ಬೊಮ್ಮಾಯಿ ನೇತೃತ್ವದ ಆಡಳಿತವು ಕರ್ನಾಟಕವನ್ನು ಅಭಿವೃದ್ಧಿಯ ಸುವರ್ಣ ಯುಗಕ್ಕೆ ಕೊಂಡೊಯ್ಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾನುವಾರ ಹೇಳಿದ್ದಾರೆ. ಅವರು ವಿಜಯನಗರ ಜಿಲ್ಲೆಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಸಭೆಯಲ್ಲಿ ಮಾತನಾಡಿದ ನಡ್ಡಾ “ನಾನು ನಿಮಗೆ ಉಪನ್ಯಾಸ ನೀಡಲು ಬಂದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮತ್ತು ಬಿ ಎಸ್ ಯಡಿಯೂರಪ್ಪನವರ ಕೃಪೆಯಿಂದ ಕರ್ನಾಟಕವು ಅಭಿವೃದ್ಧಿಯ ಸುವರ್ಣ ಯುಗಕ್ಕೆ ಹೋಗುತ್ತದೆ ಎಂದು ಹೇಳಲು ಬಂದಿದ್ದೇನೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನರೇಂದ್ರ ಮೋದಿಯಂತಹ ಅಪ್ರತಿಮ ನಾಯಕನಿದ್ದಾಗ ಬಿಜೆಪಿಯಲ್ಲಿ ಕೆಲಸ ಮಾಡುತ್ತಿರುವ ನಾವೆಲ್ಲರೂ ತುಂಬಾ ಅದೃಷ್ಟವಂತರು. ಅವರು ರಾಷ್ಟ್ರೀಯ ನಾಯಕರಷ್ಟೇ ಅಲ್ಲ, ಅಂತರರಾಷ್ಟ್ರೀಯ ವ್ಯಕ್ತಿಯಾಗಿದ್ದಾರೆ. ಬಿಜೆಪಿ ಮಾತ್ರ ರಾಷ್ಟ್ರೀಯ ಪಕ್ಷವಾಗಿದೆ ಮತ್ತು ಉಳಿದೆಲ್ಲವೂ ಕುಟುಂಬ ಪಕ್ಷಗಳು ಮತ್ತು ಯಾವುದೇ ಪಕ್ಷವು ಸಿದ್ಧಾಂತ ಆಧಾರಿತ ಪಕ್ಷವಲ್ಲ” ಎಂದು ನಡ್ಡಾ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಸುವರ್ಣ ಯುಗ ಅಂದರೆ ಇದೆ ಅಂತಲ್ಲಾ..
“ಜನರ ಬದುಕನ್ನು ಬದಲಾಯಿಸಲು ತಾವು ಏನು ಮಾಡಲಿದ್ದೇವೆ ಎಂಬುದರ ಕುರಿತು ಮುಂದೆ ಬಂದು ಮಾತನಾಡುವ ಯಾವುದೇ ನಾಯಕ ಕಾಂಗ್ರೆಸ್ ಅಥವಾ ಯಾವುದೇ ಪ್ರಾದೇಶಿಕ ಪಕ್ಷದಲ್ಲಿ ಇಲ್ಲ. ಅವರು ಜಾತಿ, ಪ್ರಾದೇಶಿಕತೆ ಮತ್ತು ಭಾಷಾ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ವಿಭಜನೆಯನ್ನು ಉಂಟುಮಾಡುವ ಬಗ್ಗೆ ಮಾತನಾಡುತ್ತಾರೆ. ಆದರೆ ಬಡವರ ಕಣ್ಣೀರು ಒರೆಸಲು ಅವರು ಎರಡು ಪದಗಳನ್ನು ಹೇಳುವುದಿಲ್ಲ” ಎಂದು ಬಿಜೆಪಿ ಅಧ್ಯಕ್ಷ ನಡ್ಡಾ ತಿಳಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪುನರಾವರ್ತಿತ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಕರ್ನಾಟಕದಲ್ಲಿ ಬಿಜೆಪಿಯ ಕಾರ್ಯಚಟುವಟಿಕೆಯಿಂದ ನನಗೆ ಸಂತೋಷವಾಗಿದೆ. ಸರ್ಕಾರ ಪುನರಾವರ್ತನೆ ಆಗುವ ಹಾಗೆ ನೀವು ಸಂಪೂರ್ಣ ಶಕ್ತಿಯೊಂದಿಗೆ ಹೋರಾಡುತ್ತೀರಿ ಎಂಬ ಸಂಪೂರ್ಣ ವಿಶ್ವಾಸವಿದೆ” ಎಂದು ನಡ್ಡಾ ಹೇಳಿದ್ದಾರೆ.
ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಮುಗಿದ ಬಳಿಕ ರಾಜ್ಯದ ಸರ್ಕಾರದಲ್ಲಿ ಬದಲಾವಣೆ ಆಗಲಿದೆ ಎಂಬ ಊಹಾಪೋಹ ಎದ್ದಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ಕುರ್ಚಿಯ ಮೇಲೆ ಹಲವಾರು ತಿಂಗಳುಗಳಿಂದ ತೂಗುಗತ್ತಿ ತೂಗಾಡುತ್ತಿದೆ. ಸಚಿವ ಸಂಪುಟ ಬದಲಾವಣೆ ಕುರಿತು ಮಾತುಕತೆಗಾಗಿ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಬೊಮ್ಮಾಯಿ ಅವರಿಗೆ ಬಿಜೆಪಿ ನಾಯಕತ್ವದಿಂದ ಅನುಕೂಲಕರ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.
ಇದನ್ನೂ ಓದಿ: ಕತ್ತಿಯ ಅಲಗಿನ ಮೇಲೆ; ಕರ್ನಾಟಕದಲ್ಲಿ ವಸ್ತು-ವಿಷಯಗಳು, ಆಕ್ಷೇಪಗಳು ಮತ್ತು ಉದ್ದೇಶಗಳು
ಈ ಭೇಟಿಯ ವೇಳೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಬೊಮ್ಮಾಯಿ ಅವರಿಗೆ ಸಾಧ್ಯವಾಗಿರಲಿಲ್ಲ. ಬೊಮ್ಮಾಯಿ ದೆಹಲಿಯನ್ನು ತೊರೆದ ಕೆಲವು ಗಂಟೆಗಳ ನಂತರ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಅಮಿತ್ ಶಾ ಅವರನ್ನು ಭೇಟಿಯಾದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಕರ್ನಾಟಕದ ಉಸ್ತುವಾರಿ ಹೊಂದಿರುವ ಕೇಂದ್ರ ಬಿಜೆಪಿ ನಾಯಕ ಅರುಣ್ ಸಿಂಗ್ ಅವರು, ಬೊಮ್ಮಾಯಿ ಸಾಮಾನ್ಯ ಮನುಷ್ಯ ಮತ್ತು ಸರಳ ವ್ಯಕ್ತಿ ಎಂದು ಶನಿವಾರ ಬಣ್ಣಿಸಿದ್ದಾರೆ.
ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸಚಿವ ಸ್ಥಾನವೂ ಕೈತಪ್ಪಲಿದೆ ಎಂಬ ಊಹಾಪೋಹವಿದೆ. ಗೃಹ ಸಚಿವರ ಕಾರ್ಯವೈಖರಿ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ಇದೆ ಎಂಬ ಸೂಚನೆಯಾಗಿ, ಸಚಿವ ಸ್ಥಾನದ ಆಕಾಂಕ್ಷಿ ಹಿರಿಯ ಶಾಸಕ ಬಸವರಾಜ ಪಾಟೀಲ ಯತ್ನಾಳ್ ಅವರು, ಜ್ಞಾನೇಂದ್ರ ಅವರು ಒಳ್ಳೆಯ ವ್ಯಕ್ತಿ, ಆದರೆ ಸಚಿವ ಸ್ಥಾನಕ್ಕೆ ಸೂಕ್ತವಲ್ಲ ಎಂದು ಕಳೆದವರ ಹೇಳಿಕೆ ನೀಡಿದ್ದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುಂಚೆ ಬಲಪಂಥೀಯ ಯುವ ನಾಯಕನನ್ನು ಗೃಹ ಸಚಿವರನ್ನಾಗಿ ಮಾಡಲು ಬಿಜೆಪಿ ಪ್ರಯತ್ನಿಸಲಿದೆ ಎಂಬ ಮಾತುಗಳೂ ಬಿಜೆಪಿ ವಲಯದಲ್ಲಿ ಕೇಳಿ ಬಂದಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.