“ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವ ದಲಿತರಿಗೆ ಪರಿಶಿಷ್ಟ ಜಾತಿ(ಎಸ್ಸಿ) ಸ್ಥಾನಮಾನ ನೀಡಲು ಸಾಧ್ಯವಿಲ್ಲ” ಎಂದು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ಕ್ರೈಸ್ತ ಮತ್ತು ಇಸ್ಲಾಂ ವಿದೇಶಿ ಧರ್ಮಗಳಾಗಿದ್ದು, ಅವುಗಳಿಗೆ ಮತಾಂತರವಾದ ದಲಿತರಿಗೆ ಈ ಸ್ಥಾನಮಾನ ಮತ್ತು ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
“1950ರ ಸಂವಿಧಾನದ(ಪರಿಶಿಷ್ಟ ಜಾತಿ) ಆದೇಶದ ಪ್ರಕಾರ ಪರಿಶಿಷ್ಟ ಜಾತಿಯ ಜನರು ಹಿಂದೂ, ಸಿಖ್ ಹಾಗೂ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರೆ ಮಾತ್ರ ಅವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬಹುದು. ವಿದೇಶಿ ಧರ್ಮಗಳಾದ ಕ್ರೈಸ್ತ ಮತ್ತು ಇಸ್ಲಾಂಗೆ ಮತಾಂತರವಾದ ದಲಿತರಿಗೆ ಈ ಸ್ಥಾನಮಾನ ಮತ್ತು ಮೀಸಲಾತಿ ನೀಡಲು ಸಾಧ್ಯವಿಲ್ಲ” ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಒಕ್ಕೂಟ ಸರ್ಕಾರವು ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಕ್ರೈಸ್ತ ಮತ್ತು ಇಸ್ಲಾಂನಲ್ಲಿ ಅಸ್ಪೃಶ್ಯತೆಯಂತಹ ದಬ್ಬಾಳಿಕೆಗಳು ಇಲ್ಲ ಎಂಬುದನ್ನು 1950ರ ಸಂವಿಧಾನ (ಪರಿಶಿಷ್ಟ ಜಾತಿ) ಆದೇಶವು ಈಗಾಗಲೇ ಸಾಬೀತುಪಡಿಸಿದೆ. ಆ ಎರಡೂ ಧರ್ಮಗಳಲ್ಲಿ ಅಸ್ಪೃಶ್ಯತೆಯಂಥ ಆಚರಣೆಗಳು ಇಲ್ಲ ಎಂಬ ಕಾರಣಕ್ಕೇ ದಲಿತರು ಆ ಧರ್ಮಗಳಿಗೆ ಮತಾಂತರವಾಗಿದ್ದಾರೆ. ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಲ್ಲಿ ಅವರು ದೌರ್ಜನ್ಯಕ್ಕೆ ಒಳಗಾಗುತ್ತಿಲ್ಲ. ಹಾಗಾಗಿ, ಅವರು ಪರಿಶಿಷ್ಟ ಜಾತಿ ಸ್ಥಾನಮಾನ ಮತ್ತು ಮೀಸಲಾತಿ ಪಡೆಯಲು ಸಾಧ್ಯವಿಲ್ಲ” ಎಂದು ಒಕ್ಕೂಟ ಸರ್ಕಾರ ಹೇಳಿದೆ.
ಇದನ್ನೂ ಓದಿ: ಮೀಸಲಾತಿಯ ಉದ್ದೇಶ ಬಡತನ ನಿರ್ಮೂಲನೆಯಲ್ಲ: EWS ಮೀಸಲಾತಿ ವಿರುದ್ಧ ದಸಂಸ ಖಂಡನೆ
“ಹಿಂದೂ ಧರ್ಮದಲ್ಲಿರುವ ದಲಿತರ ಮೇಲೆ ಅಸ್ಪೃಶ್ಯತೆಯಂಥ ದಬ್ಬಾಳಿಕೆ ಮುಂದುವರಿದಿದೆ. ಇಂಥ ಸಮಯದಲ್ಲಿ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವವರಿಗೆ ಮೀಸಲಾತಿ ವಿಸ್ತರಿಸಿದರೆ, ಪರಿಶಿಷ್ಟ ಜಾತಿಯ ಜನರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಹಾಗೆ ಮೀಸಲಾತಿ ವಿಸ್ತರಿಸುವುದು 1950ರ ಸಂವಿಧಾನ (ಪರಿಶಿಷ್ಟ ಜಾತಿ) ಆಶಯದ ಉಲ್ಲಂಘನೆಯಾಗುತ್ತದೆ” ಎಂದು ಅಫಿಡವಿಟ್ ಹೇಳಿದೆ.
