“ಮಠಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲು ಶೇ. 30ರಷ್ಟು ಕಮಿಷನ್ ನೀಡಬೇಕಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲಿಗೆ ಬಂದು ನಿಂತಿದೆ” ಎಂದು ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ “ಗೋವುಗಳ ಮೇವಿನ ವಿಚಾರದಲ್ಲೂ 40 ಕಮಿಷನ್” ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.
ಹಿಂದೂ ಧರ್ಮದ ಹೆಸರಲ್ಲಿ ರಾಜಕೀಯ ಧ್ರುವೀಕರಣ ಮಾಡಲು ಯತ್ನಿಸುವ ಬಿಜೆಪಿ, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದು ಒಂದೆಡೆ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೆ, ಮತ್ತೊಂದೆಡೆ ಗೋವುಗಳ ಹಸಿವನ್ನು ನೀಗಿಸಲೆಂದು ಮೇವು ಸರಬರಾಜು ಮಾಡಿದ್ದವರನ್ನೂ ಕಮಿಷನ್ ಉರುಳಿಗೆ ಸಿಲುಕಿಸಿದೆ. ಗೋವಿನ ಮೇವಿನಲ್ಲೂ, ಮಠ ಮಾನ್ಯಗಳ ಅನುದಾನದಲ್ಲೂ ಪರ್ಸೆಂಟೇಜ್ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವನ್ನು ಸರ್ಕಾರ ಎದುರಿಸುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬೀಳಗಿ ತಾಲ್ಲೂಕಿನ ಬಾಡಗಂಡಿಯಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಭಾನುವಾರ ಆಯೋಜಿಸಿದ್ದ ಕೃಷ್ಣಾ-ಮಹಾದಾಯಿ-ನವಲಿ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿರುವ ದಿಂಗಾಲೇಶ್ವರ ಸ್ವಾಮೀಜಿ, ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಾರೆ.
“ಮಠಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ಪರ್ಸೆಂಟೇಜ್ ಕಡಿತ ಆದ ನಂತರವೇ ಕಟ್ಟಡದ ಕೆಲಸ ಆರಂಭವಾಗುತ್ತದೆ. ಇಲ್ಲದಿದ್ದರೆ ಆಗೊಲ್ಲ. ಇಷ್ಟು ರೊಕ್ಕ ಕಡಿತ ಮಾಡದಿದ್ದರೆ ನಿಮ್ಮ ಕೆಲಸ ಆಗುವುದಿಲ್ಲ ಎಂದು ಆ ಅಧಿಕಾರಿಗಳು ನಮಗೆ ಹೇಳುತ್ತಾರೆ” ಎಂದು ಸ್ವಾಮೀಜಿ ಬೇಸರದಿಂದ ಮಾತನಾಡಿರುವುದಾಗಿ ‘ಪ್ರಜಾವಾಣಿ’ ವರದಿ ಮಾಡಿದೆ.
‘‘ಈಗಂತೂ ನಾಡಿನಲ್ಲಿ ಬುದ್ಧಿಗೇಡಿ ಸರ್ಕಾರಗಳು ಬರುತ್ತಿವೆ” ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಸರ್ಕಾರದ ಮೇಲೆ ಕಮಿಷನ್ ಆರೋಪಗಳು ಒಂದಾದಾಗಿ ಒಂದೊಂದಾಗಿ ಹೊರ ಬೀಳತೊಡಗಿವೆ. ಮಾಜಿ ಸಚಿವ ಈಶ್ವರಪ್ಪನವರು ಮಾತ್ರವಲ್ಲ, ಇತರ ಜನಪ್ರತಿನಿಧಿಗಳ ಮೇಲೂ ಇಂತಹದ್ದೇ ಆರೋಪಗಳು ಬರುತ್ತಿವೆ.
ಗೋವಿನ ಮೇವಿನಲ್ಲೂ ಕಮಿಷನ್!
ರಾಜ್ಯದ ಗೋ ಶಾಲೆಗಳಿಗೆ ಹಸಿರು ಮೇವು ಮತ್ತು ಒಣ ಮೇವು ಸರಬರಾಜು ಮಾಡಿರುವ ಸರಬರಾಜುದಾರರಿಗೆ ಬಾಕಿ ಉಳಿಸಿಕೊಂಡಿರುವ ಕನಿಷ್ಠ 30-40 ಲಕ್ಷ ರೂ.ಗಳನ್ನು ಪಾವತಿಸಲು ಕಂದಾಯ ಇಲಾಖೆಯ ಅಧೀನದಲ್ಲಿರುವ ಜಿಲ್ಲಾಧಿಕಾರಿಗಳು ಮತ್ತು ಪಶುಪಾಲನೆ, ಪಶು ವೈದ್ಯ ಇಲಾಖೆಯ ಉನ್ನತ ಅಧಿಕಾರಿಗಳು ಲಂಚ ಹಾಗೂ ಕಮಿಷನ್ಗೆ ಬೇಡಿಕೆ ಇಡುತ್ತಿದ್ದಾರೆಂದು ಪ್ರಧಾನಿಯವರಿಗೆ ದೂರು ಸಲ್ಲಿಸಲಾಗಿದೆ.
