ಕೋವಿಡ್ ಉಲ್ಬಣದ ಕಾರಣದಿಂದ ರಾಜಸ್ಥಾನದಲ್ಲಿ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆಯನ್ನು ರದ್ದುಪಡಿಸಲಾಗಿದೆ ಎಂದು ಪಕ್ಷ ಘೋಷಿಸಿದ ಸ್ಪಲ್ಪ ಸಮಯದಲ್ಲಿಯೇ ಯೂಟರ್ನ್ ಹೊಡೆದಿದ್ದು, ಯಾತ್ರೆ ಮುಂದುವರೆಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ತಿಳಿಸಿದ್ದಾರೆ.
ಕೋವಿಡ್-19 ಪ್ರೋಟೋಕಾಲ್ ಅನ್ನು ಅನುಸರಿಸಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವ ತನ್ನ ಯೋಜನೆಯನ್ನು ಮುಂದುವರಿಸುವುದಾಗಿ ಬಿಜೆಪಿ ಹೇಳಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಮಾತನಾಡಿ, ಜನಾಕ್ರೋಶ ಯಾತ್ರೆಗೆ ಸಂಬಂಧಿಸಿದಂತೆ ಕೆಲ ಗೊಂದಲಗಳಿದ್ದು, ಅದನ್ನು ಈಗ ತೆರವುಗೊಳಿಸಲಾಗಿದ್ದು, ನಿಗದಿತ ವೇಳಾಪಟ್ಟಿಯಂತೆ ಸಭೆಗಳು ನಡೆಯಲಿವೆ ಎಂದಿದ್ದಾರೆ.
ಮುಂದಿನ ವರ್ಷ ರಾಜಸ್ಥಾನದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು ಕಾಂಗ್ರೆಸ್ ಸರ್ಕಾರದ ವಿರುದ್ಧ ಈ ಯಾತ್ರೆಯನ್ನು ಸಂಘಟಿಸಿದೆ. ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಅವರು ಡಿಸೆಂಬರ್ 1 ರಂದು ಈ ಯಾತ್ರೆಗೆ ಚಾಲನೆ ನೀಡಿದ್ದರು.
जन आक्रोश यात्रा में उमड़ता ये हुजूम @DrSatishPoonia जी आश्वस्त कर रहा है कि 2023 में यहाँ भाजपा का सूर्य उदय होगा#JanAakroshYatra pic.twitter.com/STtMaB6miQ
— Office of Dr. Satish Poonia (@OfficeOfDrSP) December 22, 2022
“ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯು ರಾಜಸ್ಥಾನದಲ್ಲಿ ಜನಾಕ್ರೋಶ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಬಿಜೆಪಿಗೆ ರಾಜಕೀಯಕ್ಕಿಂತ ಜನರು ಮುಖ್ಯವಾಗುತ್ತಾರೆ. ನಮಗೆ ಜನರ ಸುರಕ್ಷತೆ, ಅವರ ಆರೋಗ್ಯವು ಆದ್ಯತೆಯಾಗಿದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದರು.
BJP suspends its Jan Aakrosh Yatra in Rajasthan in wake of COVID-19: Party General Secretary Arun Singh
— Press Trust of India (@PTI_News) December 22, 2022
ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಅವರು ಯಾತ್ರೆಯನ್ನು ಸ್ಥಗಿತಗೊಳಿಸುವ ಬಗ್ಗೆ ಕೆಲವು ಗೊಂದಲಗಳಿವೆ ಆದರೆ ಸಾರ್ವಜನಿಕ ಸಭೆಗಳು ಮುಂದುವರಿಯುತ್ತವೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಭಾರತ್ ಜೋಡೋ ಯಾತ್ರೆಯಲ್ಲಿ ಕೋವಿಡ್ ನಿಯಮಾವಳಿ ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಬೇಕು. ಪ್ರೊಟೊಕಾಲ್ ಅನುಸರಿಸುತ್ತಿಲ್ಲವಾದರೆ ರಾಷ್ಟ್ರೀಯ ಹಿತಾಸಕ್ತಿಯ ಕಾರಣದಿಂದ ಯಾತ್ರೆಯನ್ನು ನಿಲ್ಲಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದಾರೆ.
ಒಂದು ಕಡೆ ಕಾಂಗ್ರೆಸ್ ನಡೆಸುತ್ತಿರುವ ಯಾತ್ರೆಯನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಬಯಸುತ್ತಿದೆ. ಇನ್ನೊಂದೆಡೆ ತಾನು ನಡೆಸುತ್ತಿರುವ ಯಾತ್ರೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದಿದೆ. ಇದು ಅವರ ಇಬ್ಬಂದಿತನವನ್ನು ತೋರಿಸುತ್ತದೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ಯಾತ್ರೆ ನಿಲ್ಲಿಸಲು ನೆಪ ಹುಡುಕುತ್ತಿದ್ದಾರೆ: ಆರೋಗ್ಯ ಸಚಿವರ ಪತ್ರಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯೆ