ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯು ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಆರ್ಕಿಯಾಲಜಿ ಸರ್ವೆ ಆಫ್ ಇಂಡಿಯಾ (ಎಎಸ್ಐ)ವು ತಾಜ್ ಮಹಲ್, ಕುತುಬ್ ಮಿನಾರ್, ಹುಮಾಯೂನ್ ಸಮಾಧಿ ಸೇರಿದಂತೆ ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು ಮತ್ತು ಎಲ್ಲಾ ಸಂರಕ್ಷಿತ ಸ್ಥಳಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮೇ 15 ರವರೆಗೆ ಮುಚ್ಚಲು ಗುರುವಾರ ನಿರ್ಧರಿಸಿದೆ.
“ಚಾಲ್ತಿಯಲ್ಲಿರುವ ಕೊರೊನಾ ಪರಿಸ್ಥಿತಿಯಿಂದಾಗಿ, ಆರ್ಕಿಯಾಲಜಿ ಸರ್ವೇ ಆಫ್ ಇಂಡಿಯಾದ ಅಡಿಯಲ್ಲಿರುವ ಎಲ್ಲಾ ಕೇಂದ್ರೀಕೃತ ಸಂರಕ್ಷಿತ ಸ್ಮಾರಕಗಳು/ತಾಣಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮೇ 15ರ 2021 ವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಚ್ಚಲು ನಿರ್ಧರಿಸಲಾಗಿದೆ” ಎಂದು ಆರ್ಕಿಯಾಲಜಿ ನಿರ್ದೇಶಕ ಎನ್.ಕೆ. ಪಾಠಕ್ ಹೇಳಿದ್ದಾರೆ.
ಸತ್ತ ಕಾಗೆಗಳಲ್ಲಿ ಏವಿಯನ್ ಇನ್ಫ್ಲುಯೆನ್ಸ ವೈರಸ್ ಕಂಡು ಬಂದ ನಂತರ ಜನವರಿ 19 ರಿಂದ ದೆಹಲಿಯ ಮೊಘಲ್ ಕೋಟೆ ಅರಮನೆಯನ್ನು ಮುಚ್ಚಲಾಗಿತ್ತು.
ಇದನ್ನೂ ಓದಿ: ಕೊರೊನಾವನ್ನು ನೈಸರ್ಗಿಕ ವಿಪತ್ತು ಎಂದು ಘೋಷಿಸಿ, SDRF ಹಣ ಬಳಸಲು ಬಿಡಿ- ಉದ್ಧವ್ ಠಾಕ್ರೆ
ಕೊರೊನಾ ವೈರಸ್ನಿಂದ ಉಂಟಾಗುವ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡಲು, ಎಲ್ಲಾ ಎಎಸ್ಐ ಸೈಟ್ಗಳನ್ನು ಕಳೆದ ವರ್ಷ ಮಾರ್ಚ್ 17 ರಂದು ಮುಚ್ಚಲಾಗಿತ್ತು. ಎಎಸ್ಐ ದೇಶದ ಪ್ರತಿಷ್ಟಿತ 143 ತಾಣಗಳು ಸೇರಿದಂತೆ 3,691 ಸ್ಮಾರಕಗಳನ್ನು ನಿರ್ವಹಿಸುತ್ತದೆ ಮತ್ತು ರಕ್ಷಿಸುತ್ತದೆ.
ಕೆಂಪು ಕೋಟೆ, ಕುತುಬ್ ಮಿನಾರ್ ಮತ್ತು ಹುಮಾಯೂನ್ ಸಮಾಧಿ ದೆಹಲಿಯಲ್ಲಿ ಪ್ರವಾಸಿಗರು ಹೆಚ್ಚು ಭೇಟಿ ನೀಡುವ ತಾಣಗಳಲ್ಲಿ ಒಂದಾಗಿದೆ. ಅಲ್ಲಿ ಪ್ರತಿದಿನ ಸುಮಾರು 10,000 ಸಂದರ್ಶಕರು ಭೇಟಿ ನೀಡುತ್ತಾರೆ ಎಂದು ಹೇಳಲಾಗಿದೆ.
ಕಳೆದ ಲಾಕ್ಡೌನ್ ನಂತರ ಎಲ್ಲಾ ಪ್ರಮುಖ ಪಾರಂಪರಿಕ ಕಟ್ಟಡಗಳನ್ನು ಜುಲೈನಲ್ಲಿ ಪ್ರವಾಸಿಗರ ಸಂಖ್ಯೆಯ ಮಿತಿಯನ್ನು ಇಟ್ಟು ತೆರೆಯಲಾಗಿತ್ತು. ಇದೀಗ ಮತ್ತೇ ಕೊರೊನಾ ಪ್ರಕರಣಗಳು ಹೆಚ್ಚಿರುವ ಹಿನ್ನಲೆಯಲ್ಲಿ ಮುಚ್ಚಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ಕೊರೊನಾ ರೋಗಿಗಳ ಅಂತ್ಯಸಂಸ್ಕಾರ ಕಾಣಿಸದಂತೆ ಸ್ಮಶಾನಕ್ಕೆ ಶೀಟ್ ಗೋಡೆ ಹಾಕಿಸಿದ ಉತ್ತರ ಪ್ರದೇಶ ಸರ್ಕಾರ!