ಬಿಜೆಪಿ ಆಡಳಿತದ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ದಲಿತ ಮಹಿಳೆಯನ್ನು ಜಾತಿ ನಿಂದನೆಗೈದು ಥಳಿಸಿದ ಆಘಾತಕಾರಿ ಘಟನೆ ನಡೆದಿದೆ. ದಲಿತ ಮಹಿಳೆಯ ಮೇಕೆ ದಾರಿ ತಪ್ಪಿ ಹೊಲಕ್ಕೆ ತೆರಳಿದ ಕಾರಣ ಆಕ್ರೋಶಗೊಂಡ ಹೊಲದ ಮಾಲಕ ಈ ಕೃತ್ಯವನ್ನು ಎಸಗಿದ್ದಾನೆ ಎನ್ನುವುದು ಬಯಲಾಗಿದೆ. ಈ ಘಟನೆಯು ಭಾರತದಲ್ಲಿ ದಲಿತರು ಎದುರಿಸುತ್ತಿರುವ ತಾರತಮ್ಯ ಮತ್ತು ಹಿಂಸಾಚಾರವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹ ವ್ಯಕ್ತವಾಗಿದೆ. ಅಸಹಾಯಕ ಮಹಿಳೆಯ ಮೇಲೆ ಅವಹೇಳನಕಾರಿಯಾಗಿ ಜಾತಿ ನಿಂದನೆಗಳನ್ನು ಮಾಡಿ ನಿರ್ದಯವಾಗಿ ಥಳಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ವಿರುದ್ಧ ಶೀಘ್ರ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ಫೆಬ್ರವರಿಯಲ್ಲಿ, ಗುಜರಾತ್ನ ಗಾಂಧಿನಗರದಲ್ಲಿ ದಲಿತ ವರನ ಮದುವೆಯ ಮೆರವಣಿಗೆಯ ಭಾಗವಾಗಿ ಕುದುರೆ ಸವಾರಿ ಮಾಡಿದ್ದಕ್ಕಾಗಿ ಹಲ್ಲೆ ನಡೆಸಲಾಗಿತ್ತು. ವರನು ಸುಮಾರು 100 ಮಂದಿ ಭಾಗವಹಿಸಿದ್ದ ಮೆರವಣಿಗೆಯಲ್ಲಿ ಕುದುರೆಯ ಮೇಲೆ ಸವಾರಿ ಮಾಡಿಕೊಂಡು ಗ್ರಾಮದ ವಧುವಿನ ಮನೆಗೆ ಹೋಗುತ್ತಿದ್ದಾಗ ಮೋಟಾರು ಸೈಕಲ್ನಲ್ಲಿ ಬಂದ ವ್ಯಕ್ತಿಯೊಬ್ಬ ಅಡ್ಡಗಟ್ಟಿ ಅವನನ್ನು ಕುದುರೆಯಿಂದ ಕೆಳಗೆ ಎಳೆದು ಕಪಾಳಮೋಕ್ಷ ಮಾಡಿದ್ದಾನೆ. ಆರೋಪಿಯು, ತನ್ನ ಸಮುದಾಯದವರಿಗೆ ಮಾತ್ರ ಕುದುರೆ ಸವಾರಿ ಮಾಡಲು ಅವಕಾಶ ಇದೆ ಎಂದು ಹೇಳಿ ಜಾತಿ ನಿಂದನೆಗಳನ್ನು ಮಾಡಿದ್ದನು.
ಇತ್ತೀಚೆಗಷ್ಟೇ ಖನ್ನಾದ ಗೋಹ್ ಗ್ರಾಮದಲ್ಲಿ ಮೇವು ಸಂಗ್ರಹಿಸುತ್ತಿದ್ದ ನಾಲ್ವರು ದಲಿತ ಮಹಿಳೆಯರ ಮೇಲೆ ಭೂಮಾಲಕರೊಬ್ಬರು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು. ಆರೋಪಿ ವಸಾಖಾ ಸಿಂಗ್ ತನ್ನ ಬಟ್ಟೆಗಳನ್ನು ಹರಿದು ಹಲ್ಲೆ ಮಾಡಿ ಜಾತಿ ನಿಂದನೆಗಳನ್ನು ಮಾಡಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದರು. ಗುರುದ್ವಾರ ರಾಮದಾಸಿಯಾ, ಸಮ್ರಾಲಾ ಹೊರಗೆ ಪ್ರತಿಭಟನೆಯ ನಂತರ, ಸದರ್ ಖನ್ನಾ ಪೊಲೀಸರು ವಸಾಖಾ ಸಿಂಗ್ ಅವರನ್ನು ಬಂಧಿಸಿದ್ದಾರೆ. ವಸಾಖಾ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 323, 354 ಮತ್ತು ಎಸ್ಸಿ, ಎಸ್ಟಿ ಕಾಯ್ದೆಯ ಸೆಕ್ಷನ್ 3ರಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಇದನ್ನು ಓದಿ: ನೋಟ್ ಬ್ಯಾನ್ ಮಾಡಿದ ರೀತಿ ಸರಿಯಿಲ್ಲ: ಜಸ್ಟಿಸ್ ನಾಗರತ್ನ