ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃಷಿ ಕಾನೂನುಗಳ ಬಗ್ಗೆ ಪತ್ರ ಬರೆದಿದ್ದು, “ಮಾಡಿರುವ ತಪ್ಪನ್ನು ಒಪ್ಪಿಕೊಂಡು ಕಾಯ್ದೆಗಳನ್ನು ಹಿಂಪಡೆಯಿರಿ” ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದಿದ್ದು, ಇದನ್ನು ವಿರೋಧಿಸಿ ರೈತರು ಸೇರಿದಂತೆ ಚಿಂತಕರು, ಹೋರಾಟಗಾರರು, ಅಧಿಕಾರಿಗಳು, ವಿರೋಧ ಪಕ್ಷಗಳು, ಕೆಲವು ಬಿಜೆಪಿ ನಾಯಕರೂ ಕೂಡ ಈ ಕಾನೂನಗಳನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಸುಮಾರು 2 ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದಾರೆ.
ಈ ಕುರಿತು ಪ್ರಧಾನಿಗೆ ಪತ್ರ ಬರೆದಿರುವ ಮಾಜಿ ನ್ಯಾಯಾಧೀಶ, “ಸರ್ಕಾರವು ಈ 3 ಕಾನೂನುಗಳನ್ನು ತಕ್ಷಣ ರದ್ದುಪಡಿಸುವ ಸುಗ್ರೀವಾಜ್ಞೆಯನ್ನು ಹೊರಡಿಸಬೇಕು. ಇದನ್ನು ಮಾಡಿದರೆ ನಿಮ್ಮನ್ನು ಎಲ್ಲರೂ ಪ್ರಶಂಸಿಸುತ್ತಾರೆ. ಮತ್ತೆ ಕಾನೂನುನನ್ನು ಯಾಕೆ ಮಾಡಿದಿರಿ ಎಂದು ಕೇಳಿದರೆ, ನಾವು ತಪ್ಪು ಮಾಡಿದ್ದೇವೆ ಎಂದು ನೀವು ಹೇಳಿ. ಈಗ ತಪ್ಪನ್ನ ಅರಿತುಕೊಂಡಿರುವುದಾಗಿಯೂ ಹೇಳಿ. ಇದನ್ನು ಒಪ್ಪಿಕೊಳ್ಳುವುದರಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೆಎಫ್ಸಿ ಎಂದರೆ ಏನು ಗೊತ್ತಾ…? ನಮ್ಮ ರೈತರು ಹೇಳುತ್ತಾರೆ ಕೇಳಿ..!
“ಇದನ್ನು ಮಾಡದಿದ್ದರೆ, ಪ್ರತಿಭಟನಾ ನಿರತ ಲಕ್ಷಾಂತರ ರೈತರು ತಮ್ಮ ಟ್ರ್ಯಾಕ್ಟರ್ಗಳೊಂದಿಗೆ ಗಣರಾಜ್ಯೋತ್ಸವದಂದು ದೆಹಲಿಗೆ ಪ್ರವೇಶಿಸುವ ಯೋಜನೆ ಮತ್ತು ಅಲ್ಲಿ ಪೋಲಿಸರು ತೆಗೆದುಕೊಳ್ಳುವ ಕ್ರಮವು ಮತ್ತೊಂದು ಜಲಿಯನ್ ವಾಲಾ ಬಾಗ್ ಅನ್ನು ಸೃಷ್ಟಿಸಬಹುದು. ಅಥವಾ ಸೇಂಟ್ ಪೀಟರ್ಸ್ಬರ್ಗ್ನ ‘ಬ್ಲಡಿ ಸಂಡೆ’ (ಜನವರಿ 1905) ಅಥವಾ ಪ್ಯಾರಿಸ್ನ 13 ವೆಂಡೆಮೈರ್ಗೆ (ಅಕ್ಟೋಬರ್ 1795) ಹೋಲುವಂತಹ ಹತ್ಯಾಕಾಂಡಗಳಿಗೆ ಕಾರಣವಾಗಬಹುದು. ಯಾಕೆಂದರೆ ಸರ್ಕಾರ ಈ ಟ್ರ್ಯಾಕ್ಟರ್ ರ್ಯಾಲಿಗೆ ಸ್ಪಷ್ಟ ಅನುಮತಿ ನೀಡಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
1905 ರ ಜನವರಿ 22 ರಂದು (ಬ್ಲಡಿ ಸಂಡೆ) ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಿರಾಯುಧ ಪ್ರತಿಭಟನಾಕಾರರ ಮೇಲೆ ತ್ಸಾರ್ ಪಡೆಗಳು ನಡೆಸಿದ ಗುಂಡಿನ ದಾಳಿಯನ್ನು ಸೂಚಿಸುತ್ತದೆ. ಇಲ್ಲಿ ಸುಮಾರು 100 ರಿಂದ 4,000 ಜನ ಸಾವನ್ನಪ್ಪಿದ್ದರು.
