Homeಮುಖಪುಟದೆಹಲಿ ಸರ್ಕಾರಿ ಶಾಲೆಗಳ ಮುಂದೆ ಪೋಷಕರು ಮುತ್ತಿಗೆ ಹಾಕಿದ್ದು ಯಾಕೆ ಗೊತ್ತೆ? ವಿಡಿಯೋ ನೋಡಿ

ದೆಹಲಿ ಸರ್ಕಾರಿ ಶಾಲೆಗಳ ಮುಂದೆ ಪೋಷಕರು ಮುತ್ತಿಗೆ ಹಾಕಿದ್ದು ಯಾಕೆ ಗೊತ್ತೆ? ವಿಡಿಯೋ ನೋಡಿ

- Advertisement -
- Advertisement -

ದೆಹಲಿಯ ಸರ್ಕಾರಿ ಶಾಲೆಗಳ ಮುಂದೆ ಪೋಷಕರು ಹಿಂಡು ಹಿಂಡಾಗಿ ಸೇರುತ್ತಿದ್ದಾರೆ. ಕಾರ್ ಬೈಕುಗಳಲ್ಲಿ ಬೆಳಗಿನ ಜಾಗವೇ ಬಂದು ಕ್ಯೂ ಹಚ್ಚುತ್ತಿದ್ದಾರೆ. ಏಕೆಂದು ಆಶ್ಚರ್ಯವಾಗುತ್ತಿದೆಯೇ? ಮತ್ಯಾಕೂ ಅಲ್ಲ. 2019-20ನೇ ಸಾಲಿನ ದಾಖಲಾತಿ ಆರಂಭವಾಗಿದ್ದು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಉತ್ಸುಕರಾಗಿ ಹೀಗೆ ಸರ್ಕಾರಿ ಶಾಲೆಗಳ ಮುಂದೆ ಜಮಾಯಿಸುತ್ತಿದ್ದಾರೆ.

ಅಷ್ಟು ಮಾತ್ರವಲ್ಲ ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿ ಶುಲ್ಕ ತೆಗೆದುಕೊಂಡಿರುವುದುರ ವಿರುದ್ಧ ದೆಹಲಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಇದರಿಂದಾಗಿ ಕಳೆದ ವರ್ಷ ಹೆಚ್ಚುವರಿ ಶುಲ್ಕ ವಸೂಲಿ ಮಾಡಿರುವುದನ್ನು ಪೋಷಕರಿಗೆ ಮರುಪಾವತಿ ಮಾಡಲು ಆದೇಶಿಸಿದೆ. ಹಾಗಾಗಿ ಖಾಸಗಿ ಶಾಲೆಗಳು ಆ ಶುಲ್ಕವನ್ನು ಈ ವರ್ಷದ ದಾಖಲಾತಿ ಮಾಡಿಕೊಳ್ಳುವಾಗ ಸರಿದೂಗಿಸುವುದಾಗಿ ಘೋಷಿಸಿವೆ. ಇದರಿಂದ ಹಲವಾರು ಪೋಷಕರು ಸಂತಸಗೊಂಡಿದ್ದು ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ದೆಹಲಿ ಯಲ್ಲಿ ನಾಲ್ಕು ವರ್ಷದ ಹಿಂದೆ ಆಮ್ ಆದ್ಮಿ ಪಕ್ಷ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ಶಾಲೆಗಳ ಪರಿಸ್ಥಿತಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಖಾಸಗಿ ಶಾಲೆಗಳನ್ನು ಹಿಂದಿಕ್ಕಿರುವ ಈ ಶಾಲೆಗಳು ವಿಶ್ವಮಟ್ಟದಲ್ಲಿ ಶ್ಲಾಘನೆಗೆ ಒಳಗಾಗಿವೆ. ಅಲ್ಲಿನ ವಿದ್ಯಾರ್ಥಿಗಳು ನಾಲ್ಕು ವರ್ಷಗಳಲ್ಲಿ ತಮ್ಮ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು ದೇಶಕ್ಕೆ ಮಾದರಿಯಾಗಿವೆ. ಈ ಕಾರಣದಿಂದ ಬಹಳಷ್ಟು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಸರ್ಕಾರಿ ಶಾಲೆಗಳಿಗೆ ಸೇರಿಸಲು ಮುಗಿಬೀಳುತ್ತಿದ್ದಾರೆ.

ದೆಹಲಿ ಶಾಲೆಗಳ ವಿಶೇಷವೇನು?

