ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಬಗ್ಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕೊನೆಗೂ ಪತ್ರಿಕಾ ಪ್ರಕಟಣೆ ಮೂಲಕ ಶುಕ್ರವಾರ ಪ್ರತಿಕ್ರಿಯೆ ನೀಡಿದೆ. ಆದರೆ, ವಿವಾದಾತ್ಮಕ ಪಠ್ಯಗಳನ್ನು ವಾಪಾಸು ಪಡೆದು ಹಳೆಯ ಪಠ್ಯಗಳನ್ನೇ ಮುಂದುವರೆಸಬೇಕು ಮತ್ತು ನಾಡಗೀತೆಯನ್ನು ಅವಹೇಳನ ಮಾಡಿರುವ ಕವನ ಹಂಚಿಕೊಂಡು ಸಂಭ್ರಮಿಸಿದ್ದ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಬೇಕು ಎಂಬ ಪ್ರಮುಖ ಬೇಡಿಕೆಯ ಬಗ್ಗೆ ಮುಖ್ಯಮಂತ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು ಮುಖ್ಯಮಂತ್ರಿ ರೋಹಿತ್ ಚಕ್ರತೀರ್ಥ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಹೋರಾಟಗಾರರು ಕಿಡಿ ಕಾರಿದ್ದಾರೆ.
ಮುಖ್ಯಮಂತ್ರಿ ನೀಡಿದ್ದ ಹೇಳಿಕೆಯಲ್ಲಿ “ಈ ಹಿಂದೆ ಜಾರಿಯಲ್ಲಿದ್ದ ಕೆಲವು ಪಠ್ಯಪುಸ್ತಕಗಳಲ್ಲಿ ಹಲವು ಆಕ್ಷೇಪಾರ್ಹ ಅಂಶಗಳು ಇದ್ದ ಕಾರಣ ಸಮಾಜ ವಿಜ್ಞಾನ ಹಾಗೂ ಕನ್ನಡ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯ ಪುಸ್ತಕಗಳ ಅಲ್ಪ ಪರಿಷ್ಕರಣೆಯನ್ನು ಮಾಡಲಾಗಿದೆ” ಎಂದು ಪಠ್ಯದಲ್ಲಿ ಮಾಡಲಾಗಿರುವ ಬ್ರಾಹ್ಮಣೀಕರಣ ಮತ್ತು ಕೇಸರೀಕರಣವನ್ನು ಸಮರ್ಥಿಸಿಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪಂಡಿತಾರಾಧ್ಯ ಸ್ವಾಮೀಜಿಗಳು ಹಾಗೂ ನಾಡಿನ ಇತರೆ ಸ್ವಾಮೀಜಿಗಳು ಪ್ರಸ್ತುತ ಪಠ್ಯ ಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿದಂತೆ ಕೆಲವು ಆಕ್ಷೇಪಣೆಗಳ ಬಗ್ಗೆ ಉಲ್ಲೇಖಿಸಿರುವ ಮುಖ್ಯಮಂತ್ರಿ, “ಈ ಹಿಂದೆ ಜಾರಿಯಲ್ಲಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ ಇವರ ಸಮಿತಿಯಿಂದ ರಚಿತವಾದ ಪಠ್ಯಪುಸ್ತಕ ಹಾಗೂ ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಸಾಮಾನ್ಯವಾದ ಅಂಶಗಳಿವೆ” ಎಂದು ಹಳೆಯ ಸಮಿತಿ ಮೇಲೆ ಆರೋಪಗಳನ್ನು ಮಾಡಿದ್ದು, “ಪ್ರಸ್ತುತ ಪಠ್ಯಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶವನ್ನು ಯಾರ ಭಾವನೆಗೂ ಧಕ್ಕೆ ಆಗದಂತೆ ಪರಿಷ್ಕರಿಸಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂಓದಿ: ರೋಹಿತ್ ಚಕ್ರತೀರ್ಥ ಸಮಿತಿಯ ಮತ್ತೊಂದು ಎಡವಟ್ಟು: 3 ಮತ್ತು 4ನೇ ತರಗತಿ ಪುಸ್ತಕಗಳಲ್ಲಿದೆ ಒಂದೇ ಪದ್ಯ!