13 ವೆಂಡೆಮೈರ್ (ಫ್ರೆಂಚ್ ರಿಪಬ್ಲಿಕನ್ ಕ್ಯಾಲೆಂಡರ್ನಲ್ಲಿ ಮೊದಲ ತಿಂಗಳು) ಅಥವಾ ಅಕ್ಟೋಬರ್ 5, 1795 ರಲ್ಲಿ, ನೆಪೋಲಿಯನ್ ಬೊನಪಾರ್ಟೆಯ ನೇತೃತ್ವದ ಕ್ರಾಂತಿಕಾರಿ ಪಡೆಗಳು, ಅಂದಿನ ರಾಜಮನೆತನದ ದಂಗೆಯನ್ನು ಹತ್ತಿಕ್ಕಿತು. ಈ ಹತ್ಯಾಕಾಂಡದಲ್ಲಿ ಸುಮಾರು 1,400 ರಾಜಮನೆತನದವರು ಕೊಲ್ಲಲ್ಪಟ್ಟಿದ್ದಾರೆಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ದೆಹಲಿ ಗಡಿಯಲ್ಲಿ ಹೋರಾಟದ ಹೊಸ ಭಾಷ್ಯ ಬರೆಯುತ್ತಿರುವ ದೇಶದ ರೈತರು: ಡಾ. ಪುರುಷೋತ್ತಮ ಬಿಳಿಮಲೆ
“ಈಗ ಜಾತಿ ಮತ್ತು ಧರ್ಮಗಳನ್ನು ಮೀರಿ ಒಂದಾಗಿರುವ ರೈತರನ್ನು ಎದುರು ಹಾಕಿಕೊಳ್ಳುವುದರಿಂದ ಮೋದಿಗೆ ರಾಜಕೀಯವಾಗಿ ನಷ್ಟವಾಗಬಹುದು. ಮತ್ತು ಅವರ ವಿರುದ್ಧ ಹಿಂಸಾಚಾರಕ್ಕಿಳಿಯುವುದರಿಂದ ರಾಜ್ಯಗಳಲ್ಲಿ ಗಲಭೆಗಳಾಗಬಹುದು, ಜೊತೆಗೆ ಕೃಷಿ ಕುಟುಂಬಗಳಿಂದ ಬಂದಿರುವ ಸಶಸ್ತ್ರ ಪಡೆಗಳ ಮೇಲೆ ಇದು ದೊಡ್ಡ ಪರಿಣಾಮ ಬೀರಬಹುದು” ಎಂದು ಎಚ್ಚರಿಸಿದ್ದಾರೆ.
ಹಾಗಾಗಿ “ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವಂತಹ ರೈತರ ಸಂಘಟನೆಗಳು, ಸರ್ಕಾರಿ ಪ್ರತಿನಿಧಿಗಳು ಮತ್ತು ಕೃಷಿ ತಜ್ಞರ ಸದಸ್ಯರ ಪ್ರತಿನಿಧಿಗಳಿರುವ ಉನ್ನತ ಮಟ್ಟದ ರೈತ ಆಯೋಗವೊಂದನ್ನು ನೇಮಿಸಬೇಕು. ಈ ರೈತ ಆಯೋಗವು ಹಲವಾರು ಸಭೆಗಳನ್ನು ನಡೆಸಬೇಕು. ಇದನ್ನು ಕೆಲವು ತಿಂಗಳುಗಳವರೆಗೆ ವಿಸ್ತರಿಸಬೇಕು. ನಂತರ ಹೊರಹೊಮ್ಮುವ ಒಮ್ಮತವನ್ನು ಎಲ್ಲರೂ ಒಪ್ಪುತ್ತಾರೆ, ಆಗ ಇದನ್ನು ಸಮಗ್ರ ಕಾನೂನಾಗಿ ಜಾರಿಗೊಳಿಸಬೇಕು” ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ರೈತಹೋರಾಟ: ರೈತರ ಮೀಸೆ, ದಾಡಿ ಚೆಂದಗೊಳಿಸಲು ಕುಂಡಲ್ ಸೇವೆಗೆ ಮುಂದಾದ ಗುರ್ಜಾನ್ ಸಿಂಗ್..!