Homeಕರ್ನಾಟಕಕೋಮುದ್ವೇಷ: ಕಾಳಿ ಸ್ವಾಮೀಜಿ ಮಾಡಿದ ಅವಾಂತರಗಳಿವು!

ಕೋಮುದ್ವೇಷ: ಕಾಳಿ ಸ್ವಾಮೀಜಿ ಮಾಡಿದ ಅವಾಂತರಗಳಿವು!

- Advertisement -
- Advertisement -

ರಾಷ್ಟ್ರಕವಿ ಕುವೆಂಪು ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಕಾಳಿ ಸ್ವಾಮೀಜಿ (ಋಷಿ ಕುಮಾರ ಸ್ವಾಮೀಜಿ) ಅವರಿಗೆ ಮಸಿ ಬಳಿದಿರುವುದು ಸುದ್ದಿಯಾಗಿದೆ.

ಶಿವರಾಮೇಗೌಡ ಬಣದ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರದ ಗಂಗಮ್ಮ ದೇವಾಲಯಕ್ಕೆ ಋಷಿಕುಮಾರ ಸ್ವಾಮಿ ಬಂದಿದ್ದ ವೇಳೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಋಷಿಕುಮಾರ ಸ್ವಾಮೀಜಿಗೆ ಧಿಕ್ಕಾರ ಕೂಗಿ ಮುಖಕ್ಕೆ ಕಪ್ಪುಮಸಿ ಬಳಿದಿದ್ದಾರೆ.

ಘಟನೆ ಕುರಿತು ಕಾಳಿ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, “ನಾನು ಯಾರನ್ನು ಅವಮಾನಿಸಿಲ್ಲ. ದಾಖಲೆಗಳಿದ್ದರೆ ಕೋರ್ಟ್‌ನಲ್ಲಿ ದಾವೆ ಹೂಡಲಿ. ಇದರಿಂದ ನಾನೇನು ವಿಚಲಿತನಾಗಿಲ್ಲ” ಎನ್ನುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಾಳಿ ಸ್ವಾಮೀಜಿಯವರಿಗೆ ಮಸಿ ಬಳಿದಿರುವ ಸಂಗತಿಯ ಸುತ್ತ ಪರ ವಿರೋಧ ವ್ಯಕ್ತವಾಗಬಹುದು. ಆದರೆ ಕಾಳಿ ಸ್ವಾಮೀಜಿಯವರು ಸಮಾಜದಲ್ಲಿ ಬಿತ್ತುತ್ತಿರುವ ವಿಷ ಬೀಜಗಳನ್ನು ಯಾರೂ ಅಲ್ಲಗಳೆಯಲಾರರು. ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಘಟಿಸುತ್ತಿರುವ ಕೋಮು ಕೇಂದ್ರಿತ ಪ್ರಕರಣಗಳಲ್ಲಿ ಕಾಳಿ ಸ್ವಾಮೀಜಿಯ ಉಪಸ್ಥಿತಿ ಇದ್ದೇ ಇರುತ್ತದೆ. ಸಂವಿಧಾನ ಬಾಹಿರವಾಗಿ, ಒಂದು ಸಮುದಾಯದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ, ಸಮಾಜದಲ್ಲಿ ದ್ವೇಷ ಬೆಳೆಸುತ್ತಾ ಕಾಳಿ ಸ್ವಾಮೀಜಿ ವೈಯಕ್ತಿಯ ಪ್ರಚಾರವನ್ನು ಪಡೆಯುತ್ತಿದ್ದಾರೆ. “ಎಲ್ಲ ಜನವರ್ಗವನ್ನು ಪ್ರೀತಿ, ಗೌರವದಿಂದ ಕಾಣುವವರು ನಿಜವಾದ ಸ್ವಾಮೀಜಿ” ಎನ್ನುತ್ತಾರೆ ಗದುಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ. ಆದರೆ ಋಷಿಕುಮಾರ ಸ್ವಾಮೀಜಿಯಂಥವರು ಈ ಎಲ್ಲೆಗಳನ್ನು ಮೀರಿದಂತೆ ಕಾಣುತ್ತಾರೆ. ಹೀಗಾಗಿ ವಿಪರೀತ ಟ್ರೋಲ್‌ಗೂ ಒಳಗಾಗಿದ್ದಾರೆ. ಆದರೆ ಈ ಟ್ರೋಲ್‌ಗಳನ್ನೇ ಭೂಷಣವೆಂಬಂತೆ ಕಾಳಿ ಸ್ವಾಮೀಜಿ ಭಾವಿಸಿದ್ದಾರೇನೋ! ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂಬ ಮಾತಿನಂತೆ ಕಾಳಿ ಸ್ವಾಮೀಜಿಯವರ ಕೋಮುದ್ವೇಷವಿಲ್ಲದೆ ಟ್ರೋಲ್‌ಗಳಾಗುತ್ತಿಲ್ಲ.

