ಹಳೆ ಮನೆ ಕೆಡವಲು ಗೊಲ್ಲರಟ್ಟಿಗೆ ತೆರಳಿದ್ದ ದಲಿತ ಸಮುದಾಯದ ಜೆಸಿಬಿ ಆಪರೇಟರ್ ಯುವಕನನ್ನು, ಗೊಲ್ಲ ಸಮುದಾಯದ ಜನರು ಅಮಾನವೀಯವಾಗಿ ಥಳಿಸಿ, ದಂಡ ಕಟ್ಟಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದಲ್ಲಿ ಹೊಸ ವರ್ಷದ ದಿನದಂದೆ ದಲಿತ ಸಮುದಾಯದ ಯುವಕನ ಮೇಲೆ ಹಲ್ಲೆ ನಡೆದಿದ್ದು, ದಲಿತ ಸಂಘರ್ಷ ಸಮಿತಿ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಗೊಲ್ಲರ ಬೀದಿಯಲ್ಲಿರುವ ಗ್ರಾಮದ ದೇವಸ್ಥಾನಕ್ಕೆ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದಾಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಆದರೆ, ಹಿರಿಯ ದಲಿತ ಮುಖಂಡರು ಹಾಗೂ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೆಸಿಬಿ ಆಪರೇಟರ್ ಮಾರುತಿ ಗೇರಮರಡಿ ಗ್ರಾಮದಲ್ಲಿ ಹಳೆ ಮನೆ ಕೆಡವಲು ತೆರಳಿದ್ದರು.
ನಡೆದದ್ದೇನು?
ತರೀಕೆರೆ ತಾಲೂಕಿನ ಎಚ್. ರಂಗಾಪುರ ಗ್ರಾಮದ ನಿವಾಸಿ, ಮಾದಿಗ ಸಮುದಾಯದ ಮಾರುತಿ ಎಂಬ ಜೆಸಿಬಿ ಆಪರೇಟರ್ನನ್ನು ಗೇರಮರಡಿ ಗ್ರಾಮದಲ್ಲಿ ಮನೆ ಕೆಡವುದಕ್ಕೆಂದು ಜನವರಿ 1ರಂದು ಕರೆಸಿಕೊಂಡಿದ್ದರು. ಆತ ತನ್ನ ಕೆಲಸ ಮುಗಿಸುವವರೆಗೂ ಸುಮ್ಮನಿದ್ದ ಗೊಲ್ಲ ಸಮುದಾಯದ ವ್ಯಕ್ತಿಗಳು, ಹಣ ನೀಡುವಾಗ ಆತನ ಹಿನ್ನೆಲೆ ಕೇಳಿದ್ದಾರೆ. ಸಹಜವಾಗಿಯೇ ಆತ ತನ್ನ ಊರು ಹಾಗೂ ಜಾತಿಯ ಗುರುತನ್ನು ಅವರ ಮುಂದೆ ಹೇಳಿದ್ದಾರೆ. ಮಾರುತಿ ಮಾದಿಗ ಸಮುದಾಯಕ್ಕೆ ಸೇರಿದವನು ಎಂದು ಗೊತ್ತಾಗುತ್ತಿದ್ದಂತೆಯೇ ಎಲ್ಲರೂ ಸೇರಿ ಆತನನ್ನು ಥಳಿಸಿದ್ದಾರೆ. ‘ಮಾದಿಗ ಸಮುದಾಯದ ನೀನು ನಮ್ಮ ಬೀದಿಗೆ ಯಾಕೆ ಬಂದಿದ್ದೀಯಾ’ ಎಂದು ಸ್ಥಳದಲ್ಲೇ ಕೂರಿಸಿಕೊಂಡು ಪಂಚಾಯಿತಿ ಮಾಡಿ, ಆತನಿಂದ ದಂಡ ಕಟ್ಟಿಸಿಕೊಂಡಿದ್ದಾರೆ ಎಂದು ದಸಂಸ ಮುಖಂಡರು ‘ನಾನುಗೌರಿ.ಕಾಂ‘ಗೆ ಮಾಹಿತಿ ನೀಡಿದ್ದಾರೆ.
