರಾಯಕ್ಕೆ ಪ್ರತಿಕ್ರಿಯೆಯೇ ಹೊರತು ಅವರು ಸ್ವತಃ ಮನವರಿಕೆ ಮಾಡಿಕೊಂಡಿದ್ದಲ್ಲ. ಈ ಆತುರದ ಪ್ರತಿಕ್ರಿಯೆಯ ಬದಲಿಗೆ, ಅವರು ಆಪಾದಿತ ಅಪರಾಧವೆಂದು ತನಿಖೆ ಮಾಡುವ ಮೊದಲು ರೈಲ್ವೆ ಪೊಲೀಸರು ಅಪಘಾತದ ತಮ್ಮ ತನಿಖೆಯನ್ನು ಮುಕ್ತಾಯಗೊಳಿಸಲು ಕಾಯುತ್ತಿದ್ದೇವೆ ಎಂದು ಏಕೆ ಹೇಳಬಾರದಿತ್ತು? ಎಂದು ವೇದಿಕೆಯು ಪ್ರಶ್ನಿಸಿದೆ.

ಮೊದಲ ಎಫ್‌ಐಆರ್‌ ಮೇ 11ರ ಮಧ್ಯರಾತ್ರಿ 1:00 ಗಂಟೆಗೆ ತಾಯಿ ಮತ್ತು ಕುಟುಂಬದವರು ಬಿಡದಿ ಪೊಲೀಸ್‌ ಠಾಣೆಗೆ ಹೋಗಿ ಮಗಳು ಕಾಣುತ್ತಿಲ್ಲ ಎಂದಾಗಲೇ ದಾಖಲಾಗಬೇಕಿತ್ತು, ಅದನ್ನು ಮಾಡದಿರುವುದು ನೋಡಿದರೆ, ಕಿವಿ ಕೇಳದ ಮಾತನಾಡಲು ಬಾರದ ಹದಿಹರೆಯದ ಹೆಣ್ಣುಮಗುವೊಂದು ಕಾಣೆಯಾಗಿದೆ ಎಂಬ ವಿಚಾರವನ್ನು ತುರ್ತು ಆದ್ಯತೆಯಲ್ಲಿ ಪರಿಗಣಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಆ ನಂತರ, 12ರ ಬೆಳಿಗ್ಗೆ ದಾಖಲಿಸಿದ ಎಫ್‌ಐಆರ್‌ನಲ್ಲೂ ಕೂಡಾ ಮಗಳು ಅಸಹಜವಾಗಿ ಸಾವನ್ನಪ್ಪಿದ್ದಾಳೆ ಮತ್ತು ಸಾವಿನ ಬಗ್ಗೆ ಶಂಕೆ ಇದೆ ಎಂದು ತಾಯಿ ಹೇಳಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ವಿವರಗಳಿಲ್ಲ. ಹಿಂದಿನ ಸಂಜೆಯಿಂದ ಅವಳು ಕಾಣೆಯಾಗಿದ್ದಳು, ರಾತ್ರಿ ಕುಟುಂಬದವರು ಠಾಣೆಗೆ ಹೋಗಿದ್ದರು, ಬೆಳಿಗ್ಗೆ ದೇಹವು ಪತ್ತೆಯಾದ ಸ್ಥಿತಿ, ಹರಿದ ಬಟ್ಟೆಗಳು, ದೇಹದ ಮೇಲೆ ಕಂಡ ಗಾಯದ ಗುರುತುಗಳು ಇತ್ಯಾದಿ ವಿವರಗಳನ್ನು ಉಲ್ಲೇಖಿಸಲಾಗಿಲ್ಲ. ಇಂತಹ ಲೋಪಗಳು ಏಕೆ ಸಂಭವಿಸಿದವು? ಇದಕ್ಕೆ ಹೊಣೆಗಾರರು ಯಾರು? ನಂತರದಲ್ಲಾದರೂ ಈ ಎಲ್ಲಾ ಅಂಶಗಳನ್ನು ಹೆಚ್ಚುವರಿ ಹೇಳಿಕೆಯಲ್ಲಿ ಅಥವಾ ಹೊಸ ಎಫ್‌ಐಆರ್‌ನಲ್ಲಿ ಕುಟುಂಬದವರು ಮತ್ತು ಕಣ್ಣಸಾಕ್ಷಿಗಳು ಹೇಳಿದಂತೆ ಸೇರಿಸಲಾಗಿದೆಯೇ? ಆದ್ದರಿಂದ, ನೊಂದ ಕುಟುಂಬಕ್ಕೆ ಅಲೆಮಾರಿ ಆದಿವಾಸಿಗಳೆಂಬ ಮಾನದಂಡದ ಅಡಿಯಲ್ಲಿ ಪರಿಹಾರ ನೀಡಿದ ನಂತರವಾದರೂ ಪೊಲೀಸರು ತಕ್ಷಣವೇ ಈ ಹೆಚ್ಚುವರಿ ಆರೋಪಗಳನ್ನು ಸಹ ದಾಖಲಿಸಿರಬೇಕಿತ್ತು ಎಂದು ಹೇಳಿಕೆಯಲ್ಲಿ ಮಲ್ಲಿಗೆಯವರು ಪ್ರಶ್ನಿಸಿದ್ದಾರೆ.