ಇದನ್ನೂ ಓದಿರಿ: ಉಡುಪಿ: ಪಿಕ್ನಿಕ್‌ಗೆ ಬಂದಿದ್ದ ಮುಸ್ಲಿಂ ಕುಟುಂಬದ ಮೇಲೆ ಶ್ರೀರಾಮಸೇನೆ ವಾಗ್ದಾಳಿ

ಮಸೀದಿ ಒಡೆಯಲು ಪ್ರಚೋದನೆ

ಶ್ರೀರಂಗಪಟ್ಟಣದಲ್ಲಿನ ಮಸೀದಿಯು ದೇವಸ್ಥಾನದ ಮೇಲೆ ನಿರ್ಮಾಣವಾಗಿದೆ. ಬಾಬ್ರಿ ಮಸೀದಿಯನ್ನು ಕೆಡವಿ ರಾಮ ಮಂದಿರ ನಿರ್ಮಾಣ ಮಾಡಿದಂತೆ ಶ್ರೀರಂಗಪಟ್ಟಣ ಮಸೀದಿಯನ್ನು ಕೆಡವಿ ಹನುಮ ಮಂದಿರವನ್ನು ಕಟ್ಟಬೇಕು ಎಂದಿದ್ದರು ಕಾಳಿ ಸ್ವಾಮೀಜಿ. ಬಳಿಕ ಅವರನ್ನು ಬಂಧಿಸಿ ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಆದರೆ ಮಸೀದಿಯನ್ನು ಕೆಡವಬೇಕೆಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತೆ ಸಮರ್ಥಿಸಿಕೊಂಡಿದ್ದರು.

“ಶ್ರೀರಂಗಪಟ್ಟಣ ಎಂದರೆ ಗತ ವೈಭವವನ್ನು ಸಾರುವ ನೆಲವೀಡು. ಗಂಗರು, ಹೊಯ್ಸಳರು, ಮೈಸೂರು ಅರಸರು, ಹೈದರಾಲಿ, ಟಿಪ್ಪು ಸುಲ್ತಾನ್ ಆಳಿದ ನೆಲ. ಎಲ್ಲಕ್ಕಿಂತ ಹೆಚ್ಚಾಗಿ ಶ್ರೀರಂಗಪಟ್ಟಣ ಎಂದರೆ ಹಿಂದೂ ಮುಸ್ಲಿಮರ ಭಾವೈಕ್ಯ ತಾಣ. ಸಾಮರಸ್ಯವೇ ಇಲ್ಲಿನ ಶಕ್ತಿ. ಇತ್ತೀಚೆಗೆ ಕೆಲವು ಮತಾಂಧ ಶಕ್ತಿಗಳು ಈ ಸಾಮರಸ್ಯವನ್ನು ಕದಡುವ ಕೆಲಸವನ್ನು ಮಾಡುತ್ತಿವೆ” ಎಂದು ತಮ್ಮ ವರದಿಯಲ್ಲಿ ಅಭಿಪ್ರಾಯತಾಳುತ್ತಾರೆ ಪ್ರಜಾವಾಣಿ ಪತ್ರಿಕೆಯ ಮೈಸೂರು ಬ್ಯುರೊ ಮುಖ್ಯಸ್ಥರಾದ ಕೆ.ನರಸಿಂಹಮೂರ್ತಿ. “ಸ್ಥಳೀಯವಾಗಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದಿದ್ದರೂ ಹೊರಗಿನಿಂದ ಬಂದವರೇ ವಿವಾದವನ್ನು ಸೃಷ್ಟಿಸುತ್ತಿದ್ದಾರೆ” ಎಂಬ ಸಂಗತಿಯನ್ನು ತಮ್ಮ ವರದಿಯಲ್ಲಿ ಪ್ರಸ್ತಾಪಿಸುತ್ತಾರೆ.

