Homeಅಂಕಣಗಳುಕರ್ನಾಟಕದ ಸುವರ್ಣ ಯುಗ ಅಂದರೆ ಇದೆ ಅಂತಲ್ಲಾ..

ಕರ್ನಾಟಕದ ಸುವರ್ಣ ಯುಗ ಅಂದರೆ ಇದೆ ಅಂತಲ್ಲಾ..

- Advertisement -
- Advertisement -

ಕರ್ನಾಟಕದ ಸುವರ್ಣ ಯುಗ ಅಂದರೆ ಇದೇ ಅಂತಲ್ಲಾ. ವಿಧಾನಸಭೆಯ ಸ್ಪೀಕರ್ ಸ್ಥಾನದಲ್ಲಿ ಕುಳಿತ ಕಾಗೇರಿ ಎಂಬ ಆರೆಸ್ಸೆಸ್ ಕಾರ್ಯಕರ್ತ ಸ್ಪೀಕರ್ ಸ್ಥಾನದ ಜವಬ್ದಾರಿಯನ್ನೇ ಮರೆತು ನಮ್ಮ ಆರೆಸ್ಸೆಸ್ ಎನ್ನುತ್ತಾರೆ. ಪ್ರಜಾಪ್ರಭುತ್ವವಾದಿ ಪ್ರತಿನಿಧಿಗಳು ಪ್ರತಿಭಟಿಸಿದಾಗ ಮುಂದೆ ನೀವೂ ಆರೆಸ್ಸೆಸ್, ಇಡೀ ದೇಶವೇ ಆರೆಸ್ಸೆಸ್‌ಮಯವಾಗುತ್ತದೆ ಎಂದು ಹೆಮ್ಮೆಯಿಂದ ಉತ್ತರಿಸುತ್ತಾರೆ. ಇದಕ್ಕೆ ಪೂರಕವಾಗಿ ಉಗ್ರ ಹಿಂದೂ ಪ್ರತಿಪಾದಕ ಆದರೆ ಲಿಂಗಾಯತ ಸಮುದಾಯಕ್ಕೆ ಸೇರಿರುವ ರೇಣುಕಾಚಾರ್ಯ ತನ್ನ ಮಗಳಿಗೆ ಬೇಡಜಂಗಮ ಸರ್ಟಿಫಿಕೇಟ್ ಪಡೆದಿರುವುದನ್ನು ಯಾವ ಅಳುಕೂ ಇಲ್ಲದೆ ಸದನದಲ್ಲಿ ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಾರೆ. ಹೆಮ್ಮೆ ಏಕೆಂದರೆ ನಾವಿನ್ನೂ ಯಾವ ಸವಲತ್ತನ್ನು ಪಡೆದಿಲ್ಲ ಎಂಬುದು. ಅಷ್ಟೇ ಅಲ್ಲದೆ ಅವರ ಮಗ ಮತ್ತು ತಮ್ಮನೂ ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರಂತಲ್ಲಾ. ರೇಣುಕಾಚಾರ್ಯ ಕೃತ್ಯದಿಂದ ದಲಿತರು ದಂಗುಬಡಿದುಹೋಗಿರುವಾಗ, ಅತ್ತ ಸದನದ ನ್ಯಾಯಸ್ಥಾನದಲ್ಲಿರುವ ಕಾಗೇರಿ ಯಾವ ಅಳುಕೂ ಇಲ್ಲದೆ ರೇಣುಕಾಚಾರ್ಯ ತಪ್ಪೊಪ್ಪಿಗೆಯನ್ನ ಮುಗುಳುನಗುತ್ತಲೇ ಗಮನಿಸುತ್ತಿದ್ದಾಗ, ಬೆಂಗಳೂರು ಜನತಾ ಬಜಾರಿನ ಮಾಜಿ ಉದ್ಯೋಗಿಯಾದ ಸೋಮಣ್ಣ ತನ್ನ ಅಕ್ರಮ ಆಸ್ತಿ ಸಂಬಂಧ ಕೋರ್ಟಿನಿಂದ ಬಂದ ನೋಟಿಸಿಗೆ ಕೇರ್ ಮಾಡದೆ ತನ್ನಂತೆ ಆಸ್ತಿ ಮಾಡಿದವರ ಪಟ್ಟಿ ತಯಾರಿಸುತ್ತಿದ್ದಾರಂತಲ್ಲಾ. ಥೂತ್ತೇರಿ.

*****

ಸೋಮಣ್ಣ ರೇವಣ್ಣನಂತೆ ಕೆಲಸಗಾರ, ತಿನ್ನುವವನು ಕೆಲಸ ಮಾಡುತ್ತಾನೆ ತಿನ್ನದವನು ಸುಮ್ಮನಿದ್ದು ಹೋಗುತ್ತಾನೆ ಎಂಬ ನಂಬಿಕೆ ಉಳ್ಳವರಂತಲ್ಲಾ. ರಾಜಕಾರಣದ ಸೋಮಣ್ಣನನ್ನು ಸದನದಲ್ಲೇ ರೇವಣ್ಣ ಸಮರ್ಥಿಸಿಕೊಂಡರಲ್ಲಾ. ಹಾಗೆ ನೋಡಿದರೆ ರೇವಣ್ಣನೂ ಪಡುವಲಹಿಪ್ಪೆ ತೋಟದಲ್ಲಿದ್ದು ಸಾಕಾಗಿ ಸದನಕ್ಕೆ ಬಂದವರು. ಒಳ್ಳೆ ಪಿಡಬ್ಲುಡಿ ಕೆಲಸಗಾರ. ಆದರೆ ಸೋಮಣ್ಣನಂತೆ ಸಿಕ್ಕಿ ಬಿದ್ದಿಲ್ಲ. ನುರಿತ ಅಧಿಕಾರಿಗಳ ಸಲಹೆ ತೆಗೆದುಕೊಂಡು ದೇವೇಗೌಡರ ಒಪ್ಪಿಗೆ ಪಡೆದು ಮುಂದುವರಿಯುವ ರೇವಣ್ಣ ಏನಾದರಾಗಲೀ ಎಂದು ಹಲವು ನಿಂಬೆಹಣ್ಣುಗಳನ್ನು ಜೇಬಲ್ಲಿ ಮಡಗಿಕೊಂಡೇ ಸದನಕ್ಕೆ ಬರುತ್ತಾರಂತಲ್ಲಾ. ಆದರೂ, ಸೋಮಣ್ಣನಿಗೆ ಬಂದ ನೋಟಿಸು ನನಗೆ ಬಂದರೆ ಗತಿಯೇನು ಎಂದು ಸೋಮಣ್ಣನ ಸಮರ್ಥನೆಗೆ ನಿಂತರಂತಲ್ಲಾ. ಬೆಂಗಳೂರಲ್ಲಿ ಯಾರಾದರೂ ಗೆಲ್ಲಲಿ, ಆ ಸೋಮಣ್ಣ ಗೆಲ್ಲಬಾರದೆಂದು ದೇವೇಗೌಡರು ಆಡಿದ ಮಾತನ್ನ ಕೇಳಿಸಿಕೊಂಡಾಗಿನಿಂದ ದೇವೇಗೌಡರ ಕುಟುಂಬವನ್ನೇ ದ್ವೇಷಿಸುತ್ತಿದ್ದ ಸೋಮಣ್ಣ ರೇವಣ್ಣನ ರಕ್ಷಣಾತ್ಮಕ ಮಾತಿನಿಂದ ಎಚ್ಚರಗೊಂಡು ಜೆಡಿಎಸ್ ಅಭಿಮಾನಿಯಾಗಿದ್ದಾರಂತಲ್ಲಾ. ಈ ನಡುವೆ ಕರ್ನಾಟಕದಲ್ಲಿ ನಡೆಯುತ್ತಿರುವ ಯಾವ ವಿದ್ಯಮಾನಕ್ಕೂ ಬಾಯಿ ಬಿಡದೆ ಕುಳಿತಿರುವ ಮಾಜಿ ಪ್ರಧಾನಿಗಳ ಮಗನಾದ ಕುಮಾರಣ್ಣ ಇದ್ದಕ್ಕಿದ್ದಂತೆ ಮುಖ್ಯಮಂತ್ರಿಯ ಗಂಡಸ್ತನದ ಬಗ್ಗೆ ಹೇಳಿದ ಮಾತಿಗೆ ಜೆಡಿಎಸ್ ಗಂಡು ಹುಡುಗರೆಲ್ಲಾ ಎದ್ದು ನಿಂತು ಗುಟುರು ಹಾಕಿವೆಯಂತಲ್ಲಾ. ನಂತರ ಏನೋ ಭರದಲ್ಲಿ ಹಾಗಂದದ್ದು ಅಂದರಂತಲ್ಲಾ. ಇದನ್ನು ಕೇಳಿಸಿಕೊಂಡ ಕಾಂಗೈಗಳೂ ಕೂಡ ಎಚ್ಚರವಾದರಂತರಲ್ಲಾ. ಥೂತ್ತೇರಿ.

****

ಇದ್ದಕ್ಕಿದ್ದಂತೆ ಎಡೂರಪ್ಪನ ವಿರೋಧಿಗಳೂ ಕೂಡ ಏನೇ ಆಗಲಿ ಎಡೂರಪ್ಪನೇ ವಾಸಿ. ಅವರು ಯಂತದೇ ರಾಜಕಾರಣ ಮಾಡಿದರೂ ಕರ್ನಾಟಕವನ್ನು ಈ ಸ್ಥಿತಿಗೆ ದೂಡುತ್ತಿರಲಿಲ್ಲ ಎಂಬ ಉದ್ಘಾರ ತೆಗೆಯುತ್ತಿದ್ದಾರಲ್ಲಾ. ಹಾಗೆ ನೋಡಿದರೆ ಈ ಎಡೂರಪ್ಪ ಈಶ್ವರಪ್ಪನಂತೆ ಮುಸ್ಲಿಂ ದ್ವೇಷ ಮಾಡಿಕೊಂಡು ರಾಜಕಾರಣ ಮಾಡಿದವರಲ್ಲ. ಶಿಕಾರಿಪುರದಲ್ಲಿ ಮುಸ್ಲಿಮರು ಕೂಡ ಎಡೂರಪ್ಪನಿಗೆ ಓಟು ಮಾಡುತ್ತಾರೆ. ಅದಕ್ಕಿಂತ ಮುಖ್ಯವಾಗಿ ಒಮ್ಮೆ ಬಿಜೆಪಿಗೆ ಜಾಡಿಸಿ ಒದ್ದು ಕೆಜೆಪಿ ಪಕ್ಷ ಕಟ್ಟಿ ಕರ್ನಾಟಕವನ್ನ ಸುತ್ತಿ ಬಂದು ಬಿಜೆಪಿಗೆ ಮಣ್ಣು ಮುಕ್ಕಿಸಿದವರು ಅವರು. ಪ್ರಾಯವೇ ಇದ್ದಿದ್ದರೆ ಈಗಲೂ ಅಂತಹದೊಂದು ಸಾಹಸ ಮಾಡಿ ಬಿಜೆಪಿ ಬಾಯಿಗೆ ಬಿರುಡೆ ಇಕ್ಕುತ್ತಿದ್ದರು. ಆದರೇನು ಮಾಡೋದು, ವಯಸ್ಸು ಮತ್ತು ಮಕ್ಕಳ ಭವಿಷ್ಯ ಹಾಗೂ ಅಕ್ರಮ ಆಸ್ತಿ ಅವರನ್ನ ಬಿಜೆಪಿ ಗೊಂತಿನಲ್ಲೇ ಇರುವಂತೆ ಮಾಡಿದೆ. ನಾಗಪುರದ ಕಾರ್ಯಕ್ರಮಗಳನ್ನ
ಜಾರಿಮಾಡಬೇಕಾದರೆ ಎಡೂರಪ್ಪ ಹಿಂದೇಟು ಹಾಕಬಹುದೆಂದು ತೀರ್ಮಾನಿಸಿದ ಪರಿವಾರದವರು ಸಾದರ ಲಿಂಗಾಯತರ ಬೊಮ್ಮಾಯಿಯನ್ನ ಅಧಿಕಾರಕ್ಕೇರಿಸಿ, ತನ್ನ ಕಾರ್ಯಾಚರಣೆಯನ್ನು ಕಾರ್ಯಕರ್ತರಿಗೆ ವಹಿಸಿ ದೇಶದಲ್ಲೇ ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕಕ್ಕೆ ತನ್ನ ವಾನರ ಸೇನೆ ನುಗ್ಗಿಸಿ ಹಾಳು ಮಾಡುತ್ತಿವೆಯಲ್ಲಾ. ಇದನ್ನ ನೋಡುತ್ತ ಕುಳಿತಿರುವ ಕರ್ನಾಟಕದ ಮಠಮಾನ್ಯಗಳ ದಿಕ್ಕಿನಿಂದ ಭೋಜನದ ತೇಗಿನ ಶಬ್ದ ಬರುತ್ತಿದೆಯಂತಲ್ಲಾ. ಥೂತ್ತೇರಿ.