ದೇಹವು ಕಂಡುಬಂದ ಸ್ಥಿತಿಯ ಬಗ್ಗೆ ಕುಟುಂಬ ಮತ್ತು ಸಾರ್ವಜನಿಕರು ಆರಂಭದಲ್ಲೇ ಸ್ಪಷ್ಟವಾದ ಹೇಳಿಕೆಗಳನ್ನು ನೀಡಿದ್ದಾರೆ. ಕಚ್ಚಿದ ಗುರುತುಗಳು, ಸಿಗರೇಟ್ ಸುಟ್ಟ ಗುರುತುಗಳು ಸೇರಿದಂತೆ ಕಂಡುಬಂದ ವಿವಿಧ ರೀತಿಯ ಗಾಯಗಳ ಬಗ್ಗೆ ಕಣ್ಣು ಸಾಕ್ಷಿಗಳ ವರದಿಗಳನ್ನು ಹಲವು ವಿಡಿಯೋಗಳಲ್ಲಿ ಗಮನಿಸಬಹುದು. ವಾಸ್ತವವಾಗಿ, ಎಲ್ಲಾ ಛಾಯಾಚಿತ್ರಗಳಲ್ಲಿ ಅವಳ ಖಾಸಗಿ ಭಾಗಗಳು ಭಾಗಶಃ ಬಹಿರಂಗಗೊಂಡಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ, ಅವಳ ಹರಿದ ಶಾರ್ಟ್ಸ್‌ನೊಂದಿಗೆ ಅವಳ ದೇಹದ ಮೇಲಿನ ಅರ್ಧಭಾಗವನ್ನು ಮುಚ್ಚುವ ಟಿ-ಶರ್ಟ್‌ಗೆ ಪಿನ್ ಹಾಕಲಾಗಿತ್ತು. ಇದನ್ನು ಮರಣೋತ್ತರ ಪರೀಕ್ಷಾ ವರದಿ ಸಂಪೂರ್ಣವಾಗಿ ಪರಿಗಣಿಸಿದೆಯೇ? ಆದರೆ ಈ ವರದಿ ಇದ್ಯಾವುದನ್ನೂ ಉಲ್ಲೇಖಿಸುವುದಿಲ್ಲ. ಪೊಲೀಸರ ತರ್ಕದಲ್ಲಿ ದೇಹದ ಮೇಲಿರುವ ಗಾಯಗಳು ಮತ್ತು ಗಾಯದ ಗುರುತುಗಳು ಇನ್ನೂ ವಿವರಿಸಲ್ಪಟ್ಟಿಲ್ಲ, ಹಾಗೆಯೇ ಬಟ್ಟೆಗಳು ಅಸ್ತವ್ಯಸ್ತವಾಗಿ ಕಂಡುಬಂದ ದೇಹದ ಸ್ಥಿತಿಗೂ ಕೂಡಾ ಕಾರಣವೇನೆಂಬುದನ್ನು ಹೇಳಿಲ್ಲ. ಇದಕ್ಕೆ ಆಳವಾದ ತನಿಖೆ ಅಗತ್ಯವಿದೆ. ಅಥವಾ ಪೊಲೀಸರು ಈಗಾಗಲೇ ತನಿಖೆ ನಡೆಸಿದ್ದರೆ, ತನಿಖಾಧಿಕಾರಿ ಮತ್ತು ಸ್ಥಳ ಮಹಜರು ನಡೆಸಿದ ಇತರರು ಈ ಬಗ್ಗೆ ಏನು ಹೇಳುತ್ತಾರೆ? ಆ ಮಾಹಿತಿಯನ್ನು ಸಾರ್ವಜನಿಕರ ಕಾಳಜಿಗಳನ್ನು ಪರಿಹರಿಸುವಂತೆ ನೀಡಬೇಕಲ್ಲವೇ? ಎಂದು ಅವರು ಹೇಳಿಕೆ ನೀಡಿದ್ದಾರೆ.