ಇದೇ ವೇಳೆ ಒಕ್ಕೂಟ ಸರ್ಕಾರವು ಬೌದ್ಧರಿಗೆ ಮೀಸಲಾತಿ ನೀಡುವುದನ್ನು ಸಮರ್ಥಿಸಿಕೊಂಡಿದೆ. “ಕೆಲವು ಸಾಮಾಜಿಕ ಆಚರಣೆಗಳ ಕಾರಣದಿಂದ 1956ರಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಕರೆಯ ಮೇರೆಗೆ ಪರಿಶಿಷ್ಟ ಜಾತಿಯ ಜನರು ಬೌದ್ಧ ಧರ್ಮಕ್ಕೆ ಮತಾಂತರವಾದರು. ಹೀಗೆ ಮತಾಂತರ ಆದವರ ಮೂಲ ಜಾತಿ ಯಾವುದು ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಆದರೆ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರವಾದ ದಲಿತರ ಮೂಲ ಜಾತಿ ಪತ್ತೆ ಮಾಡಲು ಸಾಧ್ಯವಿಲ್ಲ” ಎಂದು ಸರ್ಕಾರ ಹೇಳಿದೆ.
“ಆದರೆ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಿಗೆ ನಡೆಯುವ ಮತಾಂತರದ ಪ್ರಕ್ರಿಯೆ ಭಿನ್ನವಾಗಿದೆ. ಜತೆಗೆ ಈ ಧರ್ಮಗಳಿಗೆ ಮತಾಂತರವಾದ ಕಾರಣಗಳೂ ಬೇರೆ ಬೇರೆ. ಶತಮಾನಗಳಿದಂದಲೂ ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗಳು ನಡೆಯುತ್ತಿವೆ”
ಇದನ್ನೂ ಓದಿ: ಇಡಬ್ಲ್ಯೂಎಸ್ ಮೀಸಲಾತಿ ತೀರ್ಪು ಮರುಪರಿಶೀಲನೆಗೆ ಅವಕಾಶವಿದೆ: ಜಸ್ಟೀಸ್ ದಾಸ್
“2007ರಲ್ಲಿ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಆಯೋಗದ ವರದಿಯಲ್ಲಿ ಎಲ್ಲ ಧರ್ಮದಲ್ಲಿರುವ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬೇಕು ಎಂದು ಹೇಳಲಾಗಿತ್ತು. ಆದರೆ, ಈ ವರದಿಯು ದೋಷಪೂರಿತವಾಗಿದೆ. ಯಾವುದೇ ಕ್ಷೇತ್ರ ಅಧ್ಯಯನ ನಡೆಸದೆ ವರದಿ ಅಂಗೀಕರಿಸಲು ಆಗಲ್ಲ” ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕು ಎಂದು ಕೋರಿ ಸಿಪಿಐಎಲ್ ಎಂಬ ಸ್ವಯಂಸೇವಾ ಸಂಸ್ಥೆ ಅರ್ಜಿ(ಪಿಐಎಲ್) ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ಕುರಿತು ಪ್ರತಿಕ್ರಿಯಿಸುವಂತೆ ಒಕ್ಕೂಟ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಅರ್ಜಿ ಸಲ್ಲಿಸಿದ್ದ ವೇಳೆ, “ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರವಾದ ದಲಿತರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಪರಿಶೀಲಿಸಲು ಆಯೋಗ ರಚಿಸುತ್ತೇವೆ” ಎಂದು ಸರ್ಕಾರವು ಪೀಠಕ್ಕೆ ತಿಳಿಸಿತ್ತು.
ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಮತ್ತು ಬಿಜೆಪಿಯ ಎರಡು ನಾಲಗೆ
ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದಲ್ಲಿ ಆಯೋಗ ರಚಿಸಲಾಗಿದ್ದು, ಆಯೋಗವು ಇನ್ನೂ ವರದಿಯನ್ನು ಸಲ್ಲಿಸಿಲ್ಲ. ಅದಕ್ಕೂ ಮುನ್ನವೇ, ಸರ್ಕಾರ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
ಕ್ರೈಸ್ತ ಮುಸ್ಲಿಂ ಸೆರಿದರು ದೌರ್ಜನ್ಯ ಬಿಡುವುದಿಲ್ಲ ಏಕೆಂದರೆ ಎಸ್ಸಿ ಎಸ್ಟಿ ಜನಾಂಗದವರು ಅಂತ ಗುರುತಿಸಿಕೊಂಡಿರುತ್ತಾರೆ ಹಳ್ಳಿಗಳು ಗ್ರಾಮದ ಮನೆಗಳನ್ನು ಒಂದೆ ಕಡೆ ಇರುವುದು ಹಾಗೆ ಸಂಬಂಧ ಗಳು ಹೋಗಿ ಬಾರುವುದು ಆಗಿರುತ್ತದೆ ದ್ಯಾನ ಪ್ರಾರ್ಥನೆ ಬದಲಾದರೂ ಮಾಂಸಾಹಾರಿಗಳು ಆಗಿರುವುದರಿಂದ ಕೀಳಾಗಿ ನೋಡುವುದು ಸಹಜವಾಗಿ ಬಂದಿದೆ ,ಇವರ ಆರ್ಥಿಕ ಅಭಿವೃದ್ಧಿ ಮಾಡಲೂ ಇವರಿಗು ಮೀಸಲಾತಿ ಸೌಲಭ್ಯ ಅವಶ್ಯಕತೆ ಇದೆ ಅನಿಸುತ್ತದೆ.