ಸಂತಸದಾಯಕ ಕಲಿಕೆ: 
ದೆಹಲಿಯ ಶಿಕ್ಷಕರನ್ನು ವಿದೇಶಗಳಿಗೂ ಕಳಿಸಿ ತರಬೇತಿ ನೀಡಲಾಗಿದೆ. ಪಠ್ಯಕ್ರಮವನ್ನು ಸುಧಾರಿಸಲಾಗಿದೆ. ಇದರಿಂದ ಮಕ್ಕಳು ಉತ್ಸಾಹದಿಂದ ಕಲಿಯುತ್ತಿದ್ದಾರೆ ಎಂದು ಹೇಳಲಾಗಿದೆ. ಬಿಹಾರ, ಕರ್ನಾಟಕದಿಂದಲೂ ದೆಹಲಿಗೆ ಪ್ರತಿನಿಧಿಗಳನ್ನು ಕಳಿಸಿ ಅಧ್ಯಯನ ಮಾಡಲು ಹಲವು ರಾಜ್ಯಗಳು ಉತ್ಸಾಹಕರಾಗಿದ್ದಾರೆ.

ಗುಣಮಟ್ಟದ ಮೂಲಭೂತ ಸೌಲಭ್ಯಗಳು : ಶಾಲೆಗಳಲ್ಲಿ ಸ್ಮಾರ್ಟ್ ತರಗತಿ, ವಿದ್ಯುನ್ಮಾನ ಬಿಳಿ ಫಲಕ, ಆಧುನಿಕ ಕುರ್ಚಿ-ಬೆಂಚು, ಆಧುನಿಕ ಪ್ರಯೋಗಶಾಲೆ, ಸಿಸಿಟಿವಿ ಕಣ್ಗಾವಲು, ಅಂತರ್ರಾಷ್ಟ್ರೀಯ ಮಟ್ಟದ ಆಟದ ಮೈದಾನ, ಪಠ್ಯೇತರ ಚಟುವಟಿಕೆಗೆ ವಿಶೇಷ ಕೊಠಡಿಗಳು, ಪುಸ್ತಕಾಲಯ, ಈಜುಕೊಳ, ಆಡಿಯೋ-ವೀಡಿಯೋ ವ್ಯವಸ್ಥೆಯುಳ್ಳ ಸಭಾಂಗಣ, ಇವೆಲ್ಲವೂ ಇದೆ ಎಂದರೆ ಆಶ್ಚರ್ಯವಲ್ಲವೇ? ಇವೆಲ್ಲದರ ಜೊತೆಗೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ನರ್ಸರಿ (ಶಿಶುವಿಹಾರ), ಪ್ರತಿ ತಿಂಗಳು ಮತ್ತು ವಾರ್ಷಿಕ ಶಿಕ್ಷಕ-ಪೋಷಕರ ಸಭೆಗಳು, ಬೇಸಿಗೆ ಶಿಬಿರ, ಹಿಂದುಳಿದ ಮಕ್ಕಳಿಗೆ ವಿಶೇಷ ಕಲಿಕಾ ಶಿಬಿರವನ್ನೂ ನಡೆಸಲಾಗುತ್ತಿದೆ. ಸರಕಾರಿ ಶಾಲೆಯ ಮಕ್ಕಳು ಇಂದು ತಮ್ಮ ಶಾಲೆಯನ್ನು ಅತ್ಯಂತ ಹೆಮ್ಮೆಯಿಂದ ಬೇರೆ ಮಕ್ಕಳಿಗೆ ತೋರಿಸುತ್ತಾರೆ. ಶಿಕ್ಷಕರಿಗೆ ಸಂಬಳವನ್ನು ಹೆಚ್ಚು ಮಾಡಲಾಗಿದೆ. ಇದರಿಂದ ಶಾಲೆಗಳು ಹೊಸ ಸ್ವರೂಪವನ್ನು ಪಡೆದಿದ್ದು ಪೋಷಕರನ್ನು ಆಕರ್ಷಿಸುತ್ತಿವೆ.

ಖಾಸಗಿ ಶಾಲೆಗಳನ್ನು ಹಿಂದಿಕ್ಕಿದ ಸರ್ಕಾರಿ ಶಾಲೆಗಳು:

ಇತ್ತೀಚೆಗೆ ಪ್ರಕಟಗೊಂಡ ಸಿಬಿಎಸ್‍ಇ ಶಾಲೆಯ 12ನೆಯ ತರಗತಿ (ದ್ವಿತೀಯ ಪಿಯು) ಫಲಿತಾಂಶವು ಸ್ಪಷ್ಟವಾಗಿ ಇದನ್ನು ತೋರಿಸುತ್ತಿದೆ. ಈ ವರ್ಷ ದೆಹಲಿ ಸರಕಾರಿ ಶಾಲೆಯ ಉತ್ತೀರ್ಣ ಫಲಿತಾಂಶ 94.24% ಆಗಿದ್ದು, ರಾಜ್ಯದ ಎಲ್ಲಾ ಶಾಲೆಗಳ ಒಟ್ಟಾರೆ ಫಲಿತಾಂಶ 91.87% ಆಗಿರುತ್ತದೆ. ಸರಕಾರಿ ಶಾಲೆಗೆ ಹೋಲಿಸಿದರೆ ಖಾಸಗಿ ಶಾಲೆಗಳ ಫಲಿತಾಂಶ ಮಾತ್ರ 82.59% ಇರುತ್ತದೆ. ಸರಕಾರಿ ಶಾಲೆಗಳ ಫಲಿತಾಂಶ ಕಳೆದ ನಾಲ್ಕು ವರ್ಷದಿಂದ ಸತತವಾಗಿ ಉತ್ತಮಗೊಳ್ಳುತ್ತಾ ಬಂದಿದ್ದು, 2016ರಲ್ಲಿ 85.9%, 2017ರಲ್ಲಿ 88.2%, 2018ರಲ್ಲಿ 90.6% ರಿಂದ 2019ರಲ್ಲಿ 94.24%ಕ್ಕೆ ಏರಿರುವುದರ ಜೊತೆಗೆ ಇದು ಸರಕಾರಿ ಶಾಲೆಗಳ ಅತ್ಯಂತ ಹೆಚ್ಚಿನ ದಾಖಲೆಯ ಫಲಿತಾಂಶವಾಗಿದೆ