******

ಕರ್ನಾಟಕದಲ್ಲಿ ಜಾರಿಯಾಗುತ್ತಿರುವ ಮತೀಯ ಕ್ಷೋಭೆಯ ಕಾರ್ಯಕ್ರಮಗಳು ನಾಗಪುರದಲ್ಲಿ ತಯಾರಾಗಿ, ಮೊದಲ ಕಂತಾಗಿ ಉಡುಪಿ ಭಟ್ಟರ ಮುಖಾಂತರ ಕಾರ್ಯರೂಪಕ್ಕಿಳಿದವಂತಲ್ಲಾ. ಮೊದಲು ಹಿಜಾಬ್‌ನಿಂದ ಶುರುಮಾಡಿ, ಶಿವಮೊಗ್ಗದಲ್ಲೊಂದು ಹತ್ಯೆಯಾದ ನಂತರ ಅಲ್ಲಿ ಗಲಭೆಯೆಬ್ಬಿಸಿ, ನಂತರ ಜಾತ್ರೆಗಳಲ್ಲಿ ಮುಸ್ಲಿಮರು ಅಂಗಡಿ ಹಾಕಬಾರದೆಂಬ ಗಲಾಟೆಯ ಜೊತೆಗೆ, ಹಲಾಲ್ ಮಾಂಸದ ಜಗಳ ಹಚ್ಚಿ ಈಗ ಮಸೀದಿಗಳಲ್ಲಿ ಧ್ವನಿವಧಕ ನಿರ್ಬಂಧಿಸಬೇಕೆಂಬ ದಾಂಧಲೆಗೆ ಬಂದು ನಿಂತಿವೆಯಲ್ಲಾ. ಆತ್ತ ಬೀದಿಯಲ್ಲಿ ಈ ಕತೆಯಾದರೆ ಇತ್ತ ಸರಕಾರದ ಮಟ್ಟದಲ್ಲಿ ಟಿಪ್ಪುಸುಲ್ತಾನನ ಸಾಹಸಗಳನ್ನ ಮರೆಮಾಚಿ ಸಾಧಾರಣ ಸೈನಿಕನಂತೆ ಮರೆಮಾಚಲು ಹವಣಿಸುತ್ತಿವೆಯೆಲ್ಲಾ. ಬಿಜೆಪಿ ಬೃಹಸ್ಪತಿಗಳು ಟಿಪ್ಪು ಇತಿಹಾಸ ಕೆದಕಿ ನೋಡಿದರೆ ಆತನ ಆಡಳಿತದಲ್ಲಿ ಏಳೆಂಟು ಸಚಿವರ ಪೈಕಿ ಐದು ಜನ ಬ್ರಾಹ್ಮಣ ಮಂತ್ರಿಗಳಿದ್ದರು; ದಿವಾನ್ ಪೂರ್ಣಯ್ಯನೇ ಬ್ರಾಹ್ಮಣ; ಆತ ನೇಮಿಸಿದ ಶ್ಯಾನುಭೋಗರ ಪೈಕಿ ಎಲ್ಲ ಬ್ರಾಹ್ಮಣರಿದ್ದರು; ಅವರೆಲ್ಲಾ ಕೆರೆ ಹಿಂದಿನ ಗದ್ದೆಯನ್ನ ತಮ್ಮ ಹೆಸರಿಗೆ ಕಾತೆ ಮಾಡಿಸಿಕೊಂಡರು; ಒಕ್ಕಲಿಗರಿಂದ ಗದ್ದೆ ಗೇಯಿಸಿಕೊಂಡರು ಬದಲಾದ ಕಾಲಕ್ಕೆ ಬಹುಬೆಲೆಗೆ ಅದನ್ನು ಮಾರಿ ಬೆಂಗಳೂರು, ದೆಹಲಿ, ನ್ಯೂಯಾರ್ಕ್ ಸೇರಿಕೊಂಡರು; ಅವರ ಮಕ್ಕಳು ಪೋಸ್ಟಾಫೀಸು, ಬ್ಯಾಂಕು, ಇನ್ಸೂರೆನ್ಸ್ ಆಫೀಸು, ರೇಡಿಯೊ, ಪೇಪರ್, ಸಿನಿಮಾ, ಟಿವಿಯೊಳಗೆ ಸೇರಿಕೊಂಡರು. ಈ ಇತಿಹಾಸವನ್ನು ಗಮನಿಸಿದರೆ ಟಿಪ್ಪುವಿನಿಂದಾದ ತೊಂದರೆ ಪೂರ್ಣಯ್ಯನ ಸಂತತಿಯಿಂದ ನಡೆಯುತ್ತಿರುವ ಅನಾಹುತದ ಮುಂದೇ ಏನೇನೂ ಅಲ್ಲ ಎಂದು ಎಲ್ಲರಿಗೂ ಗುರುತಾಗಲಿದೆಯಂತಲ್ಲಾ. ಥೂತ್ತೇರಿ

– ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಸಿದ್ದರಾಮಯ್ಯ ರಾವಣನಂತಲ್ಲಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಶಿವಸೇನೆಯನ್ನು ವಿಭಜಿಸಿ, ಇಲ್ಲವೇ ಬಂಧನ ಎದುರಿಸಿ ಎಂದು ಏಕನಾಥ್ ಶಿಂದೆಗೆ ಕೇಂದ್ರ ಸರ್ಕಾರ ಬೆದರಿಕೆ...

0
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಏಕನಾಥ್ ಶಿಂದೆ ಸಚಿವರಾಗಿದ್ದಾಗ, ಅವರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜಿಸಿತ್ತು ಎಂದು ಮಂಗಳವಾರ ಶಿವಸೇನೆ (ಯುಬಿಟಿ) ನಾಯಕ...