‘ಡ್ರೋನ್ ವಿಜ್ಞಾನಿ’ ಎಂದು ಕರೆಯಲಾಗುತ್ತಿದ್ದ, ಮಾಧ್ಯಮಗಳಿಂದ ಭಾರೀ ಪ್ರಚಾರ ಪಡೆದಿದ್ದ ವಿವಾದಾತ್ಮಕ ವ್ಯಕ್ತಿ ಪ್ರತಾಪ್ ವಿರುದ್ದ ಬೆಂಗಳೂರಿನಲ್ಲಿ ದೂರು ಸಲ್ಲಿಸಲಾಗಿದೆ.
ಜೇಕಬ್ ಜಾರ್ಜ್ ಎಂಬವರು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ ರಾವ್ ಅವರಿಗೆ ದೂರು ನೀಡಿ, ‘ಡ್ರೋಣ್ ಪ್ರಾಜೆಕ್ಟ್ ಮಾಡುತ್ತಿರುವುದಾಗಿ ಹಲವರಿಂದ ಹಣ ಪಡೆದು ನಂಬಿಕೆ ದ್ರೋಹ ಎಸಗುತ್ತಿದ್ದಾರೆ ಎಂದು ಆರೋಪಿಸಿ, ಡ್ರೋಣ್ ಪ್ರತಾಪ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಮಂಡ್ಯದ ಪ್ರತಾಪ್ ಎಂಬವರು 87 ದೇಶ ಸುತ್ತಿರುವುದಾಗಿ ಹಾಗೂ 300 ಉಪನ್ಯಾಸ ನೀಡಿರುವುದಾಗಿ ಸುಳ್ಳು ಹೇಳಿದ್ದಾರೆ. ವಿದೇಶದಲ್ಲಿ ನಡೆದ ಪ್ರದರ್ಶನದಲ್ಲೂ ಭಾಗವಹಿಸಿ ಚಿನ್ನದ ಪದಕ ಗೆದ್ದಿರುವುದಾಗಿ ಹೇಳುತ್ತಿದ್ದಾರೆ. ಇಂಥ ಸುಳ್ಳುಗಳನ್ನೇ ಮುಂದಿಟ್ಟುಕೊಂಡು ಹಲವಾರು ಗಣ್ಯರು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹಣ ಪಡೆದಿರುವ ಮಾಹಿತಿ ಇದೆ’ ಎಂದು ಜಾರ್ಜ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
‘ಬೇರೆ ಬೇರೆ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳ ಮುಂದೆ ಭಾಷಣ ಮಾಡಿ ತಪ್ಪು ಸಂದೇಶ ರವಾನಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಸಾಕಷ್ಟು ವಿಜ್ಞಾನಿಗಳಿದ್ದು, ಅವರೆಲ್ಲ ಹಗಲಿರುಳು ಶ್ರಮಿಸುತ್ತಿದ್ದಾರೆ. ಪ್ರತಾಪ್ ಪಡೆದುಕೊಂಡಿರುವ ಹಣವನ್ನು ವಸೂಲಿ ಮಾಡಿ, ನೈಜ ವಿಜ್ಞಾನಿಗಳಿಗೆ ಕೊಡಿಸಬೇಕು’ ಎಂದು ದೂರುದಾರ ಜೇಕಬ್ ಜಾರ್ಜ್ ಕೋರಿದ್ದಾರೆ.
ಮಂಡ್ಯದ ಮಳವಳ್ಳಿಯವರಾದ ಪ್ರತಾಪ್ ತಾನು 600 ಕ್ಕಿಂತ ಹಚ್ಚು ಡ್ರೋನ್ ತಯಾರಿಸಿರುವುದಾಗಿ ಹೇಳಿರುವ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಟ್ರೋಲ್ ಆಗುತ್ತಿವೆ. ಪ್ರತಾಪ್ ಸುಳ್ಳು ಹೇಳಿದ್ದಾನೆ ಎಂದು ಹಲವರು ಕಿಡಿಕಾರಿದ್ದಾರೆ.
ಓದಿ: ಮೋದಿ ಭಾಷಣದಲ್ಲಿದ್ದ ಮೂರು ಮಹಾ ಸುಳ್ಳುಗಳು