ಇದರ ಹಿಂದೆ ಸರಕಾರದ ಯೋಚನೆ, ಯೋಜನೆ ಮತ್ತು ಎಲ್ಲಾ ಪಾಲುದಾರರ ಪರಿಶ್ರಮವೂ ಇದೆ. ದೇಶದಲ್ಲಿ ಸಾರ್ವಜನಿಕ ಶಿಕ್ಷಣಕ್ಕೆ ಅತ್ಯಂತ ಹೆಚ್ಚಿನ ಅನುದಾನ ತನ್ನ ವಾರ್ಷಿಕ ವೆಚ್ಚದ 26% ದೆಹಲಿ ಸರಕಾರ ತನ್ನ ಮುಂಗಡಪತ್ರದಲ್ಲಿ ನೀಡುತ್ತಿದೆ. ಬೇರೆ ಯಾವ ರಾಜ್ಯವೂ ಇಷ್ಟು ಹೆಚ್ಚಿನ ಹಣ ಸಾರ್ವಜನಿಕ ಶಿಕ್ಷಣಕ್ಕೆ ವಿನಿಯೋಗಿಸುತ್ತಿಲ್ಲ. ಭಾರತ ಸರಕಾರ ತನ್ನ ವಾರ್ಷಿಕ ಮುಂಗಡಪತ್ರದ 3% ಸಹ ಶಿಕ್ಷಣಕ್ಕೆ ಖರ್ಚು ಮಾಡುತ್ತಿಲ್ಲ. ಕರ್ನಾಟಕ (ಮತ್ತು ಇತರ ರಾಜ್ಯಗಳು) ಸಾವಿರಾರು ಸರಕಾರಿ ಕನ್ನಡ ಶಾಲೆಗಳನ್ನು ಪ್ರತಿ ವರ್ಷ ಮುಚ್ಚುತ್ತಿದ್ದರೆ ದೆಹಲಿ ಮಾತ್ರ ಹೊಸ ಶಾಲೆಗಳನ್ನು ತೆರೆಯುತ್ತಿದೆ.

ಉಳಿದ ರಾಜ್ಯಗಳು ಇದನ್ನು ಅನುಸರಿಸಬೇಕಿದೆ

ಕೇರಳ ರಾಜ್ಯ ಹೊರತುಪಡಿಸಿ ಉಳಿದೆಲ್ಲೆಡೆ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ದಿನೇ ದಿನೇ ಕುಸಿತವಾಗುವಂತೆ ಸರ್ಕಾರಗಳು ಕ್ರಮ ತೆಗೆದುಕೊಳ್ಳುತ್ತಿವೆ. ಇದು ಪೋಷಕರು ಅನಿವಾರ್ಯವಾಗಿ ಖಾಸಗಿ ಶಾಲೆಗಳ ದುಪ್ಪಟ್ಟು ಶುಲ್ಕ ಕಟ್ಟುವ ಅನಿವಾರ್ಯತೆಗೆ ಸಿಕ್ಕಿಬೀಳುತ್ತಿದ್ದಾರೆ. ದೆಹಲಿ ಮಾದರಿಯನ್ನು ಉಳಿದ ರಾಜ್ಯಗಳು ಅಳವಡಿಸಿಕೊಂಡಲ್ಲಿ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ. ಕರ್ನಾಟಕದ ಪಕ್ಷೇತರ ಶಾಸಕರೊಬ್ಬರು ಶಿಕ್ಷಣ ಸಚಿವರಾದ ಕೂಡಲೇ ದೆಹಲಿ ಮಾದರಿ ಜಾರಿಗೆ ತರುವುದಾಗಿ ಘೋಷಿಸಿದರು. ಕೆಲವೇ ದಿನಗಳಲ್ಲಿ ರಾಜಿನಾಮೆ ಕೊಟ್ಟು ಮುಂಬೈಗೆ ಹಾರಿರುವುದು ದುರಂತವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...