ಆಜಾನ್‌ ವಿರುದ್ಧ ವಿವಾದ ಸೃಷ್ಟಿ 

ದಿನಕ್ಕೆ ಐದು ಬಾರಿ ಪ್ರಾರ್ಥನೆಯನ್ನು ಸಲ್ಲಿಸುವುದು ಇಸ್ಲಾಂನಲ್ಲಿ ನಡೆದು ಬಂದಿರುವ ಸಂಪ್ರದಾಯ. ಆಜಾನ್‌ ಅಥವಾ ಅದಾನ್‌ ಎಂಬುದು ಪ್ರಾರ್ಥನೆಗೆ ನೀಡುವ ಕರೆಯೇ ಹೊರತು, ಪ್ರಾರ್ಥನೆಯಲ್ಲ. ಆದರೆ ಆಜಾನ್‌ಗೆ ವಿರುದ್ಧವಾಗಿ ಹನುಮಾನ್ ಚಾಲೀಸ್ ಹಾಡುತ್ತೇವೆ ಎಂಬ ಚರ್ಚೆಯನ್ನು ಮುನ್ನೆಲೆಗೆ ತರಲಾಯಿತು. ಕ್ಯಾಮೆರಾ ಮುಂದೆ ಧಾರ್ಮಿಕತೆಯನ್ನು ಪ್ರದರ್ಶಿಸುವ ಕೆಲಸವೂ ಆಗುತ್ತಿದೆ.

ಆಜಾನ್‌ನ ಹಿನ್ನೆಲೆ ಉದ್ದೇಶ ತಿಳಿಯದ ಧರ್ಮಗುರು ಕಾಳಿ ಸ್ವಾಮೀಜಿ, ಮೈಕ್‌ ಹಿಡಿದು ರಾಮಜಪ ಮಾಡಿ ವಿಡಿಯೊ ಹರಿಬಿಟ್ಟಿದ್ದರು. ಬೆಂಗಳೂರಿನ ಚುಂಚನ ಘಟ್ಟದಲ್ಲಿರುವ ರಾಮಾಂಜನೇಯ ದೇವಾಲಯಲ್ಲಿ ಧ್ವನಿ ವರ್ಧಕ ಅಳವಡಿಸಿ ಬೆಳಗ್ಗೆ 5.33ಕ್ಕೆ 3 ಬಾರಿ ರಾಮ ಜಪ ಮಾಡಿದ್ದರು. ಇದು ಕೂಡ ಭಾರೀ ಟ್ರೋಲ್‌ಗೆ ಒಳಗಾಗಿತ್ತು.

ಹಲಾಲ್‌ ಕಟ್‌ v/s ಜಟ್ಕಾ ಕಟ್‌

ಯುಗಾದಿ ವರ್‍ಸತೊಡಕಿನ ಆಚೀಚೆ ಹಲಾಲ್‌ ಕಟ್‌ಗೆ ವಿರುದ್ಧವಾಗಿ ಜಟ್ಕಾ ಕಟ್‌ ಎಂಬ ವಿವಾದ ಸೃಷ್ಟಿಯಾಯಿತು. ಮುಸ್ಲಿಮರ ಬಳಿ ಮಾಂಸ ಖರೀದಿಸಬೇಡಿ ಎಂದು ಹಬ್ಬಿಸಲಾಯಿತು. ಹಿಂದೂ ಸಮಾಜದ ಜನರೇ ಸರಿಯಾಗಿ ಝಾಡಿಸಿದ ಮೇಲೆ ವಿವಾದ ಬದಿಗೆ ಸರಿಯಿತು.