ದಂಡ ಕಟ್ಟಿ ಗ್ರಾಮದಿಂದ ಹೊರಬಂದ ಮಾರುತಿ, ತನ್ನ ಮೇಲೆ ನಡೆದ ಹಲ್ಲೆ ಹಾಗೂ ದಂಡ ಕಟ್ಟಿದ್ದರ ಬಗ್ಗೆ ತನ್ನ ಆಪ್ತರು ಹಾಗೂ ದಸಂಸ ಮುಖಂಡರ ಬಳಿ ಹೇಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ಕುರಿತು ‘ನಾನುಗೌರಿ.ಕಾಂ’ ಜತೆಗೆ ಮಾತನಾಡಿದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಅಣ್ಣಯ್ಯ ಮರ್ಲೆ, ‘ಗ್ರಾಮದಲ್ಲಿ ದಲಿತರ ಮೇಲೆ ಹೇರಲಾಗಿರುವ ಸಾಮಾಜಿಕ ಬಹಿಷ್ಕಾರವನ್ನು ಈ ಕೂಡಲೇ ತೆಗೆಯಬೇಕು. ಗ್ರಾಮಕ್ಕೆ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಬೇಕು. ಹಲ್ಲೆ ಮಾಡಿದವರಿಗೆ ಶಾಸಕರ ಬೆಂಬಲ ಇದೆ, ಅವರು ಸಾಮಾಜಿಕ ನ್ಯಾಯಯದ ಪರವಾಗಿ ಇರಬೇಕು. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು, ಥಳಿತಕ್ಕೆ ಒಳಗಾದ ದಲಿತ ಯುವಕನಿಗೆ ಸರ್ಕಾರ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
‘ಹೊಸ ವರ್ಷದ ದಿನದಂದು ಗ್ರಾಮದ ಗೊಲ್ಲ ಬೀದಿಯ ನಿವಾಸಿಗಳು ಮಾರುತಿ (34) ಎಂಬ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ತರೀಕೆರೆ ವೃತ್ತ ನಿರೀಕ್ಷಕ ವೀರೇಂದ್ರ ತಿಳಿಸಿದ್ದಾರೆ.
‘ನಾವು 30-35 ಜನರ ವಿರುದ್ಧ ಭಾರತೀಯ ದಂಡನೆಯ ಸೆಕ್ಷನ್ 143 (ಕಾನೂನುಬಾಹಿರ ಸಭೆ), 149 (ಕಾನೂನುಬಾಹಿರ ಸಭೆ), 504 (ಉದ್ದೇಶಪೂರ್ವಕ ಅವಮಾನ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 506 (ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದೇವೆ. ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿಯೂ ತನಿಖೆ ನಡೆಯುತ್ತಿದೆ’ ಎಂದು ವೀರೇಂದ್ರ ಹೇಳಿದರು.
‘ಗೊಲ್ಲ ಸಮುದಾಯದ ಜನರು ಮಾರುತಿಯವರ ದಲಿತ ಗುರುತನ್ನು ಆಧರಿಸಿ, ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಾರೆ. ದಲಿತರು ದೇವಸ್ಥಾನದ ಬಳಿ ಬುರುವುದು ಸೂಕ್ತವಲ್ಲ ಎಂದು ಹಲ್ಲೆ ಮಾಡಿದ್ದಾರೆ’ ಎಂದು ದಸಂಸ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಮಾರುತಿ ಮೇಲಿನ ಹಲ್ಲೆಗೆ ಪ್ರತಿಯಾಗಿ ದಲಿತ ಮುಖಂಡರು ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದಾರೆ. ದಲಿತರ ಮೇಲಿನ ಹಿಂಸಾಚಾರವನ್ನು ವಿರೋಧಿಸಿ, ಸಂತ್ರಸ್ತ ಮಾರುತಿಗೆ ನ್ಯಾಯಕ್ಕಾಗಿ ಒತ್ತಾಯಿಸಿದರು. ಕೆಲವು ದಲಿತ ಮುಖಂಡರು ದೇವಸ್ಥಾನವನ್ನು ಪ್ರವೇಶಿಸಲು ಮುಂದಾದರು; ಕೂಡಲೇ ದೇವಾಲಯವನ್ನು ಮುಚ್ಚಲಾಯಿತು. ತಹಶೀಲ್ದಾರ್ ರಾಜೀವ್ ಮತ್ತು ಪೊಲೀಸರ ಮಧ್ಯಪ್ರವೇಶದಿಂದ ಮುಖಂಡರು ತಣ್ಣಗಾಗಿದ್ದಾರೆ.
ಹಲ್ಲೆಗೊಳಗಾದ ಮಾರುತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಹಿಂದಿನ ದಿನಗಳಲ್ಲಿ, ದಲಿತರಿಗೆ ಗೊಲ್ಲರ ಬೀದಿಗೆ ಪ್ರವೇಶಿಸಲು ಅವಕಾಶವಿರಲಿಲ್ಲ. ಆದರೆ ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದ್ದು, ಜಾತಿ ಆಧಾರಿತ ತಾರತಮ್ಯವಿಲ್ಲ’ ಎಂದು ಗೊಲ್ಲ ಸಮುದಾಯದ ಮುಖಂಡ ಹನುಮಪ್ಪ ಸುದ್ದಿಗಾರರಿಗೆ ತಿಳಿಸಿದರು. ದಲಿತ ಯುವಕನ ಮೇಲಿನ ಹಲ್ಲೆಯು ಕೇವಲ ವೈಯಕ್ತಿಕ ನೆಲೆಯಲ್ಲಿ ಆಗಿದೆಯೇ ಹೊರತು ಜಾತಿ ಆಧಾರಿತ ತಾರತಮ್ಯವಲ್ಲ. ಆದರೆ ದಲಿತ ಸಮುದಾಯವು ಸುಳ್ಳು ಆರೋಪ ಹೊರಿಸುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ; ದಲಿತ ರೈತರಿಗೆ ‘ED’ ಸಮನ್ಸ್ ಪ್ರಕರಣ: ರಾಷ್ಟ್ರಪತಿಗೆ ಪತ್ರ ಬರೆದ IRS ಅಧಿಕಾರಿ