ಪ್ರಕರಣದಲ್ಲಿ ಎಫ್‌ಎಸ್‌ಎಲ್ ವರದಿಯನ್ನು ಒಂದು ವಾರದೊಳಗೆ ಬಿಡುಗಡೆ ಮಾಡಲಾಗಿದೆ, ಇದು ಪ್ರಕ್ರಿಯೆಯನ್ನು ಆತುರವಾಗಿ ಮತ್ತು ಅವಸರದಿಂದ ಪ್ರಾರಂಭಿಸಲಾಗಿದೆಯೇ ಎಂಬ ಕಳವಳವನ್ನು ಹೆಚ್ಚಿಸುತ್ತದೆ. ಅತ್ಯಾಚಾರ ನಡೆದಿಲ್ಲ ಎಂದು ಹೇಳುವ ಎಫ್‌ಎಸ್‌ಎಲ್ ವರದಿಯನ್ನು ಮರಣೋತ್ತರ ಪರೀಕ್ಷಾ ವರದಿಯೊಂದಿಗೆ ಓದದೆ ಕೂಡಲೇ ಬಿಡುಗಡೆ ಮಾಡಿರುವುದು ಅಸ್ವಾಭಾವಿಕ ಎನಿಸಲು ಅವಕಾಶವಿದೆ, ಈ ಅವಸರ ಏಕೆ? ಎಫ್‌ಎಸ್‌ಎಲ್ ವರದಿಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆಯೇ? ಪಿಎಂ ವರದಿಗೆ ಮುಂಚಿತವಾಗಿ ಎಫ್‌ಎಸ್‌ಎಲ್ ವರದಿಯನ್ನು ಪಡೆಯಲು ಮತ್ತು ಅದನ್ನಾಧರಿಸಿ ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡಲು ಪೊಲೀಸರನ್ನು ಪ್ರೇರೇಪಿಸಿದ ಸಂದರ್ಭಗಳು ಯಾವುವು? ಎಂದು ಹೇಳಿಕೆಯಲ್ಲಿ ಪ್ರಶ್ನಿಸಲಾಗಿದೆ.

ಪೊಲೀಸರು ಸಾರ್ವಜನಿಕರು ಮತ್ತು ಸಂಸ್ಥೆಗಳನ್ನು ನಡೆಸಿಕೊಳ್ಳುವಾಗ ಹೆಚ್ಚು ಗೌರವಾನ್ವಿತ ಮತ್ತು ಪ್ರಜಾತಾಂತ್ರಿಕ ವಿಧಾನವನ್ನು ಏಕೆ ಅಳವಡಿಸಲಿಲ್ಲ? ಈ ಘಟನೆಯ ಬಗ್ಗೆ ಆತಂಕ, ಕಾಳಜಿಯಿಂದ ಮಾಹಿತಿ ಪಡೆಯಲು ಬಂದ ಸಂಘ-ಸಂಸ್ಥೆಗಳೊಂದಿಗೆ ಅಗೌರವದಿಂದ ನಡೆದುಕೊಳ್ಳಲಾಗಿದೆ, ಕೆಲವರಿಗೆ ನೀಡಲಾದ ಕಿರುಕುಳ ಅಸಹನೀಯವಾಗಿದೆ. ಪೊಲೀಸರು ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಅಗತ್ಯ ಮಾಹಿತಿಯನ್ನು ಕುಟುಂಬ ಮತ್ತು ಸಾರ್ವಜನಿಕರಿಗೆ ಮುಕ್ತ ಮತ್ತು ಪಾರದರ್ಶಕ ರೀತಿಯಲ್ಲಿ ಲಭ್ಯವಾಗುವಂತೆ ಮಾಡಬೇಕಲ್ಲವೇ?. ಹಾಗೆಯೇ, ಬೇಜವಾಬ್ದಾರಿ ಮಾಧ್ಯಮ ವರದಿಗಾರಿಕೆಯನ್ನು ನಿಗ್ರಹಿಸುವ ಹೆಸರಿನಲ್ಲಿ, ಪೊಲೀಸರು ಸಮುದಾಯದ ಮೇಲೆ ನಿರ್ಬಂಧ ಹೇರಿ, ಸಂಬಂಧಪಟ್ಟ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸೇರಿದಂತೆ ಸಾಮಾನ್ಯ ಸಾರ್ವಜನಿಕರೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ ಎಂದು ನಮಗೆ ತಿಳಿದುಬಂದಿದೆ. ಈ ಎಲ್ಲಾ ಲೋಪದೋಷಗಳು ಆಳವಾದ ದೋಷಪೂರಿತ ಮತ್ತು ಅಪಾರದರ್ಶಕ ತನಿಖೆಯನ್ನು ಸೂಚಿಸುತ್ತವೆ. ಈ ಎಲ್ಲ ಹಿನ್ನೆಲೆಯಲ್ಲಿ ಈ ಇಡೀ ಪ್ರಕರಣದ ಸಂಪೂರ್ಣ ಸ್ವತಂತ್ರ ಮರುತನಿಖೆಯನ್ನು ನಾವು ಆಗ್ರಹಿಸುತ್ತಿದ್ದೇವೆ. ಉನ್ನತ ಪೊಲೀಸ್‌ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರದ ಗೃಹ ಇಲಾಖೆ ಇದನ್ನು ಕೂಡಲೇ ಪರಿಗಣಿಸಿ ಸ್ವತಂತ್ರ ಮರುತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ‘ನಾವೆದ್ದು ನಿಲ್ಲದಿದ್ದರೆ’ ವೇದಿಕೆ ತಿಳಿಸಿದೆ.

ಮೂಕ-ಕಿವಿ ಕೇಳದ ಅಕ್ಕಿಪಿಕ್ಕಿ ಸಮುದಾಯದ ಬಾಲಕಿ ಅಪಹರಿಸಿ ಕೊಲೆ; ಪೋಷಕರಿಂದ ಅತ್ಯಾಚಾರ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...