ಮಾನನಷ್ಟ ಮೊಕದ್ದಮೆಯಲ್ಲಿ ತನ್ನ ಮೇಲಿನ ಅಪರಾಧ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ತಡೆಹಿಡಿಯಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ಆದೇಶದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
2019ರ ಲೋಕಸಭೆ ಚುನಾವಣೆಗೆ ಮುನ್ನ ಮಾಡಿದ ಭಾಷಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಮಾರ್ಚ್ನಲ್ಲಿ ದೋಷಿ ಎಂದು ಘೋಷಿಸಲಾಯಿತು ಮತ್ತು ಎರಡು ವರ್ಷ ಜೈಲು ಶಿಕ್ಷೆಯ ತೀರ್ಪು ನಿಡಲಾಯಿತು. ಇದರಿಂದ ಅವರನ್ನು ಲೋಕಸಭಾ ಸಂಸದ ಸ್ಥಾನದಿಂದ ತಕ್ಷಣವೇ ಅನರ್ಹಗೊಳಿಸಲಾಯಿತು.
ರಾಹುಲ್ ಗಾಂಧಿಯವರು ಭಾರತದಲ್ಲಿ ವಾಸಿಸುವ 13 ಕೋಟಿ ಜನರನ್ನು ಮೋದಿ ಎಂಬ ಉಪನಾಮದಿಂದ ಅವಮಾನಿಸಿದ್ದಾರೆ ಎಂದು ದೂರುದಾರ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಆರೋಪಿಸಿದ್ದಾರೆ.
ಜುಲೈ 7ರಂದು ಗುಜರಾತ್ ಹೈಕೋರ್ಟ್ನ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರು ತಮ್ಮ ಆದೇಶದಲ್ಲಿ ಅಪರಾಧ ನಿರ್ಣಯಕ್ಕೆ ತಡೆ ನೀಡುವುದು ನಿಯಮವಲ್ಲ ಆದರೆ ಅಪರೂಪದ ಪ್ರಕರಣಗಳಲ್ಲಿ ಆಶ್ರಯಿಸಬೇಕಾದ ವಿನಾಯಿತಿ ಎಂದು ಹೇಳಿದರು.
ತೀರ್ಪಿಗೆ ತಡೆ ನೀಡದಿದ್ದಲ್ಲಿ ವಾಕ್ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಶನಿವಾರ ಸಲ್ಲಿಸಿರುವ ಮೇಲ್ಮನವಿಯಲ್ಲಿ ರಾಹುಲ್ ಹೇಳಿದ್ದಾರೆ.
ಇದು ”ಪ್ರಜಾಪ್ರಭುತ್ವ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಭ್ರಷ್ಟಗೊಳಿಸುವಿಕೆಯ ಭಾಗವಾಗಿದೆ. ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ. ಇದು ಭಾರತದ ರಾಜಕೀಯ ವಾತಾವರಣ ಮತ್ತು ಭವಿಷ್ಯಕ್ಕೆ ತೀವ್ರವಾಗಿ ಹಾನಿಕಾರಕವಾಗಿದೆ” ಎಂದು ಅವರು ವಾದಿಸಿದರು.
”ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಕ್ಕಾಗಿ ಕಠಿಣ ಶಿಕ್ಷೆಯಾಗುವಂತೆ ಮಾಡಿದ್ದಾರೆ. ಈ ಮೂಲಕ ನನ್ನನ್ನು ಸಂಸತ್ತಿನಿಂದ ಹೊರಗಿಟ್ಟು ಪ್ರಶ್ನೆ ಮಾಡದಂತೆ ಪಿತೂರಿ ಮಾಡಲಾಗಿದೆ” ಎಂದು ರಾಹುಲ್ ಹೇಳಿದ್ದಾರೆ.
”ರಾಜಕೀಯ ಪ್ರಚಾರದ ಮಧ್ಯೆ ನೀಡಿರುವ ಹೇಳಿಕೆಗೆ ಶಿಕ್ಷೆ ನೀಡುವುದು ಪ್ರಜಾಸತ್ತಾತ್ಮಕ ವಾಕ್ ಸ್ವಾತಂತ್ರ್ಯಕ್ಕೆ ತೀವ್ರವಾಗಿ ಹಾನಿಕಾರಕವಾಗಿದೆ. ಇದು ರಾಜಕೀಯ ಸಂವಾದ ಅಥವಾ ಚರ್ಚೆಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ” ಎಂದಿದ್ದಾರೆ.
ರಾಹುಲ್ ಗಾಂಧಿ ಅವರು, 4,31,770 ಮತಗಳ ದಾಖಲೆಯ ಅಂತರದಿಂದ ಚುನಾಯಿತರಾಗಿದ್ದಾರೆ ಮತ್ತು ಅವರ ದೋಷಾರೋಪಣೆಗೆ ತಡೆ ನೀಡುವುದರಿಂದ ಲೋಕಸಭೆಯ ಸಂಸದರಾಗಿ ಮರುಸ್ಥಾಪನೆಗೆ ದಾರಿ ಮಾಡಿಕೊಡಬಹುದು ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.
”ರಾಜಕೀಯ ಸನ್ನಿವೇಶದಲ್ಲಿ ಮಾಡಿದ ವಿಡಂಬನಾತ್ಮಕ ಹೇಳಿಕೆಯನ್ನು ನೈತಿಕವಾಗಿ ಅಧಃಪತನ ಎಂದು ನಿರೂಪಿಸಲು ಸಾಧ್ಯವಿಲ್ಲ” ಎಂದು ಗಾಂಧಿ ಹೇಳಿದರು.
ಇದನ್ನೂ ಓದಿ: ಮಾನಹಾನಿ ಪ್ರಕರಣ: ರಾಹುಲ್ ಮೇಲ್ಮನವಿ ಅರ್ಜಿ ತಿರಸ್ಕರಿಸಿದ ಗುಜರಾತ್ ಹೈಕೋರ್ಟ್