ಹಲಾಲ್‌ ಕಟ್‌ ಎಂದರೇನು? ಜಟ್ಕಾ ಕಟ್ ಎಂದರೇನು? ಎಂದು ಪ್ರಜ್ಞಾವಂತರು ವಿವರಿಸಿದರು. ತಿನ್ನುವ ಅನ್ನದಲ್ಲೆಲ್ಲ ಮತಾಂಧತೆಯನ್ನು ಹುಡುಕುವನ್ನು ಜನರು ಟೀಕಿಸಿದರು.

ಇದನ್ನೂ ಓದಿರಿ: ಉಗಾದಿ ವರ್‍ಸತೊಡಕು: ದಲಿತರಿಗೆ ತಮ್ಮಿಷ್ಟದ ‘ಜಟ್ಕಾ ಕಟ್‌ ಮಾಂಸ’ ಸಿಗುವುದೇ?

ವಿವಾದ ಮುಂಚೂಣಿಯಲ್ಲಿದ್ದ ಸಂದರ್ಭದಲ್ಲಿ ಗಾಯಕ್ಕೆ ಉಪ್ಪು ಸವರುವ ಕೆಲಸ ಮಾಡಿದ ಕಾಳಿ ಸ್ವಾಮೀಜಿ, “ಹಿಂದೂ ಧರ್ಮದ ಯುವಕರು ಜಟ್ಕಾ ಮೀಟ್ ಅಂಗಡಿಗಳನ್ನು ತೆರೆಯುವ ಮೂಲಕ ಆರ್ಥಿಕವಾಗಿ ಬಲಿಷ್ಠರಾಗಿ ತಮ್ಮ ಕುಟುಂಬ ಹಾಗೂ ಹಿಂದೂ ಧರ್ಮವನ್ನು ಬಲಿಷ್ಠಗೊಳಿಸಬೇಕು” ಎಂದರು.

ಹಿಂದೂವೀ ಜಟ್ಕಾ ಮಾರ್ಟ್‌ ಎಂಬ ಮಳಿಗೆಯಲ್ಲಿ ದೇವರ ಫೋಟೋಕ್ಕೆ ಪೂಜೆ ಸಲ್ಲಿಸಿ ನಂತರ ಕರಿ ಕೋಳಿಯೊಂದನ್ನು ಜಟ್ಕಾ ಕಟ್ ಮಾಡಲು ಕಾಳಿ ಸ್ವಾಮೀಜಿ ಮುಂದಾದರು. ಈ ವಿಡಿಯೊ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಸ್ವಾಮೀಜಿಯರವ ವರ್ತನೆಯನ್ನು ಕೆಲವು ಸ್ವಾಮೀಜಿಗಳು ಟೀಕಿಸಿದ್ದರು. ಜನರು ವ್ಯಂಗ್ಯವಾಡಿದರು.

ವಿರೋಧ ಪಕ್ಷದ ನಾಯಕರ ಕುರಿತು ಅನವಶ್ಯಕವಾಗಿ ಹೇಳಿಕೆ ನೀಡುವಲ್ಲಿಯೂ ಕಾಳಿ ಸ್ವಾಮೀಜಿ ಮುಂದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವನ್ನು ಮಾಡಿಕೊಳ್ಳುತ್ತಿದ್ದಾರೆ. ಜನರ ನಡುವೆ ದ್ವೇಷ ಹರಡಿಸುತ್ತಿರುವ ಇಂಥವರ ವಿರುದ್ಧ, ರಾಷ್ಟ್ರಕವಿ ಕುವೆಂಪು ಅವರು ಸಾರಿದಂತೆ ‘ಸರ್ವಜನಾಂಗದ ಶಾಂತಿಯ ತೋಟ’ವಾದ ಕರ್ನಾಟಕದ ಸ್ವಾಸ್ಥ್ಯವನ್ನು ಹಾಳು ಮಾಡುವವರ ವಿರುದ್ಧ ಕ್ರಮ ಜರುಗಿಸದೆ ಮೌನವಾಗಿರುವ ಸರ್ಕಾರ ಕುರಿತೂ ಆಕ್ಷೇಪಗಳು ವ್ಯಕ್ತವಾಗುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...