ರಾಷ್ಟ್ರಕವಿ ಕುವೆಂಪು ಅವರು ರಚಿಸಿದ್ದ ನಾಡಗೀತೆಯನ್ನು ವಿಕೃತಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅದನ್ನು ಬರೆದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸೈಬರ್ ಕ್ರೈಮ್ ಬೆಂಗಳೂರು ಇವರಿಗೆ ತನಿಖೆಯನ್ನು ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಹೋರಾಟರಾರರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಆದಿಚುಂಚನಗಿರಿ ಪೀಠದ ನಿರ್ಮಲಾನಂದ ಸ್ವಾಮೀಜಿಗಳ ಒತ್ತಡಕ್ಕೆ ಮಣಿದಂತೆ ಕಂಡರೂ ಮೂಗಿಗೆ ತುಪ್ಪ ಸವರುವ ತಂತ್ರ ಎಂದು ಬಣ್ಣಿಸಿದ್ದಾರೆ.
ನಾಡಗೀತೆಯನ್ನು ಅವಹೇಳನ ಮಾಡಿದ್ದ ‘ಬರಹ’ ಫೇಸ್ಬುಕ್ನಲ್ಲಿ ಮೊದಲು ಪೋಸ್ಟ್ ಆಗಿದ್ದು ರೋಹಿತ್ ಚಕ್ರತೀರ್ಥ ಅವರ ಫೇಸ್ಬುಕ್ ಖಾತೆಯಲ್ಲಾಗಿದೆ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಮತ್ತು ಅವಹೇಳನಕಾರಿಯಾಗಿ ಟ್ರೋಲ್ ಮಾಡುವುದು ಸಾಮಾನ್ಯವಾಗಿದ್ದು ಹೀಗಾಗಿ ನಾಡಗೀತೆಯ ಬಗ್ಗೆ ಬರೆಯಲಾದ ಆಕ್ಷೇಪಾರ್ಹ ಬರಹ ಅವರೇ ಬರೆದ್ದಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ಅದಲ್ಲದೆ, ಅವರೇ ಹೇಳಿದಂತೆ ‘ವಾಟ್ಸಪ್ ಬಂದಿದ್ದು’ ಎಂದು ನಂಬಿದರೂ ಅದು ಯಾರು ಕಳುಹಿಸಿಕೊಟ್ಟಿದ್ದು ಎಂದು ಅವರನ್ನು ಬಂಧಿಸಿ ತನಿಖೆ ನಡೆಸಿದರೆ ತಿಳಿದು ಬರುತ್ತದೆ. ಜೊತೆಗೆ, ನಾಡಗೀತೆಯ ಬಗ್ಗೆ ಬರೆದ ಆಕ್ಷೇಪಾರ್ಹ ಬರಹವನ್ನು ಫೇಸ್ಬುಕ್ನಲ್ಲಿ ಹಂಚಿ ಅದನ್ನು ಬರೆದವರಿಗೆ ‘ಬುರ್ಜ್ ಖಲೀಫಾ ಕೊಡುವುದಾಗಿ ಬರಹವನ್ನು ಬೆಂಬಲಿಸಿ, ಅದನ್ನು ಸಂಭ್ರಮಿಸಿದ್ದರು’ ಎಂದೂ ಕೂಡಾ ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ.
ನಿನ್ನೆ ನೀಡಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಸರ್ಕಾರ ತೆಗೆದುಕೊಂಡ ಹಲವು ನಿರ್ದಾರಗಳ ಬಗ್ಗೆ ಕೂಡಾ ಆಕ್ಷೇಪ ವ್ಯಕ್ತವಾಗಿದೆ.
ಇದನ್ನೂಓದಿ: ರೋಹಿತ್ ಚಕ್ರತೀರ್ಥ ‘ಶೈಕ್ಷಣಿಕ ಅರ್ಹತೆ’ ಬಗ್ಗೆ ಪ್ರಶ್ನಿಸಿ ಆರ್ಟಿಐ ಅರ್ಜಿ
ರೋಹಿತ್ ಚಕ್ರತೀರ್ಥ ಸಮಿತಿಯ ಕಾರ್ಯ ಮುಗಿದಿರುವುದರಿಂದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದೆ ಎಂದು ಸರ್ಕಾರ ಹೇಳಿದೆ. ಆದರೆ ಈವರೆಗೆ ವಿವಾದ ಇದ್ದಿದ್ದು, ರೋಹಿತ್ ಚಕ್ರತೀರ್ಥ ಸಮಿತಿಯು ಪರಿಷ್ಕರಣೆ ಮಾಡಿರುವ ಪಠ್ಯಗಳ ಬಗ್ಗೆಯಾಗಿದೆ. ಚಕ್ರತೀರ್ಥ ಸಮಿತಿಯು ಪಠ್ಯಗಳನ್ನು ಬ್ರಾಹ್ಮಣೀಕರಣ ಮತ್ತು ಕೇಸರೀಕರಣಗೊಳಿಸಿದ್ದು, ಅದನ್ನು ವಾಪಾಸು ಪಡೆಯಬೇಕು ಎಂಬ ಬೇಡಿಕೆಯ ಬಗ್ಗೆ ಸರ್ಕಾರ ಯಾವುದೆ ಹೇಳಿಕೆ ನೀಡಿಲ್ಲ.
ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಯಾವಾದಾದರೂ ಆಕ್ಷೇಪಾರ್ಹ ವಿಷಯಗಳಿದ್ದಲ್ಲಿ ಅವುಗಳನ್ನು ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸನ್ನು ಸರ್ಕಾರವು ಹೊಂದಿದೆ ಎಂದು ಬೊಮ್ಮಾಯಿ ಹೇಳಿದ್ದು, “ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿದಂತೆ ಸೂಕ್ತವಾಗಿ ಪರಿಷ್ಕರಿಸಲು ನಿರ್ಧಾರ ಮಾಡಲಾಗಿದೆ” ಎಂದು ಹೇಳಿದೆ. ಆದರೆ ಅಂಬೇಡ್ಕರ್ ಬಗ್ಗೆಗಿನ ಪಠ್ಯ ತಿರುಚಿದ್ದು, ಮಹಿಳಾ ಸಾಧಕಿಯರ ಬಗ್ಗೆ, ಅಲ್ಪ ಸಂಖ್ಯಾತ ಲೇಖಕರು ಬರೆದಿರುವ ಪಾಠಗಳನ್ನು ಯಾಕೆ ವಾಪಾಸು ಪಡೆದಿದೆ ಎಂದು ಸ್ಪಷ್ಟೀಕರಣ ನೀಡಿಲ್ಲ. ಬಿಜೆಪಿಯ ಬಹುದೊಡ್ಡ ಓಟ್ ಬ್ಯಾಂಕ್ ಸಮುದಾಯವಾದ ಲಿಂಗಾಯತರನ್ನು ಓಲೈಸಲು ಬಸವಣ್ಣನ ಬಗ್ಗೆ ಮಾತ್ರ ಹೇಳಿಕೊಂಡಿದೆ.
ಈ ಹಿಂದಿನ ಪಠ್ಯಪುಸ್ತಕಗಳಲ್ಲಿ ಪರಿಚಯಿಸಲಾಗಿದ್ದ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಜೊತೆ ಹಿಂದೂ ಧರ್ಮದ ವಿಷಯವನ್ನೂ ಸೇರ್ಪಡೆ ಮಾಡಿ ಪರಿಚಯಿಸಲಾಗಿದೆ ಎಂದು ಹೇಳಿಕೆ ನೀಡಿರುವ ಸರ್ಕಾರವು ವಿವಾದಕ್ಕೆ ಕೋಮು ಬಣ್ಣ ಹಚ್ಚಲು ಪ್ರಯತ್ನಿಸಿದೆ.
ಈ ಮಧ್ಯೆ ರೋಹಿತ್ ಚಕ್ರತೀರ್ಥ ಅವರ ಸಮಿತಿ ಧರ್ಮಗಳನ್ನು ಪರಿಚಯಿಸುವಾಗ ‘ಹಿಂದೂ’ ಧರ್ಮವನ್ನು ಮಾತ್ರ ಧರ್ಮ ಎಂದು ಉಲ್ಲೇಖಿಸಿದ್ದು, ಇಸ್ಲಾಂ, ಕ್ರೈಸ್ತ ಧರ್ಮವನ್ನು ‘ರಿಲೀಜಿಯನ್’(ಮತ) ಎಂದು ಕರೆದಿದೆ. “ತಾವು ಆಚರಿಸುವ ಧರ್ಮ ಮಾತ್ರವೇ ಧರ್ಮವಾಗಿದ್ದು, ಉಳಿದವುಗಳು ಧರ್ಮಗಳಲ್ಲ” ಎಂಬುವುದು ಸಂಘಪರಿವಾರ ಮಂಡಿಸುವ ವಾದಗಳಾಗಿದೆ. ಸಂಘಪರಿವಾರದ ಸಿದ್ದಾಂತಗಳನ್ನು ಪಠ್ಯ ಪುಸ್ತಕಗಳಲ್ಲೇ ರೋಹಿತ್ ಚಕ್ರತೀರ್ಥ ಸಮಿತಿ ಮುದ್ರಿಸಿದೆ.