ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಮೂಲ ಅಂಕಪಟ್ಟಿಗಳನ್ನು ವಿತರಿಸಲು ಬಳ್ಳಾರಿ ವಿವಿ ವ್ಯಾಪ್ತಿಯ ಕಾಲೇಜುಗಳು ತೊಂದರೆ ನೀಡುತ್ತಿವೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್) ಆರೋಪಿಸಿದೆ.
ಬಳ್ಳಾರಿ ವಿವಿ ವ್ಯಾಪ್ತಿಯ ಕಾಲೇಜುಗಳ 2020-21ನೇ ಸಾಲಿನ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 6 ತಿಂಗಳಾದರೂ ಅಂಕಪಟ್ಟಿ ನೀಡಿರುವುದಿಲ್ಲ. ದಾಖಲಾತಿ ಸಂದರ್ಭದಲ್ಲಿ ಶುಲ್ಕ ಪೂರ್ತಿಯಾಗಿ ಭರಿಸಿಲ್ಲ ಎನ್ನುವ ನೆಪ ಹೇಳಲಾಗುತ್ತಿದೆ. ಸರ್ಕಾರದಿಂದ ಯಾವುದೇ ರೀತಿಯ ದುಡ್ಡು ಬಂದಿಲ್ಲ ಎಂದು ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಅಸಲಿಗೆ ಎಲ್ಲಾ ವಿದ್ಯಾರ್ಥಿಗಳು ಪ್ರವೇಶ ಸಂದರ್ಭದಲ್ಲಿ ವಿವಿ/ಕಾಲೇಜುಗಳು ಹೊರಡಿಸಿದ ಆದೇಶದಂತೆಯೇ ಶುಲ್ಕ ಪಾವತಿ ಮಾಡಿದ್ದಾರೆ. ಇದೀಗ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಪಡೆಯಲು ಅಂಕಪಟ್ಟಿ ಇಲ್ಲದೆ ತೊಂದರೆ ಆಗುತ್ತಿದೆ. ಅಲ್ಲದೇ ಪದವಿ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಪ್ರವೇಶಾತಿಗೂ ಅಡಚಣೆ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿವಿ ಅಥವಾ ಕಾಲೇಜಿನ ಹಣದ ಕೊರತೆಯನ್ನು ಬಡ ವಿದ್ಯಾರ್ಥಿಗಳ ಮೇಲೆ, ಪೋಷಕರ ಮೇಲೆ ಹಾಕುತ್ತಿರುವುದು ಅತ್ಯಂತ ಅಮಾನವೀಯ ನಡೆ. ಪ್ರವೇಶ ಸಂದರ್ಭದಲ್ಲಿ ಒಂದು ರೀತಿ, ಅಂಕ ಪಟ್ಟಿ ನೀಡುವಾಗ ಮತ್ತೊಂದು ನೀತಿ ವರ್ತಿಸುತ್ತಿರುವುದು ವಿದ್ಯಾರ್ಥಿಗಳಿಗೆ ಮಾಡುವ ಮೋಸವಾಗಿದೆ ಎಂದು ಕೆವಿಎಸ್ ಆಕ್ರೋಶ ಹೊರಹಾಕಿದೆ.
ಪ್ರೊತ್ಸಾಹ ಧನ ಮತ್ತು ಶೈಕ್ಷಣಿಕ ಜೀವನವನ್ನು ಗಮನದಲ್ಲಿಟ್ಟುಕೊಂಡು ಈ ಕೂಡಲೇ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ನೀಡಿ ವಿದ್ಯಾರ್ಥಿ ಹಿತ ಕಾಯಬೇಕು. ಒಂದು ವೇಳೆ ಅಂಕಪಟ್ಟಿಗಳನ್ನು ಕೊಡದಿದ್ದರೆ ಮುಂದೆ ಎಲ್ಲಾ ವಿದ್ಯಾರ್ಥಿಗಳು ಸೇರಿ ಕಾಲೇಜು ಮತ್ತು ವಿಶ್ವವಿದ್ಯಾಲಯದ ಮುಂದೆ ದೊಡ್ಡ ಹೋರಾಟ ನಡೆಸುತ್ತೇವೆ ಎಂದು ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಪತ್ರ ಕೊಡಲಾಯಿತು.
ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತ ದುರುಗೇಶ್ ಮಾತನಾಡಿ, “ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಯ ಕುಲಪತಿಯವರಿಗೆ ಮನವಿ ಮಾಡಲಾಗುವುದು. ಪ್ರಾಂಶುಪಾಲರು ವಿದ್ಯಾರ್ಥಿಗಳ ಹಿತ ಕಾಯದಿದ್ದರೆ ಹೋರಾಟ ರೂಪಿಸಲಾಗುವುದು. ಶುಲ್ಕ ಪಾವತಿಸುವಂತೆ ಪೀಡಿಸುತ್ತ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವುದು ಅಕ್ಷಮ್ಯ” ಎಂದರು.
ವಿದ್ಯಾರ್ಥಿ ಮುಖಂಡರಾದ ಶರಣಪ್ಪ, ಪಂಪಾಪತಿ, ಕಾಳಿಂಗರಾಜು, ಹನುಮರೆಡ್ಡಿ, ಭೀಮಪ್ಪ, ಯಮನೂರು ಮತ್ತಿತರು ಹಾಜರಿದ್ದರು.
ಇದನ್ನೂ ಓದಿರಿ: ಡಾ. ಸುಧಾಕರ್ ಅವರೇ, ವಿಜ್ಞಾನಿ ಮತ್ತು ಜ್ಯೋತಿಷಿ ಇಬ್ಬರೂ ಸಮರೇ?
ಕನ್ನಡ ವಿ.ವಿ. ಯಲ್ಲೂ ಇದೇ ಮಾದರಿಯಲ್ಲಿ ಸಿಬ್ಬಂದಿಗಳು ವಿದ್ಯಾರ್ಥಿಗಳಿಂದ ಹಣ ಪೀಕುತ್ತಾರೆ.