ಹುಬ್ಬಳ್ಳಿ ಮೂಲದ ಹರ್ಷ ಅಸೋಸಿಯೇಟ್ಸ್ನ ಜಿ.ಎಂ.ಸುರೇಶ್ ಎಂಬುವರು 2022ರ ಏಪ್ರಿಲ್ 14ರಂದು ದೂರು ನೀಡಿದ್ದಾರೆ. ಪಶುಪಾಲನೆ, ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಕಮಿಷನ್ ದಾಹವನ್ನು ದೂರಿನಲ್ಲಿ ತೆರೆದಿಟ್ಟಿದ್ದಾರೆ ಎಂದು ‘ದಿ ಫೈಲ್’ ಇತ್ತೀಚೆಗೆ ವರದಿ ಮಾಡಿದೆ.
ಗೋಶಾಲೆಗೆ ಮೇವು ಸರಬರಾಜು ಮಾಡಿರುವ ಸರಬರಾಜುದಾರರು ಸಚಿವ ಪ್ರಭು ಚೌವ್ಹಾಣ್ ಮತ್ತು ಇಲಾಖೆಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳಿಗೆ ಹಲವು ಬಾರಿ ಪತ್ರ ಬರೆದರೂ ಈ ಬಗ್ಗೆ ಕ್ರಮ ಕೈಗೊಳ್ಳದ ಕಾರಣ ಸರಬರಾಜುದಾರರು ಒಬ್ಬೊಬ್ಬರಾಗಿ ಪ್ರಧಾನಿ ನರೇಂದ್ರ ಮೋದಿಗೆ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿರಿ: ಬೊಮ್ಮಾಯಿ ಆಡಳಿತ ಕರ್ನಾಟಕವನ್ನು ಸುವರ್ಣ ಯುಗಕ್ಕೆ ಕೊಂಡೊಯ್ಯುತ್ತಿದೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬಣ್ಣನೆ
ಪ್ರಧಾನಿ ಕಚೇರಿಗೆ ದೂರು ಸಲ್ಲಿಸುವ ಮುನ್ನವೇ 2020ರಿಂದಲೂ ಬಾಕಿ ಇರುವ ಮೊತ್ತಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದು ಸುಸ್ತಾಗಿದ್ದ ಜಿ.ಎಂ.ಸುರೇಶ್ ಈ ಹಿಂದೆ ಟ್ವೀಟ್ ಮಾಡಿದ್ದರು. ‘ಚಿಕ್ಕಬಳ್ಳಾಪುರ ಜಿಲ್ಲೆಯ ದನಗಳಿಗೆ ತಿನ್ನೋಕೆ ಮೇವು ಪೂರೈಸಿ ಬಿಲ್ಲು ಸಿಗದೇ ಒಂದು ವರ್ಷದಿಂದ ಅಲೆದಾಡಿ ಈಗ ನಾವು ವಿಷ ತಗೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ’ ಎಂದು ಟ್ವೀಟ್ ಮಾಡಿದ್ದರು.
ಈಗ ಪ್ರಧಾನಿಯವರಿಗೆ ಪತ್ರ ಬರೆದಿರುವ ಸುರೇಶ್, “ಸರಬರಾಜುದಾರರು ಮೂರು ಲೋಡ್ ಮೇವನ್ನು ಸರಬರಾಜು ಮಾಡಿದ್ದರೂ ಲಂಚ ಮತ್ತು ಕಮಿಷನ್ ನೀಡದ ಕಾರಣಕ್ಕೆ ಅದನ್ನು ಒಂದು ಲೋಡ್ಗೆ ಪರಿವರ್ತಿಸಿದ್ದಾರೆ. ಇದು ಅನ್ಯಾಯ. ಕಮಿಷನ್ ಮತ್ತು ಲಂಚ ಕೊಡದಿರುವ ಸರಬರಾಜುದಾರರಿಗೆ ಮಾತ್ರ ಇಂತಹ ಅನ್ಯಾಯವಾಗುತ್ತಿದೆ. ಬಾಕಿ ಹಣವನ್ನು ಪಾವತಿಸಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ. ಸಾಲ ಮಾಡಿ ಮೇವು ಸರಬರಾಜು ಮಾಡಿರುವ ಸರಬರಾಜುದಾರರಿಗೆ ಆತ್ಮಹತ್ಯೆಯೊಂದೇ ದಾರಿ” ಎಂದು ತಿಳಿಸಿದ್ದಾರೆ. (‘ದಿ ಫೈಲ್’ ವರದಿ)