ಫೆಬ್ರವರಿಯಲ್ಲಿ ರೈತರ ಪ್ರತಿಭಟನೆಗೆ ಟೂಲ್ಕಿಟ್ ತಯಾರಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪರಿಸರ ಹೋರಾಟಗಾರ್ತಿ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಆದರೆ ಗೂಗಲ್ ಅಥವಾ ಜೂಮ್ನ ಸಹಕಾರದ ಕೊರತೆಯಿಂದಾಗಿ ಅವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ.
ದಿಶಾ ವಿರುದ್ಧದ ಟೂಲ್ಕಿಟ್ ಪ್ರಕರಣದಲ್ಲಿ ದೆಹಲಿ ಪೊಲೀಸರ ತನಿಖೆಯು ಯಾವುದೇ ಪ್ರಗತಿಯನ್ನು ಕಂಡುಕೊಂಡಿಲ್ಲ. ಹಾಗಾಗಿ ದಿಶಾ ವಿರುದ್ದ ದಾಖಲಾಗಿರುವ ದೇಶದ್ರೋಹ, ದ್ವೇಷವನ್ನು ಉತ್ತೇಜಿಸುವುದು ಮತ್ತು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವು ನಿಲ್ಲುವುದಿಲ್ಲ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಟಿಆರ್ಪಿ ಹಿಂದೆ ಬಿದ್ದಿರುವವರು ನನ್ನನ್ನು ತಪ್ಪಿತಸ್ಥಳೆಂದು ಘೋಷಿಸಿದರು: ದಿಶಾ ರವಿ
ಪ್ರಕರಣದ ತನಿಖೆಯಲ್ಲಿ ಯಾವುದೆ ಪ್ರಗತಿ ಇಲ್ಲದಿರುವುದರಿಂದ, ದೆಹಲಿ ಪೊಲೀಸರು ‘ಕ್ಲೋಸರ್ ರಿಪೋರ್ಟ್’ ಸಲ್ಲಿಸಿ ಪ್ರಕರಣವನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ರೈತರ ಪ್ರತಿಭಟನೆಗಳ ಕುರಿತು ‘ಟೂಲ್ಕಿಟ್’ ತಯಾರಿಸಿ ದೇಶದ ವಿರುದ್ದ ಅಂತಾರಾಷ್ಟ್ರೀಯ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ದಿಶಾ ರವಿ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರು ಪ್ರಮುಖ ಸಂಚುಕೋರ ಎಂದು ಆರೋಪಿಸಿ ದೆಹಲಿ ಪೊಲೀಸರು ಫೆಬ್ರವರಿ 13 ರಂದು ಬೆಂಗಳೂರಿನಲ್ಲಿರುವ ಅವರ ನಿವಾಸದಿಂದ ಬಂಧಿಸಿದ್ದರು.
ಸ್ವೀಡನ್ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರು ಟ್ವಿಟರ್ನಲ್ಲಿ ಈ ಟೂಲ್ಕಿಟ್ನ ದಾಖಲೆಯನ್ನು ಹಂಚಿಕೊಂಡಿದ್ದರು. ಇದರ ನಂತರ ದೆಹಲಿ ಪೊಲೀಸರು ಪ್ರಕರಣದ ದಾಖಲಿಸಿ ಕ್ರಮ ಕೈಗೊಂಡಿದ್ದರು.
ಇದನ್ನೂ ಓದಿ: ದಿಶಾ ರವಿಯ ಜಾಮೀನು ಆದೇಶ: ದೇಶದ್ರೋಹದ ಬಗ್ಗೆ ನ್ಯಾಯಾಧೀಶರು ಹೇಳಿದ್ದೇನು?
ದಿಶಾ ರವಿ ಅವರ ಜೊತೆಗೆ, ಮುಂಬೈ ಮೂಲದ ವಕೀಲೆ ನಿಕಿತಾ ಜಾಕೋಬ್ ಮತ್ತು ಇಂಜಿನಿಯರ್ ಶಾಂತನು ಕೂಡ ಆಪಾದಿತ ಟೂಲ್ಕಿಟ್ ತಯಾರಿಕೆ ಮತ್ತು ಎಡಿಟಿಂಗ್ ಮಾಡುವಲ್ಲಿ ದಿಶಾ ಜೊತೆಗೆ ಕೈಜೋಡಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದರು.
ಬಂಧನದ ಹತ್ತು ದಿನಗಳ ನಂತರ ದಿಶಾ ಜಾಮೀನಿನ ಮೇಲೆ ಹೊರ ಬಂದಿದ್ದರು. ಅದೇ ರೀತಿ ನಿಕಿತಾ ಮತ್ತು ಶಾಂತನು ಕೂಡ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಟೂಲ್ಕಿಟ್ ತಯಾರಿಸಿರುವವರ ವಿರುದ್ಧ ದೆಹಲಿ ಪೊಲೀಸರು ದಾಖಲಿಸಿದ ಎಫ್ಐಆರ್ನಲ್ಲಿ, “ಜನವರಿ 26 ರಂದು ದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಉಂಟಾದ ‘ಹಿಂಸಾಚಾರ’ ಭಾರತದ ಮೇಲೆ ದಾಳಿ ಮಾಡುವ ಉದ್ದೇಶದಿಂದ ‘ಪೂರ್ವ ಯೋಜಿತ ಪಿತೂರಿ’ ಎಂಬುವುದು ಟೂಲ್ಕಿಟ್ ಮೂಲಕ ಬಹಿರಂಗಪಟ್ಟಿದೆ” ಎಂದು ಆರೋಪಿಸಿದ್ದರು.
ಈ ಟೂಲ್ಕಿಟ್ ತಯಾರಿಸಲು ದಿಶಾ ರವಿ ಅವರು ಸಹಾಯ ಮಾಡಿದ್ದರು ಮತ್ತು ಭಾರತದ ವಿರುದ್ಧ ಅಸಮಾಧಾನ ಹರಡಲು ಖಲಿಸ್ತಾನಿ ಪರ ಖಲಿಸ್ತಾನಿ ಗುಂಪಾದ ‘‘ಪೊಯೆಟಿಕ್ ಜಸ್ಟೀಸ್ ಫೌಂಡೇಶನ್” ನೊಂದಿಗೆ ಸಹಕರಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.
ಇದನ್ನೂ ಓದಿ: ದಿಶಾ ರವಿ ಜಾಮೀನು ವಿಚಾರಣೆಯಲ್ಲಿ ಕೋರ್ಟ್ ಹೇಳಿದ್ದೇನು? 10 ಅಂಶಗಳು