ಹಿಂದಿನ ಯುಪಿಎ ಸರ್ಕಾರದ ಹತ್ತು ವರ್ಷಗಳ ಅಧಿಕಾರದ ವಿರುದ್ಧ ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ‘ಶ್ವೇತಪತ್ರ’ಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮೋದಿ ಸರ್ಕಾರದ ಹತ್ತು ವರ್ಷಗಳ ಅಧಿಕಾರದ ಕುರಿತು ‘ಕಪ್ಪು ಪತ್ರ’ವನ್ನು ತರುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರಕಾರದ ‘ಶ್ವೇತಪತ್ರ’ಕ್ಕೆ ಪ್ರತಿಯಾಗಿ ಕಪ್ಪು ಕಾಗದವನ್ನು ತರುವ ಸಾಧ್ಯತೆಯಿದೆ ಎಂದು ವರದಿಯಾಗಿದ್ದು, ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ಹೂಡಿ ಕಾಂಗ್ರೆಸ್ ಸೆಡ್ಡು ಹೊಡೆಯಲು ಮುಂದಾಗಿದೆ ಎನ್ನಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸುವಾಗ, ಯುಪಿಎ ಆಡಳಿತ ಮತ್ತು ಎನ್ಡಿಎ ಅವಧಿಯಲ್ಲಿ 2014ರ ಮೊದಲು ಮತ್ತು ನಂತರದ ಭಾರತೀಯ ಆರ್ಥಿಕತೆಯ ಸ್ಥಿತಿಯನ್ನು ಹೋಲಿಸುವ ‘ಶ್ವೇತಪತ್ರ’ವನ್ನು ತಮ್ಮ ಸರ್ಕಾರ ಮಂಡಿಸಲಿದೆ ಎಂದು ಹೇಳಿದ್ದಾರೆ.
ಗಮನಾರ್ಹವೆಂದರೆ, ಲೋಕಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಸದನದ ಕೊನೆಯ ಅಧಿವೇಶನ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮಾತನಾಡಿದ್ದಾರೆ. ದ್ವಿಸದನದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದ 2014ರ ಮೊದಲು ಮತ್ತು ನಂತರ ಭಾರತದ ಆರ್ಥಿಕ ಸ್ಥಿತಿಯನ್ನು ಹೋಲಿಸಿ ಸರ್ಕಾರ ಶ್ವೇತಪತ್ರವನ್ನು ಮಂಡಿಸಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಜನವರಿ 31ರಂದು ಆರಂಭವಾದ ಲೋಕಸಭೆ ಅಧಿವೇಶನವು ಫೆಬ್ರುವರಿ 9ರಂದು ಕೊನೆಗೊಳ್ಳಲಿದೆ.
ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸರ್ಕಾರವು ಸದನಕ್ಕೆ ತರುವ ಯಾವುದೇ ಪತ್ರಗಳ ಬಗ್ಗೆ ಉತ್ತರಿಸಲು ತಮ್ಮ ಪಕ್ಷ ಸಿದ್ಧವಾಗಿದೆ. ನರೇಂದ್ರ ಮೋದಿಗೆ ಕಾಂಗ್ರೆಸ್ ಫೋಬಿಯಾ ಇದೆ. ನಾವು ಹೋರಾಟಕ್ಕೆ ಸಿದ್ಧರಿದ್ದೇವೆ. ಸರ್ಕಾರವು ಶ್ವೇತಪತ್ರ, ಕೆಂಪು ಪತ್ರ, ಕಪ್ಪು ಪತ್ರವನ್ನು ತರಬಹುದು, ನಮಗೆ ಯಾವುದೇ ತೊಂದರೆ ಇಲ್ಲ. ಆದರೆ ಮೆಹುಲ್ ಚೋಕ್ಸಿ ಅವರ ಪತ್ರಗಳನ್ನು ಕೂಡ ಸದನದಲ್ಲಿ ಮಂಡಿಸಬೇಕು ಎಂದು ಚೌಧರಿ ಹೇಳಿದ್ದಾರೆ.
ಇದನ್ನು ಓದಿ: ಬಿಜೆಪಿಯ ಮುಂದಿನ ಟಾರ್ಗೆಟ್ ಕಾಶಿ, ಮಥುರಾ! ಯೋಗಿ ಆದಿತ್ಯನಾಥ್ ಹೇಳಿಕೆಯಲ್ಲೇನಿದೆ?